Monday 16 December 2013

ಕ್ಷಮೆ ಯಾಚಿಸುತ್ತಾ..

ಪುರುಷನ ಅತಿ ಒತ್ತಾಯದ ಮೇರೆಗೆ ಈ ಬರಹವನ್ನ ಅಳಿಸಿ ಹಾಕಿದ್ದೇನೆ.. ದಯವಿಟ್ಟು ಕ್ಷಮೆ ಇರಲಿ ಗೆಳೆಯರೇ.. 

Wednesday 30 October 2013

ವ್ಯಾನಿಟಿ ಬ್ಯಾಗು..

ವ್ಯಾನಿಟಿ ಬ್ಯಾಗಿನಲ್ಲಿ ಏನೇನು ಇರಬಹುದು ಇಣುಕಿ ನೋಡದಿರಿ ಗಂಡಸರೇ..!! ಹಿಂಗನ್ನುವ ಹಾಡಿನಿಂದಲೇ ಶುರುವಾದ ನಾಟಕ ಅರೆರೆ ಅಂಥದ್ದೆನಿರಬಹುದು ನಾವು ನೋಡ ಕೂಡದ್ದು ಆ ವ್ಯಾನಿಟಿ ಬ್ಯಾಗಿನೊಳಗೆ ಅನ್ನುವ ಕುತೂಹಲವನ್ನ ಹುಟ್ಟಿಸಿಕೊಂಡು ಕಣ್ಣುಗಳನ್ನ ಮತ್ತಷ್ಟು ಅಗಲಿಸುತ್ತಾ ಹೋಯ್ತು.

ದಸರಾ ನೋ ದೀಪಾವಳಿ ನೋ.. ಸಿಕ್ಕ ಬೋನಸ್ಸು ಮತ್ತು ಎಕ್ಸ್ ಕ್ರೀಶಿಯ ಗಳ ಲೆಕ್ಖದ ಮೇಲೆ.. ಹಬ್ಬದ ಶಾಪಿಂಗ್ ಗೆ ಅಂತ ಹೋಗೋ ನಾವು ಹೆಣ್ಮಕ್ಕಳು ಆಸೆ ಪಟ್ರು ಅಂತ ಒಂದೊಳ್ಳೆ ಚೆಂದದ ವ್ಯಾನಿಟಿ ಬ್ಯಾಗನ್ನೇನೋ ಕೊಡಿಸಿ ಬಿಡಬಹುದು.. ಆದರೆ ಆ ನಂತರದಲ್ಲಿ ಆ ವ್ಯಾನಿಟಿ ಬ್ಯಾಗಿನೊಳಗೊಂದು ಅದೆಂಥ ಅದ್ಭುತ ಲೋಕವನ್ನ ಹೊಂದಿರುತ್ತಾರೆ ಈ ಹೆಣ್ಣು ಮಕ್ಕಳು ಅನ್ನೋ ವಿಚಾರಕ್ಕೆ ಅಚ್ಚರಿಯ ಜೊತೆಗೆ ಅಸೂಯೆಯೂ ಆಯ್ತು. ಹಾಗೆ ಅಸೂಯೆ ಪಡುವಂತೆ ಮಾಡಿದ್ದು ನಿನ್ನೆಯ ವ್ಯಾನಿಟಿ ಬ್ಯಾಗಿನ ದರ್ಶನ.

ಜೋಳಿಗೆಯ ಹಾಗಿನ ಬ್ಯಾಗ್ ಒಂದನ್ನ ಹೆಗಲಿಗೆ.. ಬಗಲಿಗೆ ತಗುಲಾಕಿಕೊಂಡೆ ಓಡಾಡುವ ಅಸಂಖ್ಯ ಗಂಡು ಮಕ್ಕಳನ್ನ ಕೂಡಾ ನಾವು ಕಾಣ ಬಹುದಾದರೂ ಈ ವ್ಯಾನಿಟಿ ಬ್ಯಾಗಿನೊಳಗಿನಷ್ಟು ದೊಡ್ಡ ಪ್ರಪಂಚ ಬಹುಷಃ ಆ ಜೋಳಿಗೆಯೊಳಗೆ ಇರಲಾರದು. ನಮಗೋ ಇದ್ದರೆ ಎರಡು ಪುಸ್ತಕ.. ಕನ್ನಡಕದ ಸೂಟ್ ಕೇಸು.. ಹಳೆಯ ಡೈರಿ.. ಅರ್ಧ ಖಾಲಿಯಾದ ನೀರಿನ ಬಾಟಲಿ.. ಎರಡೋ ಮೂರೋ ಸಿಗರೆಟ್ ಉಳ್ಳ ಪ್ಯಾಕೆಟ್.. ಒಂದೆರಡು ಮಾತ್ರೆ.. ಆಪ್ತರ ಎರಡು ಫೋಟೋ.. ಎರಡ್ಮೂರು ಮುರುಕು ಪೆನ್ನುಗಳ ಹೊರತಾಗಿ ಬೇರೆ ಏನನ್ನಾದರೂ ಇರಿಸಿ ಕೊಳ್ಳೋ ಜಾಯಮಾನವೂ ಹುಡುಗರದ್ದಲ್ಲ. ಆದರೆ ವ್ಯಾನಿಟಿ ಬ್ಯಾಗಿನೊಳಗಿನ ಹೆಣ್ಣು ಮಕ್ಕಳ ಪ್ರಪಂಚ ಮತ್ತೊಂದು ಬ್ರಹ್ಮಾಂಡ. 

ಚೆಂದದ ಹುಡುಗೀರು.. ಅಂದದ ಹುಡುಗರು ಅವರಿಗೆಲ್ಲ ಸಾರಥಿಯಂತೆ ನಡುವಯಸ್ಸಿನ ಹೆಣ್ಣು ಮಗಳೊಬ್ಬರು.. ವೈದೇಹಿಯವರ ಅಷ್ಟು ಕವನಗಳನ್ನ ನಿರರ್ಗಳವಾಗಿ ಕಂಠ ಪಾಠಮಾಡಿ ಸುಶ್ರಾವ ಕಂಠದಲಿ ಒಕ್ಕೊರಲಿನಿಂದ ಆ ರಂಗಗೀತೆಗಳು ಈಗಲೂ ಕಿವಿಯಲ್ಲಿ ಗುಯ್ ಗುಡುವಷ್ಟು ಸುಶ್ರಾವ್ಯವಾಗಿ ಹಾಡಿ ಆಡುತ್ತ ನಾಟಕವನ್ನ ಮತ್ತಷ್ಟೂ ಹತ್ತಿರವಾಗಿಸಿದರು. ಒಂದೊಂದು ಮಣಿಯೂ ಸೇರಿ ಅಷ್ಟು ಚೆಂದಗೆ ಕಾಣುವ ಸುಂದರ ಮಣಿ ಹಾರದಂತೆ.. ಒಬ್ಬೊಬರ ದನಿಯೂ ಮಿಳಿತವಾಗಿ ರಂಗಗೀತೆಗಳು ಅಷ್ಟು ಚೆಂದಗೆ ಮೈದಳೆದಿದ್ದವು.

ಹಾಸ್ಯ.. ಲಾಸ್ಯ.. ಲಜ್ಜೆ.. ವಿನೋದ.. ನೋವು.. ನಲಿವು.. ವಿರಹ.. ಸರಸ.. ಆತುರ.. ಕಾತುರ.. ದುಗುಡ.. ದುಮ್ಮಾನ.. ಕನಸು.. ಕಲ್ಪನೆ.. ಕಾಯುವಿಕೆ.. ಧೇನಿಸುವಿಕೆ.. ಪ್ರೇಮಿಸುವಿಕೆ.. ರಮಿಸುವಿಕೆ.. ಓಲೈಸುವಿಕೆ.. ಆರೈಕಿಸುವಿಕೆ.. ಅಬ್ಬಾ ಇವನ್ನೆಲ್ಲಾ ಒಳಗೊಂಡಂತೆ ಮತ್ತೂ ಅದೆಷ್ಟು ಭಾವಗಳನ್ನ ಮುಖದೊಳಗೆ.. ಅಭಿನಯದೊಳಗೆ ಅದೆಷ್ಟು ಸಹಜವೆಂಬಂತೆ ತೋರಿಸಿ ಬಿಟ್ಟರು ಅವರೆಲ್ಲ. ಅವರುಗಳ ಆಟವನ್ನ ಮೆಚ್ಚದೆ ಉಳಿಯಲು ಸಾಧ್ಯವೇ ಇಲ್ಲ ಅನ್ನುವ ಶಾಸನ ಬರೆಸಿಡಬಹುದು ಅನ್ನುವಂಥ ವಿಶ್ವಾಸದ ನುಡಿಗಳನ್ನ ಯಾರ ಮುಂದಾದರೂ ನಂಬಿ ನುಡಿಯಬಹುದಾದಂಥ  ಮನಸ್ಥಿತಿಯನ್ನ ತಂದೊಡ್ಡಿ ಬಿಟ್ಟರು.

ಒಂದುಕಡೆ ದೃಶ್ಯ ಸಿರಿ.. ಮತ್ತೊಂದು ಕಡೆ ಶ್ರಾವ್ಯ ಸಿರಿ.. ಇವೆರಡೂ ಸೇರಿದ ಇದೇ ನಾಟಕ ಒಟ್ಟಾರೆ ಐಸಿರಿ. ಆ ಕವನಗಳನ್ನ ಬರಿಯ ಹಾಳೆಗಳ ಮೇಲೆ ಓದಿಕೊಳ್ಳುವಾಗ ಅದೇನು ಮಹಾ.. ಅದೇನು ಕವನ ಅನಿಸಬಹುದು.. ಕೆಲವು ಕವನಗಳು ಅನಿಸಿದ್ದೂ ಇದೆ. ಆದರೆ ನಾಟಕದೊಳಗೆ ಸಂಧರ್ಭಕ್ಕನುಸಾರವಾಗಿ, ಇಂಪಾದ ರಾಗದೊಂದಿಗೆ ಅವು ಹೊರಬರುವಾಗ ಆ ಸನ್ನಿವೇಶದ ಸೂಕ್ಷ್ಮತೆಯನ್ನ ಎಷ್ಟು ಸರಳವಾಗಿ ಪರಿಚಯಿಸ್ತಾ ಹೋಗ್ತಿದೆಯಲ್ಲ ಈ ಕವನಗಳು ಅನ್ನಿಸುತ್ತವೆ. ಪ್ರಥಮ ಪೀಯೂಸಿ ಓದುವಾಗ ಇದ್ದ ಅಡುಗೆ ಮನೆಯ ಹುಡುಗಿ ಕವನ ಅಲ್ಲಿ ನೀರಸವೆನಿಸಿ ಇಲ್ಲಿ ಆಪ್ತವಾಗಿದ್ದೇ ಬೇರೆ ತರಹ. ಅಷ್ಟಕ್ಕೇ ಅಷ್ಟೂ ಕವನಗಳು ಇಷ್ಟವಾಗುತ್ತವೆ.. ಆಪ್ತವಾಗುತ್ತವೆ. ಗಂಗೆ ಗೌರಿಯರ ಕಾಲದಿಂದ.. ರಾಜ ಮಹಾರಾಜರುಗಳಿದ್ದ ಕಾಲದಿಂದ.. ಆದಿಕಾಲದ ಘಟ್ಟದಿಂದ.. ಪ್ರಸ್ತುತ ಜಗತ್ತಿನ ಹೆಣ್ಣುಮಕ್ಕಳ ಪ್ರಪಂಚದ ಸಣ್ಣ ವಿಶ್ವರೂಪ ಈ ವ್ಯಾನಿಟಿ ಬ್ಯಾಗು ಅನ್ನಬೇಕು. ಆ ವಿಶ್ವರೂಪವನ್ನ ಮತ್ತೂ ಅದ್ಭುತವೆಂಬಂತೆ ಕಾಣಿಸಿ ಕೊಟ್ಟದ್ದು ಎಲ್ಲರ ಲವಲವಿಕೆಯ ಮತ್ತು ಮನೋಜ್ಞ ಅಭಿನಯ. 

ಕೆಲವೊಂದು ಸನ್ನಿವೇಶಗಳು.. ಕೆಲವೊಂದು ಸಾಲುಗಳು ಮನಸ್ಸಿನೊಳಗೆ ಹಾಗೆ ಅಚ್ಚುಹಾಕಿ ಕೂತು ಬಿಟ್ವು. 

* ಮೂರ್ ಜಗವ ಸುತ್ತಿ ದಣಿದು ಬಂದ ಶಿವನ ಒಲಿಸಿ ಕಾಲೊತ್ತುವ ನೆಪದಲ್ಲಿ ಶಿವನ ಕಾಲ್ ಧೂಳ ಮುಟ್ಟಿ.. ಯಾರ ಮನೆ ಹೊಸ್ತಿಲ ತುಳಿದು ಬಂದಿರಬಹುದು ಇವನು ಎನ್ನುವ ತುಂಟ ಸಂಶಯವನ್ನಿಟ್ಟುಕೊಂಡು ಅವನನ್ನ ಸ್ನಾನ ಮಾಡಿಸುವಾಗ ಗೌರಿಯಾಡುವ ಕೊಂಕಿನ ನುಡಿಗಳು.

* ಮನೆಯ ಹೊಸ್ತಿಲೂ ದಾಟದ ಅಮ್ಮ ಈಗ ದಾರಿಯಿಲ್ಲದ ದಾರಿಯನು ಅರಸಿ ಹೊರಟಿದ್ದಾಳೆ.. ಅಮ್ಮನಿಗೆ ಮುಕ್ತಿ ಸಿಗಬಾರದು ಭೂಮಿ ಬರಡಾಗುತ್ತದೆ.. ಅಮ್ಮ ಮತ್ತೆ ಹುಟ್ಟಿ ಬರಬಾರದು ಸ್ವರ್ಗ ಬರಡಾಗುತ್ತದೆ ಎನ್ನುವ ಸೂಪರ್ ಸಾಲುಗಳ ದೃಶ್ಯ.

* ಸ್ವಯಂ ವರದಲಿ ತನಗಿಷ್ಟವಾಗುವ ಹಾಗಿನ ರಾಜಕುಮಾರನ ಕುರಿತಾಗಿ ರಾಜಕುಮಾರಿ ಆಡುವ ಸ್ವಗತಗಳು.. ಕಡೆಗೆ ನಾನು ಅಮ್ಮನಂತಾಗಲಾರೆ ಅನ್ನುವ ಅವಳ ಸ್ವಾಭಿಮಾನ.

* ಮದುವೆ ಮನೆ ಸಂಭ್ರಮ.. ಸರಸ.. ಸಲ್ಲಾಪ.. ನಾದಿನಿಯರ ಕನಸು ಚೆಲ್ಲಾಟ.. ಗಂಡ ಹೆಂಡಿರ ಸರಸ ಸಲ್ಲಾಪದ ಬದುಕು ಕೊನೆ ಕೊನೆಗೆ ಹೇಗೆ ಬದಲಾಗಿಬಿಡುವ ಅವರ ವ್ಯಥೆಯ ಬದುಕು.

* ಅಡುಗೆ ಮನೆ ಹುಡುಗಿಯ ಕನಸುಗಳು.. ಕನವರಿಕೆಗಳು..

* ಸೂರ್ಯನನ್ನ ಪ್ರೀತಿಸುವ ಹುಡುಗಿ.. ಅವನ್ನನ ಕಂಡು ದೃಷ್ಟಿ ಸುಟ್ಟು ಕೊಂಡಳು.. ಮನಸಿತ್ತು ದೇಹ ಸುಟ್ಟು ಕೊಂಡಳು.. ಅವನ್ನ ಕೂಗಿ ಕರೆದು ಉಸಿರ ಸುಟ್ಟು ಕೊಂಡಳು.. ಕೊನೆಗೆ ಯಾವ ಆಮಿಷಕ್ಕೂ ಒಳಗಾಗದೆ ನಿರಂತರ ಅವನನ್ನು ಪ್ರೀತಿಸುತ್ತಾ.. ಬ್ರಹ್ಮಾಂಡಕ್ಕಿಂತ ಅವನ ಬೆಲೆ ದೊಡ್ಡದು.. ಅವನನ್ನ ಪ್ರೀತಿಸುವ ನನ್ನ ಬೆಲೆ ಅವನಿಗಿಂತ ದೊಡ್ಡದು.. ಹೆಚ್ಚಿಗೆ ಸತಾಯಿಸಿದೆಯೋ ಹಪ್ಪಳ ಒಣಗಿಸಲು ಕೂರಿಸುತ್ತೇನೆ ಅನ್ನುವ ಭಾವವೂ ಎಲ್ಲವೂ ಆ ಹೆಣ್ಮನಸಿನ  ಪ್ರೀತಿಯನ್ನ ಅದೆಷ್ಟು ಎತ್ತರಕ್ಕೇರಿಸಿ ತೋರಿಸುತ್ತವೆ.

* ಬೆರಣಿ ತಟ್ಟುವ ಹುಡುಗಿ ಹುಡುಕುವ ಮುರುಕು ಚಂದಿರನ ಚೂರುಗಳು. 

ಹೀಗೆ ಕಾಡುವ ಅದೆಷ್ಟು ಸನ್ನಿವೇಶಗಳು. ಗೀಚುತ್ತಾ ಹೋದರೆ ಅಷ್ಟೂ ಸನ್ನಿವೇಶಗಳ ಕುರಿತಾಗಿ ಗೀಚಬಹುದು. ಮಧುರ ಸಂಗೀತ ಸಂಯೋಜನೆ.. ವಾದ್ಯ ಸಂಯೋಜನೆ.. ಕೋರೈಸುವ ಬೆಳಕು.. ಸುಂದರ ವ್ಯಾನಿಟಿ ಬ್ಯಾಗಿನ ಹಿನ್ನಲೆಯುಳ್ಳ ಈ ನಾಟಕ ಬಹುಕಾಲ ನೆನಪಿನಲ್ಲಿ ಉಳಿಯುವಂಥಾಯ್ತು. 

ಬಹಳ ಕಾಲದ ನಂತರ ಹೀಗೊಂದು ನಾಟಕವನ್ನ ನೋಡಿದ್ದು. ಅಕ್ಷರ ಸಹ ಒಂದು ಗಂಟೆಯಷ್ಟು ಕಾಲ ನನ್ನನ್ನೇ ಕಳೆದು ಹಾಕಿತ್ತು ಲೋಕದ ಪರಿಮಿತಿಯಿಂದ. ಸರಿಯಾಗಿ ಹತ್ತು ವರ್ಷದ ಹಿಂದೆ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ನೋಡಿದ್ದು ನಾಟಕವನ್ನ. ಅದೇನು ಹೇಳಿದರೂ ಸಿನಿಮಾಗಳಿಗಿಂತ ನಾಟಕ ಮನ ಮುಟ್ಟುವ ಪರಿ ಭಿನ್ನ ಮತ್ತು ಅತಿ ಆಪ್ತ ಅನ್ನುವುದು ಸತ್ಯ. ಅಷ್ಟು ಚೆಂದದ ಹುಡುಗಿಯರು.. ಎಲ್ಲರ ಹೆಸರನ್ನೂ ಜ್ಞಾಪ ಇಟ್ಟುಕೊಳ್ಳಲಾಗಲಿಲ್ಲವಲ್ಲ ಅನ್ನೋ ಕೊರಗಿದೆ.. ಆದರು ಒಂದು ಹುಡುಗಿಯ ಹೆಸರು ತುಂಬಾ ಚೆನ್ನಾಗಿ ನೆನಪಿದೆ ಆದರೆ ಹೇಳಲಾರೆ. ಮದುಮಗನ ರೂಪದಲ್ಲಿ ನಮ್ಮ ನಾಗರಾಜ್ ಸೋಮಯಾಜಿ ಸೂಪರ್.. ಶಿವನ ವೇಷಧಾರಿಯೂ ಇಷ್ಟವಾದರು.. ಅವರ ಶಾರೀರ ಕೂಡಾ ಅಷ್ಟೇ ಮೋಹಕ. ನಿರ್ದೇಶಿಸಿರುವ ಮಂಗಳ ಮೇಡಂ ಅವರಿಗೊಂದು ಅಭಿನಂದನೆ ಹೇಳಲೇಬೇಕು. ನಾಟಕ ಅದೆಷ್ಟು ಸಮ್ಮೋಹಿಸಿತ್ತು ಅಂದ್ರೆ ನಂ ಹತ್ರ ಮೊಬೈಲ್ ಇರೋದು ಕೂಡಾ ಮರೆತು ಹೋಗಿ ಒಂದೆರಡು ಫೋಟೋಗಳನ್ನಾದ್ರು ತೆಗೆದು ಕೊಳ್ಳಬೇಕಿತ್ತು ಅನ್ನುವ ಕನಿಷ್ಠ ಜ್ಞಾನವೂ ಮಲಗಿ ಬಿಟ್ಟಿತ್ತು.

ಒಟ್ಟಾರೆ ಒಂದು ಸುಂದರ ಸಂಜೆ.. ಒಂದಷ್ಟು ಸುಂದರ ವ್ಯಕ್ತಿತ್ವಗಳ ಜೊತೆ. ನಾಟಕಕ್ಕೆ ಕರೆ ನೀಡಿದ ರೂಪ ಮೇಡಂ.. ಜತೆಗೂಡಿ ನಾಟಕ ಮತ್ತಷ್ಟೂ ಆಪ್ತವಾಗುವಂತ ಕೆಲವು ವಿಚಾರಗಳನ್ನ ತಿಳಿಸಿಕೊಟ್ಟ ಕುಮುದಕ್ಕ.. ಕರೆದ ಒಡನೆ ಜೊತೆಗೆ ಬಂದ ಮಹೇಶಣ್ಣ.. ಕೆಲವು ಸಂವೇದನೆಗಳನ್ನ ಆಪ್ತವಾಗಿ ಮನವರಿಕೆ ಮಾಡಿಕೊಟ್ಟ ಕಿರಣ್ ವಟಿ.. ಮೊದಲ ಭೇಟಿಯಲ್ಲೇ ಹುಷಾರ್ ಹುಡುಗಿ ಇದು ಅನ್ನಿಸಿದ ಶ್ರೀದೇವಿ.. ಅವರ ಗೆಳತಿ ರಮ್ಯಶ್ರೀ.. ಹೊಸ ಪರಿಚಯ ದತ್ತರಾಜು.. ಫೇಸ್ಬುಕ್ ನಲ್ಲಿ ಅದಾಗಲೇ ನೋಡಿದ್ದರೂ ಪ್ರತಕ್ಷವಾಗಿ ಕೆಲವರನ್ನ ನೋಡಿದಂತಾಗಿದ್ದು.. ಬಿಸಿ ಬಿಸಿ ಕಾಫಿ ವಿಥ್ ಮಂಗಳೂರು ಬೋಂಡ. ಒಂದು ಸಾರ್ಥಕ ಬುಧವಾರದ ಸಂಜೆ ನಿನ್ನೆಯದ್ದು.

ಮಿಸ್ ಮಾಡಿಕೊಂಡವರು ಖಂಡಿತ ಕೆಲವೊಂದು ಸಂಭ್ರಮಗಳನ್ನ ಸಂತಸಗಳನ್ನ ಮಿಸ್ ಮಾಡಿಕೊಂಡದ್ದು ನಿಜ. ಮತ್ತೊಮ್ಮೆ ಈ ನಾಟಕ ಎಲ್ಲಿಯಾದರೂ ಆಯೋಜಿಸಿದ್ದಾದರೆ ಖಂಡಿತ ಬಿಡಬೇಡಿ ಅನ್ನುವ ಕಿವಿಮಾತು ನನ್ನದು. 

ಚಿತ್ರ ಕೃಪೆ: ಕುಮುದಕ್ಕ 

Monday 29 July 2013

"ಮರಿಯಾನ್" ಸಾವನ್ನು ಗೆದ್ದವನೊಬ್ಬನ ಕಥೆ..

ಒಂದು ಸಿನಿಮಾ ನಮಗ್ಯಾಕೆ ಇಷ್ಟ ಆಗತ್ತೆ ಅಂತ ಪೂರ್ತಿಯಾಗಿ ಹೇಳಲಿಕ್ಕೆ ಸಾಧ್ಯವೇ..?? ಸಾಧ್ಯ ಆದರೂ ಆಗ್ಬೋದೇನೋ.. ಆದ್ರೆ ಹಾಗೆ ಒಂದು ಸಿನಿಮಾವನ್ನ ಅಚ್ಚುಕಟ್ಟಾಗಿ ಯಾವ ಅಳುಕಿಲ್ಲದೆ.. ಯಾವ ಕೊಂಕಿಲ್ಲದೆ ವಿಮರ್ಷಣೆ ಮಾಡೋದು ಕೂಡಾ ಒಂದು ಕಲೆಯೇ. ಸಿನಿಮಾ ಮೇಲಿನ ಅಗಾಧವಾದ, ಅನನ್ಯವಾದ, ಅದ್ಭುತವಾದ ಪ್ರೀತಿಯೊಂದು ಆ ಕಲೆಯನ್ನ ಸಿದ್ಧಿಸಿ ಕೊಡಬಹುದು. ಒಂದು ಸಿನಿಮಾ ನಮಗಿಷ್ಟ ಆಗೋದು ಕೂಡ ಹಲವೊಂದು ಕಾರಣಗಳಿಂದಲೇ.. ನಟಿಸಿದ ನಟರ ಮೇಲಿನ ಅಭಿಮಾನದಿಂದಲೋ.. ಕಥೆಯ ಬಲದಿಂದಲೋ.. ಸುಮಧುರ ಸಂಗೀತದಿಂದಲೋ.. ಕಣ್ಮನ ಸೆಳೆಯುವ ದೃಶ್ಯಾವಳಿಗಳಿಂದಲೋ.. ಬಳಸಿದ ತಂತ್ರಜ್ಞಾನದಿಂದಲೋ.. ನಿರ್ದೇಶಕನ ವರ್ಚಸ್ಸಿನಿಂದಲೋ.. ಒಟ್ಟಾರೆ ಯಾವುದೋ ಒಂದು ಕಾರಣಕ್ಕೆ ಒಂದು ಸಿನಿಮಾ ನಮ್ಮನ್ನ ಸೆಳೀತಾ ಇರತ್ತೆ. ಬಹುಶಃ  ನಿರೀಕ್ಷೆ ಇಲ್ಲದೆ ಅದ್ಯಾವ ವ್ಯಕ್ತಿಯೂ ಕೂಡಾ ಒಂದು ಸಿನಿಮಾವನ್ನ ನೋಡಲಾರ. ಸಿನಿಮಾದಿಂದ ಒಂದು ನೀತಿ.. ಬದುಕುವೆಡೆಗಿನ ಒಂದು ಛಲ.. ಜೀವನ ಪ್ರೀತಿ.. ಕೆಲವೊಂದುಗಳ ಕಲಿಕೆ.. ಇದ್ಯಾವುದೂ ಇಲ್ಲದೆ ಹೋದರು ಕೂಡಾ, ಕೇವಲ ಒಂದಿಷ್ಟು ಹೊತ್ತಿನ ಮನರಂಜನೆಯ ದೃಷ್ಟಿಯಿಂದಾದರೂ ಒಂದು ಸಿನಿಮಾವನ್ನ ಹಾಗೆ ಇಷ್ಟ ಪಟ್ಟು ನೋಡ್ತೇವೆ. 

ತಮಿಳಿನ ಬಹುಪಾಲು ಚಿತ್ರಗಳು ಹೀರೋಯಿಸಂ ಅನ್ನ ಧಾರಾಳವಾಗಿ, ಬಹು ದುಬಾರಿಯಾಗಿ ತೋರಿಸುವಂತಹ ಸಿನಿಮಾಗಳೇ. ಕಿವಿ ಹರಿದು ಹೋಗುವ ಅಬ್ಬರತೆ.. ಎದೆ ನಡುಗುವ ಹಾಗೆ ಸಾಹಸ.. ಚಪ್ಪಾಳೆ ಗಿಟ್ಟಿಸಿಕೊಳ್ಳುವ ಪಂಚ್ ಡೈಲಾಗ್ ಗಳಿಂದಲೇ ಹೀರೋಗೊಂದು ವಿಚಿತ್ರ ಮ್ಯಾನರಿಸಂ ಮತ್ತು ಅವನೆಂದರೆ ಅವನ ಕುರಿತಾಗಿ ಪ್ರೇಕ್ಷಕರಲ್ಲಿ ಒಂದು ಖಾಯಂ ಭ್ರಮಾಲೋಕವನ್ನೇ ಸೃಷ್ಟಿಸಿ ಬಿಡುವ ಪರಂಪರೆ ಬಹಳ ಹಿಂದಿನಿಂದಲೂ ಇದೆ. ಇಲ್ಲಿನೊಬ್ಬ ನಟನ ಚಿತ್ರವೆಂದರೆ ಅದು ಹೀಗೆ ಇರುತ್ತದೆ ಅನ್ನುವುದನ್ನ ಯಾರು ಬೇಕಾದರೂ ಆ ಸಿನಿಮಾದ ಹತ್ತಿರ ಹತ್ತಿರಕ್ಕೆ ಊಹಿಸ ಬಹುದಾದಂತ ಟ್ರೆಂಡ್ ಇಲ್ಲಿನ ಒಬ್ಬೊಬ್ಬ ನಟನದ್ದು. ಇದು ತಮಿಳಿನಲ್ಲಿ ಮಾತ್ರವಲ್ಲ ಬಹುಪಾಲು ಎಲ್ಲಾ ಭಾಷೆಯ ಚಿತ್ರಗಳಲ್ಲೂ ಈ ಸಂಸ್ಕೃತಿ ಕಾಣ ಸಿಗಬಹುದು. ಆದರೆ ತಮಿಳಿನಲ್ಲಿ ಇಂಥಾ ಹೀರೋ ಸಿನಿಮಾವೆಂದರೆ ಹೀಗೆಯೇ.. ಇಂಥಾ ನಿರ್ದೇಶಕನ ಸಿನಿಮಾವೆಂದರೆ ಹೀಗೆಯೇ ಅಂತ ಸಾಧಾರಣ ಅಭಿಮಾನಿ ಕೂಡಾ ಸರಾಸರಿಯಾಗಿ  ಸರಿಯಾಗಿ ನಿರ್ಧರಿಸಬಲ್ಲ. ಅಂಥದ್ದೊಂದು ಟ್ರೆಂಡ್ ಇಲ್ಲಿನ ಬಹುಪಾಲು ಖ್ಯಾತ ನಟ ಮತ್ತು ನಿರ್ದೇಶಕರದ್ದು. ತಮ್ಮ ಚೌಕಟ್ಟನ್ನ ಮೀರಿದ ಪ್ರಯೋಗಾತ್ಮಕ ಚಿತ್ರಗಳನ್ನ ಅಭಿಮಾನಿಗಳೂ ಕೂಡಾ ಅಪೇಕ್ಷಿಸುವುದಾದರೆ ಅದು ಒಂದು ಹೊಸಬರ ಚಿತ್ರವಾಗಿರಬೇಕಷ್ಟೇ. 

ತಮಿಳಿನಲ್ಲಿ ದನುಶ್ ಕೂಡಾ ಹಾಗೊಬ್ಬ ಟ್ರೆಂಡ್ ನಟ. ಅವನ ಚಿತ್ರಗಳೆಂದರೆ ಬೇರೆ ನಟರಿಗಿಂತ ಯಾವಾಗಲೂ ಭಿನ್ನವೇ. ನಟನೆಗೆ ಸವಾಲು ಅನ್ನಿಸುವಂಥ ಪಾತ್ರಗಳನ್ನೇ.. ವಿಭಿನ್ನ ರೀತಿಯ ಕತೆಗಳನ್ನೇ ಆಯ್ಕೆ ಮಾಡಿಕೊಳ್ಳುವ ಮತ್ತು ಅಂತ ಸಿನಿಮಾಗಳಿಂದಲೇ ಜನ ಜನಿತನಾಗಿರೋ ನಟ ದನುಶ್. ತಮಿಳು ಚಿತ್ರರಂಗದಲ್ಲಿ ಚಾಲ್ತಿಯಲ್ಲಿರಲು ಸೂಪರ್ ಸ್ಟಾರ್ ರಜನಿಕಾಂತ್ ರ ಅಳಿಯ ಅನ್ನುವ ಅದ್ಯಾವ influence ಕೂಡಾ ಇಲ್ಲದೆ ತಾನಾಗೇ ಸ್ವಂತ ಪ್ರತಿಭೆ ಇಂದ ಬೇರೂರಿ ನಿಂತ ಅಪ್ಪಟ ಪ್ರತಿಭೆ ದನುಶ್. ತನ್ನ ಸಿನಿಮಾಗಳ ಮೂಲಕ ತನ್ನದೇ ಆದ ಒಂದು ಟ್ರೆಂಡ್ ಮತ್ತು ಚಿತ್ರರಂಗದ ಅಷ್ಟೊಂದು ಜನ ಪ್ರಖ್ಯಾತರ ನಡುವೆಯೂ ತನ್ನದೇ ಆದ ಒಂದು ಸಶಕ್ತ ಅಭಿಮಾನಿಗಳ ಬಳಗವನ್ನ ಸಂಪಾದಿಸಿಕೊಂಡ ಕೀರ್ತಿ ಇವನದ್ದು. ಜೀನ್ಸ್ ಪ್ಯಾಂಟ್, ಟೀ ಶರ್ಟ್ ತೊಟ್ಟರೆ ನಗರದ ಯಾವ handsome ಹುಡುಗನಿಗೂ ಕಮ್ಮಿ ಇಲ್ಲದ ವರ್ಚಸ್ಸು ಬರಿಸಿಕೊಳ್ಳೋ ದನುಶ್.. ಪಂಚೆ ಬನಿಯನ್ ತೊಟ್ಟರೆ ನಮ್ಮದೇ ಹಳ್ಳಿಯ, ನಮ್ಮದೇ ಪಕ್ಕದ ಮನೆಯ, ನಮ್ಮಗಳ ಜೊತೆಯೇ ಮಣ್ಣು ಹೊರುವ ಹುಡುಗನ ಹಾಗೆ ಸ್ವಾಭಾವಿಕವಾಗಿ ಕಾಣಿಸಿಕೊಳ್ಳುವ ಮತ್ತೊಂದು ವರ್ಚಸ್ಸು ಅವನದ್ದು. 

ಮೊದ ಮೊದಲು ತೀರಾ ಸೈಕಿಕ್ ಅನ್ನಿಸಿಕೊಳ್ಳುವಂತೆ ಭಾಸವಾಗ್ತಿದ್ದ ಸಿನಿಮಾಗಳನ್ನೇ ಮಾಡುತ್ತಿದ್ದ ದನುಶ್ ನಟನೆಯಲ್ಲಿ ಅದ್ಯಾವಾಗ ಪಳಗಿದ ಅನ್ನುವುದನ್ನ ಊಹಿಸುವ ಮೊದಲೇ ಒಬ್ಬ ಅದ್ಭುತ ನಟನಾಗಿ ನಿಂತ ಪರಿ ಆಶ್ಚರ್ಯ ಮೂಡಿಸುತ್ತದೆ. ಅವನ ಬಹುಪಾಲು ಎಲ್ಲಾ ಸಿನಿಮಾವನ್ನು ನೋಡಿರುವ ನಾನು ಸ್ವಲ್ಪ ಮಟ್ಟಿಗೆ ಅವನ ಅಭಿನಯವನ್ನ ಇಷ್ಟ ಪಡುತ್ತಿದ್ದುದು ಕೂಡಾ ಹೌದು. ಆಡುಗಲಾಂ ಅನ್ನುವ ಚಿತ್ರದಲ್ಲಿನ ಒರಟು ಹಳ್ಳಿ ಹೈದನೊಬ್ಬನ ಪಾತ್ರವನ್ನ ಜೀವ ಕಟ್ಟಿ ಹಾಗೆ ಮೈದುಂಬಿ ನಟಿಸಿದ್ದರಿಂದಲೇ ಅವನಿಗೆ ನಟನೆಗೆ ರಾಷ್ಟ್ರ ಪ್ರಶಸ್ತಿ ಬಂದದ್ದು. ತೀರಾ ಅವನ ಇತ್ತೀಚಿನ ಚಿತ್ರಗಳಾದ ಮಯಕ್ಕಂ ಎನ್ನ.. ತ್ರೀ.. ಮರಿಯಾನ್ ಚಿತ್ರಗಳಲ್ಲಿ ಅವನ ಅದ್ಭುತ ನಟನೆ ದಾರ್ಷ್ಟ್ಯಕ್ಕೆ ದೊರಕುತ್ತದೆ.

ತಮಿಳು ಗೆಳೆಯನೊಬ್ಬನ ಸಣ್ಣ ಮೆಚ್ಚುಗೆಯ ವಿಮರ್ಶೆ ಇಂದ ನಾನು ಮರಿಯಾನ್ ಚಿತ್ರವನ್ನ ನೋಡಲು ಹೋಗಿದ್ದು. ಆ ಚಿತ್ರದ ಪ್ರಮುಖ ಆಕರ್ಷಣೆಯೇ ದನುಶ್ ಮತ್ತು ಪಾರ್ವತಿಯವರ ನಟನೆ. ಎ ಆರ್ ರೆಹಮಾನ್ ರ ಅದ್ಭುತ ಸಂಗೀತ ಕೂಡಾ ಚಿತ್ರದ ಪ್ರಮುಖ ಅಂಶಗಳಲ್ಲೊಂದು. ಅಷ್ಟು ಸುಲಭಕ್ಕೆ ಎಲ್ಲಾ ವರ್ಗದ ವೀಕ್ಷಕರಿಗೂ ಇಷ್ಟವಾಗಬಲ್ಲ ಚಿತ್ರವಲ್ಲ ಅದು. ಆದರೆ ನೋಡಿದ ಪ್ರತಿಯೊಬ್ಬನ ಮನಸಲ್ಲೂ ಒಂದಷ್ಟು ಕಾಲ ಕಾಡುವ ಚಿತ್ರವಾಗಿ ಉಳಿದುಕೊಳ್ಳುವುದು ಅದರ ಹಿರಿಮೆಯಲ್ಲೊಂದು. ಚಿತ್ರದ ನಿಧಾನ ಗತಿ ಚಿತ್ರದ ಹಿನ್ನಡೆಯಲ್ಲಿ ಪ್ರಮುಖ ಅಂಶ. ಕಥೆಗೆ ಆ ನಿಧಾನ ಗತಿ ಅವಶ್ಯಕವಾದರೂ ಅಷ್ಟೊಂದು ತಾಳ್ಮೆಯನ್ನ ಎಲ್ಲಾ ವರ್ಗದ ಪ್ರೇಕ್ಷಕರಿಂದಲೂ ನಿರೀಕ್ಷೆ ಮಾಡುವುದು ತಪ್ಪು. ಈ ಚಿತ್ರ ಹಾಗೆ ಬಹುಪಾಲು ಜನರಿಗೆ ಇಷ್ಟವಾಗದೇ ಉಳಿಯೋದು ಕೂಡ ಅದೇ ಕಾರಣಕ್ಕೆ. ಅದರ ಹೊರತಾಗಿ ಒಂದೊಳ್ಳೆ ಸಿನಿಮಾ ಮರಿಯಾನ್. 

ಮರಿಯಾನ್ ಅಂದರೆ ಸಾವಿಲ್ಲದವನು ಅಂತ ಅರ್ಥ. ಕಡೆಗೆ ಈ ಚಿತ್ರದ ಅಂತ್ಯದ ಮಟ್ಟಿಗೆ ಅದು ತಾತ್ಕಾಲಿಕ ನಿಜವೂ ಅನ್ನಿಸುತ್ತದೆ. ನೀರೋಡಿ ಅನ್ನುವ ಕಡಲ ತಡಿಯಲ್ಲಿನ ಊರು. ಆ ಊರಿನವರಿಗೆಲ್ಲ ಮೀನುಗಾರಿಕೆಯೇ ಕಸುಬು. ಅದೇ ಊರಲ್ಲಿ ಕಡಲ ತಡಿಯಲ್ಲಿ ಹುಟ್ಟಿ ಬೆಳೆದವ ಈ ಮರಿಯಾನ್. ಕಡಲಿನೊಳಗೆ ಯಾವ ಬಲೆಯೋ ಇಲ್ಲದೆ.. ಗಾಳವಿಲ್ಲದೆ ಬರಿ ಭರ್ಜಿ ಎಸೆದು ದೊಡ್ಡ ದೊಡ್ಡ ಮೀನು ಹಿಡಿಯುವಷ್ಟು ನಿಪುಣ. ಅವನಿಗೆ ಮನೆಯಲ್ಲಿ ಒಬ್ಬ ತಾಯಿಯಾದರೆ, ಕಡಲು ಮತ್ತೊಬ್ಬ ತಾಯಿ. ಅದೇ ಊರಿನಲ್ಲಿ ಪನಿ ಮಲರ್ ಅನ್ನುವ ಹುಡುಗಿ. ತಾಯಿ ಇಲ್ಲದೆ ಬೆಳೆದ ಬಜಾರಿ ಹುಡುಗಿ. ಅವಳು ಮಾಡುವ ಮೀನಿನ ಸಾರು ಇಡೀ ನೀರೋಡಿಯ ಬಾಯಲ್ಲಿ ನೀರು ತರಿಸುವಂಥ ಮಹಿಮೆ ಉಳ್ಳದ್ದು ಅವಳ ಕೈಗುಣ. ಅಂಥಾ ಹುಡುಗಿಗೆ ಈ ಮರಿಯನ್ ಅಂದರೆ ಪ್ರಾಣ. ಮೀನು ಹಿಡಿದು ಸಿಗುತ್ತಿದ್ದ ಅಲ್ಪ ಸ್ವಲ್ಪ ಕಾಸಿನಲ್ಲೇ ಆರಾಮು ಅಂದ್ಕೊಂಡು ಜೀವನ ಸಾಗಿಸುತ್ತಿದ್ದ ಮರಿಯಾನ್ ಗೆ ಆಫ್ರಿಕಾದ ಸೂಡಾನ್ ನಲ್ಲಿ ಕಂಪೆನಿಯೊಂದನ್ನ ಕಟ್ಟುವ ಕಡೆ ಕಾಂಟ್ರಾಕ್ಟ್ ಕೆಲಸದ ಕೂಲಿಯಾಳಾಗಿ ಹೋಗುವ ಕುರಿತಾಗಿ ಕರೆ ಬರುತ್ತದೆ. ಹುಟ್ಟೂರ ಬಿಡಲು ಮರಿಯಾನ್  ಅವನ ತಾಯಿ ಅದೆಷ್ಟು ಪುಸಲಾಯಿಸಿದರು ಆ ಕೆಲಸಕ್ಕೆ ಹೋಗದೆ ಹುಟ್ಟೂರಿನಲ್ಲೇ ಸಂತೋಷವಾಗಿರುವುದಾಗಿ ತಿಳಿಸುತ್ತಾನೆ. 

ಆ ಊರಿನಲ್ಲಿ ಸ್ವಲ್ಪ ಹಣವುಳ್ಳ.. ಸಣ್ಣ ಅಧಿಕಾರದ ಬಲವುಳ್ಳ ವ್ಯಕ್ತಿ ತೀಕುರುಸ್ಸಿ. ಅವನಿಗೆ ಪನಿ ಮಲರ್ ಮೇಲೆ ಆಸೆ. ಬೇರೆ  ಹೆಣ್ಣಾದರೂ ಸರಿ ಅನುಭವಿಸಿ ಬಿಟ್ಟು ಬಿಡುವ ಇವನಿಗೆ ಪನಿ ಮಲರ್ ಳನ್ನು ಮಾತ್ರ ಹೆಂಡತಿಯಾಗಿಸಿ ಕೊಳ್ಳುವ ಬಯಕೆ. ಅದರ ಕುರಿತಾಗಿ ಅವಳ ಜೊತೆ ಮಾತು ಕತೆಯಾಡಿದರೂ ಅವಳು ಒಪ್ಪದೇ ತಾನು ಇರುವುದಾದರೆ ಅದು ಮರಿಯನ್ ಗೆ ಮಾತ್ರವೇ ಅಂದು ಬಿಡುತ್ತಾಳೆ. ಮೊದಮೊದಲು ಪನಿಮಲರ್ ನ ಅದ್ಯಾವ ಮೋಹದ ಬಾಣಗಳಿಗೂ ಮರುಳಾಗದ ಮರಿಯಾನ್ ಗೂ ಕಾಲಕ್ರಮೇಣ ಪನಿಮಲರ್ ಮೇಲೆ ಪ್ರೀತಿ ಉಂಟಾಗುತ್ತದೆ. ಆ ಪ್ರೀತಿ ಮದುವೆಯ ಮಾತುಕತೆಗೆ ಬರುವ ತನಕವೂ ಅವರ ಪ್ರೇಮಕ್ಕೆ ಯಾವ ತೊಡಕೂ ಇರುವುದಿಲ್ಲ. ತೀಕುರಿಸ್ಸಿ ಯ ಬಳಿ ಪನಿಮಲರ್ ಳ ತಂದೆ ಎರಡು ಲಕ್ಷ ಸಾಲ ಪಡೆದಿರುತ್ತಾನೆ ಅವನ ಹೆಂಡತಿಯ ಚಿಕಿತ್ಸೆಗಾಗಿ. ಆದರೆ ಅಷ್ಟು ಕರ್ಚು ಮಾಡಿದರೂ ಅವಳು ಬದುಕುಳಿಯುವುದಿಲ್ಲ. ಮೀನುಗಾರಿಕೆ & ಸಣ್ಣ ಮನೆಯೊಂದನ್ನ ಹೊರತು ಅವರಿಗೆ ಬೇರೆ ಆಸ್ತಿಯೂ ಇಲ್ಲ. ತೀಕುರಿಸ್ಸಿ ತಕ್ಷಣಕ್ಕೆ ಆ ಹಣವನ್ನ ಹಿಂದಿರಿಗಿಸುವಂತೆ ಅಥವಾ ತನ್ನ ಮಗಳನ್ನ ಮದುವೆ ಮಾಡಿಕೊಡುವಂತೆ ಷರತ್ತು ಹಾಕುತ್ತಾನೆ. ಕೊಟ್ಟ ಹಣ ವಾಪಾಸು ಕೊಡಲಾಗದೆ ಇರಲಾಗುವುದಿಲ್ಲ.. ಹಾಗಂತ ಕಡು ಬಡವರಾದ ಅವರು ತಕ್ಷಣಕ್ಕೆ ಕೊಡುವುದಾದರೂ ಹೇಗೆ..?? ಹಣ ಕೊಡಲಾಗುವುದಿಲ್ಲ ಅಂತ ಮಗಳನ್ನ ಆ ಕಟುಕನಿಗೆ ಕಟ್ಟಿ ಕೊಡುವ ಹಾಗೆಯೂ ಇಲ್ಲ. ಇಂಥಾ ಸಂಧಿಗ್ಧತೆಯಲ್ಲಿ ಇರುವಾಗಲೇ ಮರಿಯಾನ್ ಆಫ್ರಿಕಾಗೆ ಹೋಗುವ ಸಂಕಲ್ಪ ಮಾಡಿ ಆ ಕಂಪನಿಯಿಂದ ಎರಡು ಲಕ್ಷ ರುಪಾಯಿ ಪಡೆದು ಅವರ ಸಾಲ ತೀರಿಸಿ ಆಫ್ರಿಕಾಗೆ ಹೊರಡುತ್ತಾನೆ. ಆಫ್ರಿಕಾಗೆ ಬಂದು ಕಷ್ಟಪಟ್ಟು ದುಡಿಯುವ ಮರಿಯಾನ್ ಕಂಪನಿಯ ನಿಯಮಗಳಂತೆ ಎರಡು ವರ್ಷದ ತನಕ ಮನೆಯ ಕಡೆ ಬರುವಂತಿರಲಿಲ್ಲ. ಈಗವನ ಎರಡು ವರ್ಷಗಳ ಅವಧಿ ಮುಗಿದು ಊರು ಸೇರುವ ತನ್ನ ಜೀವದ ಪನಿಮಲರ್ ಳನ್ನು ಸೇರುವ ತವಕದಿಂದ ಆಫ್ರಿಕಾದಲ್ಲಿ ಕೊನೆಯ ಮೂರ್ನಾಲ್ಕು ದಿನವನ್ನ ಕಳೆಯುತ್ತಿರುತ್ತಾನೆ.


ಇಲ್ಲಿಯ ತನಕ ಎಲ್ಲವೂ ಮಾಮೂಲಿ ಕತೆಯಂತೆಯೇ ಮುಂದಿನದನ್ನ ನಾವೆಲ್ಲರೂ ಊಹಿಸಬಹುದಾದಷ್ಟು ಸುಲಭಕ್ಕೆ ಚಿತ್ರ ಸಾಗುತ್ತದೆ. ಮಧ್ಯಂತರದಲ್ಲಿ ಚಿತ್ರಕ್ಕೊಂದು ಅನಿರೀಕ್ಷಿತ ತಿರುವು. ಊರಿಗೆ ವಾಪಾಸು ಮರಳಲು ಇನ್ನೆರಡು ದಿನಗಳಿರುವಂತೆ ಸಂತೋಷದಿಂದಲೇ ಮರಿಯಾನ್ ಅವನ ಸಹಚರರ ಜೊತೆ ಕೆಲಸಕ್ಕೆ ಹೋಗುತ್ತಿರುತ್ತಾನೆ. ಆಗ ಅಲ್ಲಿಗೆ ಬರುವ ಆಫ್ರಿಕಾದ ಡಕಾಯಿತ ಗುಂಪೊಂದು ಇವರನ್ನ ಬಂಧಿಸುತ್ತಾರೆ. ಅವರ ಬ್ಯಾಗುಗಳನ್ನೆಲ್ಲಾ ಹುಡುಕುತ್ತಾರೆ.. ದುಡ್ಡಿಗಾಗಿ ಬೆದರಿಸುತ್ತಾರೆ. ದಿನಗೂಲಿಯ ಆಳುಗಳು.. ಇವರ ಬಳಿ ಆ ಕ್ಷಣಕ್ಕೆ ಎಲ್ಲಿಂದ ಬರಬೇಕು ದುಡ್ಡು. ಆಫ್ರಿಕಾದ ಗುಂಪು ಇವರನ್ನ ಅಪಹರಿಸುತ್ತಾರೆ. ಇವರನ್ನ ಅಪಹರಿಸಿ ಇವರ ಕಂಪನಿಯವರ ಬಳಿ ಹಣ ಕೇಳುವ ಹುನ್ನಾರ ಇವರದ್ದು. ಮರಿಯಾನ್ ಮತ್ತವನ ಇಬ್ಬರು ಸ್ನೇಹಿತರನ್ನ ಬಂಧಿಸಿ ಆಫ್ರಿಕಾದ ಘೋರ ಬರಡು ಜಾಗಗಳಲ್ಲಿನ ಗುಹೆಯೊಂದರಲ್ಲಿ ಇವರನ್ನ ಕಟ್ಟಿ ಹಾಕುತ್ತಾರೆ. ಬಂಧಿಸಿ ಎರಡು ಮೂರು ದಿನವಾದರೂ ತಿನ್ನಲೂ ಏನೂ ಕೊಡುವುದಿಲ್ಲ. ಬಡ ದೇಶವಾದ ಇವರ ಹಣವನ್ನ ಇವರೂ ಮತ್ತು ಇವರ ಕಂಪೆನಿಯವರು ಕೊಳ್ಳೆ ಹೊಡೆದುಕೊಂಡು ಹೋಗುತ್ತಿರುವುದಾಗಿಯೂ ಮತ್ತು ಅದು ಅವರಿಗೆ ಸೇರಬೇಕಾಗಿರುವುದಾಗಿಯೂ ಅವರ ನಿರ್ಣಯ. ಅದಕ್ಕಾಗಿ ಅವರುಗಳನ್ನ ಬಹಳ ಕ್ರೂರವಾಗಿ ಹಿಂಸಿಸುತ್ತಾರೆ.  ಕಂಗೆಟ್ಟು ತಪ್ಪಿಸಿಕೊಳ್ಳಲು ಪ್ರಯತ್ನಪಟ್ಟ ಮರಿಯಾನ್ ಸಹಚರನೊಬ್ಬನನ್ನ ಅವರ ಕಣ್ಮುಂದೆಯೇ ಬರ್ಬರವಾಗಿ ಶೂಟ್ ಮಾಡಿ ಸಾಯಿಸುತ್ತಾರೆ. ಕಂಪನಿಗೆ ಫೋನ್ ಮಾಡುವಂತೆ.. ಹಣ ತರಲು ಹೇಳುವಂತೆ ಇವರನ್ನ ಹೊಡೆದು ಹಿಂಸೆ ಕೊಡುತ್ತಾರೆ. ನಾವೂ ಬಡವರೇ ಇಲ್ಲಿ ಕೂಲಿಗಾಗಿ ದೇಶ ಬಿಟ್ಟು ದೇಶಕ್ಕೆ ಬಂದಿದ್ದೇವೆ ಅಂತ ಇಂಗ್ಲಿಷ್ ಬಾರದ ತಮಿಳಿನಲ್ಲಿ ಕಣ್ಣೀರಿಟ್ಟು ಅದೆಷ್ಟು ಗೋಗರೆದರೂ ಅವರ ಮನ ಕರಗುವುದಿಲ್ಲ. ಇಂಥದ್ದೇ ಒಂದು ರಾತ್ರಿ ಆಫ್ರಿಕನ್ ಕಳ್ಳರ ಗುಂಪು ಲಲನೆಯರ ಜೊತೆ ಮಸ್ತಿಯಲ್ಲಿ ಮೈಮರೆತಿರುವಾಗ ಅವರಿಗೆ ಸಾಮಾನುಗಳನ್ನು ಸರಬರಾಜು ಮಾಡಲು ಬಂದ ವಾಹನವೊಂದರಲ್ಲಿ ಉಪಾಯವಾಗಿ ಮರಿಯಾನ್ ಮತ್ತು ಅವನ ಸ್ನೇಹಿತ ಸಾಮಿ ತಪ್ಪಿಸಿಕೊಳ್ಳುತ್ತಾರೆ. ವಾಹನದ ಹಿಂಭಾಗದ ಎರಡು ಮೂರಿಂಚು ಜಾಗದಲ್ಲಿ ತುಂಬಾ ಹೊತ್ತು ಕೂರಲಾಗದೆ ಅದೆಲ್ಲೋ ಬಿದ್ದು ಹೋದ ಸಾಮಿಯ ಕಥೆ ಮರಿಯಾನ್ ಗೆ ಗೊತ್ತಿರುವುದಿಲ್ಲ. ಹೀಗೆ ಒಂದು ಕಡೆ ಆ ವಾಹನ ನಿಲ್ಲುತ್ತದೆ. ವಾಹನದಿಂದ ಇಳಿದು ಮರಿಯಾನ್ ಅಲ್ಲಿಂದ ತಪ್ಪಿಸಿಕೊಂಡು ತನ್ನ ಸ್ನೇಹಿತ ಸಾಮಿಗಾಗಿ ಹುಡುಕಿ ಅಲೆಯುತ್ತಾನೆ. ಅಷ್ಟರಲ್ಲೇ ಕಳ್ಳರ ಗುಂಪಿಗೆ ಇವರು ತಪ್ಪಿಸಿಕೊಂಡ ವಿಚಾರ ಗೊತ್ತಾಗಿ ಇವರನ್ನ ಹುಡುಕುವ ಕೆಲಸದಲ್ಲಿ ಮಗ್ನರಾಗಿರುತ್ತಾರೆ. ನಡುವೆ ಸಾಮಿ ಅವರ ಕೈಗೆ ಸಿಕ್ಕಿಬಿಡುತ್ತಾನೆ. ಸಿಕ್ಕಲ್ಲೇ ಅವನನ್ನ ಶೂಟ್ ಮಾಡಿ ಕೊಲ್ಲುವ ಅವರು ಮರಿಯಾನ್ ಗಾಗಿ ಅನವರತ ಹುಡುಕುತ್ತಾರೆ. 

ಕೇವಲ ಬದುಕುವಾಸೆ ಇರುವ ಯಾವ ಮನುಷ್ಯನಾದರೂ ಆಫ್ರಿಕಾ ದಂತ ಸುಡುಗಾಡಿನ ಜಾಗದಲ್ಲಿ ಇಷ್ಟೆಲ್ಲಾ ಹೋರಾಟ ನಡೆಸಿ ಬದುಕುಳಿಯುವ ವ್ಯರ್ಥ ಪ್ರಯತ್ನ ನಡೆಸುವ ಬದಲು ಆ ಕಳ್ಳರ ಕೈಯಲ್ಲಿ ಸಿಕ್ಕು ನರಳಾಡುವುದಕ್ಕಿಂಥ ಸಾಯುವುದು ವಾಸಿ ಅಂತ ಸತ್ತೇ ಬಿಡುತ್ತಿದ್ದರೇನೋ. ಆದರೆ ಗೊತ್ತು ಗುರಿ ಇಲ್ಲದ ಊರು.. ದಿಕ್ಕು ದೆಸೆ ಅರಿಯದ ಸುಡುಗಾಡಿನಲ್ಲಿ ಇವನ ಬದುಕುವಾಸೆಯನ್ನ ಸಾವಿರ ಕಾಲಕ್ಕೂ ಜೀವಂತವಾಗಿರಿಸಿ ಕೊಳ್ಳುವಂತೆ ಚೈತನ್ಯ ತುಂಬುವುದು ಪನಿಮಲರ್ ಳ ಪ್ರೀತಿ. ಆ ಪ್ರೀತಿಯೆಡೆಗಿನ ಸೆಳೆತವೊಂದೇ ಅವನನ್ನು ಅಲ್ಲಿಂದ ತಪ್ಪಿಸಿಕೊಳ್ಳುವಂತೆ ಪ್ರೆರೆಪಿಸುತ್ತಿರುತ್ತದೆ. ಕಡೆಗೂ ಸುಡುಗಾಡು, ಮರುಭೂಮಿ ಯಾವುದ್ಯಾವುದೋ ಕಷ್ಟಗಳನ್ನೆಲ್ಲ ತಾಳಿಕೊಂಡು ಜೀವಂತ ಶವವಾಗಿ ಮರಿಯಾನ್ ಆಫ್ರಿಕಾದ ಕಡಲ ತಡಿಯೊಂದರ ತಟದಲ್ಲಿ ಬಂದು ಬೀಳುತ್ತಾನೆ. ಕಡಲನ್ನ ಕಂಡೊಡನೆ ತನ್ನ ತಾಯಿಯನ್ನೇ ಕಂಡಷ್ಟು ಸಂತಸ ಅವನದ್ದು. ಆಗ ಅಲ್ಲಿಗೆ ಖಳ ನಾಯಕ ಬರುತ್ತಾನೆ.. ನಾಲ್ಕಾರು ದಿನದಿಂದ ಹನಿ ನೀರು ಕುಡಿಯದೆ ಕೃಶವಾಗಿರುವ ನಾಯಕನನ್ನ ಮನಬಂದಂತೆ ಹೊಡೆದು ದಂಡಿಸುತ್ತಾನೆ. ಅವನನ್ನು ಕೊಲ್ಲುವ ಸಲುವಾಗಿ ಮರಿಯಾನ್ ನನ್ನು ಕಡಲಿನೊಳಗೆಳೆದು ಕೊಂಡು ಹೋಗಿ ಮುಳುಗಿಸಿ ಕೊಲ್ಲುವ ಪ್ರಯತ್ನ ಮಾಡುತ್ತಾನೆ. ಕಡಲಿಗಿಳಿದರೆ ಕಡಲ ರಾಜ ತಾನು ಅನ್ನುವ ಮರಿಯಾನ್ ಖಳ ನಾಯಕನನ್ನು ಅದೇ ಕಡಲಲ್ಲಿ ಮುಳುಗಿಸಿ ಸಾಯಿಸಿ ನಿತ್ರಾಣವಾಗಿ ಕಡಲ ದಡದಲ್ಲಿ ಬಂದು ಬೀಳುತ್ತಾನೆ. ಆ ಸಮಯಕ್ಕೆ ಅದೇ ಮಾರ್ಗವಾಗಿ ಬಂದ ಆಫ್ರಿಕಾದ ಸಾಮಾನ್ಯ ಜನ ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ. ಥಿಯೇಟರ್ ನಲ್ಲಿ ನನ್ನ ಪಕ್ಕದಲ್ಲಿ ಕೂತಿದ್ದ ಕುಟುಂಬ ಒಂದರ ಒಂದೆರಡು ಜನ  ಆಗ ಮಾತಾಡಿಕೊಂಡ ಬಗೆ ಹೀಗಿತ್ತು " ಅಲ್ಲಾ ಆಫ್ರೀಕಾದಲ್ಲೂ ಹೀಗೆ ಒಳ್ಳೆಯವರು ಇದಾರಾ" ಆ ದೃಶ್ಯ ಮಾಡಿದ ಆ ಕ್ಷಣದ  ಪರಿಣಾಮ ಅದು..!! ಮರಿಯಾನ್ ಬದುಕುಳಿಯುತ್ತಾನೆ. ಅವನ ಕಂಪನಿಯವರು ಬಂದು ಅವನನ್ನು ಕರೆದುಕೊಂಡು ಹೋಗಿ ಅವನನ್ನ ತನ್ನ ಹುಟ್ಟೂರಿಗೆ ಕಳಿಸಿ ಕೊಡುತ್ತಾರೆ. ತಾಯ್ನಾಡಿಗೆ ಬಂದು ಕಾಲಿರಿಸಿದ ಒಡನೇ ಮರಿಯಾನ್.. ತನಗಾಗಿ, ತನ್ನ ಬರುವಿಕೆಯನ್ನೇ ಕಾದು ಕಾದು ನಿತ್ರಾಣವಾದ ಪನಿಮಲರ್ ಅನ್ನು ಕೂಡುವ ಹೊತ್ತಿಗೆ ಸಿನಿಮಾ ಮುಗಿಯುತ್ತದೆ. 

ಕಥೆ ಇದಿಷ್ಟೇ ಆದರೂ ಸಿನಿಮಾ ನಮ್ಮನ್ನು ತುಂಬಾ ಕಾಡುತ್ತದೆ. ದನುಶ್ ಅಭಿನಯದ ಕುರಿತಾಗಿ ಅಷ್ಟುದ್ದ ಪೀಟಿಕೆ ಕೊರೆದಿರುವ ನಾನು ಮತ್ತೆ ಅದರ ಕುರಿತಾಗಿ ಹೇಳುವ ಅವಶ್ಯಕತೆ ಇಲ್ಲ ಅಂದುಕೊಳ್ತೇನೆ. ನಾಯಕಿಯಾಗಿ.. ಅಪ್ಪು ಅಭಿನಯದ ಮಿಲನ ಚಿತ್ರದಲ್ಲಿನ ಮುದ್ದು ನಗೆಯ ಸ್ನಿಗ್ಧ ಸುಂದರಿಯಾಗಿ ಅಭಿನಯಿಸಿದ್ದ ಪಾರ್ವತಿ ಇಲ್ಲಿ ಕಪ್ಪು ಹುಡುಗಿಯಾಗಿ.. ಬಜಾರಿಯಾಗಿ.. ಮರಿಯಾನ್ ನನ್ನು ಅದ್ಭುತವಾಗಿ ಪ್ರೀತಿಸುವ ಹುಡುಗಿಯಾಗಿ ಅಮೋಘವಾಗಿ ನಟಿಸಿದ್ದಾರೆ. ಅವರ ನಿಚ್ಚಳ ಕಣ್ಣಿನಿಂದ ಚರ್ಚಿನಲ್ಲಿ ಎವೆಯಿಕ್ಕದೆ ನಾಯಕನನ್ನು ನೋಡುವ ಪರಿ ಕೂತು ಸಿನಿಮಾವನ್ನ ನೋಡುತ್ತಿರೋ ನಮ್ಮನ್ನೂ ಕಾಡುತ್ತದೆ. ಕೆಲವೊಂದು ಸನ್ನಿವೇಶಗಳಲ್ಲಿ ಅಮೋಘ ಅನ್ನಿಸಿಕೊಳ್ಳುವಂತೆ ನಟಿಸಿದ್ದಾರೆ. ಕೆಲವೊಂದು ಪ್ರಣಯ ದೃಶ್ಯಗಳಲ್ಲಿ ಪಾರ್ವತೀ ಹೀಗೂ ನಟಿಸಬಲ್ಲರಾ ಅಂದುಕೊಳ್ಳುವಷ್ಟು ಗಾಢ ತನ್ಮಯತೆಯಿಂದ ಅಭಿನಯಿಸಿದ್ದಾರೆ. ಅವರಷ್ಟೇ ಸೌಂದರ್ಯ ಒಂದೇ ಅಲ್ಲ ಅವರ ಅಭಿನಯವೂ ನಮ್ಮನ್ನ ಆವರಿಸಿಕೊಳ್ಳುತ್ತದೆ. ಮರಿಯಾನ್ ನ ಮೊದಲಾರ್ಧದ ಭಾಗದ ಸ್ನೇಹಿತರಾಗಿ ಅಪ್ಪುಕುಟ್ಟಿ ಮತ್ತು ಇಮ್ಯಾನುಯೇಲ್ ಅಣ್ಣಾಚಿ ಅವರುಗಳು ಕಚಗುಳಿ ಇಡುತ್ತಾ ನಮ್ಮನ್ನ ಒಂದಷ್ಟು ನಗಿಸುತ್ತಾ ಉಲ್ಲಸಿತರಾಗಿಸುತ್ತಾರೆ. ಅವರಿಬ್ಬರ ನಟನೆಯಲ್ಲಿ ಕೋರೆ ಹೇಳುವ ಯಾವ ಅಂಶಗಳೂ ಇಲ್ಲ. ಇನ್ನು ಮರಿಯಾನ್ ಜೊತೆ ಆಫ್ರಿಕಾ ದಲ್ಲಿ ಸಿಕ್ಕಿ ಕೊಂಡ ಸ್ನೇಹಿತರಾಗಿ ಜಗನ್ & ಅಂಕುರ್ ವಿಕಲ್ ಮನೋಜ್ಞವಾಗಿ ಅಭಿನಯಿಸಿದ್ದಾರೆ. ಅದರಲ್ಲೂ ಅಪಹೃತರಾದ ಮೇಲೆ ಹಸಿವಿನಿಂದ ಕಂಗೆಟ್ಟು ಊಟ ಮಾಡುವಂತೆ ನಟಿಸುತ್ತಾ ತಮ್ಮ ಹಸಿವನ್ನ ಮರೆಯುವ ಪ್ರಯತ್ನ ಮಾಡುವ ಸನ್ನಿವೇಶದಲ್ಲಿ ಜಗನ್ ಅದ್ಭುತ ಅಭಿನಯದಿಂದ ಚಿರಕಾಲ ನೆನಪಿನಲ್ಲಿ ಆ ಪಾತ್ರ ಉಳಿದುಕೊಳ್ಳುವಂತೆ ಮಾಡುತ್ತಾರೆ. ಪನಿಮಲರ್ ಳ ತಂದೆಯ ಪಾತ್ರಧಾರಿಯಾಗಿ ಸಲೀಂ ಕುಮಾರ್ ಅವರದ್ದು ಪ್ರೌಢ ಅಭಿನಯ. ತೀಕುರಿಸ್ಸಿ ಯಾಗಿ ನಟಿಸಿರುವ ವಿನಾಯಕನ್ ಅವರದ್ದು ಕೂಡಾ ಅದ್ಭುತ ನಟನೆ. ಖಳ ನಟರಾಗಿ ಅಭಿನಯಿಸಿರುವ ಆಫ್ರಿಕಾದ ಹುಡುಗರದು ಕೂಡಾ ಅಭಿನಯದ ವಿಚಾರದಲ್ಲಿ.. ಅವರು ತೋರುವ ಅಹಿಂಸಾತ್ಮಕ ಸನ್ನಿವೇಶಗಳಲ್ಲಿ ಅವರ expression ಗಳ ವಿಚಾರದಲ್ಲಿ ಏ ಗ್ರೇಡ್ ಗಿಟ್ಟಿಸಿ ಕೊಳ್ಳುತ್ತಾರೆ.

ಈ ಸಿನಿಮಾದ ಮತ್ತೊಬ್ಬ ಹೀರೋ ಸಿನಿಮಾಟೋಗ್ರಾಫರ್ ಮಾರ್ಕ್ ಕೊನ್ನಿಂಕ್ಸ್.. ಸಾಗರದೊಳಗಣ ಸನ್ನಿವೇಶಗಳನ್ನ.. ಆಫ್ರಿಕಾದ ಬರಡು ನೆಲದ ಜೀವಂತಿಕೆಯನ್ನ ಕಣ್ಣಿಗೆ ಕಟ್ಟುವಂತೆ ಚಿತ್ರೀಕರಿಸಿ.. ಆಫ್ರಿಕಾ ನೆಲವನ್ನ ಅಷ್ಟು ಸುಲಭಕ್ಕೆ ಮರೆಯಲಾಗದ ಹಾಗೆ  ಅವರು ಸಫಲ. ಕಥೆ, ಚಿತ್ರಕಥೆ, ನಿರ್ದೇಶನದ ಹೊಣೆ ಹೊತ್ತ ಭರತ್ ಬಾಲ ಅವರು ಹೃದಯಕ್ಕೆ ಹತ್ತಿರವಾಗುತ್ತಾರೆ. ಕಥೆ ಎಲ್ಲೋ ಪೇಪರ್ ನಲ್ಲಿ ಓದಿದ ನೈಜ ಘಟನೆಯೊಂದರ ಎಳೆಯಾದರೂ ಅದನ್ನ ತಮಿಳಿನ ನೇಟಿವಿಟಿಗೆ ತರುವಲ್ಲಿ ಅವರ ಕೆಲಸಕ್ಕೆ ಒಂದು ಶಹಬ್ಬಾಸ್ ಹೇಳದೆ ಇರಲಾಗದು. ಸಂಭಾಷಣೆಯಲ್ಲಿ ಬದುಕಿಗೆ ಸ್ಫೂರ್ತಿ ತುಂಬುವಂಥ.. ಪ್ರೀತಿ ವಿಚಾರದಲ್ಲಿ ಮನಸ್ಸಿಗೆ ಹತ್ತಿರವಾಗುವಂಥ ಕೆಲವೊಂದು ವಿಚಾರಗಳನ್ನ ಬರೆದು ಕೊಟ್ಟಿರೋ ಜೋ ಡೀಕ್ರುಜ್ ಅವರು ಅಲ್ಲಲ್ಲಿ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಾರೆ. ಸಂಗೀತದ ವಿಚಾರದಲ್ಲಿ ಎ ಆರ್ ರೆಹಮಾನರ ಬಗ್ಗೆ ಮಾತಾಡುವಂತಿಲ್ಲ. ಒಂದೆರಡು ಹಾಡುಗಳ ಭಾವ ಜೀವಕ್ಕೆ ಬಹಳ ಹತ್ತಿರವಾಗುತ್ತದೆ. ಚಿತ್ರದಲ್ಲಿನ ಹಲವು ವಿಶುಯೆಲ್ ಎಫೆಕ್ಟ್ ಗಳಿಂದ ಹಲವು ಕಡೆ ಚಿತ್ರದ ಶ್ರೀಮಂತಿಕೆ ಹೆಚ್ಚುತ್ತದೆ. ದನುಶ್ ಕೊನೆಯ ಹಾಡಿನಲ್ಲಿ ಖಳರಿಂದ ತಪ್ಪಿಸಿ ಕೊಳ್ಳುವಾಗ ಅವರನ್ನ ಸುತ್ತುವರೆಯುವ ಕಾಲ್ಪನಿಕ ಸಿಂಹಗಳು ಪರದೆಯಾಚೆಗಿನ ನಮ್ಮನ್ನೂ ಭಯಗೊಳಿಸುತ್ತವೆ. ಮನುಷ್ಯನೊಬ್ಬನ ಬದುಕುವೆಡೆಗಿನ ತುಡಿತ & ಒಂದಷ್ಟು ಪ್ರಮುಖ ಅಂಶಗಳಿಂದ ಈ ಚಿತ್ರ ಹಾಲಿವುಡ್ಡಿನ ಲೈಫ್ ಆಫ್ ಪೈ ಚಿತ್ರವನ್ನ ನೆನಪಿಗೆ ತರುತ್ತದೆ. 

ಈ ಸಿನಿಮಾದ ಬಗ್ಗೆ ಯಾಕೆ ಹೇಳಿಕೊಂಡೆ ಎಂದರೆ.. ಬೆಳಗ್ಗೆ ತುರ್ತು ಕೆಲಸದ ಮಧ್ಯೆಯೂ ಒಂದೆರಡು ನಿಮಿಷ ಫೇಸ್ಬುಕ್ ಕಡೆ ಬಂದಾಗ ನನಗೆ ಕಾಣಿಸಿದ್ದು ಶಂಕರ್ ದೇವಾಡಿಗ ಕೆಂಚನೂರರ ಈ ಸಾಲುಗಳು "ನಿನ್ನ ತಲುಪುವ ಆಸೆಯೊಂದೇ.. ನನ್ನ ಸದಾ ಚಲನೆಯಲ್ಲಿಡಬಲ್ಲ ಇಂಧನ" ಸಾಕ್ಷಾತ್ ಆ ಚಿತ್ರದ ನಾಯಕನ ಮನದ ಆಶಯವನ್ನೇ ಹೊತ್ತು ಹೆಳುವಂತಿದ್ದ ಈ ಸಾಲುಗಳು. ನಿನ್ನೆಯಷ್ಟೇ ಆ ಚಿತ್ರವನ್ನ ನೋಡಿ ಅದರ ಗುಂಗಿನಿಂದ ಹೊರ ಬರಲಾಗದ ನನ್ನನ್ನ ಇಷ್ಟು ಗೀಚುವಂತೆ ಪ್ರೇರೆಪಿಸಿದ್ದು ಈ ಸಾಲುಗಳಲ್ಲಿನ ಭಾವ. ಬಹಳ ಕಾಲ ನೆನಪಿನಲ್ಲುಳಿಯುವ ಚಿತ್ರ ಮರಿಯಾನ್. ಭಾಷೆಯ ಹಂಗಿಲ್ಲದೆ ಸಿನಿಮಾ ನೋಡುವ ಸಿನಿಮಾ ಪ್ರೀತಿ ಇರುವವರು.. ಕಲಾತ್ಮಕ & ಪ್ರಯೋಗಾತ್ಮಕ ಚಿತ್ರಗಳ ಕಡೆ ಮನಸುಳ್ಳವರು ಖಂಡಿತ ಒಮ್ಮೆ ನೋಡಬಹುದಾದ ಚಿತ್ರ ಮರಿಯಾನ್. ಖಂಡಿತ ಮರಿಯಾನ್ ನಮ್ಮನ್ನು ಕಾಡುತ್ತಾನೆ.

ಮನುಷ್ಯನೊಳಗೆ ಪ್ರೀತಿ ಇಷ್ಟೆಲ್ಲಾ ಚೈತನ್ಯವನ್ನ ತುಂಬಾ ಬಲ್ಲದಾ ಅನ್ನುವ ದೊಡ್ಡ ಪ್ರಶ್ನೆಯೊಂದನ್ನ ಚಿತ್ರ ನಮ್ಮ ಮುಂದೆ ಇಡುತ್ತದೆ. ಉತ್ತರವಾಗಿ ಮರಿಯಾನ್ ನಿಲ್ಲುತ್ತಾನೆ. ಹಲವು ಕಾರಣಗಳಿಂದ ಒಂದೊಂದು ಸಿನಿಮಾ ಒಬ್ಬೊಬ್ಬರಿಗೆ ಇಷ್ಟವಾಗುತ್ತದೆ. ಹಾಗೆ ಮರಿಯಾನ್ ಕೂಡಾ ಕೆಲ ಕಾರಣಗಳಿಂದ ನನಗೆ ಇಷ್ಟವಾಗುತ್ತದೆ. 

Wednesday 24 July 2013

ಅಭಿಮಾನವೆಂಬುದೊಂದು ಪ್ರೀತಿಯ ಕುರಿತು..

ಮೊನ್ನೆ ಅವಧಿಯಲ್ಲಿ ಅರುಣ್ ಜೋಳದ ಕೂಡ್ಲಿಗಿಯವರ ಬರಹವೊಂದನ್ನ ಓದಿದ ನನತರ ಬಹಳ ಕಾಡಿಸೋಕೆ ಶುರುವಾಯ್ತು. ಅಭಿಮಾನದ ಹಿಂದಿರುವ ಹಲವು ಮುಖವಾಡಗಳಲ್ಲಿ ಮತ್ತೊಂದು ಮುಖದ ಪರಿಚಯವಾಯ್ತಷ್ಟೇ. ಆ ಲೇಖನದಲ್ಲಿ ಅಭಿಮಾನದ ಪರಮಾಧಿಯಂತೆ ಕಾಣುವ ಜನರ ಆಚರಣೆಗಳ ಕುರಿತಾಗಿ ಅವರು ಹೇಳ್ತಾರೆ. ಈ ಶತಮಾನದ ವೀರ ಮದಕರಿ ಸಿನಿಮಾವನ್ನ ಕೊಟ್ಟೂರು ಮತ್ತು ಉತ್ತರ ಕನ್ನಡದ ಇನ್ನೂ ಹಲವು ಕಡೆ ಕುರಿ ಕೋಳಿಗಳನ್ನ ಬಲಿ ಕೊಟ್ಟು ವಿಜಯೋತ್ಸವಕ್ಕಾಗಿ ಹಾರೈಸುವ ಪದ್ಧತಿ. ಇಂಥಾ ಆಚರಣೆಗಳ ಕುರಿತಾಗಿ ನಾನು ಈವರೆಗೆ ಕೇಳಿರಲಿಲ್ಲ. ತೆಲುಗಿನ ಕೆಲವರ ಸಿನಿಮಾಗಳಿಗೆ ಹಾಗೆ ಬಲಿ ಕೊಡುವ ಸಂಪ್ರದಾಯವಿದೆ ಅಂತ ಈ ಹಿಂದೆ ಎಲ್ಲೋ ಒಂದು ಕಡೆ ಓದಿದ್ದ ನೆನಪಿದೆಯಾದರೂ.. ಕರ್ನಾಟಕದಲ್ಲಿ ಆ ತರಹದ ಒಂದು ಪದ್ಧತಿ ಆಚರಣೆಯಲ್ಲಿ ಇರುವುದರ ಕುರಿತಾಗಿ ಸುಳಿವು ಇರಲಿಲ್ಲ. ದೇವರಿಗೆ ಹಾಗೆ ಹರಕೆ ಅಂದ್ಕೊಂಡು ಬಲಿ ಕೊಡುವ ಸಂಪ್ರದಾಯವನ್ನ ಕೂಡಾ ಒಂದು ಮಟ್ಟಿಗೆ ಭಕ್ತಿ ಪರಾಧೀನ ಮೂಢನಂಬಿಕೆ ಅನ್ನೋ ಹೆಸರಿಟ್ಟು ಸಹಿಸಿಕೊಂಡು ಬಿಡೋದು ಸುಲಭ. ಆದರೆ ಹೀಗೆ ಸಿನಿಮಾವೊಂದಕ್ಕೆ ಬಲಿ ಕೊಡುವ ಪ್ರಕ್ರಿಯೆಯೆಂದರೆ ಇದು ಕೇವಲ ಆಶ್ಚರ್ಯಕರ ವಿಷಯವಷ್ಟೇ ಅಲ್ಲ ಒಂದು ಮಟ್ಟಿಗಿನ ಖೇದದ ವಿಚಾರ ಕೂಡಾ. 


ಅಭಿಮಾನ ಜಾತಿ, ಧರ್ಮ, ಮತ, ದೇಶ, ರಾಷ್ಟ್ರೀಯತೆಗಳನ್ನ ಮೀರಿದ ಪ್ರೀತಿ. ಅಭಿಮಾನ ಕೂಡಾ ಹೀಗೆ ಜಾತಿ ರಾಜಕಾರಣದಲ್ಲಿ ಸಿಕ್ಕು ನರಳೋದಾದ್ರೆ ಅದು ದುರಂತವೇ ಸರಿ. ಎಲ್ಲಾ ಕಟ್ಟಲೆಗಳನ್ನ ಮೀರಿದ ಅಭಿಮಾನಕ್ಕೆ ಹಾಗೊಂದು ಸ್ಥಾನ ಇರೋದ್ರಿಂದಲೇ ಎಲ್ಲಿಯವನೋ ಮೈಕಲ್ ಜಾಕ್ಸನ್ ತೀರಾ ನಮ್ಮ ಮನೆಯ ಬೆಡ್ ರೂಂ ಗಳಲ್ಲಿ ಪೋಸ್ಟರ್ ಗಳಾಗಿ ನಿಲ್ಲೋಕೆ ಸಾಧ್ಯವಾದದ್ದು. ಎಲ್ಲಿಯವರೋ ನೆಲ್ಸನ್ ಮಂಡೇಲಾ ನಮ್ಮ ಮಕ್ಕಳಿಗೆ ಪಾಠವಾದದ್ದು. ಎಲ್ಲಿಯವನೋ ವಿಲ್ ಸ್ಮಿತ್.. ಎಲ್ಲಿಯವಳೋ ಜೆಸ್ಸಿಕಾ ಆಲ್ಬಾ ನಮಗ್ಯಾಕೆ ಇಷ್ಟ ಆಗೋದು..?? ಯಾಕೆ ಅವರ ಸಿನಿಮಾಗಳನ್ನ ಜಗತ್ತಿನೆಲ್ಲೆಡೆ ಹಾಗೆ ಮುಗಿ ಬಿದ್ದು ನೋಡೋದು..?? ಕ್ರಿಸ್ ಗೇಲ್ ಯಾಕೆ ನಮಗೆ ಅಷ್ಟಿಷ್ಟ ಆಗಬೇಕು..?? ಪೀಲೆ, ಮರಾಡೋಣ, ಡೇವಿಡ್ ಬೆಕೆಮ್, ಜಿನದೀನ್ ಜಿದಾನ್, ಅಂದರೆ ಈಗಲೂ ನಮಗ್ಯಾಕೆ ಸಂಚಲನ ಆಗತ್ತೆ.?? ಜಾನ್ ಸೀನ, ರಾಕ್ ಅಂಥವರುಗಳೆಲ್ಲ ನಾವು ಹಾಕುವ ಬಟ್ಟೆಯ ಮೇಲ್ಯಾಕೆ ಇರಬೇಕು..?? ಇವರುಗಳೆಲ್ಲ ನಮಗೆ.. ನಮ್ಮ ದೇಶಕ್ಕೆ ಕೊಟ್ಟದ್ದಾದರೂ ಏನು..?? ಆದರೂ ಇವರಿಗೊಂದು ಎಂದರೆ ನಾವು ಏಕೆ ತಲ್ಲಣಿಸುತ್ತೇವೆ..?? ಅದೇ ಅಭಿಮಾನದ ಪ್ರೀತಿ. ಅದಕ್ಕೊಂದು ಬೇಲಿಯೇ ಇಲ್ಲ. ಅಲ್ಲೆಲಿನವರು ಕೂಡಾ ನಮ್ಮವರು ಅನ್ನಿಸಿ ಬಿಡಬಲ್ಲ ಒಂದು ಮಧುರ ಅನುಭೂತಿಯನ್ನ ಕೊಂಡು ತರಬಲ್ಲ ಒಂದು ಅನನ್ಯ ಸಂಭಂಧದ ಹೆಸರೇ ಅಭಿಮಾನ ಎಂದರೆ ತಪ್ಪಲ್ಲ. ಈ ಸಂಬಂಧಕ್ಕೆ ಎರಡು ಜೀವಗಳ ನೇರಾ ನೇರ ಪರಿಚಯವೇ ಇರಬೇಕಿಲ್ಲ. ಏನನ್ನಾದರೂ ಸಾಧಿಸಬಲ್ಲ ಒಂದು ಜೀವ ಮತ್ತದನ್ನ ತನ್ನದೇ ಎನ್ನುವಷ್ಟು ಆನಂದದಿಂದ ಅನುಭವಿಸುವ ಇನ್ನೊಂದು ಜೀವದ ಉಪಸ್ತಿತಿಯಷ್ಟೇ ಸಾಕು ಈ ಜಗದೊಳಗೆ ಯಾರ ಮೇಲೆ ಯಾರಿಗಾದರೂ ಅಭಿಮಾನ ಮೂಡೋಕೆ. 

ನಾವು ಅಭಿಮಾನಿಸುವ ಕ್ಷೇತ್ರಗಳು ಇಂಥವೇ ಆಗಬೇಕಿಲ್ಲ. ಸಾಧನೆ ಎನ್ನುವುದು ಯಾವ ಕ್ಷೇತ್ರಗಳಲ್ಲಿ ಸಾಧ್ಯವೋ ಆ ಎಲ್ಲಾ ಕ್ಷೇತ್ರಗಳಲ್ಲೂ ಅದಕ್ಕೆ ಪೂರಕವಾಗಿ ಅಭಿಮಾನಿಸುವ ಅಭಿಮಾನಿಗಳು ಇದ್ದೇ ಇರುತ್ತಾರೆ. ಸಾಹಿತ್ಯವಾಗಲಿ, ಸಂಗೀತವಾಗಲಿ, ಕಲೆ, ಚಿತ್ರಕಲೆ, ನಾಟಕ, ನೃತ್ಯ, ಸಿನಿಮಾ, ಕ್ರೀಡೆ, ರಾಜಕೀಯ, ತಂತ್ರಜ್ಞಾನ, ಸಮಾಜ ಸೇವೆ.. ಹೀಗೆ ಯಾವೊಂದು ಕ್ಷೆತ್ರವಾದರೂ ಸರಿ. ಯಾವ ಕ್ಷೆತ್ರವಾದರೂ ಸಾಧನೆಗೈದವರನ್ನ ಗುರುತಿಸಿ ಅವರ ಮೇಲೊಂದು ಪ್ರೀತಿ, ಆಸಕ್ತಿ ಮೂಡಿಸಿಕೊಳ್ಳುವ ಪ್ರಕ್ರಿಯೆ ನಮ್ಮ ಅಭಿಮಾನದ ಒಂದು ರೂಪ. ಆದರೂ ನಮ್ಮ ಜಗತ್ತಿನೊಳಗೆ ಅಸಂಖ್ಯಾತ ಜನರನ್ನ ಅಭಿಮಾನಿಗಳನ್ನಾಗಿಸಿಕೊಳ್ಳುವ ಜನಪ್ರಿಯ ಕ್ಷೇತ್ರಗಳೆಂದರೆ ಕ್ರೀಡೆ ಮತ್ತು ಸಿನಿಮಾ ಲೋಕ. ಸಿನಿಮಾ ಲೋಕ ಮತ್ತು ಕ್ರೀಡೆಯಲ್ಲಿ  ವರ್ಚಸ್ಸು ಇನ್ನಾವುದೇ ರಂಗದಲ್ಲಿ ನಮಗೆ ಕಾಣ ಸಿಗುವುದು ಸ್ವಲ್ಪ ಅಪರೂಪ. ಅದರಲ್ಲೂ ಸಿನಿಮಾ ನಟರು ನಮ್ಮನ್ನ ಆವರಿಸಿಕೊಳ್ಳುವ ಪರಿ ಅದೆಂಥಾ ಮಾಯೆಯೋ..?? ಕೆಲವು ನಟರ ಮೇಲೆ ಅಭಿಮಾನದ ಅತಿಶಯತೆ ಅದೆಷ್ಟಿದೆ ಅಂದ್ರೆ ತಮ್ಮೆಲ್ಲಾ ಕೆಲಸವನ್ನ ಬಿಟ್ಟು ಅವರ ಸಿನಿಮಾ ರಿಲೀಸ್ ಆದ ಮೊದಲ ದಿನದ ಮೊದಲ ಷೋ ಗೆ ಹೋಗಿ ನೋಡಿಕೊಂಡು ಬರುತ್ತಾರೆ. ಸಿನಿಮಾದಲ್ಲಿ ಅವರು ಹಾಕುವ ಬಟ್ಟೆ, ವೇಷಭೂಷಣ, ಕೇಶ ವಿನ್ಯಾಸ, ಮಾತಿನ ಧಾಟಿಗೆ ಅನುಯಾಯಿಗಳಾಗ್ತಾರೆ. ತನ್ನಿಷ್ಟದ ನಟನ ಕುರಿತಾಗಿ ಜಯಘೋಷ ಕೂಗೋದು.. ಹೂಹಾರಗಳನ್ನ ಎಸೆಯೋದು.. ಅವನ ಸಿನಿಮಾ ಯಶಸ್ಸಿನ ಕುರಿತಾಗಿ ಪೂಜಿಸೋದು, ಪ್ರಾರ್ಥಿಸೋದು ಯಾವ ಪುರುಷಾರ್ಥಕ್ಕೆ..?? ಎಲ್ಲಾ ಅಭಿಮಾನ ಅನ್ನೋ ಒಂದೇ ಒಂದು ಸಂಭಂಧದ ಮೇಲಷ್ಟೇ. 

ಸಚಿನ್ ಏಕದಿನದಿಂದ ನಿವೃತ್ತಿ ಆದ ಕೂಡಲೇ ಪರಿತಪಿಸಿದವರಲ್ಲಿ ನಾನೂ ಕೂಡಾ ಒಬ್ಬ. ಯಾಕಾಗಿ ನಾವೆಲ್ಲಾ ಅವರಿಗಾಗಿ ಮರುಗಬೇಕು..?? ಅವನು ನೂರು ಶತಕ ಹೊಡೆದ ಕ್ಷಣಕೆ ಇದೇ ಜಗತ್ತೇ ಗೆದ್ದವರಂತೆ ನಾವೆಲ್ಲಾ ಕುಣಿದಾಡಿದ್ದು ಯಾಕೆ..?? ಅದ್ಯಾಕೆ ಅವನ ರೆಕಾರ್ಡುಗಳ ಮೇಲೆ ನಮಗೊಂದು ಹೆಮ್ಮೆ..?? ಗಂಗೂಲಿಯ ಸ್ವಭಾವ, ದ್ರಾವಿಡ್ ನ ಸಂಯಮ, ಲಕ್ಷ್ಮಣನ ಶೈಲಿ, ಯುವರಾಜನ ಆರ್ಭಟ, ಸೆಹವಾಗ್ ನ ಸೆಣಸಾಟ,  ಧೋನಿಯ ಧೋರಣೆ, ಕೊಹ್ಲಿಯ ಆಟ, ರೈನಾನ ಪ್ರಬುದ್ಧತೆ.. ಕುಂಬ್ಳೆಯ ಗಿರಕಿಗಳು, ಶ್ರೀನಾಥನ ವೇಗ.. ಯಾಕಾಗಿ ನಾವಿವರಿಗೆಲ್ಲಾ ಭಕ್ತರ ಹಾಗಿರಬೇಕು..?? ವಂಚಕನಾದರೂ ಪಾಂಟಿಂಗ್ ನ ಇಷ್ಟ ಪಡುವವರೆಷ್ಟು..?? ಗಿಲ್ಕ್ರಿಸ್ಟ್ ನ ಆಟ ಮೆಚ್ಚದವರುಂಟೇ..?? ನಮ್ಮವನಲ್ಲದಿದ್ದರೂ ಗೇಲ್ ಹತ್ತಿರ ಅನಿಸೋದು ಯಾಕೆ..?? ಭಾಷೆ, ಧರ್ಮ, ಜಾಗ, ಸಂಸ್ಕೃತಿ, ರೀತಿ ನೀತಿಗಳನ್ನೆಲ್ಲ ದಾಟಿ ಕೇವಲ ಅಭಿಮಾನ ಅನ್ನುವ ಸಂಬಂಧದೊಂದಿಗೆ ಮಾತ್ರವೇ ಇವರೆಲ್ಲ ನಮ್ಮವರು ಅನ್ನುವ ಒಂದು ಸದ್ಭಾವ ಮೂಡುತ್ತದೆ. ಕೇವಲ ಇವರಷ್ಟೇ ಅಲ್ಲ ನಾನಾ ಕ್ಷೇತ್ರಗಳಲ್ಲಿ ನಾನಾ ಸ್ಥರದ ಸಾಧನೆಗಳನ್ನ ಮಾಡಿದ ಅದೆಷ್ಟೋ ಸಹಸ್ರ ಸಾಧಕರುಗಳಿಗೆಲ್ಲ ಜಗತ್ತಿನಾದ್ಯಂತ ಅದೆಷ್ಟು ಸಹಸ್ರ ಮಿಲಿಯನ್ ಗಳ ಸಂಖ್ಯೆಯಲ್ಲಿ ಶುಭ ಹಾರೈಕೆಗಳು, ಆಶಿರ್ವಾದಗಳು ಸಿಗುತ್ತವೆಂದರೆ ಅಭಿಮಾನ ಅನ್ನುವ ಅಧಿಕಾರದ ಮೇಲೆಯೇ. 

ಇಂಥವೇ ಕೆಲವು ಅಭಿಮಾನದ, ಅಭಿಮಾನಿಗಳ ವಿಚಿತ್ರ ವರ್ತನೆಗಳನ್ನ ನಾವೆಲ್ಲಾ ಕಂಡಿರುತ್ತೇವೆ. ಭಾರತ ಕ್ರಿಕೆಟ್ ಆಡುವಲ್ಲೆಲ್ಲ ತಲೆ ಬೋಳಿಸಿ ತಿರಂಗ ಬಾವುಟದ ಬಣ್ಣವನ್ನ ಮುಖದ ಮೇಲೆ ಬಳಿದುಕೊಂಡು, ಬೆನ್ನಮೇಲೆ ತೆಂಡೂಲ್ಕರ್ ಹೆಸರು ಬರೆಸಿಕೊಂಡು, ತಂಡ ಹೋದಲ್ಲೆಲ್ಲಾ ಹೋಗಿ ತಂಡವನ್ನು ಹುರಿದುಂಬಿಸೋ ಸುಧೀರ್ ಗೌತಮ್ ಅನ್ನುವ ವ್ಯಕ್ತಿ ಅದ್ಯಾವಾಗಲೂ ನಮಗೊಂದು ಆಶ್ಚರ್ಯ ಸೂಚಕ ಚಿಹ್ನೆಯೇ..!! ಒಂದಿಡೀ ಬದುಕನ್ನ ಕೇವಲ ಅದಕ್ಕಾಗಿ ಮೀಸಲಿಡುವುದೆಂದರೆ ಸುಲಭದ ಮಾತಲ್ಲ. ಭಾರತದ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟ್ ಅಭಿಮಾನಿ ಅನ್ನುವ ಪಟ್ಟ ಅವನದ್ದು. ಅವನಷ್ಟೇ ಅಲ್ಲ ಅವನಂತೆ ವಿಚಿತ್ರ ಮ್ಯಾನರಿಸಂ ನಿಂದ ತಮ್ಮ ಅಭಿಮಾನವನ್ನ ಪ್ರದರ್ಶಿಸಿಕೊಳ್ಳುವ ಅದೆಷ್ಟು ತರಹದ ಜನರನ್ನ ನಾವು ನೋಡಿಲ್ಲ. ಹೇಳುತ್ತಾ ಹೋದರೆ ದೊಡ್ಡ ಪಟ್ಟಿಯೇ ಆಗಿಬಿಡುತ್ತದೆ. ಯಾರೋ ಗೊತ್ತಿಲ್ಲದವರೇ ಯಾಕೇ..?? ಕ್ರಿಕೆಟ್ ಕಂಡರೆ ಆಗದು ಅನ್ನುವಂಥ ಧೋರಣೆಯುಳ್ಳ ಅಪ್ಪನೇ ಭಾರತ ವರ್ಲ್ಡ್ ಕಪ್ ಗೆದ್ದ ದಿನ ಖುಷಿ ಖುಷಿ ಇಂದ ಇದ್ದದ್ದು. ದೀಪಾವಳಿಗೆ ಅಳಿದುಳಿದ ಪಟಾಕಿ ಗಳನ್ನೆಲ್ಲ ನಾವು ಆ ಖುಷಿಗೆ ಹಚ್ಚುವಾಗ ತಾನೂ ಬಂದು ನಮ್ಮನ್ನು ಕೂಡಿಕೊಂಡದ್ದು ತೋರಗೊಡದ ಅಭಿಮಾನದ ಸಂಕೇತವೇ. 

ಅಭಿಮಾನ ಅನ್ನುವ ಹೆಸರಿನ ಮೇಲೆ ಇಷ್ಟೆಲ್ಲಾ ನಮ್ಮನ್ನ ನಾವು ತೊಡಗಿಸಿ ಕೊಳ್ತೀವಲ್ಲ..?? ಅವರಿಂದ ನಮಗೇನಾದರೂ ಪ್ರಯೋಜನ ಇದೆಯೇ..?? ಅಂಥಾ ಒಂದು ಪ್ರಶ್ನೆ ಯಾವ ಅಭಿಮಾನಿಯ ಮನಸಲ್ಲೂ ಮೂಡುವುದಿಲ್ಲ.. ಅಭಿಮಾನದ ಬಂಧಕ್ಕಿರೋ ಉನ್ನತ ಮೌಲ್ಯಗಳಲ್ಲಿ ಅದೂ ಒಂದು. ಅವರ ಬರ್ತ್ ಡೇ ಅಂದರೆ ನಮಗೆ ಖುಷಿ. ಆ ದಿನ ಸ್ಕೂಲ್ ಕಾಲೇಜು, ಆಫೀಸು, ಇಂಟರ್ನೆಟ್ಟು ಪೂರ್ತಿ ಎಲ್ಲಾ ಕಡೆ ಅವರುಗಳಿಗೆ ಶುಭ ಹಾರೈಕೆಗಳೇ. ಇನ್ನು ವಿಶೇಷವಾಗಿ ಪೂಜೆ ಮಾಡಿಸುವವರು ಸಹ ಇದ್ದಾರೆ. ೨೦೦೩ ರ ವರ್ಲ್ಡ್ ಕಪ್  ಅನ್ನ ಭಾರತ ಗೆಲ್ಲಲಿ ಅಂತ ಅದ್ಯಾರೋ ಹೋಮ ಹವನ ಮಾಡಿಸಿದ ವಿಚಾರವೂ ಸುದ್ಧಿಯಾಗಿತ್ತು. ಇವತ್ತು ಶಾರುಖ್ ಖಾನ್ ಬರ್ತ್ ಡೇ ಅಂತ ಸ್ವೀಟ್ ಕೊಡುತ್ತಿದ ಗೆಳತಿ ಬಿಂದು, ರಾತ್ರಿ ಅವನು ಕನಸಲ್ಲಿ ಬರಲಿ ಅಂತ ಪರಿತಪಿಸ್ತಾ ಇರ್ತಿದ್ಳು. ನಾವು ಪ್ರೀತಿಸುವವರು ನಮ್ಮ ಸ್ವಂತದವರು ಕೂಡಾ ನಮಗೇನಾದರೂ ಇಷ್ಟವಾಗುವಂಥದ್ದು ಮಾಡಿದರಷ್ಟೇ ಅವರ ಜೊತೆಗೆ ಸಲುಗೆ ತೋರಿಸುವ ನಾವು.. ನಮಗ್ಯಾರೂ ಅಲ್ಲದ.. ನಮಗೇನೂ ಮಾಡದ ಇವರುಗಳ ಮೇಲೆ ಇಂಥಾ ಒಂದು ಪ್ರೀತಿಯನ್ನ ಇಟ್ಟುಕೊಂಡಿರೋ ಬಗೆಯೇ ಆಶ್ಚರ್ಯ ಪಡುವಂತೆ ಮಾಡುತ್ತದೆ. ಕೆಲವೊಮ್ಮೆ ಅಭಿಮಾನದ ಹೆಸರಲ್ಲಿ ಜಗಳಗಳಾದ ಪ್ರಕರಣಗಳೂ ಏನು ಕಮ್ಮಿ ಇಲ್ಲ.. ಇಲ್ಲಿ ತಮಿಳುನಾಡಿನಲ್ಲಿ ನಟ ವಿಜಯ್ ಮತ್ತು ಅಜಿತ್ ರ ನಡುವೆ ಯಾವ ಸಮಾಚಾರಗಳು ಘಟಿಸುತ್ತವೆಯೋ ಇಲ್ಲವೋ ಆದರೆ ಅವರುಗಳ ಅಭಿಮಾನಿಗಳ ಹೊಡೆದಾಟ ಮಾತ್ರ ಯಾವತ್ತಿಗೂ ಜೀವಂತ. ಆಗಾಗ ಅಂಥದ್ದೊಂದು ಪ್ರಕರಣಗಳ ಸುದ್ಧಿ ಕಿವಿಗೆ ಆಹಾರವಾಗುತ್ತಲೇ ಇರುತ್ತದೆ. ಇಲ್ಲಿನ ಕಾಲೇಜುಗಳಲ್ಲಿ ಹತ್ತು ಜನ ಹುಡುಗರ ಬೆಸ್ಟ್ ಫ್ರೆಂಡ್ಸ್ ಅನ್ನುವ ಗುಂಪೊಂದು ಇರುತ್ತದಾದರೆ ಖಂಡಿತ ಅದರಲ್ಲಿ ಕೆಲವರು ವಿಜಯ್ ಮತ್ತು ಅಜಿತ್ ಅಭಿಮಾನಿಗಳು ಇದ್ದೆ ಇರುತ್ತಾರೆ. ಮತ್ತು ಆ ಅಭಿಮಾನದ ವಿಚಾರದಲ್ಲಷ್ಟೇ ಅವರುಗಳ ಮಧ್ಯೆ ಒಂದು ನಿರಾಕಾರ ವೈಮನಸ್ಯ ಇರುತ್ತದೆ. ಹೀಗೆ ಅಭಿಮಾನದ ಹೆಸರಿನಲ್ಲಿ ಒಂದು ಗುಂಪು ಮತ್ತೊಂದು ಗುಂಪುಗಳ ನಡುವಿನ ಕಲಹವಾದ ಘಟನೆಗಳಿಗೂ ಕೊರತೆಗಳೇನಿಲ್ಲ. ಹುಡುಕಿದರೆ ಎಲ್ಲಾ ಕಡೆಯೂ ಸಿಗುತ್ತದೆ.


ಹೀಗೆ ಅಭಿಮಾನದ ವಿಚಾರಕ್ಕೆ ಬಂದರೆ.. ನಮ್ಮ ಅಭಿಮಾನದ ಮೇಲೆ ನಾಚಿಕೆ ಬರಿಸುವಂಥ.. ಅಭಿಮಾನದ ಮೇಲಿನ ಪ್ರೀತಿಯೇ ಸುಳ್ಳು ಅನ್ನಿಸುವಂಥ ಒಂದು ಘಟನೆ ನನ್ನನ್ನ ಯಾವಾಗಲೂ ಕಾಡುತ್ತದೆ. ಮೊನ್ನೆ ಅರುಣ್ ಜೋಳದ ಕೂಡ್ಲಿಗಿಯವರ ಬರಹ ಓದುತ್ತಿದ ಹಾಗೆ ಅದೆಲ್ಲ ಮತ್ತೊಮ್ಮೆ ನೆನಪಾಯ್ತು. 

ಎರಡು ವರ್ಷದ ಹಿಂದೆ. ನಾಗಪುರದಿಂದ ಕಂಪನಿ ಆಯೋಜಿತ ಕ್ರಿಕೆಟ್ ಟೂರ್ನಮೆಂಟ್ ಮುಗಿಸಿಕೊಂಡು ಬೆಂಗಳೂರಿಗೆ ಹೈದರಾಬಾದ್ ಮೂಲಕ ಬರೋದಿತ್ತು. ರಾತ್ರಿ ಎಂಟೂವರೆ ಗಂಟೆಗೆ ಬೆಂಗಳೂರಿಗೆ ಟ್ರೈನ್, ಬೆಳಿಗ್ಗೆ ಒಂಭತ್ತೂವರೆಗೆ ಹೈದರಾಬಾದ್ ತಲುಪಿದ ನಾವು ಅಷ್ಟೊತ್ತು ಏನ್ ಮಾಡುವುದು ಅನ್ನೋದು ಗೊತ್ತಾಗದೆ ಸಿಕಂದರಾಬಾದ್ ನ ಶಾಪಿಂಗ್ ಮಾಲ್ ಒಂದರಲ್ಲಿ ನಾನು ಮತ್ತು ನಮ್ಮ ತಂಡದ ಇತರ ಆಟಗಾರರೆಲ್ಲರೂ ಪ್ಲೇಯರ್ಸ್ ಅನ್ನೋ ಹಿಂದಿ ಸಿನಿಮಾಗಾಗಿ ಹೊರಟೆವು. ನಮ್ಮ ಲಗೆಜುಗಳನ್ನೆಲ್ಲ ಅಲ್ಲೇ ಕ್ಲಾಕ್ ರೂಮಲ್ಲಿ ಲಾಕ್ ಮಾಡಿಟ್ಟು ಸಿಕಂದರಾಬಾದ್ ರೈಲ್ವೆ ನಿಲ್ದಾಣದ ಬಾಜು ಹೋಟೆಲ್ ಒಂದರಲ್ಲೇ ತಿಂಡಿ ತಿಂದು ಹೊರಟ ನನಗೆ ಮನೆಯಿಂದ ಫೋನ್. ರಿಸೀವ್ ಮಾಡಿ ಮಾತಾಡಿದರೆ ಹೀಗ್ ಹೀಗೆ ಚಂದ್ರಣ್ಣನ ಮಗ ಸಂತು ಹೋಗ್ಬಿಟ್ಟ ಕಣಪ್ಪ ಅಂತ ಅಮ್ಮ ಗದ್ಗದಿತರಾಗಿ ಹೇಳಿದ್ದಷ್ಟೇ. ಮುಂದೆ ಮಾತಾಡುವ ಯೋಚನೆ ನಮ್ಮಿಬ್ಬರಲ್ಲೂ ಇಲ್ಲ. ಹೇಗಾಯ್ತು ಅಂತ ಕೇಳಿದ್ರೆ ಸೈಕಲ್ ನಲ್ಲಿ ಟೌನ್ ಗೆ ಹೋಗೋವಾಗ ಮಸೀದಿ ಬಳಿ ಹೋಗ್ತಾ ಇದ್ದ ಟ್ರ್ಯಾಕ್ಟರ್ ಕೆಳಗೆ ಬಿದ್ದು. ಟ್ರ್ಯಾಕ್ಟರ್ ಚಕ್ರ ತಲೆ ಮೇಲೆ ಹತ್ತಿ......!! ಸಾಕು ಬಿಡಮ್ಮ ಮುಂದಕ್ಕೆನು ಹೇಳಬೇಡ.. ನಾನೇ ಆಮೇಲೆ ಫೋನ್ ಮಾಡ್ತೀನಿ ಅಂತ ಫೋನ್ ಇಟ್ಟೆ. ಅವತ್ತೆಲ್ಲ ಮನಸಿಗೂ, ಮೈಗೂ ಚೈತನ್ಯವೇ ಇಲ್ಲ. ಆ ಕ್ಷಣವೇ ಊರಿಗೆ ಹೊರಟು ಬಿಡುವ ಮನಸ್ಸಾಯ್ತು. ಹೇಗೆ ಹೊರಟರೂ ಊರು ತಲುಪಲಿಕ್ಕೆ ಒಂದೂವರೆ ದಿನವಾದರೂ ಬೇಕು ಅಲ್ಲಿಯ ತನಕ ಯಾರೂ ಕಾಯುವ ಹಾಗಿಲ್ಲ. ನೀನು ಅಲ್ಲಿ ಹೋಗಿಯೂ ಮಾಡಬೇಕ್ಕಾದ್ದು ಏನಿಲ್ಲ.. ಸಮಾಧಾನ ಮಾಡ್ಕೋ ಅಂತ ಅದು ಇದು ಹೇಳಿ ನನ್ನ ಗೆಳೆಯರೆಲ್ಲ ಸಾಂತ್ವನ ಹೇಳಿಕೊಂಡೇ ನನ್ನನ್ನ ಸಿನಿಮಾ ಮಂದಿರದೊಳಗೆ ಕರೆದೊಯ್ದರು. ಒಲ್ಲದ ಮನಸ್ಸಿಂದಲೇ ಸಿನಿಮಾ ನೋಡಿದ್ದೆ.

ತಮ್ಮನಂತಹ ಹುಡುಗ ಸಂತು ಅಂದ್ರೆ ಶಾಂತಕುಮಾರ. ತಮ್ಮನಂತಹ ಏನು ತಮ್ಮನೇ ಅನ್ನಬಹುದಾದ ಹುಡುಗ. ನಾವೆಲ್ಲಾ ಅವನನ್ನ ನನ್ನ ತಮ್ಮನನ್ನ ಕರೆಯೋ ಹಾಗೆ ಶಾರ್ಟ್ ಆಗಿ ಕೆಲವೊಮ್ಮೆ ಸಂತು, ಕೆಲವೊಮ್ಮೆ ಶಾಂತ ಅಂತಲೇ ಕರೀತಾ ಇದ್ವಿ. ನಮ್ಮ ಮನೆಯಿಂದ ಮೂರು ಮನೆ ದಾಟಿದರೆ ಅವನ ಮನೆ. ಇಬ್ಬರು ಅಣ್ಣ, ಅಪ್ಪ ಅಮ್ಮ, ಮತ್ತವನು. ಹೀಗೆ ಐದು ಜನರ ಸಂತೃಪ್ತ ಕುಟುಂಬ ಅವರದ್ದು. ಅವರಪ್ಪ ಚಂದ್ರಣ್ಣ ಕೊಡಿಹಳ್ಳಿಯ ೨-೩ ಆಲೆಮನೆಗಳಲ್ಲಿ ಬೆಲ್ಲ ಹದ ಮಾಡುವ ಹದಗಾರರಾಗಿ ಕೆಲಸ ಮಾಡುತ್ತಿದ್ದರು. ಅವರಮ್ಮನೂ ಹಾಗೆಯೇ ಒಂದಷ್ಟು ದಿನ ಬೆಲ್ಲದ ಗೋಲಿ ಹಾಕುತ್ತಿದ್ದವರು ಆಲೆಮನೆ ವಾತಾವರಣ ಹೀಟು ಅನ್ನುವ ಕಾರಣಕ್ಕೆ ಅದನ್ನ ಬಿಟ್ಟು  ಗದ್ದೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಅವರಣ್ಣ ಶಿವೂ, ಶಿವಕುಮಾರ ನನ್ನ ಜೊತೆ ಓದಿ, ಆಡಿ ಬೆಳೆದವ. ಓದು ತಲೆಗೆ ಹತ್ತದೆ ಏಳನೇ ತರಗತಿಗೆ ಶಾಲೆ ಬಿಟ್ಟು, ಗಾರೆ ಕೆಲಸ, ಕಬ್ಬು ಕಡಿಯೋದು, ಗ್ಯಾರೇಜು ಅದೂ ಇದೂ ಅಂತ ಕೆಲಸ ಮಾಡುತ್ತಿದ್ದ. ಇನ್ನು ಎರಡನೆಯವ ಚೆನ್ನಕೇಶವ.. ಚಂಕಿ. ಅವನಿಗೂ ಎಂಟನೆ ತರಗತಿಯ ಮೇಲೆ ಓದುವ ಮನಸ್ಸಿಲ್ಲದೆ ಪೆಟ್ರೋಲು ಬಂಕ್ ಒಂದಕ್ಕೆ ಸೇರಿಕೊಂಡ. ಇನ್ನು ನನ್ನ ತಮ್ಮನ ಸಹವರ್ತಿ ಅವನದೇ ವಯಸ್ಸಿನ ಶಾಂತ ಆ ಮನೆಯಲ್ಲಿ ಹತ್ತನೇ ತರಗತಿಯ ವರೆಗೆ ಓದಿದ ಮಹಾನ್ ಪದವೀದರ.. ಆದರೆ ಹತ್ತನೇ ತರಗತಿ ಫೇಲ್..!! ಒಟ್ನಲ್ಲಿ ಅವರುಗಳ್ಯಾರಿಗೂ ಹೈಸ್ಕೂಲು ದಾಟುವ ಸೌಭಾಗ್ಯವೇ ದೊರಕಲಿಲ್ಲ. 

ಶಿಕ್ಷಣ ಅವರ ತಲೆಗೆ ಹತ್ತಲಿಲ್ಲವಷ್ಟೇ. ಬದುಕಲು ಬಹಳ ವಿಧ್ಯೆಗಳನ್ನ ಬಲ್ಲವರಾಗಿದ್ದರು ಅವರೆಲ್ಲ. ಶಾಂತ ಕೂಡ ಅವರಪ್ಪನ ಜೊತೆ ಬೆಲ್ಲ ಹದ ಹಿಡಿಯುವುದಕ್ಕೆ.. ಆಲೆಮನೆಯಲ್ಲಿ ಹರಟೆ (ಕಬ್ಬಿನ ಹಾಲು ತೆಗೆದ ನಂತರ ಉಳಿವ ತ್ಯಾಜ್ಯ ಜಲ್ಲೇ) ಹೊರುವುದಕ್ಕೆ.. ಬೆಲ್ಲ ಬೇಯಿಸುವುದಕ್ಕೆ ಹೋಗುತ್ತಿದ್ದ. ಒಂದಷ್ಟು ದಿನ ಅದನ್ನು ಮಾಡಿ ನಂತರ ಅಮ್ಮನ ಜೊತೆ ಕಬ್ಬು ಕಡಿಯುವುದೋ ಸ್ವಲ್ಪ ದಿನದ ನಂತರ ಯಾವುದಾದರೂ ಮೆಕ್ಯಾನಿಕ್ ಶಾಪಿಗೋ ಹೋಗಿ ಕೆಲಸ ಮಾಡುತ್ತಿದ್ದ. ಯಾವೊಂದನ್ನೂ ಪರ್ಮನೆಂಟ್ ಅಂದುಕೊಳ್ಳದ ಅವ ಯಾವುದಾದರೊಂದನ್ನ ಮಾಡಿಕೊಂಡೇ ಇರುತ್ತಿದ್ದ. ಮನೆಯ ಅಷ್ಟೂ ಜನ ಮಾಡುವುದು ಕೂಲಿಯೇ. ತಮ್ಮ ದುಡಿಮೆಯ ತಾಕತ್ತು ಅವರಿಗೆ ಗೊತ್ತಿತ್ತು. ವಿದ್ಯೆ ಕಲಿಯಲಿಲ್ಲ ಅಂತ ಚಂದ್ರಣ್ಣ ಯಾವತ್ತು ತನ್ನ ಮಕ್ಕಳನ್ನ ಮೂದಲಿಸಲಿಲ್ಲ. ಅವರನ್ನ ದ್ವೇಷಿಸಲಿಲ್ಲ. ಹೇಗೋ ಬದುಕೋದು ಕಲಿತರಾಯ್ತು ತಮ್ಮನ್ನ ತಾವು ಸಾಕಿಕೊಳ್ಳುವುದು ಕಲಿತರಾಯ್ತು ಅನ್ನುವ ಧನ್ಯತೆಯೊಂದಿಗಷ್ಟೇ ಬದುಕುತ್ತಿದ್ದರು. ಚಂದ್ರಣ್ಣನ ಹೆಂಡತಿ ಗೌರಕ್ಕನಿಗೂ ಇದು ಅಷ್ಟಾಗಿ ನೋವು ಕೊಡುವ ವಿಚಾರವೆನಿಸಲಿಲ್ಲ. ಬರದ ಓದನ್ನ ಮಕ್ಕಳ ಕುತ್ತಿಗೆಗೆ ಕಟ್ಟಿದರಷ್ಟೇ ತಾನೇ ಏನು ಫಲ. ಅವರ ಹಣೆಯಲ್ಲಿ ಬರೆದ ಹಾಗಾಗುತ್ತೆ ಅನ್ನುವ ನಂಬಿಕೆಯೊಂದಿಗೆ ಸಂತೋಷವಾಗಿಯೇ ಇದ್ದರು. ಇವರುಗಳೋ ಬದುಕೋಕೊಂದು ದಾರಿ.. ಅದು ಓದಿನಿಂದಲೇ ದೊರೆಯಬೇಕಾದ್ದಿಲ್ಲ ಅನ್ನುವ ಧೋರಣೆಯಿಂದ ಇವರೂ ಹಾಗೆಯೇ ಅಲ್ಲಿಲ್ಲಿ ಕೂಲಿ ಮಾಡಿದರೂ ಸಂತೋಷದಿಂದ, ನೆಮ್ಮದಿ ಇಂದ ಇದ್ದರು. ಐದು ಜನರ ದುಡಿಮೆಯಿಂದ ಕುಟುಂಬ ನಿರ್ವಹಣೆ ಸಾಂಘವಾಗಿಯೇ ನಡೆಯುತ್ತಿತ್ತು. 

ಇವರ ಕುಟುಂಬದ ಬಗ್ಗೆ ಎಲ್ಲರಿಗೂ ಆಶ್ಚರ್ಯವೆನಿಸುತ್ತಿದ್ದ ಒಂದು ವಿಚಾರವೆಂದರೆ ಎಲ್ಲರೂ ಈಗಿನ ಕನ್ನಡ ಸಿನಿಮಾದ ಪ್ರಖ್ಯಾತ ಹೀರೋ ಒಬ್ಬನ ಅನನ್ಯ ಅಭಿಮಾನಿಗಳು. ಗೌರಕ್ಕ ಕೂಡಾ. ಆದರೆ ಅಪ್ಪ ಮಕ್ಕಳಲ್ಲಿ ಅವರ ವರ್ತನೆಗಳಿಂದಾಗಿ ಸುಲಭಕ್ಕೆ  ಅದು ಕಾಣಿಸುತ್ತಿದ್ದಂತೆ ಗೌರಕ್ಕನಲ್ಲಿ ಕಾಣಿಸುತ್ತಿರಲಿಲ್ಲವಷ್ಟೇ. ಆ ಹೀರೋ ಯಾವುದೇ ಸಿನಿಮಾ ಬಂದರೂ ಅಪ್ಪ ಮಕ್ಕಳು ಪ್ಲಾನ್ ಮಾಡಿ ಒಟ್ಟಿಗೆ ಹೋಗಿ ನೋಡಿ ಬರುತ್ತಿದ್ದರು. ಗೌರಕ್ಕ ಅವರ ಜೊತೆ ಟಾಕೀಸ್ ಗೆಲ್ಲ ಹೋಗುತ್ತಿರಲಿಲ್ಲ, ಟೀವಿಯಲ್ಲಿ ಅವನ ಚಿತ್ರಗಳು ಬಂದರೆ ಕಣ್ಣು ಮಿಟುಕಿಸದೆ ನೋಡ್ತಾ ಇದ್ದರು. ಆದರೆ ಈ ಶಾಂತ ಮಾತ್ರ ಅವರಷ್ಟೂ ಜನರಲ್ಲಿ ಎಲ್ಲರನ್ನೂ ಮೀರಿದ ಅಭಿಮಾನಿ. ಅಪ್ಪ ಅಣ್ಣರೊಂದಿಗೆ ಮತ್ತೊಮ್ಮೆ ನೋಡಿದರೂ ಪರವಾಗಿಲ್ಲ ತಾನು ಮಾತ್ರ ಆ ಹೀರೋ ಸಿನಿಮಾವನ್ನ ಬಿಡುಗಡೆಯ ದಿನ, ಮೊದಲ ಪ್ರದರ್ಶನವೇ ನೋಡಬೇಕಿತ್ತು. ಟಿಕೆಟ್ ಸಿಗದೇ ಚಿತ್ರ ಮಂದಿರ ತುಂಬಿ ತುಳುಕುತ್ತಿದ್ದರೂ ಪೂರ್ತಿ ನಿಂತೋ ಅಥವಾ ನೆಲದ ಮೇಲೆ ಕೂತೋ ಕೂಡಾ ಸಿನಿಮಾ ನೋಡಿಕೊಂಡು ಬಂದು ಬಿಡುತ್ತಿದ್ದ. ತಾನು ನೋಡಿಬಂದ ಆ ಹೀರೋ ಸಿನಿಮಾ ಕತೆಯನ್ನ, ಅವನ ಹಾಡು ಫೈಟ್ ಡ್ಯಾನ್ಸ್ ಗಳ ಕುರಿತಾಗಿ ರೋಚಕವಾಗಿ ಕತೆ ಹೇಳಿ ಅವರಿಗೂ ಸಿನಿಮಾ ನೋಡುವಂತೆ ಅಸೆ ಹುಟ್ಟಿಸಿ ಬಿಡುತ್ತಿದ್ದ. ಅವನ ಸಿನಿಮಾ ಡೈಲಾಗ್ ಗಳನ್ನ ತನ್ನ ಸಾಮಾನ್ಯ ಮಾತುಕತೆಯ ನಡುವೆ ಸೇರಿಸಿ ಮಾತಾಡುವ ವಿಚಿತ್ರ ಖಯಾಲಿ ಬೆಳೆಸಿಕೊಂಡಿದ್ದ. ತನ್ನ ದುಡಿಮೆಯಲ್ಲಿ ಅಷ್ಟಿಷ್ಟು ಉಳಿಸಿ, ಮೂವರು ಅಣ್ಣ ತಮ್ಮಂದಿರು ಸೇರಿ ಮನೆಗೊಂದು ಡಕ್, ಡೀವೀಡಿ, ಸ್ಪೀಕರ್ಗಳನ್ನ ತಂದಿಟ್ಟರು. ಅದರಲ್ಲಿ ಇಡೀ ಬೀದಿಗೆ ಕೇಳಿಸುವಂತೆ ಜೋರಾಗಿ ಕೇಳಿಸುವಂತೆ ಸೌಂಡ್ ಕೊಟ್ಟು ಆ ಹೀರೋ ಹಾಡುಗಳನ್ನ ಕೇಳಿ, ಕೇಳಿಸುತ್ತಿದ್ದರು. ಮನೆಯ ತುಂಬಾ ಬರೀ ಆ ಹೀರೋನದ್ದೇ ಪೋಸ್ಟರ್ ಗಳು. ಎಷ್ಟೋ ಸಾರಿ ಶಾಂತ ಸಿನಿಮಾಗಳಿಗೆ ಒಬ್ಬನೇ ಹೋಗಲಿಕ್ಕೆ ಬೇಜಾರಾಗಿ.. ಅಥವಾ ತನ್ನ ಗುರು ಆ ಹೀರೋನ ಸಿನಿಮಾವನ್ನ ಮತ್ತೊಬ್ಬರಿಗೆ ತೋರಿಸಬೇಕೆನ್ನುವ ಹಟಕ್ಕಾಗಿ ತನ್ನ ಸ್ವಂತ ಖರ್ಚಿನಿಂದಲೇ ಅದೆಷ್ಟೋ ಜನರಿಗೆ ಸಿನಿಮಾ ತೋರಿಸಿದ್ದಿದೆ..!! ಆ ಹೀರೋನ ಒಂದು ಪ್ರಖ್ಯಾತ ಚಿತ್ರವನ್ನ ಒಟ್ಟಿಗೆ ಏಳು ಜನರನ್ನ ಸೇರಿಸಿಕೊಂಡು ಅಷ್ಟೂ ಜನರ ದುಡ್ಡನ್ನ ತಾನೇ ಕೊಟ್ಟು ಸಿನಿಮಾ ತೋರಿಸಿದ್ದನಂತೆ..!! ಆ ಹೀರೋನ ಹುಟ್ಟು ಹಬ್ಬ ಬಂದರೆ ತನ್ನದೇ ಹುಟ್ಟು ಹಬ್ಬವೆಂಬಂತೆ ಇಡೀ ಬೀದಿ ಬೀದಿಗೆ ಸಿಹಿ ಹಂಚುತ್ತಿದ್ದ. ಅಂಥಾ ಅಭಿಮಾನ ಅವನದ್ದು..!!

ಅವನ ಹಾಗೆಯೇ ನಮ್ಮೂರಿನಲ್ಲಿ ಆ ಹೀರೋಗೆ ಅಂತ ಅದೆಷ್ಟು ಅಭಿಮಾನಿಗಳಿಲ್ಲ..?? ನಮ್ಮೂರಿನಲ್ಲಿ ಆ ಹೀರೋಗಿರುವಷ್ಟು ಅಭಿಮಾನಿಗಳು ಬೇರೆ ಯಾವ ಊರಲ್ಲಿಯೂ ಇಲ್ಲವೇನೋ..?? ಸಾಬರ ಅಯ್ಯೂಬ & ಅವರಣ್ಣ ಮುಬಾರಕ್ ಆ ಹೀರೋ ಅಂದರೆ ಜೀವವೇ ಬಿಡುತ್ತಿದ್ದರು. ಪ್ರವೀಣ, ಲಾಲೂ, ಅರುಣ, ಗಿರೀಶ, ನನ್ನ ಮೈದುನ ಮೋನ, ಗೊಳ್ಳೆ ಅರುಣ, ಪರ್ಸ, ನರೇಶ, ಮಂಜ, ಹೇಮಿ, ನನ್ನ ತಮ್ಮ ಸಂತು ಹೀಗೆ ಇಡೀ ಊರಿಗೂರೇ ಆ ಹೀರೋ ಅಭಿಮಾನಿಗಳು ಅನ್ನಬೇಕೇನೋ..!! ಅಪ್ಪ ರಾಜ್ ಕುಮಾರ್ & ವಿಷ್ಣುವರ್ಧನ್ ಅಭಿಮಾನಿಯಾದರೆ ನಾನು ಕೂಡಾ ಅಪ್ಪನ ಹಾಗೆ ರಾಜ್ ಕುಮಾರ್, ವಿಷ್ಣುವರ್ಧನ್ & ಪುನೀತ್ ನ ಅಭಿಮಾನಿಯಾಗಿದ್ದೆ. ಬರೀ ಊರ ಯುವಕರು ಹುಡುಗರು ಮಾತ್ರವಲ್ಲ, ಇಳಿ ಮುದುಕರಲ್ಲೂ, ನಡು ವಯಸ್ಸಿನ ಗಂಡಸರಲ್ಲೂ ಆ ಹೀರೋಗೆ ನಮ್ಮೂರಿನಲ್ಲಿ ಅದಮ್ಯ ಅಭಿಮಾನಿಗಳ ಕೂಟವುಂಟು. 

ಹೀಗೆ ಆ ವರ್ಷದ ರ ಜನವರಿಯಲ್ಲಿ ಆ ಹೀರೋನ ಒಂದು ಸಿನಿಮಾ ರಿಲೀಸ್ ಆಗಿತ್ತಂತೆ. ಅದರ ಬಿಡುಗಡೆಯ ದಿನದ ಮೊದಲ ಶೋಗೆಂದೇ ಶಾಂತ ತನ್ನ ಸೈಕಲ್ ಓಡಿಸ್ಕೊಂಡು ಆ ಸಿನಿಮಾವನ್ನ ನೋಡೋಕೆ ಹೋಗ್ತಾ ಇದ್ನಂತೆ. ಮಸೀದಿ ಬಳಿ ವೇಗವಾಗಿ ಸಾಗುತ್ತಿದ್ದ ಸೈಕಲ್ ಆಯತಪ್ಪಿ ರಸ್ತೆಯಲ್ಲಿನ ದೊಡ್ಡ ಗುಂಡಿಯೊಂದಕ್ಕೆ ಇಳಿದು ಬ್ಯಾಲೆನ್ಸ್ ತಪ್ಪಿ ಇವನು ಸೈಕಲ್ ಇಂದ ರಸ್ತೆಗೆ ಬಿದ್ದು ಬಿಟ್ಟನಂತೆ. ತಕ್ಷಣಕ್ಕೆ ಹಿಂದೆಯೇ ಬರುತ್ತಿದ್ದ ಟ್ರ್ಯಾಕ್ಟರ್ ಒಂದರ ಹಿಂದಿನ ಟ್ರೈಲರ್ ಚಕ್ರಕ್ಕೆ ಇವನ ತಲೆ ಸಿಕ್ಕು, ಚಕ್ರ ಅವನ ತಲೆ ಮೇಲೆ ಹತ್ತಿ..  ಅಲ್ಲಿಯೇ ಅವನ ತಲೆಯೊಡೆದು.....!!
ಛೇ.. ನನಗೆ ಅದನ್ನ ವಿವರಿಸೋಕೆ ಹಿಂಸೆ ಅನ್ನಿಸುತ್ತಿದೆ..!
ಅದಾಗಿಯೂ ಮಿಡಿ ಜೀವ ಮಿಡುಕುತ್ತಿದ್ದ ಶಾಂತನನ್ನ ಬದುಕಿಸಿ ಕೊಳ್ಳುವ ಸಲುವಾಗಿ ಕಾರ್ ಒಂದನ್ನ ಹಿಡಿದು ಶಿವಮೊಗ್ಗ ಆಸ್ಪತ್ರೆಗೆಂದು ಕೊಂಡೊಯ್ಯುವಾಗಲೇ ಶಾಂತ ಒಂದೆರಡು ನಿಮಿಷದಲ್ಲೇ ತನ್ನ ಇಹವನ್ನ ತ್ಯಜಿಸಿ ಬಿಟ್ಟಿದ್ದನಂತೆ. ಅವರ ಕುಟುಂಬದ ಆಕ್ರಂದನ ಕೇಳಲಾಗದಷ್ಟು ರೌರವವಂತೆ. ಇಡೀ ಊರಿಗೆ ಊರೇ ಅವತ್ತು ಅವನ ಸಾವು ಕಂಡು ಅನ್ನಾಹಾರ ತ್ಯಜಿಸಿ ಮೌನಕ್ಕೆ ಶರಣಾಗಿತ್ತಂತೆ. ಈ ವಿಚಾರವನ್ನ ಶಾಂತ ಸತ್ತು ಅದೆಷ್ಟೋ ದಿನದ ಮೇಲೆ ಅಮ್ಮ ನನಗೆ  ತಿಳಿಸಿದ್ದರು. ನನಗೂ ಅವನ ಸಾವಿನ ರೀತಿ & ನೋವು ಕೆಲ ಕಾಲ ಮನಭ್ರಮಣೆಯನ್ನ ಉಂಟು ಮಾಡಿದ್ದು ಸುಳ್ಳಲ್ಲ. 

ಬಹಳ ದಿನಗಳ ಕಳೆದ ಮೇ ತಿಂಗಳಿನಲ್ಲಿ ಊರ ಹಬ್ಬದ ಸಲುವಾಗಿ ಊರಿಗೆ ಹೋಗಿದ್ದೆ. ಊರ ಹಬ್ಬಕ್ಕೆ ಇನ್ನೂ ಎರಡು ದಿನ ಮುಂಚೆಯೇ ಹೋಗಿದ್ದರಿಂದ ಬೋರ್ ಹೊಡೆಯುತ್ತಿತ್ತು. ಆವತ್ತಷ್ಟೇ ಬೆಂಗಳೂರಿನಿಂದ ಬಂದ ಚೇತು, ಬಾ ಸತೀ ಬೇಜಾರಾಗ್ತಿದೆ ಆ ಹೀರೋನ ಇತ್ತೀಚಿನ ಫಿಲಂಗೆ ಹೋಗಿ ಬರೋಣ ಅಂತ ಕರೆದು ಕೊಂಡು ಹೋದ. ನೆಚ್ಚಿನ ಗೆಳೆಯ ಅರುಣ್ ನವಲಿಯ ಜೊತೆ ಶತಮಾನಂಭವತಿ ಕವನ ಸಂಕಲನ ಬಿಡುಗಡೆಯಾದ ಮಾರನೆ ದಿನವೇ ಆ ಚಿತ್ರವನ್ನ ನೋಡಿದ್ದೆನಾದರೂ, ಮನೆಯಲ್ಲಿ ಬೇಜಾರಾಗ್ತಿದೆಯಲ್ಲ ಅನ್ನೋ ಕಾರಣಕ್ಕೆ ಚೇತು ಜೊತೆ ಮತ್ತೆ ಆ ಸಿನಿಮಾಕ್ಕೆ ಹೋದೆ. ಚಿತ್ರ ಲವಲವಿಕೆ ಇಂದ ಕೂಡಿದ್ದರಿಂದ ಎರಡನೇ ಸಾರಿ ನೋಡುವುದಕ್ಕೇನು ಅಭ್ಯಂತರವಿಲ್ಲವೆನಿಸಿ ಹೋಗಿದ್ದೆ. ಸಿನಿಮಾ ನೋಡಿಕೊಂಡು ಚೇತು ಜೊತೆ ಮಾತಾಡಿಕೊಂಡು ವಾಪಾಸು ಬರುವಾಗ ಚೇತು ಶಾಂತನ ವಿಚಾರವನ್ನ ಮಾತಿಗೆಳೆದ. ಶಾಂತ ಈ ಟೈಮ್ ಗೆ ಇದ್ದಿದ್ರೆ ಈ ಫಿಲಂ ನೋಡಿ ಎಷ್ಟು ಖುಷಿ ಪಡ್ತಿದ್ದ ಆಲ್ವಾ ಸತಿ ಅಂದ. ನನಗೂ ಹೌದೆನಿಸಿ ಹೂಂ ಅಂದೇ. ಅವನು ಹಿಂಗೆ ಆ ಹೀರೋ ಫಿಲಂ ನೋಡೋಕೆ ಹೋಗೋವಾಗ್ಲೇ ಆಕ್ಸಿಡೆಂಟ್ ಆಗಿ ಸತ್ತಿದಂತೆ ಅಂದ ಚೇತು. ಹಾಂ ಗೊತ್ತಾಯ್ತು.. ಅಮ್ಮ ಫೋನ್ ಮಾಡಿ ಹೇಳಿದ್ರು ಅಂದೇ. ಆ ಟೈಮ್ ನಲ್ಲಿ ನಾನೂ ಊರಲ್ಲಿ ಇರಲಿಲ್ಲ ಹಾಗಾಗಿ ನನಗೆ ಅವನನ್ನ ಕೊನೆಗೂ ನೋಡೋಕೆ ಆಗ್ಲಿಲ್ಲ ಸತಿ ಅಂದ. ನಾನು ಕೂಡಾ ನನ್ನ ಪರಿಸ್ತಿತಿಯನ್ನ ಹೇಳಿಕೊಂಡೆ. ನಿನಗೆ ಮತ್ತೊಂದು ವಿಚಾರ ಗೊತ್ತಾ ಸತಿ ಅಂದ..!! ಏನು ಅಂದೇ..?? ಆ ಹೀರೋ ಅಂದ್ರೆ ಜೀವ ಬಿಡ್ತಿದ್ದ.. ಆ ಹೀರೋ ಫಿಲಂ ನೋಡೋಕೆ ಹೋಗಿನೇ ಜೀವ ಬಿಟ್ಟ ಶಾಂತನ ಹೆಣವನ್ನ ಒಂದ್ಸಾರಿ ಆ ಹೀರೋಗೆ ತೋರಿಸಿದರೆ.. ಅವನ ಆತ್ಮಕ್ಕೆ ಶಾಂತಿ ಸಿಗ್ಬೋದು ಅನ್ನಿಸಿ ಅದ್ಯಾರ್ಯಾರದ್ದೋ ಮೂಲಕ ಆ ಹೀರೋನ ಹಿಡಿದು ಹಿಂಗ್ ಹಿಂಗೆ ಅಂತ ಹೇಳಿ.. ಬಂದು ಶಾಂತನನ್ನ ನೋಡ್ಲಿಕ್ಕೆ ಕೇಳಿಕೊಂಡ್ರೆ ಆ ಹೀರೋ ಏನ್ ಅಂದ್ನಂತೆ ಗೊತ್ತಾ..?? ಐದು ಲಕ್ಷ ಕೊಟ್ರೆ ನೋಡೋಕೆ ಬರ್ತೀನಿ ಅಂದನಂತೆ..!! ಚೇತು ಹಾಗಂದು ಮಾತು ಮುಗಿಸಿದ ಕೂಡಲೇ ನನ್ನೆದೆಯಲ್ಲಿ ಒಂದು ಮಹಾಸ್ಪೋಟವಾದಷ್ಟೇ ಗಂಭೀರವಾದ ಒಂದು ಸ್ಪೋಟದ ಶಬ್ದ ಕೇಳಿದ ಹಾಗಾಯ್ತು. ಚೇತುವಿಗೆ ಅದು ನಿಜವೋ ಅಥವಾ ಸುಳ್ಳೋ ಅಂತ ಕೇಳಿದೆ. ಈ ವಿಚಾರದಲ್ಲಿ ಯಾರಾದರೂ ಸುಳ್ಳು ಹೇಳ್ತಾರಾ ಅಂದ. 

ಚೇತು ಹೇಳಿದ್ದು ಸತ್ಯವೋ ಸುಳ್ಳೋ ಅನ್ನುವುದನ್ನ ಪರಾಮರ್ಶಿಸಬೇಕು ಅಂತಲೂ ನನಗೆ ಅನ್ನಿಸಲಿಲ್ಲ. ಆ ಕ್ಷಣ ಆ ಆಲೋಚನೆ ನನಗೆ ಬರಲೂ ಇಲ್ಲ. ಅದೆಂಥ ಲಾಲಸೆ..?? ಅದು ಸತ್ತವರನ್ನ ನೋಡಲು ಹೋಗುವುದಕ್ಕೆ ಕೂಡಾ ಐದು ಲಕ್ಷ ಕೇಳುವುದೆಂದರೆ..?? ಅದು ಕೂಡಾ ಮನೆಯ ಐದೂ ಜನರೂ ಕೂಲಿ ಮಾಡುವಂತಹ ಪರಿಸ್ತಿತಿಯಲ್ಲಿನ ಕುಟುಂಬ. ಅವರಿಗಂತ ಸ್ವಂತ ಪುಟ್ಟದೊಂದು ಮನೆ ಬಿಟ್ಟರೆ ಬೇರಾವ ಆಸ್ತಿಯೂ ಇಲ್ಲ. ಅಂಥವರ ಬಳಿ ಧರ್ಮಕ್ಕೆ.. ಖಾಲೀ  ಸತ್ತ ತನ್ ಅಭಿಮಾನಿಯನ್ನ ತಾನೇ ನೋಡುವುದಕ್ಕೆ ಐದು ಲಕ್ಷ ಕೇಳುವುದೆಂದರೆ ಹಣದ ಮೇಲೆ ಅದೆಂಥ ಮೋಹವಿರಬೇಕು..?? ಆ ಹೀರೋ ಏನು ಶಾಂತನಿಗೆ ಐದು ಲಕ್ಷ ಸಾಲವಾಗಿ ಕೊಟ್ಟಿದ್ದನೇ..?? ಸತ್ತ ಹೆಣದ ಮುಂದೆ ನಿಂತು ಕೇಳೋಕೆ..!! ತಮ್ಮ ಯಾವತ್ತಿನ ಮಾಮೂಲಿ ಡೈಲಾಗ್ ಹೇಳಿ ಕಳುಹಿಸಿದ್ದರೂ ಆಗುತ್ತಿತ್ತು. ಅಯ್ಯೋ ಸಾರಿ ನನ್ ಅಭಿಮಾನಿಯೊಬ್ಬನಿಗೆ ಈ ರೀತಿ ಆಗಿದ್ದು ನನಗೆ ತುಂಬಾ ನೋವುಂಟು ಮಾಡಿರೋ ಸಂಗತಿ. ನನಗೂ ಬರೋ ಆಸೆ ಆದ್ರೆ ವಿಪರೀತ ಬ್ಯುಸಿ ಶೂಟಿಂಗ್ ನಲ್ಲಿ.. ಬರೋಕೆ ಎಷ್ಟು ಪ್ರಯತ್ನ ಪಟ್ರೂ ಆಗಲ್ಲ. ದೇವ್ರು ಅವನ ಆತ್ಮಕ್ಕೆ ಶಾಂತಿ ಕೊಡಲಿ. ನನ್ನ ಒಬ್ಬ ಗ್ರೇಟ್ ಅಭಿಮಾನಿ ಅವ್ನು ಅಂತ ಒಂದೆರಡು ಫಿಲ್ಮೀ ಡೈಲಾಗ್ ಹೇಳಿದ್ದಿದ್ದರೂ ಅವನ ಮೇಲಿನ ಮಿಕ್ಕವರ ಅಭಿಮಾನ ಹಾಗೆ ಉಳಿಯುತ್ತಿತ್ತೇನೋ ಅನ್ನಿಸ್ತು. ಒಂದು ನಿಮಿಷದ ಒಂದು ಸಣ್ಣ ಪಾನ್ ಪರಾಗ್ ಜಾಹೀರಾತಿನಲ್ಲಿ ಕಾಣಿಸಿ ಕೊಂಡಿದ್ದಿದ್ದರೆ ಕೂಡಾ ಅವರಿಗೆ ಆ ಐದು ಲಕ್ಷಕ್ಕಿಂತ ಜಾಸ್ತಿ ಸಿಕ್ಕಿದರೂ ಸಿಕ್ಕುತ್ತಿತ್ತೇನೋ..?? ಒಬ್ಬ ಅಭಿಮಾನಿಯ ಜೀವ ಆ ಪಾನ್ ಪರಾಗ್ ಜಾಹೀರಾತಿಗಿಂತ ಕೀಳೆ..?? ಹಣಕ್ಕಾಗಿ ಬೆತ್ತಲೆ ಚಿತ್ರಗಳಲ್ಲಿ ಕೂಡಾ ನಟಿಸೋಕೆ ನಾನು ಸಿದ್ಧ ಎನ್ನುವಂಥ ಆ ಹೀರೋನ ಹೇಳಿಕೆ ಉಳ್ಳ ಪತ್ರಿಕೆಯನ್ನ ನಾನು ಬಹಳ ಹಿಂದೆ ಒಮ್ಮೆ ಓದಿದ್ದೆ. ಅದ್ಯಾಕೋ ಅವನ ಆ ಮಾತು, ಈ ಸಂಧರ್ಭಕ್ಕೆ ಬಹಳ ಪುಷ್ಟಿ ಕೊಡುವಂತಿತ್ತು. ಅವರಂಥಹ ವ್ಯಕ್ತಿಗಳಿಗೆ ಐದು ಲಕ್ಷ ಒಂದು ವಿಚಾರವೇ ಅಲ್ಲ. ಕರೆದದ್ದು ಯಾವುದೋ ರಾಜಕೀಯ ಸಮಾರಂಭಕ್ಕೋ ಅಥವಾ ಜನಪ್ರೀಯತೆಯನ್ನ ಸೆಳೆಯಬಲ್ಲ ಕಾರ್ಯಕ್ರಮಗಳಿಗೆ ಅಲ್ಲವಲ್ಲ ಗೌರವ ಧನವನ್ನ ಅಪೇಕ್ಷಿಸುವುದಕ್ಕೆ. ಸತ್ತವನನ್ನ ನೋಡುವುದಕ್ಕೆ ಲಕ್ಷಾಂತರ ರುಪಾಯಿ ದೇಣಿಗೆ ನೀಡಬೇಕೆಂದರೆ ಮನುಷ್ಯನ ಮೇಲೆ ಅದ್ಯಾವ ಮಹಾ ಗೌರವವಿದ್ದೀತು ಅವನಲ್ಲಿ..?? ಅವನ ಮನುಷ್ಯತ್ವ ಜಗಜ್ಜಾಹೀರಾಗುವಂಥ ಘಟನೆಗಳು ಕೂಡಾ ನಡೆದವೆನ್ನಿ ಕಾಲಾನುಕ್ರಮದಲ್ಲಿ. ಆದರೂ ಅಡಕೆಗೆ ಹೋದ ಮಾನ ಆನೆ ಕೊಟ್ಟರೂ ಬರದು ಅನ್ನುತ್ತಾರಲ್ಲ ಅದು ನಿಜ. 

ಡಾಕ್ಟರ್ ರಾಜ್ ಕುಮಾರರ ವಿಚಾರದಲ್ಲಿ ಕೂಡಾ ಹಲವಾರು ಜನ ಕೆಲವೊಂದು ಥರದ ಮಾತುಗಳನ್ನಾಡುವ ಪರಿಯನ್ನ ನಾನು ಕೇಳಿದ್ದೇನೆ. ತುಂಬಾ ಜನಪ್ರಿಯ ಅಪವಾದ ಅದು. ಅಷ್ಟು ಯಶಸ್ವೀ ನಟರಾದರೂ.. ಅಷ್ಟು ಸಂಪತ್ತು ಗಳಿಸಿದರೂ ಜನಸಾಮಾನ್ಯರಿಗಾಗಿ ಅವರು ಏನು ಮಾಡಲಿಲ್ಲವೆಂಬ ಅಪವಾದ ಅದು. ಕನ್ನಡದಲ್ಲಿ ಅಂತ ಒಬ್ಬ ಮಹಾನ್ ನಟ ಜನಿಸಿದ್ದೇ ನಮ್ಮ ಪುಣ್ಯ. ಇಲ್ಲಿಯತನಕ ಅವರಂಥಾ ಒಬ್ಬ ಅದ್ಭುತ ವ್ಯಕ್ತಿತ್ವದ ನಟರನ್ನ ನಾನು ಕೂಡಾ ಎಲ್ಲಿಯೂ ಕಂಡಿಲ್ಲ. ಅವರವರ ಸ್ವಂತ ಹಣದಲ್ಲಿ ಸಮಾಜ ಸೇವೆ ಮಾಡಬೇಕಾದ ವಿಚಾರ ಅವರ ಸ್ವಂತಕ್ಕೆ ಬಿಟ್ಟದ್ದು. ಅದನ್ನಿಟ್ಟುಕೊಂಡು ಅವರ ವ್ಯಕ್ತಿತ್ವವನ್ನ ಅಳೆಯೋದು ಮಹಾ ತಪ್ಪು. ಹಾಗೆ ಅವರನ್ನ ಸಮಾಜ ಸೇವೆ ಅಥವಾ ಸುಧಾರಕರನ್ನಾಗಿಸುವ ಪ್ರೇರಣೆ ಅವರನ್ನು ಯಾವತ್ತಾದರೂ ಕಾಡಿದ್ದಲ್ಲಿ, ಖಂಡಿತ ಅವರು ನಮ್ಮ ನಾಡಿನ ರಾಜಕೀಯ ರಂಗಕ್ಕೆ ಬಂದಿರುತಿದ್ದರು. ರಾಜಕಾರಣದ ಮೂಲಕ ಸಮಾಜ ಸುಧಾರಣೆಗಾಗಿ ನಾಡೇ ಅವರಿಗೊಂದು ಮುಕ್ತ ವೇದಿಕೆ ಕೊಡುವಷ್ಟು ಭಕ್ತಿ ಇಡಿ ನಾಡಿನದ್ದಾಗಿತ್ತು ಅವರ ಮೇಲೆ. ಅವರ ಧ್ಯೇಯ ಒಂದೇ ಆಗಿತ್ತು ಕಲಾ ಸೇವೆ. ಕನ್ನಡ ನಾಡಿನ ತಾಯಿ ಭುವನೇಶ್ವರಿಯ ಸೇವೆ. ಅದಕ್ಕೆ ಸಾಕ್ಷಿಯಾಗಿ ಕನ್ನಡಪರ ಹೋರಾಟಗಳಲ್ಲಿ ಅವರು ವಹಿಸುತ್ತಿದ್ದ ಮುಂದಾಳತ್ವಗಳು ನಿಲ್ಲುತ್ತವೆ. ಅಂಥವರು ಕೂಡಾ ಅಭಿಮಾನಿಗಳನ್ನ ಮೊದ ಮೊದಲು ದೇವರಿಗೆ ಹೋಲಿಸಿದರು. ಅಭಿಮಾನಿ ದೇವರುಗಳೇ ಆ ಒಂದೇ ಮಾತಿಗೆ ಅವರು ಕನ್ನಡ ನಾಡಿನ ಕಣ್ಮಣಿಗಳಾಗಿ ಹೋದರು. ಆ ಮಾತು ಪುಷ್ಟಿಗೆ ನಿಲ್ಲುವಂತೆ ಅಭಿಮಾನಿಗಳ ಕುರಿತಾಗಿ ಅವರ ಧೋರಣೆ ಇರುತ್ತಿತ್ತು. ರಾಜ್ ಕುಮಾರ್ ಆಗಲಿ, ವಿಷ್ಣುವರ್ಧನ್ ಆಗಲಿ.. ಅಥವಾ ಇನ್ನಿತರ ಹಿರಿಯ ನಟ ಚೇತನರಾಗಲಿ ತಾವು ದೈಹಿಕವಾಗಿ ನಮ್ಮನ್ನ ಅಗಲಿ ಹೋದರು ಮಾನಸಿಕವಾಗಿ ನಮ್ಮೆಲ್ಲರಲ್ಲೂ ಚಿರಸ್ಥಾಯಿಯಾಗಿ ಉಳಿದುಕೊಂಡಿರುವುದರ ಮೂಲ ರಹಸ್ಯ ಇದೇನೇ. ಅಭಿಮಾನಿಗಳೆಡೆ ಅವರಿಗಿದ್ದ ಸಂಪ್ರೀತಿ, ಸಹೃದಯತೆ, ಸಹೋದರತ್ವ & ಅಭಿಮಾನಿಗಳೆಡೆಗಿನ ಗೌರವ. ಈಗಿನ ಬಹಳಷ್ಟು ಯುವ ನಟರು ಅವರ ಆದರ್ಶಗಳನ್ನ ಕಲಿಯಬೇಕಿದೆ.

ನಟ ರಜನಿಕಾಂತ್ ಕ್ಯಾನ್ಸರ್ ಪೀಡಿತ ತಮ್ಮ ಅಭಿಮಾನಿಯೊಡನೆ ಇಡೀ ಒಂದಿನ ಕಳೆಯೋ ಸರಳತೆಯನ್ನ ಮೆರೆದು ಅವರ ಎತ್ತರವನ್ನ ಇನ್ನೂ ಎತ್ತರಗೊಳಿಸಿ ಕೊಳ್ತಾರೆ. ಈಚೆಗೆ ಅಂತ ಒಂದು ಘಟನೆಯ ಕುರಿತಾಗಿ ಫೇಸ್ಬುಕ್ ನಲ್ಲಿ ಓದಿದ್ದೆ. ನಟ ವಿಷ್ಣುವರ್ಧನ್ ಬಹಳ ಹಿಂದೆ ತುಂಬು ಗರ್ಭಿಣಿಗೆ ಹೆರಿಗೆ ಸೌಲಭ್ಯಕ್ಕಾಗುವಷ್ಟು ಹಣ ಸಹಾಯ ಮಾಡಿದ್ದು.. ನಟ ಶಿವರಾಜ್ ಕುಮಾರ್ ತಮ್ಮ ಹುಟ್ಟು ಹಬ್ಬದ ಪ್ರಯುಕ್ತ ಉತ್ತರಕಾಂಡದ ನೆರೆ ಪರಿಹಾರ ಅಭಿಮಾನಿಗಳಿಂದ ಸಂಗ್ರಹಿತ ಆರು ಲಕ್ಷ ರೂಪಾಯಿಗಳೊಂದಿಗೆ ತಮ್ಮದೂ ಐದು ಲಕ್ಷ ಸೇರಿಸಿ ಕೊಡುವುದು.. ಹೀಗೆ ಅನೇಕ ಉದಾಹರಣೆಗಳು ಅವರ ತಾರಾ ಮೌಲ್ಯವನ್ನ ಇನ್ನಷ್ಟು ಹೆಚ್ಚಿಸುತ್ತವೆ. ಇವೆಲ್ಲ ಈಚೆಗೆ ಫೇಸ್ಬುಕ್ ನಲ್ಲಿ ಓದಿದ ಒಂದೆರಡು ಘಟನೆಗಳಷ್ಟೇ. ಹಾಗೆ ಬೆಳಕಿಗೆ ಬಾರದ ಅದೆಷ್ಟೋ ಘಟನೆಗಳು ಜನಸಾಮಾನ್ಯರ ಹೃದಯದಲ್ಲಿದೆ. ಆ ಹೀರೋನ  ಕುರಿತಾಗಿ ನಾ ಕೇಳಿದ ವಿಚಾರಗಳು ಸರಿಯೋ ತಪ್ಪೋ ಪರಾಮರ್ಶಿಸುವ ಪ್ರಯತ್ನ ನಾನು ಮಾಡಿದೆ. ಶಿವಕುಮಾರನನ್ನೂ ಸೇರಿ ಊರಲ್ಲಿ ಬಹಳಷ್ಟು ಹುಡುಗರು ಆ ಮಾತು ನಿಜ ಅಂತ ಅಂದರು..!! ಅದ್ಯಾಕೋ ಆ ಹೀರೋ ಅಸಹ್ಯ ಅನ್ನಿಸೋಕೆ ಶುರು ಆದ. ಅಲ್ಲಿಯ ತನಕ ಅವನ ಮೇಲಿದ್ದ ನನ್ನ ಭರವಸೆಯ ಕನಸುಗಳೆಲ್ಲ ಒಂದೇ ಸರಿ ದ್ವಂಸ ಆದವು. ಅವನಾಗಲಿ ಅಥವಾ ಅಂಥಾ ಧೋರಣೆಯುಳ್ಳ ಯಾರಿಗಾದರೂ ಈ ವಿಚಾರಗಳು ಇನ್ನಾದರೂ ಮನ ಮುಟ್ಟಲಿ. ಅಭಿಮಾನಿಗಳು ಅವರ ಸ್ವತ್ತಲ್ಲ. ಅವರಿಗೊಂದು ವರ. ಅಭಿಮಾನಿಗಳಿದ್ದರಷ್ಟೇ ಅವರಿಗೊಂದು ವರ್ಚಸ್ಸು.. ಅವರಿಗೊಂದು ಮೌಲ್ಯ.. ಅವರಿಗೊಂದು ಬೆಲೆ.. ಅವರಿಗೊಂದು ನೆಲೆ. ಒಂದೇ ಒಂದು ಸಿನಿಮಾವನ್ನ ನೂರು ದಿನ ಓಡುವಂತೆ ಮಾಡಿ ಸ್ಟಾರ್ ಪಟ್ಟ ಕೊಡಿಸಬಲ್ಲ ಶಕ್ತಿ ಅಭಿಮಾನಿಗಳಿಗೆ ಇರುವಂತೆ ಒಂದು ಸಿನಿಮಾವನ್ನ ಬಿಡುಗಡೆಯಾದ ಒಂದು ದಿನವೂ ಓಡದಂತೆ ಫ್ಲಾಪ್ ಮಾಡಬಲ್ಲ ಶಕ್ತಿಯುಂಟು. 

ಅದ್ಯಾಕೋ ಈ ಬರಹವನ್ನ ಬರೆಯೋವಾಗ, ರಾತ್ರಿ ಹನ್ನೆರಡಾದರೂ ನನ್ನನ್ನ ಮಗ್ಗುಲಲ್ಲಿ ಮಲಗಿಸಿಕೊಂಡು ಅಮಿತಾಬ್, ರಿಷಿ ಕಪೂರ್, ಮಿತುನ್ ಚಕ್ರವರ್ತಿಯರ ಚಿತ್ರಗಳನ್ನ ಕಣ್ಣು ಮಿಟುಕಿಸದೆ ನೋಡುತ್ತಿದ್ದ ಅಪ್ಪ.. ಮಾಲಾಶ್ರೀಯ ಚಿತ್ರಗಳೆಂದರೆ ಚಿತ್ರ ಶುರುವಾಗುವ ಮುನ್ನ ಊಟದ ತಟ್ಟೆ ಹಿಡಿದು ಕೂತು ಚಿತ್ರ ಮುಗಿಯುವ ತನಕ ಕೈ ತೊಳೆಯದೇ ನೋಡುತ್ತಿದ್ದ ಪಕ್ಕದ ಮನೆಯ ಪುಷ್ಪಕ್ಕ.. ಸುಧಾರಾಣಿಯ ಚಿತ್ರಗಳೆಂದರೆ ಪಕ್ಕದ ಮನೆಯಾದರೂ ಬೇರೆ ಯಾವ ಪ್ರೊಗ್ರಾಮ್ ಗಳನ್ನ ನೋಡಲು ಬಿಡದೆ ಕಾಡಿ ಬೇಡಿ ಹಾಕಿಸಿಕೊಂಡು ನೋಡುತ್ತಿದ್ದ ಮಾಲಕ್ಕ. ರಾಮ್ ಕುಮಾರ್ ಎಂದರೆ ಜೀವ ಬಿಡುವ ಕಾಡಿ.. ಕಲ್ಪಾನಳನ್ನ ನೋಡಿದ ಕೂಡಲೇ ಕಲ್ಲಾಗುತ್ತಿದ್ದ ಅತ್ತೆ.. ಶೃತಿಯನ್ನ ನೋಡಿದೊಡನೆ ಕಣ್ಣೀರುಗರೆಯುತ್ತಿದ್ದ ವೀಣಕ್ಕ.. ಜಯಂತ ಕಾಯ್ಕಿಣಿಯರ ಹಾಡುಗಳನ್ನ ತನ್ನ ಜೀವ ಸ್ವರ ಎಂದುಕೊಳ್ಳುವ & ಯೋಗರಾಜಭಟ್ಟರ ಪರಮ ಶಿಷ್ಯ ಅಂದು ಕೊಳ್ಳುವ ರಾಘ.. ರಮ್ಯ ಎಂದರೆ ಎದೆಯ ಮೇಲೆ ಕೈ ಇಟ್ಟುಕೊಳ್ಳುವ ನಮ್ಮೂರಿನ ಜಗ್ಗ... ಧೋನಿಯನ್ನ ಬೈಯುವುದೇ ತಡ ಅದ್ಯಾಕೆ ಧೋನಿಯನ್ನ ದ್ವೇಷಿಸುತ್ತೀರೋ ಗೊತ್ತಿಲ್ಲಪ್ಪ ಅಂತ ಹಲುಬುವ ನನ್ ಆನ್ಲೈನ್ ಗೆಳೆಯ ಕೃಷ್ಣ... ರಾಜಕುಮಾರರ ಮತ್ತು ಇನ್ನಿತರರ ಅದ್ಭುತ ಚಿತ್ರಗಳನ್ನ ತಮ್ಮ ಬ್ಲಾಗ್ ಮೊಲಕ ಅದ್ಭುತವಾಗಿ ಪರಿಚಯಿಸಿ ಕೊಡ್ತಿರೋ ಶ್ರೀಕಾಂತ್ ಮಂಜುನಾಥ್ ಸಾರ್.. ಇಂಥವರೇ ಇನ್ನು ಅನೇಕರು ಸಾಲು ಸಾಲಿಗೆ ನೆನಪಾದರು. ಅವರದೆಂಥ ಅಭಿಮಾನ..?? ಅವರ ಅಭಿಮಾನವನ್ನೇ ಅಭಿಮಾನಿಸುವಷ್ಟು ವಿಶಿಷ್ಟ ರೀತಿಯದ್ದು ಅವರ ಅಭಿಮಾನ. 

ಒಬ್ಬ ಅಭಿಮಾನಿಯ ಬೆಲೆಯನ್ನ ಹಾಗೆ ಅಭಿಮಾನ ವಿರಿಸಿ ಕೊಂಡವರು ತಿಳಿದು ಕೊಳ್ಳದೇ ಹೋದಲ್ಲಿ ಅದು ಅವರು ತಮಗೆ ತಾವು ಮಾಡಿಕೊಳ್ಳುವ ಬಹುದೊಡ್ಡ ನಷ್ಟವಷ್ಟೇ. ಅವರುಗಳಿಂದ ಏನೂ ನಿರೀಕ್ಷೆ ಮಾಡದೆಯೇ.. ಅವರು ನಿರೀಕ್ಷೆ ಮಾಡದುದನ್ನೆಲ್ಲ ಕೊಡಬಲ್ಲ ನಿಜವಾದ ದೇವರುಗಳೇ ಅಭಿಮಾನಿಗಳು.  ಅಟ್ ಲಾಸ್ಟ್.. ಒಬ್ಬ ಅಭಿಮಾನಿಯಾಗಿ ನಾವು ಅವರುಗಳಿಂದ ನಿರೀಕ್ಷಿಸಬಹುದಾದರೂ ಏನನ್ನ..?? ಅವರ ಜೊತೆಗೊಂದು ಫೋಟೋ.. ಬಹಳ ಆಸೆ ಪಟ್ಟು ಅವರ ಜೊತೆಗೊಂದು ಉಪಹಾರ..  ಅದೃಷ್ಟವಿದ್ದರೆ ಅವರ ಜೊತೆಗೊಂದಷ್ಟು ಹೊತ್ತು ಅಥವಾ ದಿನವಷ್ಟೇ. ಅವರಿಂದ ನಾವು ಬೇರೆ ಏನ್ನನ್ನು ತಾನೇ ನಿರೀಕ್ಷೆ ಮಾಡಿಯೇವು.. ನಮಗಾಗಿ ಅವರ ಅಷ್ಟೆಲ್ಲಾ ಸಾಧನೆಗಳು ಇರುವಾಗ ಅಲ್ಲವೇ..?? ಜಾಗೋ ಅಭಿಮಾನಿ ದೇವರುಗಳೇ ಜಾಗೋ.. ಯೋಗ್ಯತೆ ಇಲ್ಲದವನನ್ನು ಮೆರೆಸುವುದು.. ಯೋಗ್ಯತೆ ಉಳ್ಳ ಉತ್ತಮ ಪುರುಷನನ್ನು ಅವಮಾನಿಸಿದಷ್ಟೇ ದ್ರೋಹ. ಯಾಕೋ ಇವನ ಮುಂದೆ ವೀರ ಮದಕರಿ ಚಿತ್ರಕ್ಕಾಗಿ ಸುದೀಪ್ ಅಭಿಮಾನಿಗಳು ಮಾಡಿದ್ದು ದೊಡ್ಡದು ಅಂತ ಅನ್ನಿಸಲೇ ಇಲ್ಲ..!!

Thursday 27 June 2013

ಸೋಲುವುದೂ ಕೂಡಾ ಗೆಲುವೇ..??

ಒಂದು ಸ್ಪರ್ಧೆ..

ಹತ್ತು ಜನ ಓಟಗಾರರು ಒಟ್ಟಿಗೆ ಓಡಬೇಕು..

ಆ ಹತ್ತು ಜನ ಓಟಗಾರರೇನು ಕಮ್ಮಿ ಓಟಗಾರರಲ್ಲ ವೃತ್ತಿಪರ ಓಟಗಾರರು. ಓಟದ ಆಟಕ್ಕಾಗಿಯೇ ತಮ್ಮ ಬದುಕನ್ನ ಮುಡಿಪಾಗಿರಿಸಿಕೊಂಡವರು. ಅಲ್ಲಿರುವವರೆಲ್ಲ ಸಾಮಾನ್ಯರಲ್ಲ.. ಇಂಥವನೇ ಗೆಲ್ಲಬಲ್ಲ ಅನ್ನೋದು ಯಾರಿಗೂ ಖಾತ್ರಿಯಿಲ್ಲ. ಯಾರೂ ಕೂಡಾ ಗೆಲ್ಲಬಹುದು. ಯಾರನ್ನೂ ನೆಚ್ಚಿಕೊಳ್ಳುವ ಹಾಗಿಲ್ಲ. ಓಡುವವರು ಕರ್ಣ ಅರ್ಜುನರಾದರೆ ಒಬ್ಬರನ್ನ ಪಕ್ಷವಾಗಿರಿಸಿಕೊಂಡು ಗೆಲ್ಲುವವನ ಕುರಿತು ನಿರೀಕ್ಷೆ ಇಟ್ಟು ಕೊಳ್ಳಬಹುದಿತ್ತು. ಹತ್ತು ಜನ ಅರ್ಜುನರೇ ಓಡುವುದಾದರೆ..??

ಆ ಸ್ಪರ್ಧೆಯನ್ನ ನೋಡಲು ಸಾವಿರಾರು ಜನ ಬಂದಿರುತ್ತಾರೆ. ಅಸಲು ಆ ಸ್ಪರ್ಧಾಳುಗಳು ಯಾರಿಗೂ ಪರಿಚಿತರೇ ಅಲ್ಲ. ಆದರು ಸ್ಪರ್ಧೆ ನೋಡಲೆಂದು ಬಂದ ಮೇಲೆ ಯಾರಿಗಾದರೂ ಸರಿ ಒಬ್ಬನ್ನನ್ನ ಬೆಂಬಲಿಸ ಬೇಕು ಅನ್ನಿಸತ್ತೆ. ಹತ್ತು ಜನರನ್ನ ನೋಡುತ್ತಾರೆ. ಒಂದೇ ಎತ್ತರ.. ಒಂದೇ ಬಣ್ಣ.. ಒಂದೇ ದೆಹಾರ್ಧಾಡ್ಯತೆ. ರೂಪ ಮಾತ್ರ ಬೇರೆ ಬೇರೆ. ಒಬ್ಬರೂ ಒಬ್ಬಬ್ಬರನ್ನ ಮೀರಿಸುವಂತೆ ಅಂದಗಾರಾರಾದದ್ದು ಮತ್ತೊಂದು ಸಮಸ್ಯೆ. ಜನಗಳ ಕೈಲಿ ಬೇರೆ ಆಯ್ಕೆಯಿಲ್ಲ. ಹೇಗೋ ಒಬ್ಬನ್ನನ್ನು ಆಯ್ಕೆ ಮಾಡಿಕೊಳ್ಳುತಾರೆ. ಆಯ್ಕೆ ಮಾಡಿಕೊಳ್ಳ ಬೇಕಾದದ್ದು ಜರೂರತ್ತು ಕೂಡಾ. ಹಾಗೆ ಆಯ್ಕೆ ಮಾಡಿಕೊಂಡರಷ್ಟೇ ಸ್ಪರ್ಧೆ ನೋಡಲೆಂದು ಬಂದ ತಮಗೂ ಒಂದು ಸಮಾಧಾನ. ತನ್ನವನು ಗೆದ್ದರೆ ತಾನೇ ಗೆದ್ದೆನೆಂಬಷ್ಟು ಸಂಭ್ರಮ.

ಸ್ಪರ್ಧೆ ಆರಂಭವಾಗುತ್ತದೆ..

ಎಲ್ಲರು ಮಿಂಚಿನಂತೆ ಓಡುತ್ತಾರೆ. ಯಾರಿಗೂ ಸೋಲುವ ಮನವಿಲ್ಲ. ಸೋಲುವುದಕ್ಕೆಂದು ಯಾರೂ ಆ ಸ್ಪರ್ಧೆಗೆ ಬಂದದ್ದೇ ಅಲ್ಲ. ಎಲ್ಲರ ನಿರೀಕ್ಷೆಯೂ ಗೆಲುವೇ. ಆ ಒಂದು ಕ್ಷಣ ಜಗತ್ತನ್ನೇ ಮರೆತು ಓಡುತ್ತಾರೆ. ತಮ್ಮ ಪೂರ್ವಾಪರ, ಇತಿಹಾಸ, ಭೂಗೋಳ, ಎಲ್ಲವನ್ನೂ ಓಟ ಮರೆಸುತ್ತದೆ. ಓಡುತ್ತಾರೆ.. ಓಡುತ್ತಾರೆ.. ಓಡುತ್ತಾರೆ. ತಮ್ಮ ಸ್ವಶಕ್ತಿ ಸಾಮರ್ಥ್ಯಗಳನ್ನ ಮೀರುವಷ್ಟು ಓಡುತ್ತಾರೆ. ಓಡುವವರು ಒಬ್ಬರನ್ನೊಬ್ಬರು ನೋಡಿಕೊಳ್ಳುವುದಿಲ್ಲ. ಕೀಲಿ ಕೊಟ್ಟ ಬೊಂಬೆಗಳಂತೆ ಓದುವುದಷ್ಟೇ ಅವರ ಕೆಲಸ. ಕೊನೆಯದಾಗಿ ಅವರ ಗುರಿ ಅಲ್ಲಿ ನಿಗದಿ ಮಾಡಿ ಮಾಡಿರುವ ಸ್ಥಳದಲ್ಲಿ ಎಳೆದ ಗೆರೆಯನ್ನ ಮೊದಲು ದಾಟುವುದಷ್ಟೇ.

ಆ ಗೆರೆಯನ್ನ ಮೊದಲು ದಾಟುವುದಷ್ಟೇ ಸ್ಪರ್ಧೆ. ಅಸಲು ಓಡುವುದು ಅಲ್ಲಿ ಮುಖ್ಯವೇ ಅಲ್ಲ. ಓಡುವುದು ಮುಖ್ಯವಲ್ಲ ಅಂದ ಮಾತ್ರಕ್ಕೆ ಅಲ್ಲಿ ನಡೆಯುವುದು ಕಾನೂನು ಬಾಹಿರ. ಅದು ಸ್ಪರ್ಧೆಯ ನಿಯಮವಲ್ಲ. ಓಟದ ಸ್ಪರ್ಧೆ.. ಹಾಗಾಗಿ ಓಡಲೇ ಬೇಕು. ಆದರೆ ಇಷ್ಟೇ ವೇಗದಲ್ಲಿ ಓಡ ಬೇಕೆಂಬುದು ಯಾರ ಮಾನ ದಂಡವೂ ಅಲ್ಲ. ಅದು ಓಡುವವನ ಆಯ್ಕೆ. ಅವರಿಗೆ ಪೂರ್ಣ ಸ್ವಾತಂತ್ರ್ಯವಿದೆ ತಮ್ಮಗಳ ವೇಗದ ಮೇಲೆ. ಮನಸ್ಸು ಮಾಡಿ ಎಲ್ಲರೂ ಮೆತ್ತಗೆಯೇ ಓಡ ಬಹುದಿತ್ತು. ಮೆತ್ತಗೂ ಓಡಬಹುದೆಂದು ಯಾರಿಗೂ ತೋಚುವುದಿಲ್ಲ. ಎಲ್ಲರೂ ಮೆತ್ತಗೆ ಓಡಿ ಎಲ್ಲಿ ಒಬ್ಬೇ ಒಬ್ಬ ವೇಗವಾಗಿ ಓಡಿಬಿಡುವನೋ ಎಂಬ ಆತಂಕ. ಎಲ್ಲರೂ ವೇಗವಾಗಿ ಓಡಿ, ತಾನು ಮಾತ್ರ ಮೆತ್ತಗಾಗಿ ಬಿಡುವೆನೋ ಎಂಬ ಕಳವಳ. ಅಲ್ಲಿಗೆ ವೇಗ ಅವನ ಶಕ್ತಿಗೆ ಮನೋ ಸ್ಥೈರ್ಯಕ್ಕೆ ಪೂರಕವಾದದ್ದು. ಓಡ ಹೇಳಿದೊಡನೆ ತನ್ನ ಕೈಲಾಗುವಷ್ಟು ವೇಗಕ್ಕೆ ಓಡುತ್ತಾನೆ. ಪ್ರತಿಯೊಬ್ಬನಿಗೂ ಪ್ರತಿಯೊಬ್ಬನು ಜಿಂಕೆಯೂ ಆಗುತ್ತಾನೆ. ಪ್ರತಿಯೊಬ್ಬನೂ ಚಿರತೆಯೂ ಆಗುತ್ತಾನೆ. ತಾನು ಚಿರತೆಯಾಗಬೇಕು ಮಿಕ್ಕವರು ಜಿಂಕೆಯಾಗಬೇಕೆಂಬ ಛಲ ಎಲ್ಲರಲೂ. ಜಿಂಕೆಯಾದವರಿಗೂ ತಾನು ಚಿರತೆಯಾಗುವ ಹಠ. ಓಟ ಮುಂದುವರೆಯುತ್ತದೆ.

ಇತ್ತ ಜನ ಉದ್ವೇಗಿತರಾಗುತ್ತಾರೆ. ತಾನು ಗುರುತಿಸಿ ಕೊಂಡವನು ಗೆಲ್ಲಬೇಕಿದೆ. ಆ ಮೂಲಕ ತಾನು ಗೆಲ್ಲಬೇಕಿದೆ. ಅವನ ಗೆಲುವು ತನ್ನ ಗೆಲುವೇ ಆಗಿದೆ. ಆ ಹತ್ತು ಜನರಲ್ಲಿ ತಾನು ನಂಬಿಕೊಂಡವನು ಮಾತ್ರ ಪ್ರಖರವಾಗಿ ಗೋಚರಿಸುತ್ತಾನೆ. ಮಿಕ್ಕವರೆಲ್ಲ ಗೌಣ. ತಾನು ನೆಚ್ಚಿ ಕೊಂಡವನಷ್ಟೇ.. ತನ್ನ ಮೆಚ್ಚಿನ ಓಟಗಾರನಷ್ಟೇ.. ತನ್ನ ಆಯ್ಕೆಗೆ ಮಾನದಂಡ ಆದವನಷ್ಟೇ.. ಅಲ್ಲಿ ತನ್ನವನಾಗಿ ಗೋಚರಿಸುತ್ತಾ ಹೋಗುತ್ತಾನೆ. ಬಾಕಿಯವರು ಯಾರೂ ಅಲ್ಲಿ ಯಾರಿಗೂ ಏನೂ ಅಲ್ಲದಿದ್ದರೂ.. ಯಾರಿಗೂ ಏನೂ ಮಾಡದಿದ್ದರೂ ತಿರಸ್ಕೃತಗೊಳ್ಳುತಾರೆ. ತನ್ನವನು ಗೆಲ್ಲಲಿ ಎಂಬ ಒಂದೇ ಒಂದು ಆಸೆಗೆ ಮಿಕ್ಕವರೆಲ್ಲ ಸೋಲಲೆಂಬ ಶಾಪಕ್ಕೆ ಗುರಿಯಾಗುತ್ತಾರೆ. ಅನಿವಾರ್ಯ ಅಲ್ಲಿ ಶಾಪಕ್ಕೆ ಯಾರೂ ಗುರಿಯಾಗ ಬಹುದು. ಹೆಚ್ಚಿನವರ ಶಾಪ ಯಾರಿಗೆ ತಟ್ಟಲಿದೆಯೋ ಅವನಲ್ಲೇನೋ ಕೊರತೆ ಇದೆ. ಅಥವಾ ಅವನಲ್ಲೇನೂ ಕೊರತೆ ಇಲ್ಲದಿದ್ದರೂ ಜನ ತಮ್ಮ ಆಯ್ಕೆಯ ಮಾನದಂಡಕ್ಕನುಗುನವಾಗಿ ಮಿಕ್ಕವರಲ್ಲಿ ಕೊರತೆಗಳನ್ನ ಕಾಣುತ್ತಾ ಹೋಗುತ್ತಾರೆ. ಆ ಮೂಲಕ ಆ ವ್ಯಕ್ತಿ ಆ ಕೊರತೆಗಳಿಗೆಲ್ಲ ಹಕ್ಕುದಾರನಾಗಿ ಹೋಗುತ್ತಾನೆ. ತನ್ನವನು ಗೆಲ್ಲಲೆಂದು ಹಾರೈಸುತ್ತಾರೆ.. ಕೂಗುತ್ತಾರೆ.. ಕಿರುಚುತ್ತಾರೆ.. ಅರಚುತ್ತಾರೆ.. ಜಯಘೋಶಗಳನ್ನು ಹೇಳುತ್ತಾರೆ. ಒಂದಷ್ಟು ಜನ ಮೊರೆಯುತ್ತಾರೆ.. ದೇವರ ಬಳಿ ಹರಕೆಯನ್ನೂ ಹೊರುತ್ತಾರೆ. ಅನಾವಶ್ಯಕವಾಗಿ ಅವನು ತನ್ನವನಾಗಿ ಹೋಗುತ್ತಾನೆ. ಅವನು ಹತ್ತಿರದವನಾಗಿ ಹೋಗುತ್ತಾನೆ.

ಇತ್ತ ಈ ಸ್ಪಾರ್ಧಾಳುಗಳು ಓಡುತ್ತಲೇ ಇದ್ದಾರೆ. ಗುರಿಯೆಡೆಗೆ ನಿರ್ಧರಿಸಿ ಬಿಟ್ಟ ಬಾಣಗಳಂತೆ. ಗುರಿ ಮುಟ್ಟುವ ತನಕ ಅವರ ಓಟಕ್ಕೊಂದು ಅರ್ಥ ಸಿಗುವುದಿಲ್ಲ. ಅವರ ಓಡುವಿಕೆಗೊಂದು ಬೆಲೆ ದಕ್ಕುವುದಿಲ್ಲ. ಅಲ್ಲಿ ಯಾವುದೋ ಒಂದು ಬಾಣ ಮೊದಲು ತಲುಪುವುದು ನಿಶ್ಚಿತ. ಆ ಮೊದಲ ಬಾಣ ಯಾವುದು..?? ಆ ಮೊದಲ ಓಟಗಾರ ಯಾರು ಅನ್ನುವುದು ಅಲ್ಲಿ ಎಲ್ಲರ ಕುತೂಹಲ. ಆ ಮೊದಲು ಬಂದ ಓಟಗಾರ ಆ ಕ್ಷಣಕ್ಕೆ ಜಗದೇಕ ವೀರನಾಗುತ್ತಾನೆ. ಇಲ್ಲಿ ಓಡುವವನಿಗೆ ತಾನು ಜಗದೇಕ ವೀರನಾಗಬೇಕಿದೆ. ಅಲ್ಲಿ ಈ ಓಟಗಾರನನ್ನ ಬೆಂಬಲಿಸುವವನಿಗೆ ತಾನು ಜಗದೇಕ ವೀರನ ಸ್ವಂತದವನಾಗ ಬೇಕಿದೆ.

ಓಟ ಮುಗಿಯುತ್ತದೆ. ಯಾರೋ ಒಬ್ಬ ಗೆದ್ದಿರುತ್ತಾನೆ. ಗೆದ್ದಿರುತ್ತಾನೆಂದರೆ ತನ್ನ ಹಿಂದಿನವನಿಗಿಂಥ ಒಂದೆರಡು ಮಿಲಿ ಸೆಕೆಂಡ್ ಗಳಷ್ಟು ಮುಂಚೆ ಗುರಿ ತಲುಪಿರುತ್ತಾನೆ. ಗೆದ್ದವನ ಹಿಂದೆ ತಲುಪಿದವನು ತನಗಿಂತ ಹಿಂದೆ ಇದ್ದವನಿಗಿಂತ ಒಂದೆರಡು ಮಿಲಿ ಸೆಕೆಂಡ್ ಗಳಷ್ಟು ಮುಂದೆ ಇರುತ್ತಾನೆ. ಹೀಗೆ ಪ್ರತಿಯೊಬ್ಬರೂ ಒಬ್ಬಬ್ಬರಿಗಿಂಥ ಒಂಚುಚೂರು ಕಾಲಾವಕಾಶದಲ್ಲಿ ಹಿಂದೆ ಉಳಿದಿರುತ್ತಾರೆ. ಅಥವಾ ಮುಂದೆ ನಡೆದಿರುತ್ತಾರೆ. ಇಲ್ಲಿ ಕೊನೆಯವನನ್ನು ಗೆದ್ದವನ್ನನು ಮತ್ತೊಬ್ಬ ಗೆದ್ದಿರುತ್ತಾನೆ. ಆ ಮತ್ತೊಬ್ಬನನ್ನು ಇನ್ನೊಬ್ಬ. ಹಾಗೆ ಉಳಿದ ಇನ್ನೊಬ್ಬರನ್ನು ಹೀಗೆ ಮೊದಲು ಬಂದವ ಗೆದ್ದಿರುತ್ತಾನೆ. ಹಾಗೆ ನೋಡಿದರೆ ಮೊದಲು ತಲುಪಿದವ ಮೊದಲೆನೆಯದಾಗಿ ಗೆದ್ದಿರುತ್ತಾನೆ. ಎರಡನೆಯವ ಎರಡನೆಯನವನಾಗಿ.. ಮೂರನೆಯವ ಮೂರನೆಯನವನಾಗಿ.. ಕೊನೆಯವ ಕೊನೆಯದಾಗಿ ಗೆದ್ದಿರುತ್ತಾನೆ. ಎಲ್ಲರೂ ಗೆಲ್ಲಬಲ್ಲ ಕಲಿಗಳೇ. ಎಲ್ಲರೂ ಗೆದ್ದಿರುತ್ತಾರೆ. ಆದರೆ ಎಲ್ಲರೂ ಗೆದ್ದವರಾಗಬಾರದೆಂಬುದೇ ಸ್ಪರ್ಧೆಯ ನಿಯಮ. ಹಾಗಾಗಿ ಮೊದಲು ಗೆದ್ದವನು ವಿಜಯಿಯಾಗುತ್ತಾನೆ. ನಂತರದವರದ್ದೆಲ್ಲ ಸೋಲು. ಎರಡನೆಯ ವನೂ ಸೋತವನೇ ಆದರೆ ಕೊನೆಯವನಷ್ಟು ಹೀನ ಸೊಲುಗಾರ ಅಲ್ಲ. ಅಲ್ಲಿ ಕೊನೆಯವನು ಕೀಳಾಗಿ ಕಾಣಿಸಲಾರಂಭಿಸುತ್ತಾನೆ. ಅವನನ್ನು ಅನುಸರಿಸಿದವರೆಲ್ಲರೂ ಅವನಿಗೆ ಮೂದಲಿಸುತ್ತಾರೆ. ಶಾಪ ಹಾಕುತ್ತಾರೆ. ಅದು ಅವನ ಸ್ವಯಾರ್ಜಿತ ಅಲ್ಲದಿದ್ದರೂ ಅದು ಅವನು ಮಾಡಿದ ತಪ್ಪೇ ಆಗುತ್ತದೆ. ಅವನು ಎಲ್ಲರಂತೆ ಕ್ಷಮತೆ ಉಳ್ಳವನಾದರೂ.. ಬಲವಂತನಾದರೂ.. ಸೋತವನೆಂಬ ಹಣೆ ಪಟ್ಟಿ ಹೊತ್ತು ಕೊಳ್ಳುವುದು ಅನಿವಾರ್ಯತೆ ಆಗುತ್ತದೆ. ಮೊದಲು ಗೆದ್ದವನ ಅನುಸರಿಸಿದವರೆಲ್ಲಾ ಸಂಭ್ರಮಿಸುತ್ತಾರೆ. ತಮ್ಮ ಆಯ್ಕೆಯ ಬಗ್ಗೆ ಹೆಮ್ಮೆ ಪಡುತ್ತಾರೆ. ತಮ್ಮ ಹಾರೈಕೆಯ ಬಗ್ಗೆ ಆನಂದಿತರಾಗುತ್ತಾರೆ. ಸೋತವರ ಅನುಯಾಯಿಗಳಲ್ಲಿ ಹಲವರು ಈಗ ಸೋತವನನ್ನು ಮರೆತು, ಗೆದ್ದವನ್ನನ್ನ ಅಭಿಮಾನಿಸಲು ಶುರು ಮಾಡುತ್ತಾರೆ. ಗೆದ್ದವನು ಅವರ ಕಣ್ಣಲ್ಲಿ ಹೀರೋ ಆಗುತ್ತಾನೆ. ಅತಿ ಮಾನುಷ ಅನಿಸಿ ಕೊಳ್ಳುತಾನೆ. ಅವನ ಸಂಘದಿಂದ.. ಅವನ ಸ್ನೇಹದಿಂದ ತಮಗೊಂದು ವರ್ಚಸ್ಸು ದೊರಕುತ್ತದೆ ಅಂದು ಕೊಳ್ಳುತ್ತಾರೆ. ಸೋತವನನ್ನು ಕಡೆಗಣಿಸುತ್ತಾರೆ. ಅವನ ಜೊತೆ ಇದ್ದರೆ ತಮ್ಮ ಘನತೆಗೆ ಕುಂದು ಎಂದು ಅವನನ್ನ ದೂರ ಇಡುತ್ತಾರೆ. ಸೋತವನು ಮತ್ತೊಮ್ಮೆ ಗೆಲ್ಲುವ ತನಕ ಹಾಗೆ ಕೀಳಾಗೆ ಕಾಣಿಸಿ ಕೊಳ್ಳುವುದು ಅನಿವಾರ್ಯ ಆಗುತ್ತದೆ.

ನಮ್ಮ ಬದುಕೂ ಹಾಗೆ.. ಇಲ್ಲಿ ಎಲ್ಲರೂ ಸ್ಪರ್ಧಾಳುಗಳೇ. ಭೂಮಿಗೆಂದು ಬಂದ ಮೇಲೆ ಬದುಕೋದು ಒಂದು ಸ್ಪರ್ಧೆಯೇ. ಇಲ್ಲಿ ಎಲ್ಲರೂ ತಮ್ಮ ಸ್ಪರ್ಧೆಗನುಸಾರವಾಗಿ ಸ್ಪರ್ಧಿಸುತ್ತಾರೆ.. ಅವರ ಶಕ್ತಿಗನುಸಾರವಾಗಿ ಗೆಲ್ಲುತ್ತಾ ಹೋಗುತ್ತಾರೆ. ಆದರೆ ಸ್ಪರ್ಧೆಯಲ್ಲಿ ಮೊದಲು ಬಂದವನಷ್ಟೇ ಗೆದ್ದವ ಎಂಬ ಪಟ್ಟಕ್ಕೆ ಅರ್ಹ ಎಂಬುದು ನಿಯಮವಾದ್ದರಿಂದ ಗೆದ್ದ ಮಿಕ್ಕೆಲ್ಲರೂ ಸೋತವ ಎಂಬ ಹಣೆ ಪಟ್ಟಿ ಹೊರುವುದು ಅನಿವಾರ್ಯವಾಗುತ್ತದೆ.

ಮನುಷ್ಯ ಸೋಲಿಗೆ ಕಂಗೆಡುತ್ತಾನೆ.. ಭೀತನಾಗುತ್ತಾನೆ.. ಆ ಪಟ್ಟ ಹೊರಲು ಅಳುಕುತ್ತಾನೆ.. ಅಂಜುತ್ತಾನೆ. ಇದೆ ಕಾರಣಕ್ಕೆ. ನಾವು ಮಾಡಿಕೊಂಡ ನಿಯಮ ಅಂತಹದ್ದು, ಸೋತವ ಕೀಳು ಎಂಬ ಪದ್ಧತಿ ನಮ್ಮನ್ನ ಕೊರಗಿಸುತ್ತದೆ. ಅವನದಲ್ಲದ ಪಟ್ಟವನ್ನ ಅವನು ಅನಿವಾರ್ಯ ಅಲ್ಲದೆಯೂ ಹೊರಬೇಕಾಗುತ್ತಾದೆ. ಹಾಗಾಗಿಯೇ ಸೋಲುವುದಕ್ಕೆ ಹೆದರುತ್ತಾನೆ. ಸೊಲುವುದಕ್ಕಲ್ಲ.. ಕಡೆಯದಾಗಿ ಗೆಲ್ಲುವುದಕ್ಕೆ. ಕಡೆಯದಾಗಿ ಗೆಲ್ಲುವುದು ಅವನ ಧ್ಯೇಯ ಆಗುವುದಿಲ್ಲ ಮೊದಲು ಗೆಲ್ಲಬೇಕೆಂಬುದು ಆಧ್ಯತೆ ಆಗುತ್ತದೆ. ಗುರಿ ಆಗುತ್ತದೆ ಬಾಧ್ಯತೆ ಆಗುತ್ತದೆ. ಗೆದ್ದವನಿಗೆ ಅಭಿಮಾನ ಸಿಗುತ್ತದೆ.. ಪ್ರೀತಿ ಸಿಗುತ್ತದೆ.. ಅಧಿಕಾರ ಸಿಗುತ್ತದೆ.. ವರ್ಚಸ್ಸು ಮೊಳೆಯುತ್ತದೆ. ಹಾಗಾಗಿಯೇ ಗೆಲ್ಲುವುದು ಎಲ್ಲರ ಗುರಿ ಯಾಗುತ್ತದೆ. ಎಲ್ಲರ ಹಪಾ ಹಪಿಯಾಗುತ್ತದೆ.

ಮ ಬಲ ಉಳ್ಳ ಹತ್ತು ಜನರಿದ್ದರೂ ಹತ್ತು ಜನರನ್ನ ಮೀರಿಸಬಲ್ಲ ಒಬ್ಬನನ್ನಷ್ಟೇ ಜಗತ್ತು ಗುರುತಿಸುವುದರಿಂದ ಆ ಒಬ್ಬನಾಗಲು ನಾವು ಹೆಣಗುತ್ತೇವೆ, ಹೋರಾಡುತ್ತೇವೆ. ಅದೆಷ್ಟು ಬಾರಿ ಸೋತರೂ ಮತ್ತೆ ಮತ್ತೆ ಪ್ರಯತ್ನ ಮಾಡುತ್ತಲೇ ಹೋಗುತ್ತೇವೆ. ಆ ಸೋತವ ಎಂಬ ಸುಳ್ಳು ಹಣೆಪಟ್ಟಿಯ ಮೇಲಿನ ಭಯದಿಂದ, ಕೊನೆಯದಾಗಿ ಗೆದ್ದವ ಎಂಬ ಸಿಹಿ ಆನಂದವನ್ನ ಅನುಭವಿಸದೆ ಕೊರಗುತ್ತೇವೆ. ಮೊದಲನೆಯವನಾಗುವ ಭ್ರಮೆಯಲ್ಲಿ ಹೋರಾಡುತ್ತಲೇ ಹೋಗುತ್ತೇವೆ.

ಸೋಲು ಗೆಲುವು ನಮ್ಮ ಸ್ತಿತಿ ಗತಿಗಳನ್ನು ನಿರ್ಧರಿಸುವುದರಿಂದ.. ನಮಗೊಂದು ಸ್ಥಾನ ಮಾನವನ್ನು ಕಲ್ಪಿಸಿ ಕೊಡುವುದರಿಂದ.. ನಾವೆಲ್ಲರೂ ಅನಿವಾರ್ಯವಾಗಿ ಸ್ಪರ್ಧಾಳುಗಳಾಗುತ್ತೇವೆ. ಸ್ಪರ್ಧೆ ಎಂದು ಬಂದಾಗ ನಾವೆಲ್ಲರೂ ಒಬ್ಬರಿಗೊಬ್ಬರೂ ವೈರಿಯಾಗದಿದ್ದರೂ, ಒಬ್ಬರಿಗೊಬ್ಬರು ಮೀರಿ ಬದುಕಲು ಪ್ರಯತ್ನಿಸುತ್ತೇವೆ. ಆ ಮೀರಿ ಬದುಕುವಿಕೆಯೇ ನಮ್ಮ ಸಮಾನತೆಯಲ್ಲೊಂದು ಅಂತರವನ್ನ ಸೃಷ್ಟಿಸುತ್ತವೆ. ಎಲ್ಲರೂ ಜಗತ್ತೆಂಬ ಭವ್ಯ ಅರಮನೆಯೊಳಗೆ ಇರುತ್ತರಾದರೂ ಅಲ್ಲಿ ರಾಜ ಮುಖ್ಯವೆನಿಸಿ ಕೊಳ್ಳುವುದು ಅದಕ್ಕಾಗಿಯೇ ಅಲ್ಲವೇ. ಸಿಂಹಾಸನ ರಾಜನಿಗಾಗಿಯೇ ಇರುತ್ತದೆ. ಮತ್ತು ರಾಜನಷ್ಟೇ ಸಿಂಹಾಸನದ ಮೇಲೆ ವಿರಾಜಮಾನನಾಗಲು ಯೋಗ್ಯನಾಗುತ್ತಾನೆ.

Sunday 16 June 2013

ಎಲ್ಲರಂತಲ್ಲ.. ಎಲ್ಲರಂತಿಲ್ಲ ನನ್ನಪ್ಪ..!!

ನನ್ನಿಷ್ಟದ ಪಾನಿಪುರಿ ತಿನ್ನುತ್ತಾ ಇದ್ದೆ ಹೊಸೂರಿನ ನನ್ನ ಪರಿಚಯದ ಹುಡುಗನೊಬ್ಬನ ತಳ್ಳು ಗಾಡಿಯಲ್ಲಿ. ಒಂದು ಮಸಾಲೆ ಪುರಿ, ಒಂದ್ನಾಲ್ಕು ಪಾನಿಪುರಿ ಹಾಕಿಸಿಕೊಂಡು ತಿಂದು, ಕಾಸು ಕೊಟ್ಟು ಕೈ ಬಾಯಿ ತೊಳೆದು ಕೊಂಡು ಇನ್ನೇನು ಹೊರಡಬೇಕು.. ಆಗ ಬಂತು ನೋಡಿ ಮೂರು ಜೀವಗಳು ನಾನಿದ್ದ ಅದೇ ಪಾನಿಪುರಿ ಅಂಗಡಿ ಕಡೆ.. ನಾಲ್ಕು ವರ್ಷದವನಿರಬಹುದಾದ ಒಂದು ಪುಟ್ಟ ಹುಡುಗ.. ಆರು ವರ್ಷದ ಪುಟ್ಟ ಹುಡುಗಿ ಮತ್ತವುಗಳ ಅಪ್ಪ. ನೂರು ರುಪಾಯಿಗೆ ಚೇಂಜ್ ಇಲ್ಲದೆ ಸಹಾಯಕನೊಬ್ಬನ್ನನ್ನ ನೂರು ರುಪಾಯಿಗೆ ಚೇಂಜ್ ತರಲು ಕಳಿಸಿದ ತಳ್ಳುಗಾಡಿಯ ಹುಡುಗ ಸಾರ್ ಒಂದೆರಡು ನಿಮಿಷ ತಡೀರಿ ಹುಡುಗ ಈಗ ಚೇಂಜ್ ತಂದು ಬಿಡ್ತಾನೆ ಅಂತ ನನ್ನನ್ನ ಕಾಯಲು ಹೇಳಿದ. ಎರಡು ನಿಮಿಷ ತಾನೇ ಎರಡು ಗಂಟೆಯಲ್ಲವಲ್ಲ.. ಕಾಯುತ್ತ ನಿಂತೆ.

ಅಪ್ಪ ಅಪ್ಪ ಪಾನಿಪುರಿ ಬೇಕು ಅಂತ ಹಠ ಮಾಡಿದ್ದರಿಂದಲೇ ಆ ಮಕ್ಕಳನ್ನು ಅಲ್ಲಿಗೆ ಕರೆ ತಂದಿದ್ದದ್ದೇನೋ ಆಯಪ್ಪ ಅವರನ್ನ. ಅಲ್ಲಿಗೆ ಬಂದು ಕೂತಾಗಲೂ ಆ ಹುಡುಗ ಅಪ್ಪ ಅಪ್ಪ ಪಾನಿಪುರಿ ಅನ್ನುವ ಮಂತ್ರವನ್ನ ಬಿಟ್ಟಿರಲಿಲ್ಲ.  ಅವರನ್ನೇ ನೋಡುತ್ತಾ ನಿಂತೆ. ಆ ಮಕ್ಕಳ ತಂದೆ ಸ್ವಲ್ಪ ಬಡವನೇ ಅನ್ನುವ ಹಾಗಿದ್ದ. ಹಳೆಯ ಹರಕು ಮತ್ತು ಮಾಸಲು ಪ್ಯಾಂಟ್ ಶರ್ಟ್ ಒಂದನ್ನು ತೊಟ್ಟಿದ್ದ ಅಯ್ಯಪ್ಪ, ಜೇಬಿನಲ್ಲಿ ತನ್ನ ಬಳಿಯಿದ್ದ ಚಿಲ್ಲರೆ ಹಣವನ್ನೆಲ್ಲ ಒಮ್ಮೆ ಒಟ್ಟಿಗೇ ಎಣಿಸಿ ಒಂದೇ ಒಂದು ಪ್ಲೇಟ್ ಪಾನಿಪುರಿಯನ್ನ ಕೊಡಲು ಹೇಳಿದ. ಆ ಒಂದು ಪ್ಲೇಟ್ ಪಾನಿ ಪುರಿಯನ್ನ ಒಂದೇ ಚಮಚದಿಂದ ಎರಡೂ ಮಕ್ಕಳಿಗೆ ತಿನಿಸುತ್ತಿದ್ದ ಅವನು.. ಅಪ್ಪ ಇದೇನು..?? ಅಪ್ಪ ಅದೇನು..?? ಅದ್ಯಾಕೆ ಹೀಗೆ..?? ಆ ಗೊಂಬೆ ಯಾಕೆ ಅಲ್ಲಿಟ್ಟಿದಾರೆ..?? ಅವರ್ಯಾರು..?? ಇವರ್ಯಾರು..?? ಅಂಥವೇ ಅನೇಕ.. ಆ ಮಕ್ಕಳ ಆ ಕ್ಷಣದ ಅದೆಷ್ಟೋ ಪ್ರಶ್ನೆಗಳಿಗೆ ತನಗೆ ತೋಚಿದಂತೆ ಉತ್ತರಿಸುತ್ತಾ ತಿನ್ನಿಸುವುದನ್ನ ಮುಂದುವರೆಸಿದ್ದ. ಆ ಒಂದು ದೃಶ್ಯ ಅದೆಷ್ಟು ಕಣ್ತುಂಬಿ ಕೊಳ್ತು. ಆಗಷ್ಟೇ ಅಪ್ಪನ ಬಳಿ ಮಾತಾಡಿ ಫೋನಿಟ್ಟು ಪಾನಿಪುರಿ ತಿನ್ನಲು ಬಂದಿದ್ದು ನಾನು.

ನಿನ್ನೆ ರಾತ್ರಿ ಸುಮಾರು ಹತ್ತು ಗಂಟೆ ಸುಮಾರಿಗೆ ಅಪ್ಪ ನನಗೆ ಫೋನ್ ಮಾಡಿದ್ದರು ಅನ್ನಿಸತ್ತೆ. ನಮ್ಮ ಹೊಸೂರು ಆಫೀಸಿನಿಂದ ವರ್ಗಾವಣೆಯಾದ ಹಲವರಿಗೆ ಒಂದು ವಿದಾಯ ಕೂಟ ಮತ್ತು ಅದೇ ಕೂಟವೇ ಹೊಸದಾಗಿ ಬಂದು ಹೊಸೂರು ಕೂಡಿಕೊಂಡ ಹೊಸ ವಾರ್ಗಾಯಿತ ಕಾರ್ಮಿಕರಿಗೆ ಸ್ವಾಗತ ಕೂಟವೂ ಆಗಿತ್ತು. ನಮ್ಮಗಳ ನಡುವೆ ಅಪರೂಪಕ್ಕೆ ಇಂಥದ್ದೊಂದು ಕೂಟ ನಡೆಯುತ್ತದೆ. ಸ್ವಾಗತ.. ಪರಿಚಯ.. ವಿದಾಯ.. ವಿಷಾದ.. ಊಟ.. ಹಾಡು.. ಕುಣಿತ.. ಒಂದಷ್ಟು ಖುಷಿ.. ಒಂದಷ್ಟು ಬೇಸರ.. ಹೀಗೆ ಕಾರ್ಯಕ್ರಮ ಮುಗಿಯುವುದರೊಳಗಾಗಿ ರಾತ್ರಿ ಹನ್ನೊಂದು ಗಂಟೆ. ಮೊಬೈಲ್ ಅನ್ನು ಸೈಲೆಂಟ್ ಇಟ್ಟದ್ದರ ಪರಿಣಾಮ ಅಪ್ಪನ ಫೋನ್ ಬಂದದ್ದು ಗೊತ್ತೇ ಆಗಿರಲಿಲ್ಲ. ಪಾರ್ಟಿ ಮುಗೀತು. ಯಾವುದೋ ಒಂದು ಕ್ಷಣಕ್ಕೆ ಮೊಬೈಲ್ ಕೈಗೆತ್ತಿ ನೋಡಿದರೆ ಮೂರು ಮಿಸ್ ಕಾಲ್..!! ಅಪ್ಪ, ಅಮ್ಮ, ತಮ್ಮ, ಮೂವರ ನಂಬರ್ ಇಂದಲೂ. ತಕ್ಷಣ ಮೂರು ನಂಬರಿಗೂ ಫೋನ್ ಮಾಡುವ ಪ್ರಯತ್ನ ಮಾಡಿದೆನಾದರೂ ನೆಟ್ವರ್ಕ್ ನ ಅಲಭ್ಯತೆ ಇಂದ ಫೋನ್ ಕನೆಕ್ಟ್ ಆಗಲೇ ಇಲ್ಲ. ಸರಿ ಬೆಳಿಗ್ಗೆಯಾದರೂ ಮಾತಾಡುವ ಅಂದ್ಕೊಂಡು ಮಲಗಿದ್ದೆ. ಇಂದು ಬೆಳಿಗ್ಗೆ ಅಷ್ಟು ಹೊತ್ತಿಗೆ ಬೆಂಗಳೂರು ಹೊರಟು ಬಂದೆನಾದರೂ ಫ್ರೆಂಡ್ಸ್ ಜೊತೆಗೆ ಅದೂ ಇದೂ, ಅಲ್ಲಿ ಇಲ್ಲಿ ಅಂತ ತಿರುಗುವುದರೊಳಗೆ ಸಂಜೆಯಾಗಿತ್ತು ನಡುವೆ ಮನೆಗೆ ಫೋನ್ ಮಾಡುವ ಪ್ರಯತ್ನವೇ ಮಾಡಿರಲಿಲ್ಲ. ಹೊಸೂರಿಗೆ ಬಸ್ಸೇರಿ ಕೂತು ಹೊಸೂರು ತಲುಪಿದ ಮೇಲೆ.. ಆ ಪಾನಿಪುರಿ ಅಂಗಡಿ ತಲುಪುವ ವೇಳೆಗೆ ಅಪ್ಪನ ಬಳಿ ಫೋನ್ ಮಾಡಿ ಮಾತಾಡಿದ್ದೆ.

ಫೋನ್ ಮಾಡಿದೆ.. ಮಾಮೂಲಿನಂತೆ ಉಭಯ ಕುಶೋಲಪರಿ ಆಯ್ತು. ಚೆನಾಗಿದಿಯಾ.. ಚೆನಾಗಿದಿನಿ. ಕಾಫಿ ಆಯ್ತಾ.. ಆಯ್ತು. ಆ ಕಡೆ ಮಳೆನಾ..?? ಇಲ್ಲ. ಈಗೊಂದೆರಡು ದಿನದಿಂದ ಅಂಥಾ ಮಳೆ ಏನಿಲ್ಲ.. ಹೊಸೂರ್ ನಲ್ಲಿ..?? ಹೊಸೂರಲ್ಲಿ ಕೂಡ ಈಗ ಸುಮಾರು ಹದಿನೈದು ದಿನದಿಂದಲೂ ಇಲ್ಲ. ಮಾತು ಹೀಗೆ ಸಾಗಿತ್ತು. ಊರಿಂದ ಬಂದ ಒಂದು ವಾರಕ್ಕೆ ಇವತ್ತು ಫೋನ್ ಮಾಡಿ ಮಾತಾಡಿದ್ದೆ ಮನೆಗೆ. ಅಮ್ಮನ ಬಳಿ ಇದೇ ವಾರದಲ್ಲಿ ಮೂರು ಬಾರಿ ಮಾತಾಡಿದ್ದೆನಾದರೂ ಅಪ್ಪನ ಬಳಿ ಇದೆ ಮೊದಲು. ಹಬ್ಬಕ್ಕೆಂದು ಊರಿಗೆ ಹೋಗಿದ್ದ ನಾನು ತಿರುಗಿ ಬರುವಾಗ ಸಾಧಾರಣವಾಗಿ ಏನು ಬಂದಿರಲಿಲ್ಲ. ಮನೆಯಲ್ಲೊಂದು ಮಹಾ ಕದನಕ್ಕೆ ವಿರಾಮವಿತ್ತು ಅಸಾಮಾಧಾನದ ಅಲ್ಪ ಮನಸ್ಸಿಂದಲೇ ಬಂದಿದ್ದೆನಷ್ಟೇ..!!

ಆಗಿದ್ಡಿಷ್ಟೇ.. ವರುಷಕ್ಕೊಮ್ಮೆ ಮಾಡುವ ಊರ ಹಬ್ಬ. ಮೂರು ದಿನಗಳ ಉತ್ಸವ. ಈ ಸಾರಿ ಮಾಮೂಲಿನಂತೆ ಅದ್ಧೂರಿಯಾಗಿ ಹಬ್ಬ ಜರುಗಲಿಲ್ಲವಾದರೂ ಸಂಪ್ರದಾಯದಂತೆ ಪೂಜೆ ಪುನಸ್ಕಾರಗಳಿಗೆ ಕೊರತೆ ಇರಲಿಲ್ಲ. ಹಬ್ಬಕ್ಕೆ ಹತ್ತಿರದ ಊರುಗಳಿಂದ ಬಂದಿದ್ದ ನೆಂಟರಿಷ್ಟರು, ಸ್ನೇಹಿತರೆಲ್ಲ ಹಬ್ಬದ ಎರಡನೇ ದಿನವೇ ಹೋಗಿದ್ದರಿಂದ.. ನಾನು, ಅಕ್ಕ ಮತ್ತು ಭಾವ ಮಾತ್ರವೇ ಅತಿಥಿಗಳಾಗಿ ಉಳಿದು ಕೊಂಡದ್ದು. ಕೆಲಸ ಸಿಕ್ಕು ಬದುಕು ಕಟ್ಟಿ ಕೊಳ್ಳಲು ತಮಿಳುನಾಡು ಸೇರಿದಮೇಲೆ ನನ್ನ ಮನೆಗೆ ಆಗಾಗಷ್ಟೇ ಹೋಗುವ ನಾನೇ ಅತಿಥಿಯಾಗಬೇಕಾದ್ದು ಅನಿವಾರ್ಯತೆ ಕೂಡ..!! ಅವತ್ತು ಹಬ್ಬದ ಮೂರನೇ ದಿನ. ಊರೊಳಗೆ ಊರ ದೇವಿಯ ಉತ್ಸವ ಮೆರವಣಿಗೆ. ಮೊದಲೆಲ್ಲ ಮೂರನೇ ದಿನಕ್ಕೆ ಸರಿಯಾಗಿ ನಾಟಕವೋ.. ಆರ್ಕೆಷ್ಟ್ರವೋ ಇರುತ್ತಿತ್ತು. ಈ ಸಾರಿ ಊರಲ್ಲಿ ದೇವಸ್ಥಾನಕ್ಕೊಂದು ಕಲ್ಯಾಣ ಮಂಟಪ ಕಟ್ಟುತ್ತಿರುವ ಕೆಲಸ ನಡೆಯುತ್ತಿದ್ದರಿಂದ, ಅಷ್ಟು ವಿಜ್ರುಂಭಣೆ ಇಂದ ಆಚರಿಸೋದು ಸಾಧ್ಯವಾಗಿರಲಿಲ್ಲ. ಆದ್ರಿಂದ ಕೆಂಚಮ್ಮ, ಕರಿಯಮ್ಮ ದೇವಿಯರ ವಿಗ್ರಹಗಳನ್ನ ಟ್ರಾಕ್ಟರ್ ಮೇಲೆ ಕೂರಿಸಿ ಅಲಂಕರಿಸಿ ಬೀದಿ ಬೀದಿಯೋಳಗೂ ಕೊಂಡೊಯುತ್ತಾ ಮನೆಮನೆಯಲ್ಲೂ ಪೂಜೆಯೊಂದಿಗೆ ಮೆರವಣಿಗೆ ಸಾಗ್ತಾ ಇತ್ತು. ಆರ್ಕೆಷ್ಟ್ರ ಇಲ್ಲವಲ್ಲ..!! ಊರ ಹುಡುಗರೆಲ್ಲ ಸೇರಿ ತಾವೇ ಕೈ ಇಂದ ಒಂದಿಷ್ಟು ಹಣ ಹಾಕಿ, ದೊಡ್ಡ ದೊಡ್ಡ ಸ್ಪೀಕರ್ ಬಾಕ್ಸ್ ಗಳ ಜೊತೆ ಒಂದು ರೆಕಾರ್ಡ್ ಪ್ಲೇಯರ್ ಕೂಡಾ ಬಾಡಿಗೆಗೆ ತಂದು ತಮ್ಮಿಷ್ಟದ ಹಾಡುಗಳನ್ನ ಹಾಕಿಕೊಂಡು ಮೆರವಣಿಗೆಯಲ್ಲಿ ತಮಗಿಷ್ಟದ ಹಾಗೆ ಕುಣಿಯೋಕೆ ಶುರು ಮಾಡಿದರು..!! ಹೀಗೆ ಕುಣಿಯೋಕೆ ಶುರು ಮಾಡಿದ ಮೇಲೆ ಒಂದಿಷ್ಟು ಸಣ್ಣ ಪುಟ್ಟ ರಗಳೆ.. ಜಗಳ ಬರದೆ ಇರುತ್ತದೆಯೇ..?? ಅದೂ ಕುಡಿದು ಪಾನಮತ್ತರಾಗಿ ತೂರಾಡುವ ಹುಡುಗರೆಂದ ಮೇಲೆ..?? ಒಂದು ಸಣ್ಣ ವಿಚಾರಕ್ಕೆ ಇಬ್ಬರ ನಡುವೆ ಜಗಳ ಶುರು ಆಯ್ತು. ಇಬ್ಬರದು ಎರಡು ಗುಂಪಾಯ್ತು. ಈಗ ಇದು ಎರಡು ಗುಂಪುಗಳ ಜಗಳ..!! ಒಂದಿಷ್ಟು ಊರ ಹಿರಿಯರು ಜಗಳ ನಿಲ್ಲಿಸುವ ಪ್ರಯತ್ನ ಮಾಡಿದರಾದರೂ.. ಪರಿಸ್ತಿತಿ ಹದಕ್ಕೆ ಬರಲಿಲ್ಲ. ನಾನು ಮನೆಯಿಂದ ಮೆರವಣಿಗೆಯ ಜಾಗಕ್ಕೆ ಬರುವ ಹೊತ್ತಿಗಾಗಲೇ ಜಗಳ ಸ್ವಲ್ಪ ತೀವ್ರ ಗತಿಯನ್ನೇ ಪಡೆದಿತ್ತು. ನನ್ನ ಜೊತೆ ಅಮ್ಮನೂ ಬಂದಿದ್ರು. ಗುದ್ದಾಡುತ್ತಿರುವ ಒಂದು ಗುಂಪಲ್ಲಿ ನನ್ನ ತಮ್ಮನು ಕೂಡಾ.. ಅಮ್ಮ ನಾನು ಎಷ್ಟು ತಡೆದರೂ ಪುಸಲಾಯಿಸಿ ಕರೆದರೂ ಜಗಳ ಬಿಟ್ಟು ಬರಲೊಲ್ಲ..!! ನಾನೂ ಅವನ ಮಾತ್ರವಲ್ಲದೆ ಜಗಳವನ್ನ ಬಿಡಿಸುವ ಪ್ರಯತ್ನ ಮಾಡಿದೆನಾದರೂ ಪ್ರಯೋಜನವಾಗಲಿಲ್ಲ. ಎಲ್ಲರೂ ಕುಡಿದಿದ್ದರು.. ತಮ್ಮನೂ ಕೂಡ..!! ಯಾರ ಹಟಕ್ಕೆ ಬಗ್ಗಿಯಾರು..?? ಯಾರ ತಹಂಬದಿಗೆ ಸಿಕ್ಕಾರು..?? ಅವರಾಡಿದ್ದೆ ಆಟವಾಗಿತ್ತು ಆ ಕ್ಷಣಕ್ಕೆ. ಹೆದರಿದ ಅಮ್ಮ ಅಪ್ಪನಿಗೆ ಫೋನ್ ಮಾಡಿ ಕರೆದಿದ್ರು. ಅಲ್ಲೆಲ್ಲೋ ಭದ್ರಾವತಿಯಲ್ಲಿ ಗೆಳೆಯರೊಬ್ಬರ ಮನೆಯಲಿದ್ದ ಅಪ್ಪ ಓಡೋಡಿ ಬಂದಿದ್ದರು.

ಅಪ್ಪ ಬಂದವರೇ ಜಗಳದ ಕೂಟದೊಳಗೆ ತೂರಿ, ತಮ್ಮನ ಕೈ ಹಿಡಿದು ದರ ದರ ಎಳೆದು ಕೊಂಡು ಮನೆಗೆ ಬಂದವರೇ ಕುಡಿದು ರೋಷದಲ್ಲಿದ್ದ ತಮ್ಮನ ಕೆನ್ನಿಗೆ ಮತ್ತು ಬೆನ್ನಿಗೆ ಏಟು ಕೊಟ್ಟು, ಸಿಕ್ಕ ಸಿಕ್ಕಲ್ಲಿಗೆ ಝಾಡಿಸಿ ಒದೆಯೋಕೆ ಶುರು ಮಾಡಿದ್ರು..!! ನಾವೆಲ್ಲಾ ಓಡಿ ಬಂದು ಬಿಡಿಸುವುದರೋಳಗಾಗಿ ಕನಿಷ್ಠ ಹತ್ತು ಏಟಾದರೂ ಹೊಡೆದಿದ್ದರು..!! ನನಗಿಂತ ಎರಡು ವರ್ಷ ಚಿಕ್ಕವನಾದ ತಮ್ಮನಿಗೆ ಈಗ ಇಪ್ಪತ್ಮೂರು ವರುಷ. ನನ್ನಂತೆ ಸಾಧುವಲ್ಲ. ಶಾಂತ ಸ್ವಭಾವ ಅವನದ್ದಲ್ಲ. ತನ್ ಮೇಲೆ ಕೈ ಮಾಡುವ ಯಾರಾದರೂ ತಿರುಗಿ ಬೀಳುವ ಕೋಪಿಷ್ಠ..!! ಕುಡಿದಿದ್ದ ಬೇರೆ ಏನು ಮಾಡುತ್ತಿರುವೆ ಎಂಬ ಪರಿಜ್ಞಾನ ಬೇರೆ ಇಲ್ಲ. ಒಂದು ಕ್ಷಣ ಏನು ಮಾಡುತ್ತಿರುವೆ ಎಂದು ತೋಚದೆ ಅಪ್ಪನ ಮೇಲೆ ಕೈ ಎತ್ತಿ ಮುಂದಕ್ಕೆ ಹೋದ..!! ನಾನು ಗಟ್ಟಿಯಾಗಿ ಹಿಡಿದು ಕೊಂಡೆ. ತನ್ನತ್ತಲೇ ಕೈ ಎತ್ತಿ ಬಂದ ಮಗನ ಮೇಲೆ ಇನ್ನೂ ಸಿಟ್ಟಾದ ಅಪ್ಪ.. ತಾವೂ ಅವನನ್ನ ಹೊಡೆಯುವುದಕ್ಕೆ ಮುಂದೆ ಬಂದರು. ನಾನು ತಮ್ಮನನ್ನು ಹಿಡಕೊಂಡೆ.. ಅಳುತ್ತಲೇ ಇದ್ದ ಅಮ್ಮ ಮತ್ತು ಭಾವ ಅಪ್ಪನನ್ನ ಹಿಡಿದು ಸುಧಾರಿಸುವ ಪ್ರಯತ್ನ ಮಾಡುತ್ತಿದ್ದರು. ಅಕ್ಕ ಮತ್ತು ಅಕ್ಕನ ಮಕ್ಕಳದ್ದು ಒಂದೇ ಸಮನೆ ಅಳು. ಕುಡಿದು ತನ್ ಮೇಲೆ ಕೈ ಮಾಡಲು ಬಂದ ತಮ್ಮನ ಮೇಲೆ ಅಪ್ಪ ಕೆಂಡಾಮಂಡಲ ಕೋಪದಿಂದ ಬಾಯಿಗೆ ಬಂದಂತೆ ತುಚ್ಚವಾಗಿ ಬೈಯೋಕೆ ಶುರು ಮಾಡಿದ್ದರು. ಕುಡಿದು ಏಟು ತಿಂದು ಪರಿಜ್ಞಾನ ಕಳೆದುಕೊಂಡ ತಮ್ಮನದು ಒಂದೇ ಹಠ.. ಇನ್ನು ನಾನಿನ್ನು ಈ ಮನೇಲಿ ಇರೋಲ್ಲ ನಾಳೆನೆ ಬಿಜಾಪುರಕ್ಕೆ ಹೋಗ್ತೀನಿ. ಅಲ್ಲಿ ಇಡೀ ತಾಲೂಕಿನ ಎಲೆಕ್ಟ್ರಿಕಲ್ ಮೀಟರ್ ಚೇಂಜ್ ಮಾಡುವ ಟೆಂಡರ್ ಸಿಕ್ಕಿದೆ.. ನಾನು ಮತ್ತು ಇನ್ನು ನಾಲ್ಕು ಜನ ಹೋಗ್ತಾ ಇದಿವಿ. ಎದೆ ಮಟ್ಟಕ್ಕೆ ಬೆಳೆದ ಮಗನ ಮೇಲೆ ಕೈ ಮಾಡುವ ಇಂಥೋರ ಜೊತೆ ಯಾರ್ ಇರ್ತಾರೆ..?? ಇನ್ನು ನನ್ ದಾರಿ ನಂದು.. ನಿಮ್ ದಾರಿ ನಿಮ್ದು..!! 

ತಮ್ಮನ ಈ ವರಸೆ ಹೊಸದೇನಲ್ಲ. ಹತ್ತೊಂಭತ್ತನೇ ವಯಸ್ಸಿಗೆ ಯಾರಿಗೂ ಹೇಳದೆ ಮನೆ ಬಿಟ್ಟು ಓಡಿ ಹೋಗಿ ಬೆಂಗಳೂರಿನ ಹೋಟೆಲ್ ಒಂದರಲ್ಲಿ ಕೆಲಸಕ್ಕೆ ಸೇರಿ ತಿಂಗಳ ನಂತರ ಫೋನ್ ಮಾಡಿ ತಿಳಿಸಿದ್ದ. ಪೀಯೂಸಿ ಓದಲಾಗದೆ ಓಡಿ ಹೋಗಿದ್ದ. ಹಾಗೆ ಕೈ ಮೀರಿ ಹೋದ, ಇಂಥಾ ನಿರ್ಧಾರಗಳನ್ನ ತನ್ನಷ್ಟಕ್ಕೆ ತಾನೇ ತೆಗೆದುಕೊಳ್ಳುವಷ್ಟು ದೊಡ್ಡವನಾದ ಮಗನ ಇಂಥಾ ವರ್ತನೆಗಳನ್ನ ಕಂಡು ಯಾರಿಗೆ ತಾನೇ ನೋವಾಗುವುದಿಲ್ಲ..?? ಅಪ್ಪ ಅಮ್ಮನಿಗೆ ನೋವಾದರೂ ಹೇಗೋ ಒಂದು ಕಡೆ ಕೆಲಸ ಮಾಡ್ಕೊಂಡು ಚೆನ್ನಾಗಿದ್ದಾನಲ್ಲಾ ಬಿಡು ಅಂತ ಸಮಾಧಾನ ಮಾಡಿ ಕೊಳ್ಳುವಷ್ಟರಲ್ಲೇ, ಎರಡನೇ ತಿಂಗಳಿಗಾಗಲೇ ಕೆಲಸ ಬಿಟ್ಟು ಮನೆಗೆ ವಾಪಸು ಬಂದಿದ್ದ..!! ಬಂದವನನ್ನ ಹೇಗೋ ಮನವೊಲಿಸಿ, ನಲವತ್ತು ಐವತ್ತು ಸಾವಿರ ಖರ್ಚು ಮಾಡಿ ಐ ಟಿ ಐ ಸೇರಿಸಿ ಕಳಿಸಿದರೆ.. ಅಲ್ಲೂ ಮೂರು ತಿಂಗಳಿಗೆ ನಾನು ಕಾಲೇಜು ಹೋಗೋದಿಲ್ಲ ಅಂತ ಕೂತ. ಮಗ ಕೈ ತಪ್ಪಿದ್ದಾಗಿದೆ, ಹಾದಿ ತಪ್ಪುವುದು ಬೇಡ ಅಂತ ಅಮ್ಮ ತಮ್ಮ ಜೊತೆಯಲ್ಲೇ ತಮ್ಮನನ್ನೂ ಕೆಲಸಕ್ಕೆ ಕರೆದುಕೊಂಡು ಹೋಗಲು ಶುರು ಮಾಡಿದ್ದರು. ಮನೆಯ ಎಲೆಕ್ಟ್ರಿಕಲ್ ವೈರಿಂಗ್ ಕೆಲಸ. ಒಂದೂವರೆ ವರ್ಷ ಅಪ್ಪನ ಜೊತೆಯಲ್ಲೇ ಕೆಲಸ ಮಾಡಿದ್ದ ತಮ್ಮ, ಕೆಲಸದ ಆದಿ ಅಂತ್ಯಗಳನ್ನು ಚೆನ್ನಾಗಿ ಬಲ್ಲವನ್ನಾದ್ದರಿಂದ, ಈಗ ತಾನೇ ಸ್ವಂತಕ್ಕೆ ಅದೇ ಕೆಲಸವನ್ನ ಸ್ವತಂತ್ರವಾಗಿ ಮಾಡುವಷ್ಟು ಯೋಚಿಸಿ ಮುಂದುವರೆದಿದ್ದ..!! 

ತಮ್ಮ ಗುಟಖಾ ಹಾಕುವುದು.. ಕುಡಿಯುವುದು ನಮ್ಮೆಲ್ಲರಿಗೂ (ಬಹುಷಃ ಅಪ್ಪನಿಗೂ) ಗೊತ್ತಿತ್ತಾದರೂ ಯಾರೂ ನೇರ ಕೇಳಲಿಕ್ಕೆ ಹೋಗಿರಲಿಲ್ಲ. ಮುನಿಸಿಕೊಂಡು ಮತ್ತೆ ಮನೆ ಬಿಟ್ಟು ಹೋದರೆ..?? ನಾನೊಂದೆರಡು ಬಾರಿ ಬುದ್ಧಿ ಹೇಳೋ ಪ್ರಯತ್ನ ಮಾಡಿದೆನಾದರೂ ನಾನು ಕುಡಿತಿನಿ, ಪಾನ್ ಪರಾಗ್ ಹಾಕ್ತೀನಿ ಅಂತ ಯಾರ್ ಹೇಳಿದ್ದು ನಿಂಗೆ..?? ಕರ್ಕೊಂಡ್ ಬಾ ಅವನ್ಯಾರು ಅಂತ ನಾನೂ ಕೇಳ್ತೀನಿ.. ಅವನು ಹಾಗೆ ಹೇಳಿದ್ದೆ ಆದ್ರೆ ಆಮೇಲೆ ನೀನು ಹೇಳಿದ ಹಾಗೆ ಕೇಳ್ತೀನಿ ಅಂತ ನನ್ನನ್ನೇ ಸಮಾಧಾನ ಪಡಿಸಲು ನೋಡಿದ. .!! ಅಪ್ಪನಿಗೆ ಈ ವಿಚಾರ ಗೊತ್ತಿದ್ದೋ ಗೊತ್ತಿಲ್ಲದೆಯೋ ಇದರ ಕುರಿತಾದ ಯಾವ ರಗಳೆಗಳೂ ತೆಗೆಯಲು ಹೋಗಿರಲಿಲ್ಲ. ತಮ್ಮನ ಮೇಲಿದ್ದ ಅದಷ್ಟೂ ದಿನದ ಕೋಪ.. ಬೇಸರ, ನಿರಾಸೆ, ನಿಟ್ಟುಸಿರು,, ಸಿಟ್ಟು ಸೆಡವುಗಳನ್ನೆಲ್ಲ ಅಪ್ಪ ಅವತ್ತು ಅವನನ್ನ ಹೊಡೆದು ತೀರಿಸಿಕೊಂಡರೋ ಏನೋ..?? ಅಪ್ಪ ಮತ್ತು ತಮ್ಮನ ವಾಗ್ವಾದ ನಡೆಯುತ್ತಲೇ ಇತ್ತು. ಅಕ್ಕ ಪಕ್ಕದ ಮನೆಯವರೆಲ್ಲ ಬಂದು ಮನೆಯ ಮುಂದೆ ಜಡಾಯಿಸಿದ್ದರು..!! ಪುಣ್ಯಕ್ಕೆ ದೇವರ ಉತ್ಸವದ ಮೆರವಣಿಗೆ ಎರಡು ಬೀದಿಗಳ ಆಚೆಗೆ ಇದ್ದದ್ದರಿಂದ ಊರಿನ ಅಷ್ಟು ಜನ ಮನೆ ಮುಂದೆ ಸೇರೋದು ತಪ್ಪಿತ್ತು..!! ಇಲ್ದಿದ್ರೆ ಇಡೀ ಊರಿನ ಮುಂದೆ ಮಾನ ಹೋಗ್ತಾ ಇತ್ತು. ತಮ್ಮ ಮತ್ತು ಅಪ್ಪನನ್ನ ತಹಂಬದಿಗೆ ತರುವುದರೊಳಗೆ ಸಾಕು ಸಾಕಾಗಿ ಹೋಯ್ತು..!! ಅಪ್ಪನಿಗೆ ಇವನು ಕೆಲಸ ಮಾಡೋ ವಿಚಾರವಾಗಿ ಯಾವ ತಕರಾರಿಲ್ಲ ಆದರೆ ಇವನು ಕೆಲಸ ಮಾಡುವ ಆ ಜಾಗದ ಕುರಿತಾಗಿ, ಆ ಕಾಂಟ್ರಾಕ್ಟ್ ದಾರನ, ಆ ಟೆಂಡರ್ ಕೆಲಸದ ಮಾಹಿತಿಯ ಕುರಿತಾಗಿ ಯಾವ ಮಾಹಿತಿಯೂ ಇವನಿಗೂ ಗೊತ್ತಿಲ್ಲ. ಸುಮ್ನೆ ಅದ್ಯಾರೋ ಏನೋ ಹೇಳಿದ್ದನ್ನೇ ನೆನಪಿನಲ್ಲಿಟ್ಟುಕೊಂಡು ಈಗ ಅಪ್ಪ ಕೈ ಮಾಡಿದ್ದನ್ನೇ ನೆಪವಾಗಿಟ್ಟುಕೊಂಡು ಮನೆ ಬಿಟ್ಟು ಓದಿ ಹೋಗುವ ಹೊಂಚು ಹಾಕುತ್ತಿರುವ ತಮ್ಮನ ನಿಲುವು ಅಪ್ಪನಿಗೆ ಸ್ವಲ್ಪವೂ ಹಿಡಿಸಲಿಲ್ಲ. ಎಲ್ಲೆಲ್ಲೊ ಹೋಗಿ ಏನೇನೋ ಆಗುವುದರ ಬದಲು.. ಯಾರದ್ದೋ ಮೋಸಕ್ಕೆ ಬಲಿಯಾಗಿ ನಮ್ಮದಲ್ಲದ ಊರಲ್ಲಿ ಕೂಲಿಯೂ ಇಲ್ಲ, ಕವಡೆಯೂ ಇಲ್ಲ ಅನ್ನೋ ಹಾಗೆ ಆಗೋದರ ಬದಲು.. ಮಗ ಸೋಂಬೇರಿಯಾಗಿ ಆದರೂ ಕಣ್ಮುಂದೆ ಇರುವುದೇ ಲೇಸು ಅನ್ನುವ ಲೆಕ್ಖಾಚಾರ ಅಪ್ಪನದು. ಹಾಗೋ ಹೀಗೋ ಸಂಧಾನದ.. ಸಮಾಧಾನದ ಅರ್ಧ ಗಂಟೆಯ ಮಾತುಕತೆಯ ಬಳಿಕ ತಮ್ಮನಿಂದ ಅಪ್ಪನ ಬಳಿ ಕ್ಷಮೆ ಕೇಳಿಸಿದ್ದಾಯ್ತು. ಹೊಡೆದದ್ದಾದರೂ ಯಾರು ಅಪ್ಪ.. ಅದು ತಾಳದೆ ಹೋದರೆ ಹೇಗೆ..?? ಮನೆ ಮುಂದೆ ಬಂದ ದೇವಿಯ ಪೂಜೆಗೆ ಸಕುಟುಂಬ ಸಮೇತರಾಗಿ ನಿಂತು ಪೂಜೆ ಮಾಡಿಸಿದ್ವು. ಎಲ್ಲರ ಹಾರೈಕೆಯೂ ಹರಕೆಯೂ ತಮ್ಮನ ಒಳಿತಿನ ಕುರಿತೇ ಆಗಿತ್ತು. ತಮ್ಮ ಅದೆಷ್ಟೋ ತಿಳುವಳಿಕೆ ಹೇಳಿದ ನಂತರ ಮನೆ ಬಿಟ್ಟು ಹೋಗುವ ಇರಾದೆ ಇಂದ ಹೊರ ಬಂದಿದ್ದ. ಅದೇ ಧೈರ್ಯದ ಮೇಲೆಯೇ ನಾನು ಮಾರನೆ ದಿನ ಹೊಸೂರಿಗೆ ಹೊರಟಿದ್ದೆ. 

ಇಂದು ಫೋನ್ ಮಾಡಿದ ಅಪ್ಪ ಸಂತುಗೆ ಒಂದು ಸೆಕೆಂಡ್ ಹ್ಯಾಂಡಲ್ ಬೈಕ್ ನೋಡಿದಿನಿ.. ಪಲ್ಸರ್ ಬೈಕ್ ಚೆನ್ನಾಗಿದೆ. ನಮಗೆ ಗೊತ್ತಿರೋರ ಮಗನದ್ದೇ ಬೈಕು. ಆ ಹುಡುಗ ಈಗ ಮುಂಬೈ ನಲ್ಲಿ ಇರೋದ್ರಿಂದ ಮನೇಲಿ ಸುಮ್ನೆ ಬಿದ್ದಿದೆ ಅಂತ ಅವರಪ್ಪ ಇದನ್ನ ಮಾರ್ತಾ ಇದಾರೆ. ಅದೂ ಅಲ್ದೆ ಅವರೇನೋ ಹೊಸಾ ಬೈಕ್ ತಗೋತಾರಂತೆ. ಈ ಬೈಕ್ ಆದ್ರೆ ಅವರಿಗೆ ಓಡ್ಸೋದು ಕಷ್ಟ ಅಂತೆ. ಮಾತು ಕಥೆ ಮಾಡಿ ಸ್ವಲ್ಪ ಕಮ್ಮಿ ಬೆಲೆಗೆ ಸಿಕ್ರೆ ತಗೊಂಡು ಬಿಡೋಣ ಅಲ್ವಾ..?? ಅವನಿಗೂ ಮನೆ ಹತ್ರ ಅದೂ ಇದೂ ಕೆಲಸಕ್ಕೆ ಉಪಯೋಗ ಆಗತ್ತೆ.. ನಿನ್ನ ಒಂದು ಮಾತು ಕೇಳೋಣ ಅಂತ ಫೋನ್ ಮಾಡಿದೆ. ಏನ್ ಹೇಳ್ತೀಯ ಅಂದ್ರು ಅಪ್ಪ. ಇದು.. ಈವರೆಗೂ ನಮಗೆ ಕಾಣಿಸಿರದ ಅಪ್ಪನ ಅಪರೂಪದ ಮುಖ..!! ಅಪ್ಪ ಅದ್ಯಾವಾಗ್ಲೂ ಹಾಗೆ ತಮ್ಮ ಸಿಟ್ಟು ಸೆಡವಿನ ಮುಖದ ಹಿಂದೆ ಒಂದು ಅಪಾರ ಪ್ರೇಮದ ಮುಖವನ್ನ ಹೊತ್ತಿರೋದು. ಆದ್ರೆ ಅದು ಅಷ್ಟು ಸುಲಭಕ್ಕೆ ಅವರೂ ತೋರಗೊಡೋದಿಲ್ಲ.. ನಮಗೂ ಅಷ್ಟು ಸುಲಭಕ್ಕೆ ಗೋಚರಿಸೋಲ್ಲ. ಅಪ್ಪನದ್ದು ಕೋಪ, ಪ್ರೇಮದ್ದು ಎರಡು ಮುಖವಷ್ಟೇ.. ಅವರ ವರ್ತನೆಗಳ ರೂಪ ಬೇರೆ ಬೇರೆ..!! ಅದು ಸಂಧರ್ಭ ಮತ್ತು ಪರಿಸ್ತಿತಿಗಳ ಮೇಲೆ ನಿರ್ಧಾರಿತ. ಅವರ ವರ್ತನೆಗಳು, ಕಟ್ಟುಪಾಡುಗಳು, ರೀತಿನೀತಿಗಳು, ಮಾತು, ಸಿದ್ಧಾಂತಗಳು ಯಾರಿಗಾದರೂ ಸರಿ ಹೊಂದಿಕೊಲ್ಲೋದೆ ಇಲ್ಲ. ಬೈಕ್ ತಗೊಳ್ಳುವುದರಲ್ಲಿ ನನದ್ಯಾವ ಅಭ್ಯಂತರವೂ ಇಲ್ಲ.. ನಾಳೆನೆ ಅಕೌಂಟ್ ಗೆ ದುಡ್ಡು ಕಳಿಸ್ತೀನಿ ತಗೋಳಿ ಅಂದೆ. ಸರಿ ಅಂದು ಸುಮ್ಮನಾದ್ರು. ಮೊದಲಿಂದಲೂ ಹಾಗೆ ನಮ್ಮಗಳ ನಡುವೆ ಫೋನ್ ಅಥವಾ ನೇರ ಮಾತು ಕಥೆ ಅಂದರೆ ಅಷ್ಟೇ.. ಆ ಸಂಧರ್ಭಕ್ಕೆಷ್ಟು ಬೇಕೋ ಅಷ್ಟೇ. ಮನೆಯೊಳಗಾದರೂ ಸರಿ ಅಗತ್ಯಕ್ಕಿಂತ ಯಾರೂ ಹೆಚ್ಚು ಮಾತಾಡುವುದಿಲ್ಲ.ನಕ್ಕು ಮಾತಾಡುವ ಪರಿಪಾಟ ಕಲಿತದ್ದೇ ಇಲ್ಲ. ಬಾಲ್ಯದಿಂದಲೂ ಅಪ್ಪನ ಗಂಭೀರ ಸ್ವಭಾವವೇ ನಮಗೆ ಆಪ್ತ ಪರಿಚಿತ. ಅಪ್ಪ ನಗು ನಗುತ್ತ ಮಾತಾಡುವುದು ನೋಡುವುದಾದರೆ ಅದು ಅವರ ಗೆಳೆಯರ ಬಳಗದ ಮಾತು ಕತೆಯಲ್ಲಷ್ಟೇ. ಅವರು ನಕ್ಕಾಗ ವಿಭಿನ್ನವಾಗಿ, ಚೆನ್ನಾಗಿ ಕಾಣಿಸುತ್ತಾರೆನ್ನುವುದು ನಿಜ. 

ಕೆಲಸ ಸಿಕ್ಕು ತಮಿಳು ನಾಡು ಸೇರಿರುವ ನಾನು ಪರಿಸ್ತಿತಿಯ ಪ್ರಭಾವ ಅದೆಷ್ಟೋ ಸಾರಿ ಅಂದುಕೊಂಡ ಹಾಗೆ ಒಮ್ಮೊಮ್ಮೆ ಊರಿಗೆ ಹೋಗಲಾಗುವುದಿಲ್ಲ. ಅಂತ ಸಂಧಿಗ್ದತೆಯಲ್ಲೇ ಒಂದೆರಡು ಬಾರಿ ಯುಗಾದಿ, ಗಣೇಶ ಹಬ್ಬ, ಶಿವರಾತ್ರಿಗೆ ಊರಿಗೆ ಹೋಗದೆ ಇರುವಾಗಲೆಲ್ಲ ಅಥವಾ ಅಕ್ಕ ಪಕ್ಕದೂರಿನ ಜಾತ್ರೆಗಳಾದಾಗಲೆಲ್ಲ ಅಪ್ಪ ಫೋನ್ ಮಾಡಿ ಇಲ್ಲಿ ಹೀಗಾಯ್ತು.. ಅಲ್ಲಿ ನಿನ್ ಜೊತೆ ಯಾರೂ ಇಲ್ಲ.. ನಿನ್ ಪಾಲಿಗೆ ಹಬ್ಬಗಳು ಅದು ಹ್ಯಾಗೋ ಏನೋ..?? ಸಾಧ್ಯ ಆದ್ರೆ ಸಂಜೆ ಸ್ನಾನ ಮಾಡ್ಕೊಂಡು ದೇವಸ್ಥಾನಕ್ಕೆ ಹೋಗಿ ಬಾ ಅನ್ನುತ್ತಾರೆ. ರಜೆ ಸಿಕ್ಕದೇ ಹೋದರು ಹಬ್ಬದ ಅಡುಗೆ ಇಂದ ನಾನೇನು ವಂಚಿತನಾಗೋದಿಲ್ಲ. ಬೆಂಗಳೂರಿನ ಕೆಲ ಗೆಳೆಯರ ಮನೆಯೋ ಅಥವಾ ಕಾಲೋನಿಯಲ್ಲಿನ ಏಕೈಕ ಕನ್ನಡ ಕುಟುಂಬ ಗೆಳೆಯ ಪ್ರಶಾಂತನ ಮನೆಯಲ್ಲೋ ಊಟ ಆಗಿ ಹೋಗುತ್ತದೆ. ಆದರೆ ಅಪ್ಪ ಹೇಳಿದ ಹಾಗೆ ದೇವಸ್ಥಾನಕ್ಕೆ ಹೋಗಿ ಬಂದರೇನೆ ಹಬ್ಬದ ದಿನ ಒಂದು ವಿಶೇಷ ಸಮಾಧಾನದ ತೃಪ್ತಿ ಸಿಗೋದು. ಇವತ್ತು ಅಪ್ಪಂದಿರ ದಿನ ಅಪ್ಪನಿಗೆ ವಿಶ್ ಮಾಡುವ ಮನಸ್ಸಿತ್ತು.. ಆದರೆ ನಾವುಗಳ್ಯಾರು ಅಂಥಹ ಆಚರಣೆಗಳಿಗೆ ನಮ್ಮನ್ನ ನಾವು ತೊಡಗಿಸಿ ಕೊಂಡ ಉದಾಹರಣೆಗಳಿಲ್ಲ. ಇನ್ನು ನಾನು ಈ ಕಡೆ ಬಂದಾದ ಮೇಲೆ ಅದೂ ಇದೂ.. ಆ ದಿನ ಈ ದಿನ.. ಹುಟ್ಟಿದ ದಿನ ಅಂತೆಲ್ಲ ದಿನಗಳಿಗೆ ಸ್ಪಂದಿಸುವ ಪ್ರವೃತ್ತಿ ಬೆಳೆಸಿಕೊಂಡೆನಾದರೂ.. ನಮ್ಮ ಮನೆಯವರಿಗೆಲ್ಲ ಅದು ಈಗಲೂ ಅಪರಿಚಿತವೇ. ಅದನ್ನ ಪರಿಚಿತಗೊಳಿಸುವ ಆಸೆಯೇ.. ಆದರೆ ಅದಕ್ಕೆ ಅವರು ಸ್ಪಂದಿಸುವುದಿಲ್ಲವೆಂಬ ಬೇಸರ.. ಒಪ್ಪಿಕೊಳ್ಳುವುದಿಲ್ಲ ಎಂಬ ನಿರಾಸೆ. ಬದಲಾಗಿರೋದು ನಾನೇ ಹೊರತು ಅವರಲ್ಲ. ಫೋನ್ ಮಾಡಿದ್ದು ಸಂಜೆ ಆರು ಗಂಟೆ ಸುಮಾರಿಗಾದ್ದರಿಂದ ಅಪ್ಪ ಇನ್ನು ಮನೆಗೆ ಹೋಗಿರಲಾರರು ಗೊತ್ತು. ಎರೆಹಳ್ಳಿಯಲ್ಲಿಯೇ ಅಪ್ಪನ ದಿನದ ಬಹುಪಾಲು ಸಮಯ ಕಳಿಯೋದು. ಅಲ್ಲಿಂದ ಎರಡು ಕಿಮೀ ದೂರಕ್ಕೆ ನಮ್ಮ ತಾಲೂಕಿಗೆ ಪ್ರಸಿದ್ಧವಾದ ಸುಣ್ಣದಹಳ್ಳಿ  ಆಂಜನೇಯ ಸ್ವಾಮೀ ದೇವಸ್ಥಾನವಿದೆ. ಅಪ್ಪನಿಗೆ ಆ ದೇವಸ್ಥಾನಕ್ಕೆ ಹೋಗಿ ಬರಲು ಹೇಳಿದೆ. ಅಪ್ಪ ಯಾಕೆಂದು ಕೇಳಿದರು. ಇಂದು ಅಪ್ಪಂದಿರ ದಿನ ಅಂತ ವಿವರಿಸುವ ಧೈರ್ಯ ನನಗೆ ಬರಲಿಲ್ಲ.. ಯಾಕೋ ಮನಸ್ಸಿಗೆ ತಳಮಳ ಶುರುವಾಗಿತ್ತು ಅದಕ್ಕೆ ಒಮ್ಮೆ ಹೋಗಿ ಬನ್ನಿ ಅಂತ ಸುಳ್ಳು ಕಾರಣ ಕೊಟ್ಟೆ. ಸರಿ ಅಂದು ಫೋನ್ ಇಟ್ಟರು. 

ನಿಜ ಹೇಳಬೇಕೆಂದರೆ ನಾವು ಅಪ್ಪನಿಂದ ಕಂಡ ಸಂತೋಷ ಅಷ್ಟಕ್ಕಷ್ಟೇ. ಒಂದು ಬೇಲಿ ಬಿಗಿದ ವಾತಾವರಣದಲ್ಲೇ ಬೆಳೆದ ನಾವು ಬೇಲಿ ದಾಟುವ ಅವಕಾಶವನ್ನೇ ಅಪ್ಪ ನಮಗೆ ಮಾಡಿ ಕೊಡಲಿಲ್ಲ. ಬೇಲಿ ಎಂದರೆ ನಮ್ಮ ಇಚ್ಚೆಗನುಸಾರವೆಂದಲ್ಲ ಸಾಮಾನ್ಯ ಮಕ್ಕಳ ದೈನಂದಿಕ ಜೀವನದ ಹಾಗಿನದ್ದು. ಮನೆಯಲ್ಲಿ ತಾನು ನಡೆಸಿದ್ದೇ ಆಗಬೇಕು ಅನ್ನುವ ಹಠ. ಅವರ ನಿರ್ಧಾರಗಳನ್ನು ಯಾರೂ ಪ್ರಶ್ನಿಸುವಂತಿಲ್ಲ. ಎದುರಾಡುವಂತಿಲ್ಲ. ಸಾಮಾನ್ಯ ಜನರೊಡನೆ ಅಷ್ಟಾಗಿ ಬೇರೆಯುವಂತಿಲ್ಲ. ನಾವುಗಳು ಮಕ್ಕಳಾದರೆ ಊರ ಮಕ್ಕಳ ಜೊತೆ ಹೆಚ್ಚಾಗಿ ಬೇರೆಯುವಂತಿಲ್ಲ. ನಾನಾಗ ಹತ್ತನೇ ತರಗತಿ.. ಒಮ್ಮೆ ಸರೋಜಮ್ಮನ ಹೋಟೆಲಿನ ಕಟ್ಟೆಯ ಮೇಲೆ ನಾಲ್ಕಾರು ಹಿರಿಯರು ಚೌಕಾಬಾರ ಆಡುತ್ತಿದ್ದನ್ನ ನಿಂತು ನೋಡುತ್ತಿದ್ದ ನನ್ನನ್ನ, ಹಸಿ ಬಾಳೆ ದಿಂಡಿನಿಂದ ಊರೆಲ್ಲ ಓಡಾಡಿಸಿ ಹೊಡೆದಿದ್ದರು..!! ಮೈಯೆಲ್ಲಾ ಕೆಂಪು ಬಾರೆ..!! ಈಗಲೇ ಜೂಜು ಬೇಕಾ ನಿಂಗೆ..?? ಜೂಜು ಕೋರರ ಸಹವಾಸ ಮಾಡ್ತೀಯ ಅಂತ ಅಣಕಿಸಿ ಅಣಕಿಸಿ ಹೊಡೆದಿದ್ದರು..!! ತೀರ ಇತ್ತೀಚೆಗೂ ಕೂಡಾ ಒಂದು ವರ್ಷದ ಕೆಳಗೆ ಅವರ ಅಷ್ಟೂ ಧೋರಣೆಗಳಿಗೆ ಬೇಸತ್ತು ಅವರ ಅದ್ಯಾವುದೋ ಯೋಜನೆಯೊಂದಕ್ಕೆ ನಕಾರ ಸೂಚಿಸಿ ಅವರಿಗೆ ಎದುರಾಡಿದ್ದ ನನಗೂ ಮತ್ತು ಅಮ್ಮನಿಗೂ ಇಬ್ಬರಿಗೂ ನಡು ರಾತ್ರಿಯಲ್ಲಿ ಮನೆ ಬಿಟ್ಟು ಹೋಗುವಂತೆ ರಾದ್ಧಾಂತ ರಂಪಾಟಗಳನ್ನ ಮಾಡಿದ್ದರು. ಅದನ್ನ ಬಗೆ ಹರಿಸಿದ್ದು ಮತ್ತೊಂದು ಗೋಳಿನ ಕಥೆ. ಇದ್ದ ಒಬ್ಬಳೇ ಹೆಣ್ಣು ಮಗಳು ಅಕ್ಕ ಎಂದರೆ ಮತ್ತು ಅಕ್ಕನ ಎರಡು ಮುದ್ದು ಮುದ್ದು ಪುಟಾಣಿ ಮಕ್ಕಳೆಂದರೆ ಬಲು ಪ್ರೀತಿ. ಅವರೊಂದಿಗಿರುವಾಗ ಮಾತ್ರ ಅವರ ಮಗು ಮೊಗವ.. ನಗು ಮೊಗವ ಕಾಣಲು ಸಾಧ್ಯ. ಇಷ್ಟು ವರ್ಷ ಅಪ್ಪನೊಂದಿಗೆ ಹೆಣಗುತ್ತಿರುವ ಅಮ್ಮನಿಗೆ ಅಪ್ಪ ಅದೊಂದೇ ಸಮಯದಲ್ಲಿ ಇಷ್ಟವಾಗೋದು ಮಕ್ಕಳ ಜೊತೆ ಮಗುವಾದಾಗ..!!

ಅವತ್ತೊಂದು ಮಾತುಕತೆಯಲ್ಲಿ ಅಪ್ಪನಿಗೆ ಎದುರಾಡಿದ್ದ ನಾನು ನನ್ನ ಜೀವ ಮಾನದಲ್ಲಿ ಬೇರೆ ಯಾವತ್ತಿಗೂ ಅವರ ಯಾವ ವಿಚಾರಗಳಿಗೂ ಎದುರಾಡಿದವನಲ್ಲ. ಇನ್ನು ಅಮ್ಮನ ಬಳಿ ರೇಗಾಡುತ್ತೇನೆ.. ಕೂಗಾಡುತ್ತೇನೆ.. ನಕ್ಕು ಮಾತಾಡುತ್ತೇನೆ ಬಿಟ್ರೆ ಅಪ್ಪನ ಬಳಿಯಲ್ಲ. ಅಪ್ಪನಿಗೆ ನನ್ನ ಮೇಲೆ ವಿಶೇಷ ಅಭಿಮಾನ ಗೌರವ. ಅವರ ಪ್ರಕಾರ ನಾನು ಅವರಪ್ಪನ ಅಂದರೆ ನಮ್ಮ ಅಜ್ಜನ ಅವತಾರವಂತೆ. ನಮ್ಮಜ್ಜನವರು ಶಾಂತ ಮೂರ್ತಿಯಂತೆ.. ಆ ಕಾಲಕ್ಕೆ ಬಹಳ ಜನಕ್ಕೆ ಉಪಕಾರ ಮಾಡಿದವರಂತೆ.. ಬಹಳ ಜನರ ಬಾಳಿಗೆ ಬೆಳಕು ಕೊಟ್ಟವರಂತೆ. ನನ್ನ ಮೇಲೆ ಅವರಿಗೊಂದು ಅಭಿಮಾನವೂ ಅದೇ ಕಾರಣಕ್ಕೆ ಇರಬೇಕೇನೋ.. ನಾನು ನೋಡಲು ನಮ್ಮ ತಾತನ ಹಾಗೆ ಇರುವೆನಂತೆ..! ಅವರಂತೆ ಶಾಂತ ಮೂರ್ತಿಯಂತೆ. ಇನ್ನೊಬ್ಬರ ನೋವಿಗೆ ಮಿಡಿಯುವ ಮನಸ್ಸಂತೆ.. ಮೇಲಾಗಿ ನನ್ನ ಇತ್ತೀಚಿನ ಕೆಲ ಸಣ್ಣ ಪುಟ್ಟ ಬೆಳವಣಿಗೆ.. ಸಾಧನೆಗಳನೆಲ್ಲ ಕಂಡ ಮೇಲೆ ಅವರಿಗೆ ನನ್ನ ಮೇಲೊಂದು ವಿಶೇಷ ಗೌರವ. ನನ್ನನ್ನ ಯಾವತ್ತಿಗೂ ಲೋ ಅಪ್ಪ.. ಲೋ ಪುಟ್ಟ ಅಂದದ್ದೇ ಹೆಚ್ಚು. ಹೆಸರಿಡಿದ್ದು ಕರೆದದ್ದು ಕಮ್ಮಿಯೇ. ನನ್ನ ಆಸಕ್ತಿಗಳ ಕಡೆಗೆ ಅವರ ಪ್ರೋತ್ಸಾಹಗಳೇನೂ ಇಲ್ಲದೆ ಹೋದರು ನನ್ನ ಸಣ್ಣ ಪುಟ್ಟ ಸಾಧನೆಗಳ ಕಂಡು ಸಮಾಧಾನ ಪಡುವ ಮನಸು ಅವರಿಗಿದೆ ಅದು ಸಾಕು. 

ನಮ್ಮ ಬಳಿ ಇಷ್ಟು ಒರಟಾಗಿ ಕಾಣುವ ಅಪ್ಪ ಹೊರಗಿನ ಜಗತ್ತಿಗೆ ಬಹು ಜನಕ್ಕೆ ಬಹು ಪರಿಚಿತವಾಗಿರುವ ವ್ಯಕ್ತಿ. ಸುಳ್ಳು ಹೇಳಬಾರದು.. ಅವರ ದೆಸೆಯಿಂದ ಪರಿಚಯವಾದ ಗಣ್ಯವ್ಯಕ್ತಿಗಳು ಒಬ್ಬಿಬ್ಬರಲ್ಲ.. ಅಂತಿಂಥವರಲ್ಲ. ಐ ಟಿ ಐ ಮುಗಿಸಿ ಕೆಲಸ ಸಿಗದೇ ಕಂಗಾಲಾಗಿ ಕುಳಿತಿದ್ದ ನನಗೆ, ಲೋ ಪುಟ್ಟ ಹೆದರಬೇಡ ನಿನಗೆ ನಾನು ಗೌರ್ನಮೆಂಟ್ ಕೆಲಸ ಕೊಡಿಸ್ತೀನಿ ಅಂತ ಆಶ್ವಾಸನೆ ಇತ್ತವರು ಅವರು. ಹಾಗೆ ಮಾಡ ಬಲ್ಲವರು ಕೂಡಾ. ಅವರಿಗೆ ಆ ಚೈತನ್ಯ ಇದೆ ಕೂಡಾ.. ಅವರ ಜನ ಬಳಕೆ & ಸಂಪರ್ಕ ಅಂಥಾದ್ದು. ನನ್ನ ಹುಚ್ಚು ಆಸೆ, ಆದರ್ಶ, ಸಿದ್ಧಾಂತಗಳಿಗೆ ಕಟ್ಟುಬಿದ್ದು ನನ್ನ ಈಗಿನ ಒಂದೊಳ್ಳೆಯ ಪರಿಸ್ತಿತಿಯನ್ನ ನನ್ನ ಕೈಯಾರೆ ನಾನೇ ಹಾಳು ಮಾಡಿ ಕೊಂಡಿದ್ದೆ ಆದರೆ.. ನನ್ನ ಬದುಕನ್ನ ಮತ್ತೆ ನಾನು ನನ್ನದೇ ಹಳಿಗೆ ಕೊಂಡು ಬರಲು ಆಗುತ್ತೋ ಇಲ್ಲವೋ.. ನನ್ನ ಗೆಳೆಯರ ಶ್ರಮದ ಹೊರತಾಗಿ ಕೂಡ ಅದು ಸಾಧ್ಯವೋ ಇಲ್ಲವೋ.. ಆದರೆ ನನ್ನಪ್ಪ ನನ್ನ ಬದುಕು ಕಟ್ಟಬಲ್ಲರು. ಅವರಿಗಾ ಚೈತನ್ಯವಿದೆ. ಶಕ್ತಿಯಿದೆ. ಒಂದು ಕಾಲೆಜೋ ಅಥವಾ ಐ ಟಿ ಐ ನೋ ಮುಗಿಸಿದ್ದಿದ್ದರೆ.. ನನ್ನ ತಮ್ಮನ ಜೀವನವನ್ನ ಕೂಡಾ ಅವರು ರೂಪಿಸಿ ಬಿಡುತ್ತಿದ್ದರು. ಬದುಕಿನ ಭವಿಷ್ಯದ ಕುರಿತಾದ ಯಾವುದೇ ಚಿಂತನೆಗಳಿಲ್ಲದ ನನ್ನ ತಮ್ಮನದ್ದೇ ಅವರ ಬಹು ದೊಡ್ಡ ಚಿಂತೆ ಈಗ. ಆ ಚಿಂತೆಯ ಪ್ರಭಾವವೇ ಈಚೆಗೆ ಕುಡಿಯಲು ಕಲಿತಿದ್ದಾರೆ. ಯೋಚಿಸಿ ಕೊರಗಳು ಶುರುವಿಟ್ಟಿದ್ದಾರೆ. ಅದರ ಪ್ರಭಾವ ಈಗಲೂ ಸಿಡುಕಾಡುತ್ತಾರೆ. ಕಿಡಿ ಕಾರುತ್ತಾರೆ.

ನನ್ನಪ್ಪ ಶ್ರಮ ಜೀವಿ.. ಬದುಕಲ್ಲಿ ಬಹಳ ನೋವುಂಡ ಜೀವಿ.. ಚಿಕ್ಕ ವಯಸ್ಸಲ್ಲೇ ತಂದೆ ತಾಯಿಯರನ್ನು ಕಳೆದು ಕೊಂಡು ತಮ್ಮ ತಂಗಿಯೊಡನೆ ಪರ ಊರಿಗೆ ಬಂದು ಬದುಕಿ ಬಾಳಿದ್ದು ಸಾಧನೆಯೇ ಸರಿ. ಬದುಕೋಕೆ ಬೇಕಾದ ಬಹಳ ಕೆಲಸ ಬಲ್ಲ ಜೀವಿ. ಆದರೂ ನಮ್ಮಪ್ಪನೆಂದರೆ ಅದೊಂದು ನಿರಾಶ ಭಾವವೇ ಮನದೊಳಗೆ ಮನೆ ಮಾಡುತ್ತದೆ. ಅವರ ಅದಾವ ಉಚ್ಚ ಗುಣಗಳೂ ಕೂಡ ನಮ್ಮಗಳ ಸಂಭಂಧಗಳ ನಡುವೆ ಗೌಣ. ನನಗೆ ಅಪ್ಪನ ಮೇಲೆ ವಿಶ್ವಾಸವಿದೆ, ಪ್ರೀತಿ ಇದೆ, ಅಭಿಮಾನವಿದೆ. ಆದರೂ ಅದಕ್ಕಿಂತಲೂ ಹೆಚ್ಚಿನದಾದ ನಿರಾಸೆಯಿದೆ.. ಕೋಪವಿದೆ.. ಮುನಿಸಿದೆ.. ತಾತ್ಸಾರ ಭಾವವಿದೆ..!! ಅಷ್ಟಾದರೂ ಅಪ್ಪ ನಿಮಗೆ ಅಪ್ಪಂದಿರ ದಿನದ ಶುಭಾಶಯಗಳು. "ಒಬ್ಬ ಅಪ್ಪನೆಂದರೆ ಕೇವಲ ಮಕ್ಕಳೆಡೆಗಿನ ತನ್ನ ಕರ್ತವ್ಯವನ್ನ ಮಾಡಿ ಮುಗಿಸುವವನು ಮಾತ್ರವಲ್ಲ. ತನ್ನ ಮಗುವಿನ ಕಣ್ಣಲ್ಲಿ ಅವನು ಕಾಣಲಾರದ ಒಂದು ಸುಂದರ ಜಗತ್ತಿನ ಚಿತ್ರಣವನ್ನ ಕಾಣಿಸಿ ಕೊಡುವವನೂ ಕೂಡ" ನಾವು ನಿಮಗೆ ನಮ್ಮ ಕಣ್ಣೊಳಗಿನ ಜಗತ್ತು ಬದಲಾಯಿಸುವಂತೆ ಕೇಳಿ ಕೊಳ್ಳುವುದಿಲ್ಲ. ನೀವು ಸೂಪರ್ ಹೀರೋ ಆಗೋದು ಬೇಡ..!! ಆದರೆ ಜಗತ್ತಿಗನುಗುಣವಾಗಿ ಒಬ್ಬ ಸಾಮಾನ್ಯ ಮನುಷ್ಯನಂತೆ ನಡೆದುಕೊಳ್ಳಬೇಕೆಂಬ ವಿನಂತಿ ಅಷ್ಟೇ. 

ಸಂತೆಗೆ ಹೋದಾಗಲೆಲ್ಲ ಮಂಡಕ್ಕಿ, ಬತ್ತಾಸು, ಮೈಸೂರು ಪಾಕು, ಜಿಲೇಬಿ ತಂದು ಕೊಟ್ಟು ನಮಗೆ ತಿನ್ನಿಸುತ್ತಿದ್ದ..  ಅದಾಗಲೇ ಊಟ ವಾಗಿ ಮಲಗಿದ್ದರೂ ಮತ್ತೊಮ್ಮೆ ಎಬ್ಬಿಸಿ ತನ್ನ ಜೊತೆ ಕೂರಿಸಿಕೊಂಡು ಮಂಪರುಗಣ್ಣಲಿದ್ದ ನಮಗೆ ತನ್ನ ಕೈ ತುತ್ತಿನಲ್ಲೇ ನಾಲ್ಕು ತುತ್ತು ತಿನ್ನಿಸುತ್ತಿದ್ದ.. ಸ್ಕೂಲ್ ನಲ್ಲಿ ಟೀಚರ್ ಬರೆ ಬರುವ ಹಾಗೆ ಹೊಡೆದರೂ ಅಂತ ಟೀಚರ್ ಮೇಲೆ ಕಂಪ್ಲೇಟ್ ಕೊಡಲು ಹೋಗಿದ್ದ ಪ್ರೀತಿಯ ಅಪ್ಪನ್ನನ್ನು ಕಳೆದುಕೊಂಡು ಅದೆಷ್ಟೋ ಕಾಲವೇ ಆಗಿ ಹೋಯ್ತು. ಈಗ ನಮ್ಮ ಜೊತೆ ಇರೋದು ತನ್ನದೇ ಸಿದ್ಧಾಂತ, ಹಠ, ಮೌಲ್ಯ, ಗುರಿ, ಹಣದಾಸೆಯ ಧೋರಣೆಯುಳ್ಳ ಅಪ್ಪನ ಆಕೃತಿ ಅಷ್ಟೇ. ಅದ್ಯಾಕೋ ಆ ಪಾನಿಪುರಿ ತಿನ್ನಿಸುತ್ತಿದ್ದ ಆ ಅಪ್ಪ ಬರಿ ಕಣ್ಣುಗಳನ್ನಷ್ಟೇ ಅಲ್ಲ.. ಮನಸ್ಸನ್ನೂ, ಹೃದಯವನ್ನೂ ತುಂಬಿಕೊಂಡ. ನನ್ನಪ್ಪನ ಬಗ್ಗೆ ಹೇಳಲು ಇನ್ನು ಬಹಳಷ್ಟಿದೆ. ಸಮಯ ಕೂಡಿ ಬಂದಾಗ, ಹೇಳಿಕೊಳ್ಳುವ ಮನಸ್ಸಾದಾಗ ಖಂಡಿತ ಹೇಳಿ ಕೊಳ್ಳುವೆ. ನನ್ನ ನೋವನಾಲಿಸುವ ತಾಳ್ಮೆ ನಿಮಗಿದೆಯಲ್ಲವೇ..?? ಪಾನಿಪುರಿಯವ ಚೇಂಜ್ ಕೊಟ್ಟ.. ಆ ಎರಡು ಮಕ್ಕಳು ಪಾನಿ ಪುರಿ ತಿಂದ ಹಣವನ್ನೂ ನಾನೇ ಕೊಟ್ಟು.. ಆ ಅಪ್ಪನ ಬಳಿ ಹಣ ತೆಗೆದು ಕೊಳ್ಳ ಬಾರದಂತೆ ಪಾನಿ ಪುರಿ ಅಂಗಡಿಯವನಿಗೆ ಹೇಳಿ, ಆ ಮಕ್ಕಳ ಮುಗ್ಧ ಪ್ರಶ್ನೆ ಕೇಳುವ ಪರಿಯನ್ನು ಕಂಡು ಖುಷಿಗೊಂಡು ಅಲ್ಲಿಂದ ಹೊರಡುತ್ತೇನೆ.

Monday 10 June 2013

ಈ ಸಾವು ನ್ಯಾಯವೇ..??

ಈ ರಸ್ತೆ..!!

ಹೊಸದಾಗಿ ನವೀಕರಣಗೊಳ್ಳುತ್ತಾ.. ಮತ್ತಷ್ಟು ಅಗಲಗೊಳ್ಳುತ್ತಾ.. ತನ್ನೆದೆಯ ಮೇಲೆ ಈವರೆಗೂ  ಬಿದ್ದ ಅದೆಷ್ಟು ರಕ್ತದ ಕಲೆಗಳನ್ನ ಮುಚ್ಚಿ ಹಾಕುತ್ತಾ.. ಕಡು ಕಪ್ಪಿನೊಂದಿಗೆ ಶೋಭಿಸುತ್ತಾ ದಿನ ದಿನಕ್ಕೂ ಹೊಸ ರೂಪ ಪಡೆದು ಕೊಳ್ಳುತ್ತಿದೆ. ಎರಡು ಪಥವಿದ್ದ ರಸ್ತೆ ನಾಲ್ಕು ವರ್ಷಗಳ ಹಿಂದೆ ನಾನು ತಮಿಳುನಾಡು ಸೇರುವ ಹೊತ್ತಿಗೆ ನಾಲ್ಕು ಪಥವಾಗಿದ್ದು.. ನಾಲ್ಕು ಪಥವೂ ಸಾಲದೇ ಈಗ ಆರು ಪಥವಾಗಿ ಬದಲಾಗುತ್ತಾ.. ಅದೆಷ್ಟು ರೈತರ ಜಾಗವನ್ನು ನುಂಗಿ.. ಅದೆಷ್ಟು ಬಡ ವ್ಯಾಪಾರಿಗಳ ಮಳಿಗೆಗಳ ಒಡೆದು.. ಅದೆಷ್ಟು ಮರಗಳ ಮಾರಣ ಹೋಮ ನಡೆಸಿ.. ಅದೆಷ್ಟು ಗುಡ್ಡ ಗಾಡುಗಳ ಎದೆ ಸೀಳಿ ಅಭಿವೃದ್ದಿಯ ನೆಪದಲ್ಲಿ ಮರಣ ದಾರಿಯೇ ಆಗಿಹುದೇನೋ ಅನ್ನಿಸುತ್ತದೆ.

ರಸ್ತೆ ಅಗಲವಾದಷ್ಟೂ ಅದರಗಲ ಮೀರಿ ಚಲಿಸುವಂತೆ ವಾಹನಗಳ ಸಂಖ್ಯೆ ಮೀರಿ ಬೆಳೆಯುತ್ತಿರುವುದು ಕೂಡ ಈಗಿನ ವಿಷಮ ಪರಿಸ್ಥಿತಿಗಳಲ್ಲೊಂದು. NH -7  AH - 45 ಎಂದೆಲ್ಲ ಕರೆಸಿಕೊಳ್ಳುವ ಈ ರಾಷ್ಟ್ರೀಯ ಹೆದ್ದಾರಿಯ ಇತಿಹಾಸಕ್ಕೆ.. ದಿನಕ್ಕೊಂದು ಅಪಘಾತ, ಆಘಾತ ಮತ್ತು ಉರುಳಿ ಬಿದ್ದು ರಸ್ತೆಗೆ ಅಂಗಾತ ಮಲಗಿಕೊಳ್ಳುವ ಹೆಣಗಳ ಸಂಖ್ಯೆ ದಿನದಿಂದ ದಿನಕ್ಕೂ ಜಾಸ್ತಿ ಯಾಗುತ್ತಲೇ ಹೋಗುತ್ತಿದೆ. ಅದರಲ್ಲೂ ಹೊಸೂರು ಮತ್ತು ಕೃಷ್ಣಗಿರಿ ನಡುವಿನ 50 ಕಿಮೀ ನಿಜಕ್ಕೂ ಸಾವಿನ ರಹದಾರಿ ಒಂದು ದಿನಕ್ಕೆ ಒಂದಾದರೂ ಸಾವಿನ, ಅಪಘಾತದ, ನೋವಿನ ಸುದ್ದಿಯನ್ನ ಈ ರಸ್ತೆ ಕೊಡದೆ ಇದ್ದದ್ದೇ ಆದರೆ, ಈ ರಸ್ತೆಯ ಎದೆಯ ಮೇಲೆ ಅಂದು ಯಾವ ವಾಹನವೂ ಚಲಿಸೇ ಇಲ್ಲವೇನೋ ಎಂದೇ ಅರ್ಥ. ಅದಕ್ಕೆ ಮೊನ್ನೆ ದಿನ ಕೂಡಾ ಹೊರತಾಗಿಲ್ಲ. 

ಕೆಲಸದ ನಿಮಿತ್ತ ಹೊಸೂರು ಪೇಟೆಯ ಕಡೆ ಹೋಗಿದ್ದೆ.. ದಿನವೂ ಹೋಗುವೆ.. ಪ್ರತಿ ದಿನವೂ ಒಂದಿಲ್ಲೊಂದು ಅಪಘಾತದ ದೃಶ್ಯಗಳಿಗೆ ನನ್ನ ಕಣ್ಣು ತೆರೆದುಕೊಳ್ಳುವ ಪರಿ ನನ್ನ ದುರಾದೃಷ್ಟವೇ ಸರಿ. ಹೊಸದಾಗಿ ನಮ್ಮ ಆಫೀಸಿ ಟ್ರಾನ್ಸ್ಫರ್ ಆಗಿ ಬಂದು ಸೇರಿಕೊಂಡ ಸಂತೋಷ್ ಅವರ ತಂದೆ ತಾಯಿಯವರನ್ನ, ಹೊಸೂರು ಬಸ್ ಸ್ಟಾಂಡ್ ನಲ್ಲಿ ಕಾಟ್ಪಾಡಿ ಯಲ್ಲಿ ಹೈದರಾಬಾದ್ ರೈಲು ಹಿಡಿಯುವ ಸಲುವಾಗಿ ಬಸ್ಸು ಹತ್ತಿಸಿ.. ನ್ಯಾಷನಲ್ ಇನ್ಸೂರೆನ್ಸ್ ನಲ್ಲಿ ಕಂಪೆನಿಯ ಕೆಲಸವನ್ನ ಮುಗಿಸಿಕೊಂಡು ಅಲ್ಲೇ ಹತ್ತಿರವಿದ್ದ ಆರ್ಯಭವನ್ ಸ್ವೀಟ್ಸ್ ನಲ್ಲಿ ಒಂದೊಂದು ಚಂಪಾಕಲಿ ಚಪ್ಪರಿಸುತ್ತಾ, ನಾನು ಮತ್ತು ಡ್ರೈವರ್ ಬಾಲಕೃಷ್ಣ ತಮಾಷೆಯ ಮಾತುಗಳೊಂದಿಗೆ ಕಾರನೇರಿ ಹೊಸೂರಿನಿಂದ ಇಪ್ಪತೊಂದು ಕಿಲೋ ಮೀಟರ್ ದೂರದಲ್ಲಿನ ನಮ್ಮ ಆಫೀಸಿನ ಕಡೆಗೆ ಸಾಗುತ್ತಿದ್ದೆವು. ಹೊಸೂರು ನಗರ ವಲಯವನ್ನ ಇನ್ನು ದಾಟೆ ಇಲ್ಲ. ಚಂದ್ರ ಚೂಡೆಶ್ವರ ದೇವಸ್ಥಾನಕ್ಕೊಂದು ಬಲ ತಿರುವಿದೆ ಆ ರಾಷ್ಟ್ರೀಯ ಹೆದ್ದಾರಿಯೊಳಗೆ. ಆ ತಿರುವಿನಲ್ಲಿ ಬಲಕ್ಕೆ ತಿರುಗಿಸುತ್ತಿದ್ದ ಪ್ಯಾಕೇಜ್ ಡ್ರಿಂಕಿಂಗ್ ವಾಟರ್ ನ ಇಪ್ಪತೈದು ಲೀಟರುಗಳ ತುಂಬಿದ ಬಾಟಲಿಗಳನ್ನ ಹೊತ್ತು ಸಾಗುತ್ತಿದ್ದ "ಟಾಟ ಏಸ್" ಮಿನಿ ಸಾಮಾಗ್ರಿ ಸರಬರಾಜು ವಾಹನಕ್ಕೆ ಹೋಗಿ ಅಪ್ಪಳಿಸಿದ್ದು ಒಂದು ಬೈಕು..!!

ಸತ್ಯವಾಗಲೂ ನಮಗೂ ಆ ಬೈಕಿಗೂ ಹೆಚ್ಚೆಂದರೆ ಹತ್ತು ಮೀಟರುಗಳಷ್ಟು ದೂರವಿದ್ದಿರಬಹುದೇನೋ. ಆಗಷ್ಟೇ ಕೊಂಡ ಹೊಸ ಅಪಾಚೆ ಗಾಡಿ. ನಂಬರ್ ಕೂಡ ಟೆಂಪರರಿ ರಿಜಿಸ್ಟರ್ಡ್ ನಂಬರ್.. ಬೆಂಗಳೂರಿನದ್ದು. ಹುಡುಗ ನನ್ನದೇ ವಯೋಮಾನದ.. ನನ್ನದೇ ದೇಹ ಧೃಡತೆಯ.. ಸ್ವಲ್ಪ ಕಪ್ಪಗಿನ ಬಣ್ಣದ ಹೋಲಿಕೆಯ ವ್ಯಕ್ತಿ. ಹೋಗಿ ಹೊಡೆದದ್ದೇ ತಡ ಅವನ ತಲೆಗೆ ಹಾಕಿದ್ದ ಹೆಲ್ಮೆಟ್ ನಾಲ್ಕು ಚೂರು ಗಳಾಗಿತ್ತು. ಬೈಕಿನ ಮುಂಭಾಗದ ಚಕ್ರ ಹೊಡೆದ ರಭಸಕ್ಕೆ ಬೆಂಡಾಗಿ ಆಕಾರ ಕಳೆದು ಕೊಂಡು ನುಜ್ಜು ಗುಜ್ಜಾಗಿ ಹೆಡ್ ಲೈಟ್ ಒಡೆದು ಅಸಂಖ್ಯಾತ ಚೂರುಗಳಾಗಿ ಹೋಗಿ ಬೈಕ್ ಅವನ ಸಮೇತ ಜಾರಿ ಕೊಂಡು ಆ ಲಗೇಜು ಗಾಡಿಯ ಅಡಿ ಹೋಗಿ ಬಿತ್ತು. ಬೈಕ್ ಜಾರುತ್ತಾ ಅದರ ಮೇಲೆ ಕೂತಿದ್ದ ಅವನನ್ನು ಎಳಕೊಂಡು ಅದರಡಿಗೆ ಬಿದ್ದದ್ದು ಸಾಲದೆಂಬಂತೆ ಇನ್ನು ಅದರ ಸೊಕ್ಕಡಗದ ಹಾಗೆ ಶಬ್ದ ಮಾಡುತ್ತಲೇ ಇತ್ತು.!!. ಹಾಗೆ ಬೈಕಿನೊಡನೆ ಜಾರಿ ಆ ಗಾಡಿಯ ತಳ ಸೇರಿದ ಆ ವ್ಯಕ್ತಿಯ ಎದೆ ಭಾಗ ಮತ್ತು ಕೈಗಳಲ್ಲಿ ರಕ್ತ ಧಾರೆ. ಒಬ್ಬ ವ್ಯಕ್ತಿಯ ದೇಹದಿಂದ ಹಾಗೆ ಆ ಪ್ರಮಾಣದಲ್ಲಿ ರಕ್ತ ಹರಿಯುವುದನ್ನು ಕಂಡದ್ದು ಅದೇ ಮೊದಲು..!!- ತರಕಾರಿ ಹೆಚ್ಚುವಾಗ ಕೊಯ್ದು ಕೊಂಡ ಚಿಕ್ಕ ಗಾಯಕ್ಕೇ ಪ್ರಾಣ ಹೋಗುವಂತೆ ನರಳುವ ಮನುಷ್ಯನಿಗೆ ಅಂತ ಪರಿಸ್ತಿತಿಯಲ್ಲಿ ಹೇಗಾಗಿರಬೇಡ...!!

ತಲೆಗೆ ಒಂಚೂರು ಏಟು ಬೀಳದ ಆ ವ್ಯಕ್ತಿ ಪ್ರಾಯಶಃ ಬದುಕ ಬಲ್ಲ ಅನ್ನೋ ಒಂದು ಸಣ್ಣ ನಿರೀಕ್ಷೆ ಇತ್ತು. ಅಷ್ಟೇ.. ಹೋಗಿ ಆ ಲಗೇಜು ಗಾಡಿಯ ತಳ ಸೇರಿದ ಆ ದೇಹ ಎರಡೇ ಎರಡು ಕ್ಷಣ ಕಂಪಿಸಿದ್ದಷ್ಟೇ.. ಆಮೇಲೆ ಮಿಸುಕಾಡಲೇ ಇಲ್ಲ..!! ಅಕ್ಕ ಪಕ್ಕದ ಜನ ಓಡಿ ಹೋಗಿ ಆ ದೇಹವನ್ನ ಹೊರಗೆಳೆದು ಆರೈಕೆ ಮಾಡುವಷ್ಟರಲ್ಲೇ ಆ ಜೀವ ಇಹವನ್ನ ತ್ಯಜಿಸಿತ್ತು. ಕಷ್ಟ ಕೊಟ್ಟು ಹುಟ್ಟಿ.. ಇಷ್ಟ ಪಟ್ಟು ಇಪ್ಪತ್ತೈದು ವರ್ಷ ಬದುಕಿ.. ಹೀಗೆ ಎರಡು ನಿಮಿಷ ಒದ್ದಾಡಿ, ಎರಡು ಕ್ಷಣದೊಳಗೆ ರಸ್ತೆಯ ಮಧ್ಯದಲ್ಲಿ ಅನಾಥ ಹೆಣವಾಗಿ ಮಲಗ ಬೇಕಾದರೆ ನಮ್ಮ ಹಣೆಬರಹವೋ.. ದುರಾದೃಷ್ಟವೋ ಅದೆಷ್ಟು ಕ್ರೂರವಿರಬೇಡ..!!

ಆ ವ್ಯಕ್ತಿ ಯಾರೋ ಏನೋ..?? ಎಲ್ಲಿಯವನೋ..?? ಇಲ್ಲಿಗೇಕೆ ಬಂದನೋ..?? ಮನೆಯವರ ಕಥೆಯೇನು,..?? ನಂಬಿಕೊಂಡವರ ವ್ಯಥೆಯೇನು..?? ಮನದಲ್ಲಿ ಆ ಕ್ಷಣಕ್ಕೆ ಹುಟ್ಟಿದ ಈ ಪ್ರಶ್ನೆಗಳಿಗೆಲ್ಲ ಉತ್ತರ ಕೊಡಬಲ್ಲ ಆ ಜೀವ ಮಾತ್ರವೇ ಅಲ್ಲಿ ಮೂಕವಾದದ್ದು. ರೋಡಿನ ತುಂಬಾ ಮೇಳೈಸಿದ ಜನ.. ರಸ್ತೆಯ ಉದ್ದುದ್ದಕೆ ನಿಂತ ಅಷ್ಟೂ ವಾಹನಗಳಿಗಿದು ನೇರ ದೃಶ್ಯ. ಮೊಟ್ಟ ಮೊದಲಿಗೆ ಇಂಥಾ ಘೋರ ದೃಶ್ಯಕ್ಕೆ ನಾನೂ ನೇರ ಸಾಕ್ಷಿಯಾಗಿದ್ದೆ. ಆಗೊಮ್ಮೆ ಈಗೊಮ್ಮೆ ಸಣ್ಣ ಪುಟ್ಟ ಅಫಘಾತಗಳನ್ನ ನಾನು ಕಂಡಿರುವವನೆ ಆದರು.. ಇಷ್ಟು ಘೋರ ಯಾವತ್ತೂ ಕಂಡಿರಲಿಲ್ಲ. ಅಥವಾ ಘೋರ ಅನಿಸಿಕೊಂಡ ಅಫಘಾತಗಳ ಅವಶೇಷಗಳನ್ನು ರಸ್ತೆಯಲ್ಲಿ ಹೋಗುವಾಗ ಅದೆಷ್ಟೋ ತಡವಾಗಿ ನೋಡಿದ ಉದಾಹರಣೆ ಇತ್ತೇ ವಿನಃ ಇಂಥಾ ಘಟನೆಗೆ ನಾನೆಂದು ಸಾಕ್ಷಿಯಾಗಿರಲಿಲ್ಲ.

ಅಷ್ಟೇ ಜೀವ ಉಳಿದಿದ್ದರೆ ಉಳಿಸುವ ಪ್ರಯತ್ನ ಮಾಡ ಬಹುದಿತ್ತು. ಬಿದ್ದೊಡನೆ ಹಾರಿದ ಪ್ರಾಣ ಪಕ್ಷಿ ಇಲ್ಲದ ಆ ದೇಹಕ್ಕೆ ಇನ್ನಾವ ಆರೈಕೆ ಚೈತನ್ಯ ಕೊಟ್ಟೀತು..?? ಒಂದು ಅತೀವ ಶೋಕ.. ಅಗೋಚರ ಭ್ರಮೆ.. ಅದಮ್ಯ ನೋವು.. ಅನಾಗರೀಕ ಭಯ.. ಅಮಾನುಷ ಗಾಭರಿ..  ಅಶೇಷ ನಿರ್ಭಾವುಕತೆಯ ಜೊತೆ ನನ್ನ ಪಾಡಿಗೆ ನಾನಿರುವಾಗ ಬಾಲ ತನ್ನ ಪಾಡಿಗೆ ತಾನು ಕಾರು ಚಲಿಸಲು ಶುರು ಮಾಡಿದ. ಅಷ್ಟಾದರೂ ಕಾರಿನಲ್ಲಿ ತನ್ನ ಪಾಡಿಗೆ ತಾನು ಹಾದಿ ಕೊಳ್ತಾ ಇದ್ದ ಆ ಮ್ಯೂಸಿಕ್ ಪ್ಲೇಯರ್ ಸುಮ್ಮನಾಗಿರಲಿಲ್ಲ. ಈ ಪ್ಲೇಯರ್ ನಂತೆಯೇ ಅಲ್ಲವೇ ನಮ್ಮೆಲ್ಲರ ಜೀವನ.??. ಹಾಡುವ ತನಕ ಅದಾವ ಪರಿಸ್ತಿತಿಯಾದರೂ ಹಾಡಲೇ ಬೇಕು.. ಹಾಡಲಾಗದ, ಅಥವಾ ಮರಳಿ ಹಾಡುವಂತೆ ರಿಪೇರಿಯಾಗದ ಹಾಗಿನ ಯಾವುದಾದರೂ ದೋಷವಾದಲ್ಲಿ ತನ್ನ ಇರವನ್ನ ತ್ಯಜಿಸಿ ನಾಶವಾಗಬೇಕು. ಈ ಕಾರಿಗಾದರೆ ಹೊಸ ಪ್ಲೇಯರ್ ಬಂದೀತು ನಮ್ಮ ಬದುಕಿಗಾದರೆ ನಮ್ಮ ಸ್ಥಾನಕ್ಕೆ ಮತ್ತೊಬ್ಬರು..?? ಈಗಿನ ಲೆಕ್ಖಾಚಾರಕ್ಕೆ ಕಡಿಮೆ ಎಂದರು ೫೦- ೬೦ ವರುಷ ಗಳಷ್ಟಾದರೂ ಇರಬಹುದಾದ ಮನುಷ್ಯನ ಆಯಸ್ಸು ಹೀಗೆ ಎರಡು ಕ್ಷಣದಲ್ಲಿ ಹೋಗಿ ಬಿಡ ಬಹುದಾದರೆ ಸಾವು ಅದೆಂಥ ಕ್ರೂರಿ..!!

ಹೆಚ್ಚೆಂದರೆ ನಲವತ್ತರ ಆಸುಪಾಸಿನಲ್ಲಿ ಮಂದವಾಗಿ ಚಲಿಸುತ್ತಿರುವ ಕಾರು.. ಅಫಘಾತದ ಕುರಿತು.. ಸತ್ತ ವ್ಯಕ್ತಿಯ ಕುರಿತು ಅನವರತ ಮಾತಾಡುತ್ತಲೇ ಇದ್ದ ಬಾಲನ ಅಸ್ಪಷ್ಟ ಮಾತುಗಳ ನಡುವೆ ನನ್ನ ತಲೆಯೊಳಗೆ ನನ್ನದೇ ಒಂದು ಯೋಚನಾ ಲಹರಿ..!! ನನ್ನದೇ ಒಂದು ಚಿಂತೆಗಳ ಕಂತೆ. ಸತ್ತವನ ಜಾಗದಲ್ಲಿ ನಾನೇ ಇದ್ದಿದ್ದರೆ..?? ಮನೆಗೆ ಊರುಗೋಲು ಅನಿಸಿಕೊಂಡ ನಾನೇ ಇಲ್ಲವಾದರೆ..?? ನನ್ನನ್ನ ನಂಬಿ ಪೋಲಿ ಬಿದ್ದಿರುವ ತಮ್ಮನ ಭವಿಷ್ಯದ ಬಗ್ಗೆ ಉಜ್ವಲ ಕನಸುಗಳನು ಹೊತ್ತ ಅಪ್ಪ ಅಮ್ಮನ ಆಸೆಗಳೇ ಮಣ್ಣಾದರೆ..?? ನನಗಾದರೂ ಅವನು ಪ್ರೀತಿಯ ತಮ್ಮ.. ಅವನ ಏಳ್ಗೆ ನನ್ನ ಅತೀವ ಸಾರ್ಥಕತೆಯ ಸಾಧನೆಗಳಲ್ಲಿ ಒಂದು. ಹೊಸದೊಂದು ಚೆಂದದ ಮನೆ ಕಟ್ಟಬೇಕು.. ಅಲ್ಲಿ ನಾವೆಲ್ಲರೂ ಸಂತೋಷವಾಗಿ ಬದುಕಬೇಕು ಎಂಬ ಅದೆಷ್ಟೋ ವರುಷದ ನಮ್ಮೆಲ್ಲರ ಕನಸು ಕನಸಾಗೇ ಉಳಿದು ಹೋದರೆ..?? ಅಪ್ಪ ಅಮ್ಮ ಹಾಗೆ ಮತ್ತೆ ಕೂಲಿ ಮಾಡೇ ಬದುಕಬೇಕೆ..?? ನಾನಿಲ್ಲವೆಂಬ ನೋವ ದಿನವೂ ನೆನೆದು ನೆನೆದೇ ಬದುಕಬೇಕೇ..?? ನಾನು ಕನಸು ಕಟ್ಟಿದ ಬದುಕು ಹೀಗೆ ಒಂದು ಕ್ಷಣದಲ್ಲಿ ಹುಡಿಯಾಗ ಬಲ್ಲದೇ..?? ಛೆ ಇಪ್ಪನ್ತಾಲ್ಕು ವರುಷ ಅದೇನೇನೋ ಅನುಭವಿಸಿ ಕಂಡು, ಕಾಣದಂತೆ, ಇದ್ದೂ ಇಲ್ಲದಂತೆ, ಬದುಕಿಯೂ ಬದುಕದಂತೆ ಇದ್ದ ದಿನಗಳನ್ನೆಲ್ಲ ದಾಟಿ ಈಗೊಂದಿಷ್ಟು ನೆಮ್ಮದಿಯ ನಿಟ್ಟುಸಿರು ಬಿಟ್ಟು ಬದುಕುವ ಕಾಲಕ್ಕೆ ಹೀಗೊಂದು ಭಯ ಕಾಡುವುದು ಬೇಕೇ..??

ಅಸಲು ಈ ಅಫಘಾತದ ತಪ್ಪಾದರೂ ಯಾರದ್ದು..?? ಕಾನೂನು ಬದ್ದವಾಗಿ ಅಲ್ಲಿ ತಿರುವಿದ್ದ ಜಾಗದಲ್ಲಿ ತಿರುವಲ್ಲಿ ನಿಂತಿದ್ದ ಆ ಲಗೇಜು ಗಾಡಿಯದ್ದೋ ಅಥವಾ ನಗರ ವಲಯ ಅನ್ನುವುದನ್ನು ಮರೆತು ಕೂಡಾ ಅಷ್ಟು ವೇಗವಾಗಿ ಬಂದು ನಿಯಂತ್ರಣ ತಪ್ಪಿ ಅಪ್ಪಳಿಸಿ ಅಸುನೀಗಿದ ಬೈಕ್ ಸವಾರನದ್ದೋ..?? ನಿಸ್ಸಂದೇಹವಾಗಿ ಇಲ್ಲಿ ಯಾರಾದರೂ ಸರಿ ತಪ್ಪು ಯಾರದ್ದೆಂದು ಹೇಳಿ ಬಿಡಬಹುದು. ಅದರಿ ತಪ್ಪು ಸರಿ ತಿಳಿದು ಈಗ ಆಗ ಬಹುದಾದರೂ ಏನು..?? ಒಂದು ಕ್ಷಣದ ಪರಿಜ್ಞಾನ, ಒಂದು ಕ್ಷಣದ ರೋಮಾಂಚಕತೆ, ಒಂದು ಕ್ಷಣದ ಉನ್ಮಾದ ನಮ್ಮನ್ನ ಈ ರೀತಿಯ ಹಂತಕ್ಕೆ ನೂಕಿ ಬಿಡಬಹುದೇ..?? ಹೌದು ನಾನೇನು ಕಮ್ಮಿಯಲ್ಲ.. ಹೊಂಡಾ ಯೂನಿಕಾರ್ನ್ ಅನ್ನುವ ದೈತ್ಯ ಬೈಕ್ ಒಂದರ ಮಾಲೀಕನಾದ ನಾನು, ಅದರ ಅದಮ್ಯ ಅಭಿಮಾನಿಯಾದ ನಾನು, ಅದನ್ನ ನನ್ನ ಗರ್ಲ್ ಫ್ರೆಂಡ್ ಅಂತಲೇ ಕರೆದು ಕೊಳ್ಳುವ ನಾನು.. ಅದರ ಮೇಲೆ ಕೂತೊಡನೆ ಸಾವಿರ ಕುದುರೆಗಳ ಮೇಲೆ ಕೂತ ಚೈತನ್ಯ ಬಂದಂತಾಗುವ ನಾನು.. ಬೈಕ್ ಸ್ಟಾರ್ಟ್ ಮಾಡಿ ಐದೇ ಸೆಕೆಂಡಿಗೆ ಕಿಮೀ ಎಂಭತ್ತರ ಗಡಿಯನ್ನ ದಾಟಿಸುವಷ್ಟು ಚುರುಕಾಗಿ ಗಾಡಿ ಓಡಿಸುವ ನಾನು ಇದನ್ನೆಲ್ಲಾ ಯೋಚಿಸಬೇಕ್ಕಾದ್ದು ಈ ಕ್ಷಣಕ್ಕೆ ಅನಿವಾರ್ಯವೇ. 

ನನ್ನ ಬೈಕ್ ಅನ್ನು ಕೊಂಡ ಮೊದಲ ದಿನವೇ ನೂರಿಪ್ಪತ್ತರ ಗಡಿ ದಾಟಿಸುವಷ್ಟು ರಭಸದಲ್ಲಿ ಚಲಿಸಿದ ಕುಖ್ಯಾತಿ ನನ್ನದು..!! ನೀವು ನಂಬಲೇ ಬೇಕು ನನ್ನ ಬೈಕ್ ತೆಗೆದು ಕೊಂಡ ದಿನವೇ ನಾನು ಸರಿಯಾಗಿ ಬೈಕ್ ಓಡಿಸುವುದನ್ನ ಕಲಿತದ್ದು ಅನ್ನೋದನ್ನ.!!. ಅಂದೇ ಕಲಿತು ಅಂದೇ ನೂರರ ಗಡಿ ದಾಟಿ ಒಂದು ಹುಚ್ಚು ಆವೇಗದಲ್ಲಿ ಬೈಕ್ ಓಡಿಸುವ ಖಯಾಲಿ ನನಗದ್ಯಾಕೆ ಬಂತೋ ನಾ ಕಾಣೆ. ನನಗೆ ನಾನೇ ಹೇಳಿ ಕೊಳ್ಳಬೇಕು ಅನ್ನುವಷ್ಟು ಮಿಕ್ಕೆಲ್ಲಾ ವಿಚಾರಗಳಲ್ಲೂ ಸೌಮ್ಯನಾದ ನಾನು.. ಈ ಬೈಕಿನ ವೇಗದಲ್ಲಿ ಮಾತ್ರ ಸಹನೆಯನ್ನ, ಇತಿಯನ್ನ,ಮಿತಿಯನ್ನ ಮೀರುವಂಥ ಹುಚ್ಚನ್ನು ಹೊಂದಿದ್ದೇನೋ ಕಾಣೆ..!! ನಿಜ ಆ ಪ್ರಚಂಡ ವೇಗದಲ್ಲಿ ಒಂಥರಾ ಉನ್ಮಾದ ಸಿಗುತ್ತದೆ, ಬಣ್ಣಿಸಲಾಗದ ಒಂದು ಅದಮ್ಯ ಸಂತೋಷ ಸಿಗುತ್ತದೆ. ಅದರಲ್ಲೂ ಗಾಡಿ ಚಲಿಸೋದು ನಾವೇ ಆದರಂತೂ ಅದರ ಆನಂದವನ್ನ ಪದಗಳಲ್ಲಿ ಕಟ್ಟಿ ಕೊಡುವುದು ಅಸಾಧ್ಯ ಅನ್ನಬೇಕು. ಹಾಗೆ ಗಾಳಿಯಲ್ಲಿ ತೇಲಾಡಿ ದಂತಹ ಅನುಭವ. 

ಹೌದು ಈಗ ಅನ್ನಿಸುತ್ತದೆ ಅಂಥಹ ಸಂತೋಷ ಯಾಕಾದರೂ ಬೇಕು..?? ಅಂಥಹ ಅನುಭವ ಯಾಕಾದರೂ ಬೇಕು..?? ಯಕಶ್ಚಿತ್ ಬೈಕ್ ಕಂಟ್ರೋಲ್ ಮಾಡದೆ ನಾಯಿಗೆ ಗುದ್ದಿ ನಿಯಂತ್ರಣ ತಪ್ಪಿ ಬಿದ್ದು ಕೈ ಕಾಲು ಮುರಿದು ಕೊಂಡ ಬೆಸ್ಟ್ ಫ್ರೆಂಡ್ ಸುಬ್ರಮಣಿಯ ಉದಾಹರಣೆ ಇನ್ನು ನೆನಪಿದೆ. ಸಣ್ಣ ತಿರುವಲ್ಲಿ ಯಾರಾದರೂ ನಕ್ಕುಬಿಡುವಂತೆ ಬಿದ್ದು ಮೈ ಕೈ ಪರಚಿಕೊಂಡ ಪ್ರಶಾಂತನ ಘಟನೆ ಇನ್ನು ಕಣ್ಮುಂದೆ ಹಾಗೆ ಇದೆ.. ಸಾಮಾನ್ಯ ವೇಗದ ಇವರದ್ದೇ ಇಂಥ ಕಥೆಯಾದರೆ ಪ್ರಚಂಡ ವೇಗದ ಪ್ರಕರಣಗಳ ಅಂತ್ಯ ಹೀಗೆ ಆಗಬೇಕೆನೋ..?? ಹಾಗೆ ಯೋಚಿಸುತ್ತೇನೆ.. ಅದೇ ವೇಗದಲ್ಲಿ ಆಯ ತಪ್ಪಿ ನಾನೇ ಯಾರಿಗಾದರೂ ಡಿಕ್ಕಿ ಹೊಡೆದರೆ..?? ಅಥವಾ ನನ್ನದೇ ವೇಗವನ್ನ ಅನುಸರಿಸಿ ಬರುತ್ತಿರೋ ಇನ್ನ್ಯಾವುದೋ ವಾಹನದವನು ಯಾವುದೋ ಕಾರಣಕ್ಕೆ ವಾಹನ ವೇಗ ತಗ್ಗಿಸಿ ಚಲಿಸುವ ನನ್ನ ಮೆಲೆಯೇ ಹಾಯ್ದು ಹೋದರೆ ಗತಿ..?? ಅಯ್ಯಪ್ಪ ಜೀವದ ಕುರಿತಾಗಿ ಯೋಚಿಸುವಾಗ.. ಬದುಕಿನ ಮತ್ತು ಸಾವಿನ ಕುರಿತಾದ ಅದೆಷ್ಟು ಕಲ್ಪನೆಗಳು.. ಅದೆಷ್ಟು ಯೋಚನೆಗಳು..?? ಅದೆಷ್ಟು ಕ್ರೂರ ದಾರಿಗಳು..?? ನಾನು ಡಿಕ್ಕಿ ಹೊಡೆದರೂ ಸರಿ.. ಅಥವಾ ನನಗೆ ಯಾರಾದರೂ ಡಿಕ್ಕಿ ಹೊಡೆದರೂ ಸರಿ ಅಪಾಯ ಇಬ್ಬರಿಗೇನೆ.. ಹಾನಿ ಎರಡೂ ಕುಟುಂಬಕ್ಕೇನೆ. ನನ್ನಂಥದ್ದೇ ಬಡ ಕುಟುಂಬ ದಿಂದ ಬಂದ ಹುಡುಗನಾಗಿದ್ದರೆ ಅವನ ಮನೆಯವರ ಗತಿ..?? ಒಬ್ಬನೇ ಮಗನಾಗಿದ್ದರೆ ಮುಂದಿನ ಅವರ ಜೀವನ..?? ವಯಸ್ಸಾದ ತಂದೆ ತಾಯಿಯರಿದ್ದರೆ..?? ಮದುವೆಯಾಗದ ಅಕ್ಕ ತಂಗಿಯರಿದ್ದರೆ..?? ಪ್ರಾಣಕ್ಕೆ ಪ್ರಾಣ ಕೊಡೋ ಜೀವದ ಗೆಳೆಯರಿದ್ದರೆ..?? ಸಾಯುವಷ್ಟು ಪ್ರೀತಿಸುವ ಪ್ರೇಮಿಯೊಬ್ಬಳಿದ್ದರೆ..?? ಅಷ್ಟೆಲ್ಲ ಕನಸು ಕಟ್ಟಿಕೊಂಡು ಬದುಕೋ ನಾನೇ ಅಥವಾ ನನ್ನಂಥವನೆ ಅಲ್ಲವೇ ಅವನು..!! ಅಯ್ಯಪ್ಪ ಇದನ್ನೆಲ್ಲಾ ತೊರೆದು ಇದನ್ನೆಲ್ಲಾ ಮರೆತು ವಿನಾಕಾರಣ ಕ್ಷುಲ್ಲಕ ಕಾರಣಕ್ಕಾಗಿ ನಮ್ಮ ಅಮೂಲ್ಯ ಬದುಕನ್ನ ಬಲಿ ಕೊಡಬೇಕೇ..?? ಒಂದೇ ಒಂದು ಕ್ಷಣ ಯೋಚಿಸಿದ್ದರೆ, ಹದಿನೈದು ಸೆಕೆಂಡ್ ತಡವಾಗಿದ್ದರೆ, ಒಂದು ಕ್ಷಣ ಪರಿಜ್ಞಾನ ಕೆಲಸ ಮಾಡಿದ್ದರೆ ಅವನು ಬದುಕುತ್ತಿದ್ದ. ಅವನಂತೆ ಇರುವ ನನಗಿನ್ನೂ ಅವಕಾಶವಿದೆ. ನಾನು ತಿದ್ದಿ ಕೊಳ್ಳಬೇಕು.. ತಿದ್ದಿ ಕೊಳ್ಳುತ್ತೇನೆ.. ವಿನಾಕಾರಣ ಸತ್ತು ಬಿಡಲು ಬದುಕು ಪೂರ್ತಿ ನನ್ನದಲ್ಲ. ನನ್ನನ್ನ ನಂಬಿ ಒಂದಷ್ಟು ಜೀವಗಳಿವೆ. ಆ ಜೀವಗಳ ಖುಶಿಗಿಂತ ನನ್ನ ವೇಗದ ಉನ್ಮಾದ ನನ್ನನ್ನ ಸಂತೋಷಗೊಳಿಸಲಾರದು, ಕುಡಿತ ಜೂಜು, ತಂಬಾಕಿನಂತೆ.. ವೇಗ, ಉದ್ವೇಗ, ಉದ್ವೇಗ, ಆವೇಗವೂ ಒಂದು ಚಟವೇ..!! ಇಷ್ಟು ದಿನ ಎಲ್ಲರ ಬಳಿಯೂ ಎದೆಯುಬ್ಬಿ ಹೇಳುತ್ತಿದ್ದೆ ನನಗಾವ ಚಟವು ಇಲ್ಲವೆಂದು. ಇಲ್ಲಿನ ತನಕ ನನಗೆ ಈ ರೀತಿಯದ್ದೊಂದು ಚಟವಿತ್ತು..!! ಇನ್ಮುಂದೆ ಅದು ಇರಲಾರದೆಂಬ ಧೃಡ ನಂಬಿಕೆ ಇಟ್ಟು ನನ್ನ ಬೈಕ್ ಏರುವ ಪ್ರಯತ್ನ ಮಾಡುತ್ತೇನೆ. ಕೇವಲ ಬೈಕ್ ಮಾತ್ರವಲ್ಲ ವಾಹನ ಯಾವುದೇ ಇರಲಿ ಪರಿಸ್ತಿತಿ ಏನೇ ಇರಲಿ ಎರಡು ನಿಮಿಷದಲ್ಲಿ ಇಲ್ಲವಾಗದೆ ಹೋಗೋದಕ್ಕಿಂತ, ಎರಡು ನಿಮಿಷ ತಡವಾಗಿ ಹೋಗೋದೇ ಸೂಕ್ತ. ನಾವು ತಡವಾಗಿ ಬಂದರೇನೆ ತಲ್ಲಣಿಸುವ ಜೀವಗಳು.. ನಾವಿಲ್ಲದೇ ಹೋದಲ್ಲಿ ಹೇಗಿರಬೇಡ..??

ಯಾರಾದರೂ ಸರಿ ಟ್ರಾಫಿಕ್ ನಿಯಮಗಳನ್ನ ಸರಿಯಾಗಿ ಪಾಲಿಸಿ. ಆದಷ್ಟು ಮತ್ತೊಬ್ಬರ ಬಗ್ಗೆಯೂ ಎಚ್ಚರದಿಂದಿರೋಣ. ರಸ್ತೆಗಿಳಿದರೆ  ನಮ್ಮ ಜೀವ ಕೇವಲ ನಮ್ಮ ಕೈಲಿ ಮಾತ್ರ ಇರುವುದಿಲ್ಲ. ಅದು ಮತ್ತೊಬ್ಬನ ಕೈಲಿ ಕೂಡಾ ಇರುತ್ತದೆನ್ನುವುದು ಸತ್ಯ. ಒಂದೇ ಬದುಕು.. ಒಂದೇ ಜೀವ.. ಒಂದೇ ಜೀವನ, ಒಂದೇ ಅವಕಾಶ ಪೂರ್ತಿಯಾಗಿ ಬದುಕೋಣ. ಋಣವಿಲ್ಲದೆಯೇ ಯಾರಿಗೂ ಬದುಕಿಲ್ಲ. ಬದುಕಿನ ಋಣ ತೀರಿಸಿ ಹೋಗುವ ಪ್ರಯತ್ನ ಮಾಡೋಣ. ಇಷ್ಟೆಲ್ಲಾ ಯೋಚಿಸಿ ಬರೆದು ನಿಮ್ಮ ಬಳಿ ಹಂಚಿಕೊಳ್ಳಬೇಕು ಅಂತ ಅಂದು ಕೊಳ್ಳುವಾಗಲೇ ಆಫೀಸು ಬರುತ್ತದೆ. ಆಫೀಸಿಗೆ ಬಂದವನೇ ಅವಸರಕ್ಕೆ ಬಿದ್ದವನಂತೆ ಅರೆ ಬರೆ ಬರೆದು ಕೊಳ್ಳುತ್ತೇನೆ. ಇಂದು ಪೂರ್ತಿಯಾಗಿ ಬರೆದು ನಿಮ್ಮೆಲ್ಲರ ಬಳಿ ಹಂಚಿ ಕೊಂಡಿದ್ದೇನೆ.

ಸಾರ್ಥಕವಾಗಿ ಬದುಕಿದ ಅದೆಷ್ಟೋ ಉದಾಹರಣೆಗಳು ನಿಲುಕಿಸದ ಅನುಭವವ, ಕಲಿಸಿ ಕೊಡದ ಪಾಠವ, ತಿಳಿಸಿ ಕೊಡದ ವಿಚಾರವ ಇಂಥದ್ದೊಂದು ಅನ್ಯಾಯಕಾರ ಸಾವು ನಮಗೆ ತಿಳಿ ಹೇಳಿ ಬಿಡತ್ತೆ. ಕೇಳಿ ಬದಲಾಗುವುದಕ್ಕು ಕಂಡು ತಿದ್ದಿ ಕೊಳ್ಳುವುದಕ್ಕೂ ಇರುವ ವೆತ್ಯಾಸ ಅಂಥದ್ದು. ಸತ್ತವನ ಆತ್ಮಕ್ಕೆ ಶಾಂತಿ ಕೋರುವುದರ ಬದಲಾಗಿ.. ಅವನ ಕುಟುಂಬಕ್ಕೆ ಸದ್ಗತಿ ದೊರಕಲೆಂದು ಪ್ರಾರ್ಥಿಸಿ ಕೊಳ್ಳೋಣ. 

Friday 24 May 2013

"ತಾಳಿದವನು ಬಾಳಿಯಾನು"


ಹತ್ತು ದಿನ..
 
ಹತ್ತಾರು ಊರು.. ಹತ್ತಾರು ನೀರು, ಹತ್ತಾರು ತರದ ಊಟ.. ಒಂದೊಂದು ಕಡೆ ಒಂದು ಒಂದೊಂದು ಹವಾಮಾನ.. ಬಿಸಿ ಗಾಳಿ.. ಟೂರ್ ಸ್ಟಾರ್ಟ್ ಆದ ಮೊದಲ ದಿನವೇ ಶುರುವಾದ ಶೀತ, ತಲೆನೋವು ಇವೆಲ್ಲದರ ನಡುವೆ ಅನಂತ ಬದಲಾಗದೆ ಉಳಿದದ್ದು ಬಿಸಿಲು ಮಾತ್ರ.

ಏನ್ರಿ ಬಿಸಿಲು ಅದು ಕಡಿಮೆ ಅಂದ್ರೆ ೩೭-೩೮ ಅಷ್ಟು ಸಾಕು ನನ್ನಂತೋನು ಉರಿದು ಹೋಗೋಕೆ..!! ತಂಪು ತಂಪು ಕೂಲ್ ಕೂಲ್ ಅನಿಸಿ ಕೊಳ್ಳೋ ಮಲೆನಾಡಿನ ಮಗ ನಾನು ಹೀಗೆ ಹತ್ತೂರಿನಲ್ಲಿ ಅರ್ಧ ಹಗಲು ಹೊತ್ತೊರಿಯುವ ಬಿಸಿಲಿನಲ್ಲಿ ಕಾರಿನಲ್ಲಿ ಪ್ರಯಾಣ.. ಇನ್ನರ್ಧ ಹಗಲು ಅದೇ ಬಿಸಿಲಿನಲ್ಲಿ ಕೆಲಸ.. ಸಾಲದಕ್ಕೆ ರಾತ್ರಿ ಕೂಡ ಕನಿಷ್ಠ ಒಂಭತ್ತೂವರೆ ಹತ್ತು ಗಂಟೆಯ ತನಕವಾದರೂ ಕೆಲಸ.. ಮಧ್ಯ ರಾತ್ರಿಯವರೆಗೂ ತಂಗಾಳಿಯ ಸುಳಿವು ಕೂಡಾ ಸಿಗಲೊಲ್ಲದು ತಮಿಳುನಾಡಿನ ಈ ಬಿಸಿಲ ದೇಶಗಳಲ್ಲಿ. ಸಹಿಸಿ ಹೇಗೆ ಬದುಕೋದು ಹೇಳಿ..??

ಕಂಪನಿ ಕೆಲಸದ ನಿಮಿತ್ತ ಹೋರಟ ಟೂರ್ ಆದ್ದರಿಂದ ಎಲ್ಲಾ ಕಡೆ ನಮಗೆ ಗೆಸ್ಟ್ ಹೌಸ್ ಸೌಲಭ್ಯವಿತ್ತು. ಬಹುತೇಕ ಎಲ್ಲಾ ಕಡೆ ಏಸಿ ರೂಮಿನ ಸೌಲಭ್ಯವಿದ್ದದ್ದರಿಂದ ರಾತ್ರಿ ಯಾವತ್ತು ರೌರವ ಎನಿಸಿರಲಿಲ್ಲ. ಕರೂರು ಕಣ್ರೀ..!! ತಮಿಳುನಾಡಿನ ಬಿಸಿಲ ನಾಡಿನ ಹಿಟ್ ಲಿಸ್ಟ್ ನಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಹೆಸರು. ಕೇಳಿದ ಹಾಗೆ ತಮಿಳುನಾಡಿನ ಬಿಸಿಲ ಬಿಸಿ ಅಧಿಕವೆನಿಸಿ ಕೊಳ್ಳುವುದೇ ಇಲ್ಲಿ. ನಮ್ಮ ಗ್ರಹಚಾರಕ್ಕೆ ಅಲ್ಲಿ ಗೆಸ್ಟ್ ಹೌಸ್ ನಲ್ಲಿ ಏಸಿ ರೂಂ ಇಲ್ಲ..!! ರಾತ್ರಿ ಇಡೀ ನರಳಾಡಿ.. ಹೊರಳಾಡಿ ಮಲಗಲೆತ್ನಿಸಿದರು ಆ ಬಿಸಿಲಿಗೆ ಈ ದೇಹ ಒಗ್ಗಲೇ ಇಲ್ಲ.. ನೆಲವಾದರೂ ಕಾದ ಹೆಂಚೆ.. ಬರೀ ನೆಲದ ಮೇಲೂ ಮಲಗಲಾಗಲಿಲ್ಲ. ನನ್ನ ಮೊರೆ ಆ ವರುಣನಿಗೆ ಕೇಳಿತೇನೋ ಸಣ್ಣಗೆ ಜಿಟಿ ಮಳೆ ಶುರುವಾಯ್ತು. ಸತ್ತು ಹೋಗುವಷ್ಟು ಹಸಿದವನಿಗೆ ಸೀಬೆ ಕಾಯಿ ಸಿಕ್ಕಿದ ಹಾಗಿತ್ತು. ಆ ಮಳೆಯೂ ನನಗೆ ಅಂಥಹ ಮಹದುಪಕಾರ ಏನೂ ಮಾಡಲಿಲ್ಲ. ರಾತ್ರಿ ಇಡೀ ಮಂಪರುಗಣ್ಣಿನಲ್ಲೇ ಎದ್ದು ಕೂತು ಲ್ಯಾಪ್ ಟಾಪಿ ನಲ್ಲಿ ಒಂದೆರಡು ಹಾಡು.. ಬುಕ್ ನಲ್ಲಿ ಒಂದೆರಡು ಬರಹ ಓದಿದೆನಾದರು ಸೆಕೆ ಅದಕ್ಕೂ ಸಂಯಮ ನೀಡುತ್ತಿಲ್ಲ. ಮಧ್ಯ ರಾತ್ರಿ ಇಂದಾಚೆಗೆ ಹೇಗೋ ನಾನೇ ಮಣಿದು, ದಣಿದು ಬೇರೆ ವಿಧಿ ಇಲ್ಲದೆ ಬೆಂದು ಕೊಂಡೆ ಮಲಗಿದ್ದೆ. ಅದ್ಯಾವ ಶತಮಾನಕ್ಕೆ ನಿದ್ದೆ ಬಂತೋ ತಿಳಿಯಲಿಲ್ಲ. ಅದಾಗಿ ಮಾರನೆ ದಿನ ಉಡುಮಲ ಪೇಟೆಯಲ್ಲಿ ಕೆಲಸ ಅಲ್ಲಿ ಪುಣ್ಯಕ್ಕೆ ಏಸಿ ರೂಮು ಸಿಕ್ಕಿತ್ತು. ಅದಾದ ಮರು ದಿನವೇ ಕೋಯಮತ್ತೂರಿನಲ್ಲಿ ಕೆಲಸ.

ಅಂದು ಸಂಜೆ ಉಡುಮಲ ಪೇಟೆಯಲ್ಲಿ ಕೆಲಸ ಮುಗಿಸಿ ಸ್ವಲ್ಪ ತಡವಾಗಿ ಹೊರಟದ್ದರಿಂದ. ಕೊಯಮತ್ತೂರು ತಲುಪುವುದು ಸಂಜೆ ಏಳೂವರೆಯಾಗಿತ್ತು ಹೋದವನೇ ನೇರ ಕೆಲಸ ಶುರು ಮಾಡಿದೆ. ಬಿಸಿಲ ಝಳ ಅಲ್ಲೂ ಕಮ್ಮಿ ಏನಿರಲಿಲ್ಲ. ನನ್ನ ಮತ್ತು ಅರಸೂರು ಆಫೀಸಿನ ಗೆಳೆಯ ಅಭಿಲಾಶ್ ಗೆ ಕೆಲಸದ ಮಧ್ಯೆ ಮಾತಿಗೆ ಸಿಕ್ಕಿದ ವಿಚಾರವೇ ಈ ಬಿಸಿಲು. ಆವಾ ಮಲಯಾಳಿ ಹುಡುಗ.. ನನಗೆ ಮಲಯಾಳಂ ತಕ್ಕ ಮಟ್ಟಿಗೆ ಬರುತ್ತದಾದರೂ ನಾನು ಮಲಯಾಳಂ ಮಾತಾಡಲು ಶುರುವಿಟ್ಟರೆ ಅವನು ಮಲಯಾಳದ ಮೇಲೆ ತನ್ನ ಅಭಿಮಾನ ಕಳಕೊಂಡ್ರೆ ಕಷ್ಟ..!! ದೊಡ್ಡ ಮನಸ್ಸು ಮಾಡಿ ನಾ ತಮಿಳಿನಲ್ಲಿ ಹೇಳುತ್ತಾ ಹೋದೆ..
ಏನ್ ಅಭಿ ಇದು.. ನಿಮ್ ಕಡೆ ಇರೋದು ಬಿಸಿಲಾ ಇಲ್ಲಾ ಬೆಂಕಿ ನಾ..?? ನೋಡು ಒಂದು ವಾರಕ್ಕೆ ಹೇಗೆ ಸೊರಗಿದಿನಿ ನಾನು.. ಹೇಗೆ ಸುಟ್ಟು ಕರಕಲಾಗಿ ಸಣಕಲಾಗಿದೀನಿ.. ನೀವೆಲ್ಲ ಅದು ಹೇಗಪ್ಪ ಇರ್ತೀರಾ ಇಲ್ಲಿ..?? ನಮ್ ಕಡೆ ಹೀಗಿಲ್ಲ ನೋಡಪ್ಪ.. ಹೊಸೂರು ಅಂದ್ರೆ ವಾತಾವರಣದಲ್ಲಿ ಜೆರಾಕ್ಸ್ ಕಾಪಿ ಆಫ್ ಬೆಂಗಳೂರು.. ಅಲ್ಲಿ ಯಾವುದು ಅತಿ ಅನ್ನಿಸಲ್ಲ.. ದೇಶದ ಯಾವ ಮೆಟ್ರೋ ಪಾಲಿಟನ್ ಸಿಟಿ ಗಳನ್ನಾದ್ರು ತುಲನೆಗೆ ಹಚ್ಚಿ ಇದು ದೊಡ್ಡದು.. ಇದು ಚಿಕ್ಕದು.. ಇದು ಇಷ್ಟು ಮಂದು ವರೆದಿದೆ, ಅದು ಇಷ್ಟು ಹಿಂದುಳಿದಿದೆ ಅಂತ ವಿಂಗಡಣೆ ಮಾಡಿ ಬಡಾಯಿ ಕೊಚ್ಚಿ ಕೊಂಡು ಬಿಡಬಹುದು. ಆದ್ರೆ ವಾತಾವರಣದ ವಿಚಾರದಲ್ಲಿ ಈಗಲೂ ಬೆಂಗಳೂರಂಥ ಒಂದು ನಗರ ದೇಶದಲ್ಲೆಲ್ಲೂ ಕಾಣದೆ ಇರೋದು ಅದ್ಭುತ ನೋಡು ಅಂತ ಹೇಳಿ ಬೀಗಿದೆ. ಅಭಿ ಕೂಡ ಅದು ಇದೂ ಸಮಜಾಯಿಷಿ ನೀಡುತ್ತ ಕಡೆಗೆ ನನ್ನ ಮಾತಿಗೆ ಹೂಂಕಾರವಿಟ್ಟು ಸುಮ್ಮನಾದ.

ಅಭಿ ಇಲ್ಲಿ ಗೆಸ್ಟ್ ಹೌಸ್ ನಲ್ಲಿ ಏಸಿ ಇದೆ ತಾನೇ.. ಕರೂರ್ ನಲ್ಲಿ ಸಾಕು ಸಾಕಾಗಿ.. ಎಷ್ಟ್ ಬೇಗ ಇಲ್ಲಿಂದ ಕಾಲು ಕಿತ್ತೇನು ಅಂತ ಅವಸರಕ್ಕೆ ಬಿಟ್ಟು ಓಡಿ ಬಂದಿದೀನಿ. ಇಲ್ಲೂ ಹಂಗಾದ್ರೆ ಬಹಳ ಕಷ್ಟ ನೋಡಪ್ಪ. ಹಗಲು ರಾತ್ರಿ ಕೆಲಸ ಮಾಡಿ ರಾತ್ರಿ ನೆಮ್ಮದಿಯಾಗಿ ನಾಲ್ಕು ಗಂಟೆ ನಿದ್ದೆ ಮಾಡದೆ ಹೋದ್ರೆ ಹೆಂಗೆ ಹೇಳು..?? ಅಭಿಯನ್ನ ಕೇಳಿದೆ. ಏಸಿ ಇದೆಯಪ್ಪ ಡೋಂಟ್ ವರಿ.. ಅಭಿ ಕಡೆಯಿಂದ ಸಮಾಧಾನಕರ ಉತ್ತರ. ನಾನು ಮಾತು ಮುಂದುವರೆಸುತ್ತಾ ಹೇಳಿದೆ ಹಿಂಗೆ ಆದ್ರೆ ನಮ್ಮ ಮುಂದಿನ ಬದುಕು ಹೆಂಗಪ್ಪ.. ಗ್ಲೋಬಲ್ ವಾರ್ಮಿಂಗ್ ಈ ರೀತಿ ಏರ್ತಾ ಹೋದ್ರೆ ಬದುಕೋದು ಹೇಗೆ.. ಭೂಮಿ ಮಂಗಳ ಗ್ರಹ ಆಗೋಕೆ ಬಹಳ ಕಾಲ ಬೇಕಿಲ್ಲ ನೋಡು..!!

ನಮ್ಮ ಮಾತಿನ ಮಧ್ಯೆ ನಮ್ಮ ಸಹಾಯಕ್ಕೆಂದು ಬಂದಿದ್ದ ಸೆಕ್ಯೂರಿಟಿ ಯೊಬ್ಬರ ಮಾತುಗಳು ತೂರಿದವು.. ಅದು ಕೂಡ ಅಚ್ಚ ಕನ್ನಡದಲ್ಲಿ..!! ನನಗೆ ಅಚ್ಚರಿ..!! ಅವರ ಹೆಸರು ಶ್ರೀನಿವಾಸ.. ಮೂಲ ಊಟಿಯವರು. ಊಟಿಯಲ್ಲಿ ಅರ್ಧ ಭಾಗದಷ್ಟು ಜನ ಕನ್ನಡಿಗರೇ ತುಂಬಿಹರೆಂದು ಅವರು ಹೇಳಿದ್ದು ಕೇಳಿ ತುಂಬಾನೇ ಖುಷಿಯಾಯ್ತು. ಮಿಲಿಟರಿ ಯಲ್ಲಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ತಗೊಂಡ ನಂತರ ಇಲ್ಲಿ ಸೆಕ್ಯೂರಿಟಿ ಆಗಿ ಕೆಲಸ ಮಾಡ್ತಾ ಇದಾರೆ. ಅವರು ಹೇಳ್ತಾ ಹೋದರು.. ಏನ್ ಸಾರ್ ನಾಲ್ಕು ದಿನಕ್ಕೆ ನೀವು ಇಷ್ಟು ಪರದಾಡಿ ಕಂಗಾಲು ಆಗಿದ್ದೀರಲ್ಲ.. ಇಲ್ಲಿ ದಿನ ಬದುಕೋರು ನಾವು ನಮಗೆ ಹೇಗಿರಬೇಡ..?? ಸ್ವಲ್ಪ ತಾಳಿ ಸಾರ್.. "ತಾಳಿದವನು ಬಾಳಿಯಾನು" ತಾಳೋದು ಅಂದ್ರೆ ಇಲ್ಲಿ ಕಾಯೋದು ಅಂತ ಅಲ್ಲ.. ತಡೆದು ಕೊಳ್ಳೋದು ಅಂತ. ನೋಡಿ ನಮ್ಮ ವಾತಾವರಣ ನೀರು ಗಾಳಿ ಎಲ್ಲ ಈ ಹಿಂದಿಗಿಂತ ದೂಷಿತ.. ಹಿಂದೆ ಇದ್ದ ಹಾಗೆ ಈಗಿಲ್ಲ.. ಈಗಿರೋ ಹಾಗೆ ಇನ್ಮುಂದೆ ಕೂಡ ಇರೋಲ್ಲ. ಇನ್ಮುಂದೆ ಕೂಡ ಪರಿಸ್ತಿತಿ ಹೀಗೆ ಇರುತ್ತೆ ಅನ್ನೋ ಹಾಗಿಲ್ಲ. ಈಗಾಗಲೇ ನೀರಿಗೆ ಬರ.. ಬಿಸಿಲಿಗೆ ಜ್ವರ.. ಇನ್ನು ಮುಂದಿನ ದಿನಗಳು ಇವಕ್ಕಿಂತ ಘೋರ.. ಬರೀ ಮೂವತ್ತೇಳು ಡಿಗ್ರೀ ಗೆ ಹೀಗಂತೀರಲ್ಲ ಅರಬ್ ದೇಶಗಳಲ್ಲೆಲ್ಲ ಬಿಸಿ ನಲವತ್ತೈದು ಡಿಗ್ರಿ ಗಳ ಮೇಲೇನೆ.. ಅಲ್ಲೆಲ್ಲ ಜನ ಹೇಗೆ ಬದುಕುತ್ತಿಲ್ಲ ಹೇಳಿ..?? ಮೂವತ್ತೈದು ಡಿಗ್ರೀ ನೆ ತಡೆದು ಕೊಳ್ಳದ ನೀವು.. ನಾಳೆ ದಿನ ನಮ್ಮ ದೇಶ ಕೂಡ ನಲವತ್ತು ನಲವತ್ತೈದು ಡಿಗ್ರಿ ಬಿಸಿಲಿಗೆ ತುತ್ತಾದರೆ ಹೇಗೆ ಬದುಕ್ತೀರಿ..?? ಆಗೇನು ಏಸಿ ಯನ್ನ ಬೆನ್ನಿಗೆ ಕಟ್ಟಿ ಕೊಂಡೇ ಓಡಾಡೋಕ್ ಆಗತ್ಯೆ..?? ಬಿಸಿಲಿಗೆ ಸ್ವಲ್ಪ ಒಗ್ಗಿ ಕೊಳ್ಳಿ ಸಾರ್.. ಯಾವ ಕಾಲಕ್ಕೂ ಅದು ಒಳ್ಳೆಯ ಬದಲಾವಣೆಯೇ.. ಈಗ ನೋಡಿ ತಮಿಳು ನಾಡಲ್ಲಿ ಇಷ್ಟು ಪವರ್ ಕಟ್ ಪ್ರಾಬ್ಲೆಮ್ ಇದೆ.. ಹಿಂಗಿರುವಾಗ ಏಸಿ ಇದ್ದು ತಾನೇ ಏನು ಪ್ರಯೋಜನ...?? ಕರೆಂಟ್ ಇಲ್ಲದೆ ಏಸಿ ಇಟ್ಕೊಂಡು ಏನ್ ಮಾಡ್ತೀರಿ..?? ಕೊಡೊ ಅರ್ಧ ಗಂಟೆ ಕರೆಂಟ್ ಗೆ ಏಸಿ ಹಾಕ್ಕೊಂಡು ಏನ್ ಮಾಡ್ತೀರಿ..?? ಇಲ್ಲಿ ಬದುಕಬೇಕು ಅಂದ್ರೆ ಇಲ್ಲಿನ ನೀರು ಗಾಳಿ ಬಿಸಿಲು ಎಲ್ಲದಕ್ಕೂ ಹೊಂದಿ ಕೊಳ್ಳದೇ ವಿಧಿ ಇಲ್ಲ. ಇಡೀ ತಮಿಳು ನಾಡಿನ ತೊಂಭತ್ತು ಪ್ರತಿಶತ ಜನ ಬದುಕ್ತಿರೋದೆ ಹಾಗೆ. ದೇಶದ ಉತ್ತರ ಭಾಗದ ಕಡೆ ಪರಿಸ್ತಿತಿ ಇದಕ್ಕಿಂತಲೂ ವ್ಯತಿರಿಕ್ತ. ಅವರೆಲ್ಲರೂ ಬದುಕ್ತಿರೋದು ಇಂಥಾ ಹವಾಮನದಲ್ಲೇ ಅಲ್ವೇ..?? ಉಳ್ಳವರು ಏಸಿ.. ಕೂಲರ್ ಅಂತ ಹಾಕಿಸಿಕೊಂಡು ಹೇಗೋ ಕಾಲ ಕಳೀತಾರೆ.. ತುತ್ತು ಅನ್ನಕ್ಕೂ ಕಷ್ಟ ಪಡೋ ಜನ ಹೆಂಗೆ ಬದುಕ ಬೇಕು..?? ನಮ್ಮ ದೇಶದಲ್ಲಿ ಇರೋರಿಗಿಂತ ಇಲ್ಲದವರೇ ಜಾಸ್ತಿ.. ಅಡ್ಜಸ್ಟ್ಮೆಂಟ್ ಸಾರ್ ಅಡ್ಜಸ್ಟ್ಮೆಂಟ್.. ಅಡ್ಜಸ್ಟ್ ಮಾಡಿ ಕೊಳ್ಳದೆ ಈ ದೇಶದಲ್ಲಿ ಯಾವತ್ತಿಗೂ ನೆಮ್ಮದಿ ಇಂದ ಬದುಕೋಕಾಗಲ್ಲ..ಈಗಷ್ಟೇ ಹುಟ್ಟಿದ ಎಳೆಗರು.. ಹಸುಗೂಸುಗಳೇ ಇಂಥಾ ವಾತಾವರಣದಲ್ಲಿ ಬದುಕಿ ಬೆಳೆದು ತೋರಿಸುವಾಗ ಬೆಳೆದ ನಮಗೇನು ಕಮ್ಮಿ ಸಾರ್.. ಇರೋ ತನಕ ಅನುಭವಿಸಿ ಇಲ್ಲದ ಮೇಲೆ ಹಲುಬುವ ಬದಲು.. ಇರೋವಾಗಲೇ ಇಲ್ಲದಿರುವಾಗ ಹೇಗೆ ಸಹಿಸಿ ಕೊಳ್ಳೋದು ಅನ್ನೋದನ್ನ ಕಲಿತರೆ ಒಳ್ಳೇದಲ್ವೆ..??

ಶ್ರೀನಿವಾಸಣ್ಣ ನ ಮಾತಲ್ಲೂ ಸತ್ಯವಿತ್ತು. ಸಾಮಾನ್ಯವಾಗಿ ನಮಗಿಂತ ಚಿಕ್ಕವರು, ಅಂತಸ್ತಿನಲ್ಲಿ ಕಿರಿಯರು, ಸ್ತಾನಮಾನಗಳಲ್ಲಿ ಸಾಮಾನ್ಯರಾರಾದರು ಇಂಥ ಉಪದೇಶ ಗಳನ್ನ ಕೊಟ್ಟರೆ ಅದು ಅವರ ಅಧಿಕ ಪ್ರಸಂಗಿತನ ಅಂದುಕೊಂಡು ಉಡಾಫೆ ಮಾಡುವುದೇ ಜಾಸ್ತಿ. ನಮಗೆ ಉಪದೇಶ ನೀಡುವವರು ಕೂಡ ನಮಗಿಂತ ಮೇಲ್ ಸ್ತರದವರಾಗಿರಬೇಕು, ನಮಗಿಂತ ಬುದ್ಧಿವಂತರಾಗಿರಬೇಕು, ಏನನ್ನಾದರೂ ಸಾಧಿಸಿದ ಮಹಾನುಭಾವರೇ ಆಗಿರಬೇಕು ಅನ್ನುವುದೇ ಎಲ್ಲರ ಸಾಮಾನ್ಯ ಅಪೇಕ್ಷೆ ಅಲ್ಲವೇ..?? ಶ್ರೀನಿವಾಸಣ್ಣ ಇದನ್ನೆಲ್ಲಾ ಹೇಳುವಾಗ ನನಗೂ ಹಾಗನ್ನಿಸಿದರೂ ಅವರ ಮಾತಲ್ಲಿ ಒಪ್ಪಲೇಬೇಕಾದ ಸತ್ಯವಿತ್ತು. ಅವರ ಅನುಭವ ಅಲ್ಲಿ ಮಾತಾಡ್ತಾ ಇತ್ತು. ಮಿಲಿಟರಿ ಯಲ್ಲಿ ಅವರು ಅನುಭವಿಸಿದ್ದು ಇದಕ್ಕಿಂತಲೂ ಘೋರವಿರಲಿಕ್ಕೆ ಸಾಧ್ಯವಲ್ಲವೇ..?? ಶ್ರೀನಿವಾಸಣ್ಣ ಹಾಗೆ ಹೇಳಿದ್ದು ಉಪನ್ಯಾಸ ಅನ್ನಿಸಲೇ ಇಲ್ಲ.. ನಮ್ಮಪ್ಪನೋ, ಅಜ್ಜನೋ ಬಳಿಯಲ್ಲಿ, ಬಗಲಲ್ಲಿ ಕುಳಿತು ಹೇಳಿದ ಹಾಗಿತ್ತು.

ಹಾಗೆ ಸುಮ್ಮನೆ ಒಮ್ಮೆ ಯೋಚಿಸಿದೆ.. ಹತ್ತನೇ ತರಗತಿಯಲ್ಲಿ, ಪೀಯೂಸಿ ಯಲ್ಲಿ ಓದಿದ ವಿಜ್ಞಾನದ ಪಾಟಗಳು ನೆನಪಾದವು. ಅದೆಷ್ಟು ಸುಲಭವಾಗಿ ಅದನ್ನ ಮರೆತು ಬಿಟ್ಟಿದ್ದೇವೆ..?? ಅದು ಕೇವಲ ಪರೀಕ್ಷೆಯಲ್ಲಿ ಕೇಳುವ ಪ್ರಶ್ನೆಗೊಂದು ಉತ್ತರವಾಗಿ ಬೇಕಾಯ್ತೆ ವಿನಃ.. ಒಂದು ಅಮೂಲ್ಯ ಪಾಠ ವಾಗಿ ಈಗಲೂ ಉಳಿದು ಕೊಂಡಿಲ್ಲ. " ಸೂರ್ಯನ ಅಲ್ಟ್ರಾ ವಯಲೆಟ್ ರೇಸ್ (ಅತಿ ನೇರಳೆ ಕಿರಣಗಳು), ಕಾಸ್ಮಿಕ್ ರೇಸ್ (ಕ್ಷ ಕಿರಣಗಳು) ಇವಾವುದೂ ಭೂಮಿಯನ್ನು ತಲುಪಲು ಬಿಡದಂತೆ, ಈ ದೂಷಿತ ಕಿರಣಗಳನ್ನೆಲ್ಲ ಸೋಸಿ.. ಭೂಮಿಗೆ ಆರೋಗ್ಯಕರವಾದ ಬೆಳಕು ಯಾವುದು ಬೇಕೋ ಅದನ್ನು ಮಾತ್ರ ಹರಿಸಿ ಬಿಟ್ಟು ಕೊಡ್ತಿರೋ ಓಜೋನ್ ಎಂಬ ದಿವ್ಯ ರಕ್ಷಾ ಪರದೆಯ ಪಾಲಿಗೆ ಕಂಟಕವಾಗಿರುವುದೇ ಈ ಏಸಿ & ಫ್ರಿಜ್ಜ್ ಗಳು.. ಇವುಗಳಿಂದ ಹೊರ ಬರುವ ಕ್ಲೋರೋ ಫ್ಲೋರೋ ಕಾರ್ಬನ್ ಗಳಿಂದ ಈಗಾಗಲೇ ಜಗತ್ತಿನ ಹಲವು ಕಡೆ ಓಜೋನ್ ಪದರವನ್ನ ಸಾಕಷ್ಟು ಹಾಳು ಮಾಡಿರೋ ನಾವು, ಅದನ್ನ ಸಂಪೂರ್ಣವಾಗಿ ನಾಶ ಮಾಡುವತ್ತ ಅತಿ ವೇಗವಾಗಿ ಸಾಗ್ತಾ ಇದ್ದೀವೇನೋ ಅನ್ನಿಸ್ತು. ೨೮ ಕ್ಕಿಂತ ಸ್ವಲ್ಪ ಬಿಸಿಲು ಜಾಸ್ತಿ ಯಾದರೂ ಮನೆಯಲ್ಲಿ ಏಸಿ ಆನ್ ಮಾಡುವ ನಾವು ಸ್ವಲ್ಪ ಪರಿಜ್ಞಾನದಿಂದ ಬದುಕಬೇಕಾಗಿರುವುದು ಅಗತ್ಯತೆಯಲ್ಲ ಅನಿವಾರ್ಯತೆ. ಸುಖಕರ ಜೀವನ ಅನ್ನುವುದು ನಮ್ಮ ಮುಂದಿನ ಬದುಕನ್ನ ಬರಡು ಮಾಡಬಾರದು ಅಲ್ವೇ..?? ಈಗ ಎಲ್ಲಿ ನೋಡಿದರೂ ಏಸಿ.. ಮುಂದಾಲೋಚಿಸಿ ಕೊಳ್ಳುವ ಕಾರಾಗಲಿ, ಕಟ್ಟುವ ಮನೆಯಾಗಲಿ, ಸೇರುವ ಕಂಪನಿಯಾಗಲಿ, ಓಡಾಡುವ ಸಾರಿಗೆಯಾಗಲಿ ಯಾವುದೂ ಇದರಿಂದ ಹೊರತಾಗಿಲ್ಲ. ಮನೆಯಲ್ಲಷ್ಟೇ ಅಲ್ಲ ಈಗೀಗ ಆಫೀಸು, ಅಂಗಡಿ, ತರಕಾರಿ ಮಂಡಿಗಳಲ್ಲೂ ಫ್ರಿಜ್ಜ್..!! ಇವೆಲ್ಲದರ ಹೊರತಾಗಿ ನಾವುಗಳಾರು ಬದುಕಲಾರೆವು ಅನ್ನುವಷ್ಟು ನಾವು ಕೂಡ ಬದಲಾಗಿ ಹೋಗಿದ್ದೇವೆ..!!

ನಮಗಿನ್ನು ನೆನಪಿದೆ.. ಒಂದು ಕಾಲಕ್ಕೆ ಕರೆಂಟ್ ಇಲ್ಲದೆ ಕೂಡ ತಿಂಗಳುಗಟ್ಟಲೆ ಅನಾಯಾಸ ಬದುಕಿದ ನಾವು.. ಈಗ ಹತ್ತು ನಿಮಿಷ ಕರೆಂಟ್ ಇಲ್ಲದೆ ನೆಮ್ಮದಿ ಇಂದ ಬದುಕಲಾರದಷ್ಟು ಪರಾವಲಂಬಿ. ಒಮ್ಮೊಮ್ಮೆ ಅನ್ನಿಸ್ತದೆ ನೀರೆಲ್ಲ ಬತ್ತಿ, ಕಲ್ಲಿದ್ದಲು ಖಾಲಿಯಾಗಿ, ಅಣು ವಿಕಿರಣ ಒಡೆದು ಘಾಸಿ ಮಾಡಿ.. ದ್ರವ ಇಂಧನ ಗಳೆಲ್ಲ ಬರಿದಾಗಿ.. ನಾವೆಲ್ಲಾ ಇಷ್ಟು ಬಲವಾಗಿ ನೆಚ್ಚಿಕೊಂಡ ವಿದ್ಯುತ್ ವ್ಯವಸ್ತೆ ಕೈ ಕೊಟ್ಟರೆ..!! ಮನುಷ್ಯ ಆಗ ಬದುಕಿದಂತೆ ಈಗ ಬದುಕಲಾರ.. ಈಗ ಬದುಕಿದಂತೆ ಮುಂದೆ ಬದುಕಲಾರ..!! ಉತ್ತರಗಳು ನಮ್ಮ ಕಲ್ಪನೆಗಳಿಂದಾಚೆಗೆ ಹರಿದಾದುತ್ತವೆಯೇ ಹೊರತು.. ನಿಖರವಾಗಿ ನಿಲುಕುವುದಿಲ್ಲ. ಇದೆಲ್ಲದರ ಹೊರತಾಗಿ ಬದುಕುವುದನ್ನು ನಾವು ಕಲಿತಿಲ್ಲ.

ಕೆಲಸ ಮುಗೀತು.. ಶ್ರೀನಿವಾಸಣ್ಣ ಹೇಳಿದ ಹಾಗೆ ಅಡ್ಜಸ್ಟ್ ಮಾಡ್ಕೊಂಡು ಬದುಕೋದು ಕಲಿಯೋಣ ಅಂದು ಕೊಂಡು ಗಟ್ಟಿ ಮನಸು ಮಾಡಿ ಏಸಿ ಆಫ್ ಮಾಡಿಟ್ಟು ಕೊಂಡೇ ಮಲಗುತ್ತೇನೆ.. ಸ್ವಲ್ಪ ಹೊತ್ತು ನಿದ್ರಿಸಿದಂತೆ ತೋರುವ ನಾನು ನಂತರ ಹೊರಳಾಡುತ್ತೇನೆ.. ನರಳಾಡುತ್ತೇನೆ.. ಮತ್ತೆ ಬೇಯುತ್ತೇನೆ.. ಹೇಗೋ ಮಲಗುತ್ತೇನೆ. ಬೆಳಿಗ್ಗೆ ಎದ್ದು ನೋಡಿದರೆ ಏಸಿ ಆನಾಗಿರುತ್ತದೆ..!! ನಿದಿರೆಯಲ್ಲಿ ಪರಿಜ್ಞಾನವಿಲ್ಲದ ನಾನು.. ನನ್ನ ಕಮಿಟ್ಮೆಂಟ್ ಅನ್ನು ಮೀರಿರುತ್ತೇನೆ..!! ತಪ್ಪಿಲ್ಲ. ಬದಲಾವಣೆ ಅನ್ನೋದು ಒಂದು ದಿನಕ್ಕೇ ಬರುವಂತದಲ್ಲ.. ಬದಲಾಯಿಸಿ ಬದಲಾಯಿಸಿ ಬರಬೇಕ್ಕಾದು..!! ನಾ ಕೆಲಸ ಮಾಡುವ ಹೊಸೂರಿನ ಎಲ್ಲಾ ಕೋಣೆಗಳೂ ಏಸಿ ನಿಯಂತ್ರಿತ.. ನಾನೇನು ಅವನ್ನು ಕಿತ್ತು ಸುಟ್ಟು ಭಸ್ಮ ಮಾಡಿ ಬಿಡಬೇಕು ಅನ್ನುವ ಸಂಕಲ್ಪ ಕೈ ಗೊಳ್ಳುವುದಿಲ್ಲ. ಅದೆಲ್ಲ ಮನುಷ್ಯರಿಗಾಗಿ ಹಾಕಿಸಿರೋದಲ್ಲ ಕೆಲವೊಂದು ಅತಿ ಸೂಕ್ಷ್ಮ ಯಂತ್ರಗಳ ಆರೋಗ್ಯಕ್ಕೆಂದು ಹಾಕಿಸಿರೋದು. ಸ್ವಾಮೀ ಕಾರ್ಯದ ಜೊತೆ ಸ್ವ ಕಾರ್ಯವೂ ಅನ್ನೋ ಹಾಗೆ ನಾವು ಅದರಲ್ಲಿ ಮಿಂದು ಕೆಲಸ ಮಾಡಿ ಖುಷಿ ಗೊಳ್ಳುತ್ತೇವೆ. ಈಗೀಗ ಅಗತ್ಯ ವಿಲ್ಲದ ಸಮಯದಲ್ಲಿ ಖಂಡಿತ ಏಸಿ ಉಪಯೋಗಿಸದ ಹಾಗೊಂದು ನಿಲುವಿಗೆ ಬಂದು ಪಾಲಿಸುತ್ತಿದ್ದೇನೆ.

ಬರೀ ಏಸಿ ಫ್ರಿಜ್ಜ್ ಮಾತ್ರವಲ್ಲ.. ಅವಶ್ಯಕತೆ ಇಲ್ಲದೆ ಬಳಸುವ ಲೈಟ್, ಫ್ಯಾನ್ ಅಥವಾ ಇನ್ನಿತರೇ ವಿದ್ಯುತ್ ಉಪಕರಣಗಳಾಗಲಿ, ಮನೆಯ ನಲ್ಲಿಯಲ್ಲಿ ಸುಮ್ಮನೆ ಹರಿಯುವ ಹನಿ ಹನಿ ನೀರಾಗಲಿ ಎಲ್ಲವೂ ಅಮೂಲ್ಯವೇ.. ಸರ್ಕಾರ ಒಂದು ಉಕ್ತಿ ಹೇಳಿದೆ.. ಒಂದು ಹನಿ ಉಳಿಸಿದ ನೀರು, ಒಂದು ಹನಿ ಸೃಷ್ಟಿಸಿದಕ್ಕೆ ಸಮ.. ಒಂದು ರುಪಾಯಿ ಉಳಿಸಿದರೆ, ಒಂದು ರುಪಾಯಿ ಗಳಿಸಿದಂತೆ, ಒಂದು ಯುನಿಟ್ ಕರೆಂಟ್ ಉಳಿಸಿದರೆ, ಒಂದು ಯುನಿಟ್ ಉತ್ಪಾದಿಸಿದಂತೆ. ನಿಜ ಉಳಿಸುವುದರಲ್ಲಿ ಉಳಿಗಾಲವಿದೆ.. ಉಳಿಸೋಣ.. ಉಳಿದು ಬದುಕೋಣ. ಪರಿಸರ ಉಳಿಸುವುದರಲ್ಲಿ, ಪರಿಸರ ಬೆಳೆಸುವುದು ಕೂಡಾ ಇದೆ. ನೀರು ಉಳಿಸುವುದು ಹೇಗೆ..?? ವಿದ್ಯುತ್ ಉಳಿಸುವುದು ಹೇಗೆ ಅನ್ನುವ ಸಾಮಾನ್ಯ ವಿಚಾರಗಳ ವಿಶ್ಲೇಷಣೆ ಇಲ್ಲಿ ಅವಶ್ಯಕವೇನೂ ಅಲ್ಲ.. ನಮಗೆಲ್ಲರಿಗೂ ಅವುಗಳನ್ನು ಉಳಿಸುವುದರೆಡೆಗಿನ ಮುಕ್ತ ದಾರಿ ಗೊತ್ತಿದೆ. ಆದರೆ ಹೋಗಲಾರದಷ್ಟು ಸೋಗಲಾಡಿ ತನವಷ್ಟೇ.

ನೂರಕ್ಕೆ ತೊಂಭತ್ತೊಂಭತ್ತು ಮಾರ್ಕುಗಳನ್ನು ಗಳಿಸುವಷ್ಟು ಬುದ್ಧಿವಂತ ಮನುಷ್ಯರು ನಾವಾಗದೇ ಹೋದರು.. ನೂರಕ್ಕೆ ಮೂವತ್ತೈದು ಮಾರ್ಕು ಗಳಿಸಿ ಪಾಸಾಗುವಷ್ಟಾದರು ಶ್ರಮಿಸೋಣ.. ಬದುಕಿನ ಮುಂದಿನ ಘಟ್ಟಕ್ಕೆ ಖಂಡಿತ ಕನಿಷ್ಠ ಮೂವತ್ತೈದು ಮಾರ್ಕುಗಳು ಅವಶ್ಯಕ. ಮೂವತ್ತರಿಂದ ನೂರರ ತನಕ ಮಾರ್ಕು ಗಳಿಸುವಷ್ಟು ಪ್ರಯತ್ನ ಪಡುವ ಯಾರಿಗಾದರು ಸರಿ ನನ್ನ ಕಡೆಯಿಂದ ಒಂದು ಸಲಾಂ.

Friday 26 April 2013

ವ್ಯಕ್ತಿತ್ವ ವಿಕಸನ..

ಸಾರ್.. ಸಾರ್ ಕರಿತಾ ಇದಾರೆ, ಸ್ವಲ್ಪ ಬೇಗ ಬರಬೇಕಂತೆ. ಕಾಂಟ್ರಾಕ್ಟ್ ಕೆಲಸಗಾರ, ಅಟೆಂಡರ್ ವೆಂಕಟೇಶ ನನ್ನ ರೂಮಿನ ಬಾಗಿಲಿಗೊರಗಿ ನಿಂತು ಮಂದ ಸ್ಮಿತದೊಂದಿಗೆ ಉಲಿದ. ನಗುವಾಗ ಅವನೊಂಥರಾ ವಿಶೇಷವಾಗಿ ಇಷ್ಟವಾಗ್ತಾನೆ. ಪಿಯೂಸಿ ಫೇಲ್ ಆದ ಹುಡುಗ ಬಂದು ಕೆಲಸಕ್ಕೆ ಸೇರಿದ್ದು ಇಲ್ಲಿ. ಅವನ ನಗುವಲ್ಲಿ ಯಾರನ್ನಾದರೂ ಸೆಳೆಯುವಂಥಹ ಒಂದು ಮೋಹಕ ಶಕ್ತಿಯಿದೆ. ಈಗಷ್ಟೇ ಹದಿನೆಂಟು ತುಂಬಿದ ಚಿಕ್ಕ ಹುಡುಗ ಅವ ಆಗಾಗ ಮಾಡುವ ತರಲೆಗಳಿಂದಲೂ ತುಂಬಾ ಇಷ್ಟ ಆಗ್ತಿರ್ತಾನೆ

ಯಾವ್ ಸಾರು.. ಏನ್ ಕತೆ ನೋ..??

ಅದೇ ಸಾರ್ ಟ್ರೈನಿಂಗ್ ಕೊಡೋಕೆ ಬಂದಿದಾರಲ್ಲ ಆ ಸಾರ್ ಕರಿತಾ ಇದಾರೆ ಸಾರ್.

ಏನಂತೆ ವಿಷ್ಯ..??

ಸಾರ್.. ಟ್ರೈನಿಂಗ್ ಕ್ಲಾಸ್ ರೂಮಲ್ಲಿ ಪ್ರೊಜೆಕ್ಟರ್ ವರ್ಕ್ ಆಗ್ತಿಲ್ವಂತೆ.. ಅದ್ಕೆ ಅವ್ರು ರಿಪೇರಿಗೆ ಯಾರನ್ನಾದರು ಕರಿ ಅಂದ್ರು.. ಯಾವಾಗಲೂ ಇಂಥದ್ದನ್ನೆಲ್ಲ ನೀವೇ ಆಲ್ವಾ ಸಾರ್ ರಿಪೇರಿ ಮಾಡೋದು ಅದ್ಕೆ ಬನ್ನಿ ಸಾರ್.. ಸಾರ್ ಕರಿತಾ ಇದಾರೆ. 

ಬಂತಲ್ಲಪ್ಪ ನಮ್ಮ ಬುಡಕ್ಕೇ..!! ಮಧ್ಯಾನ ಊಟ ಮುಗಿಸಿ ಬಂದದ್ದು ಆಫೀಸಿಗೆ. ನಮ್ಮೆಲ್ಲ ಸಬ್ ಸ್ಟೇಶನ್ ಗಳಿಗೂ ಆಯಿಲ್ ಟೆಸ್ಟ್ ರಿಪೋರ್ಟ್ ಕಳುಹಿಸುವ ತಯಾರಿಯಲ್ಲಿದ್ದೆ.. ಕಂಪ್ಯೂಟರ್ ನಲ್ಲಿ ಎಲ್ಲಾ ಶಾಖೆಗಳಿಗೂ ಇಂಟೆರ್ ಆಫೀಸ್ ಮೆಮೋ ಟೈಪ್ ಮಾಡ್ತಾ ಇದ್ದೆ. ಸಾಮಾನ್ಯಾವಾಗಿ ಇಂಥ ಸಣ್ಣ ಪುಟ್ಟ ತೊಂದರೆಗಳನ್ನ ನಾನೂ ಅಥವಾ ಪ್ರಶಾಂತ್ ಬಗೆ ಹರಿಸೋದರಿಂದ ಹುಡುಗ ನೇರ ನನ್ನ ಬಳಿ ಬಂದು ನಿಂತಿದ್ದ. ನನ್ನನ್ನೇ ಕರೆಯಲು ಇನ್ನೂ ಒಂದು ಕಾರಣ.. ಟ್ರೈನಿಂಗ್ ಕ್ಲಾಸ್ ರೂಮು ನನ್ನ ಕೊಠಡಿಗೆ ಪಕ್ಕದಲ್ಲೇ ಇದ್ದುದರಿಂದ. ಸರಿ ಗೊಣಗಿಕೊಂಡೇ ಎದ್ದು ಹೋದೆ. ಡೋರ್ ನಾಕ್ ಮಾಡಿ ಎಕ್ಸ್ ಕ್ಯೂಸ್ ಮಿ ಸಾರ್ ಅಂದು ಒಳಗೆ ಹೋದೆ, ವಾಟ್ ಇಸ್ ದಿ ಪ್ರಾಬ್ಲೆಮ್ ವಿತ್ ಪ್ರೊಜೆಕ್ಟರ್ ಅಂದೆ. ಪ್ರೊಜೆಕ್ಟರ್ ಇಸ್ ನಾಟ್ ವರ್ಕಿಂಗ್.. ಕ್ಯಾನ್ ಯೂ ಪ್ಲೀಸ್ ಮೇಕ್ ಇಟ್ ರೆಡಿ ನವ್..?? ಇಟ್ಸ್ ಫಾರ್ ಅರ್ಜೆಂಟ್. ಶೂರ್ ಸಾರ್ ಅಂದು ಪ್ರೊಜೆಕ್ಟರ್ ಮತ್ತು ಅದಕ್ಕೆ ಲಿಂಕಿಸಿದ್ದ ಲ್ಯಾಪ್ ಟಾಪ್ ತಪಾಸಣೆಗೆ ಕೂತೆ.

ಅದು ನಮ್ಮ ಕಂಪನಿಯ ಸೀನಿಯರ್ ಇಂಜಿನಿಯರ್ ಹುದ್ದೆಯ ಮೇಲ್ಪಟ್ಟ ವರ್ಗದವರಿಗಾಗಿ ಇರಿಸಿದ್ದ "ವ್ಯಕ್ತಿತ್ವ ವಿಕಸನ"ದ ಕುರಿತಾಗಿನ ಮೂರು ದಿನದ ತರಬೇತಿ ಕಾರ್ಯಶಾಲಾ ಕಾರ್ಯಕ್ರಮ. ನಮ್ಮ ಕಂಪನಿಯ ಬೇರೆ ಬೇರೆ ಕಡೆಯಿಂದ.. ದೂರದೂರದಿಂದ.. ಹಲವರು ಉತ್ತರ ಭಾರತದಿಂದ ಸುಮಾರು ಇಪ್ಪತ್ನಾಲ್ಕು ಜನ ಟ್ರೈನಿಂಗ್ ನಿಮಿತ್ತ ಬಂದಿದ್ದರು. ಉತ್ತರ ಭಾರತದವರ ಮುಖದ ಹೊರತಾಗಿ ದಕ್ಷಿಣದ (ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರ) ಬಹುಪಾಲು ಎಲ್ಲಾ ಸಹವರ್ತಿಗಳ ಮುಖ ಪರಿಚಯ ನನಗುಂಟು. ಕೆಲವರ ಬಳಿ ಗಾಢ ಮೈತ್ರಿಯೂ ಉಂಟು ಕಾರಣ ಈ ಮೊದಲು ಇಲ್ಲಿರುವ ಹಲವರ ಮಾರ್ಗದರ್ಶನದಡಿಯಲ್ಲಿ ನಾನು ಕೆಲಸ ಮಾಡಿದ್ದೇನೆ. ಅದೂ ಅಲ್ಲದೆ ಟೆಸ್ಟಿಂಗ್ ನಿಮಿತ್ತ ದಕ್ಷಿಣ ಭಾರತದ ಎಲ್ಲಾ ಉಪ ಕೇಂದ್ರಗಳಿಗೂ (ಸ್ಯಾಟಿಲೈಟ್ ಅನ್ಕೊಂಡು ಬಿಟ್ಟೀರ.. ಅದು ವಿದ್ಯತ್ ಉಪಕೇಂದ್ರ) ನಾನು ಆಗಾಗ ಭೇಟಿ ನೀಡುತ್ತಲೇ ಇರುತ್ತೆನಾದ್ದರಿಂದ ದಕ್ಷಿಣದ ಬಹುಪಾಲು ಆಫೀಸರ್ ಗಳ ಪರಿಚಯ ನನಗುಂಟು.

ನಲವತ್ತೈದು ಐವತ್ತು ವರ್ಷದೊಳಗಿನ ಆ ವ್ಯಕ್ತಿಯ ಇಂಗ್ಲಿಶ್ ಉಚ್ಚಾರಣೆಯ ಧಾಟಿ ಯಾವತ್ತಿಗೂ ನನ್ನನ್ನ ಅತೀವ ಅನ್ನುವಷ್ಟು ಮೋಡಿ ಮಾಡುತ್ತದೆ. ಅಷ್ಟೊಂದು ಸ್ಪಷ್ಟ, ಸರಾಗ ಮತ್ತು ನಿರರ್ಗಳವಾಗಿ ಇಂಗ್ಲೀಷು ಮಾತನಾಡುತ್ತಾರೆ ಆ ವ್ಯಕ್ತಿ. ಅವರ ಹೆಸರು ಕ್ಸೇವಿಯರ್ ಈ ಟ್ರೈನಿಂಗ್ ಪ್ರೋಗ್ರಾಮ್ ನ..  ಆ ದಿನದ, ಮಧ್ಯಾನದ ಸೆಶನ್ ನ ಫ್ಯಾಕಲ್ಟಿ (ಒಂದರ್ಥದಲ್ಲಿ ಅತಿಥಿ ಉಪನ್ಯಾಸಕರು ಅಂದ್ಕೋಬಹುದು) ಅವರಾಗಿದ್ದರು. ಕ್ಸೇವಿಯರ್ ಸಾರ್ ಅನ್ನು ನಾನು ಮೊದಲಿಂದಲೂ ಬಲ್ಲೆ. ನಮ್ಮ ಕಂಪನಿಯ ಹಲ ವರ್ಗದ, ಹಲ ವಿಭಾಗದ, ಹಲ ನಮೂನೆಯ ಕಾರ್ಯಶಾಲೆಗಳಿಗೆ ಹಲವು ಬಾರಿ ಅವರು ಅತಿಥಿ ಉಪನ್ಯಾಸಕರಾಗಿ ಬಂದಿದ್ದಾರೆ. ನಾನೂ ಕೂಡ "communication skills in role effectiveness" ಅನ್ನುವ ಒಂದು ಕಾರ್ಯಶಾಲೆಯಲ್ಲಿ ಅವರ ಉಪನ್ಯಾಸಕ್ಕೆ ಕೆಳುಗನಾಗಿದ್ದೆ. ಅವರ ಪಾಠಕ್ಕೆ ಮೈ ಮರೆತು ಮನಸೋತಿದ್ದೆ. ಅದಲ್ಲದೆಯೂ ಹಲವು ಕಾರ್ಯಶಾಲೆಗಳಲ್ಲಿ ಇಂತ ಸಣ್ಣ ಪುಟ್ಟ ತಾಂತ್ರಿಕ ತೊಂದರೆಗಳನ್ನ ಬಗೆ ಹರಿಸಿ ಕೊಡುವುದರಲ್ಲಿ ಆಗಾಗ ಅವರಿಗೆ ಮುಖಾಮುಖಿಯಾಗಿದ್ದೆ. ಅವತ್ತಿಂದಲೂ ಅವರೆಂದರೆ.. ಅವರ ಉಪನ್ಯಾಸವೆಂದರೆ ಅಂತಹ ಒಂದು ಅಭಿಮಾನ. ಅವರ ಉಪನ್ಯಾಸವನ್ನೊಮ್ಮೆ ಕೇಳಿದವರಿಗೆಲ್ಲ ಅವರನ್ನು ಇಷ್ಟಪಡದೆ ಇರಲಾರರು ಅನ್ನುವಷ್ಟು ನಂಬಿಕೆ ಅವರ ಮಾತುಗಳಲ್ಲಿ, ಅವರ ವರ್ಚಸ್ಸಿನಲ್ಲಿ ಕಾಣಿಸುತ್ತದೆ. 

ಲ್ಯಾಪ್ ಟಾಪ್ ನ ಡಿಸ್ ಪ್ಲೇ ಸೆಟ್ಟಿಂಗ್ಸ್ ನೊಳಗೆ ಕನೆಕ್ಟ್ ಎ ಪ್ರೊಜೆಕ್ಟರ್ ಅನ್ನುವ ಸೆಟ್ಟಿಂಗ್ ಮಾಡಿದೊಡನೆ ಲ್ಯಾಪ್ ಟಾಪಿನಲ್ಲಿ ಬಿತ್ತರವಾಗುತ್ತಿದ್ದ ಪವರ್ ಪಾಯಿಂಟ್ ಒಂದರ ಸ್ಲೈಡ್ ಸ್ಕ್ರೀನಿನಲ್ಲಿ ಪ್ರತ್ಯಕ್ಷವಾಯಿತು. ಆ ಸ್ಲೈಡ್ ನಲ್ಲಿ ಎರಡು ಒಂದೇ ಬಗೆಯ ಚಿತ್ರಗಳಿದ್ದು.. ಆ ಚಿತ್ರದ ತಲೆ ಬರಹ "Find the 12 difference among these image" ಎಂದಿತ್ತು. ಸಿಂಪಲ್.. ಒಂದೇ ಥರವಿದ್ದ ಆ ಎರಡು ಚಿತ್ರಗಳಲ್ಲಿದ್ದ ಹನ್ನೆರಡು ವೆತ್ಯಾಸಗಳನ್ನ ಅಲ್ಲಿ ಕಂಡು ಹಿಡಿಯ ಬೇಕಿತ್ತು. ಇದು ನನಗೂ ಆಕರ್ಷಕವೆನಿಸಿ ಅಲ್ಲೇ ಮೂಲೆಯೊಂದರಲ್ಲಿ ಆಸಕ್ತಿಯಿಂದ ನಿಂತೆ. ನಾನಲ್ಲಿ ನಿಂತದ್ದು ಯಾರಿಗೂ ತೊಂದರೆ ಏನು ಅನ್ನಿಸಲಿಲ್ಲ. ಕ್ಸೇವಿಯರ್ ಸಾರ್ ಆ ಚಿತ್ರದ ಕುರಿತಾಗಿ ಅದರ ಸವಾಲಿನ ಕುರಿತಾಗಿ ಹೇಳಲು ಶುರು ಮಾಡಿದರು. 

ನೀವು ಮಾಡ ಬೇಕಿರೋದು ಇಷ್ಟೇ. ನೋಡೋಕೆ ಒಂದೇ ಥರವಿರುವ ಈ ಎರಡೂ ಚಿತ್ರಗಳಲ್ಲಿ ಸಣ್ಣ ಸಣ್ಣದೆ ಎಂಬಂತೆ ಹನ್ನೆರಡು ವೆತ್ಯಾಸಗಳಿವೆ.. ನೀವದನ್ನ ಕಂಡು ಹಿಡಿದು ಹೇಳಬೇಕು. ಅವರು ಹಾಗೆ ಹೇಳಿ ಮುಗಿಸಿದ್ದೇ ತಡ ಟ್ರೈನಿಂಗ್ ಬಂದಿದ್ದ ಹಲವರು ಅದರೊಳಗಿನ ಒಂದೊಂದೇ ತಪ್ಪುಗಳನ್ನ ಎತ್ತಿ ತೋರಿಸಿ ಹೇಳಲು ಶುರು ಮಾಡಿದರು. ಕ್ಸೇವಿಯರ್ ಸಾರ್ ಮತ್ತೆ ಮಾತಿಗೆ ಶುರುವಿಟ್ಟು wait I will give a competition among you ಎಂದರು. ಮೊದಲು ಅಲ್ಲಿದ್ದ ಇಪ್ಪತ್ನಾಲ್ಕು ಜನರನ್ನ ಆರು ಜನರ ಒಂದು ತಂಡದಂತೆ ನಾಲ್ಕು ತಂಡವನ್ನಾಗಿ ವಿಂಗಡಿಸಿ, ಒಂದೊಂದು ತಂಡವನ್ನೂ ಒಂದೊಂದು ಮೂಲೆಗೆ ನಿಲ್ಲಿಸಿದರು. ಪ್ರತೀ ತಂಡಕ್ಕೂ ಅಲ್ಲಿ ಸ್ಕ್ರೀನಿನಲ್ಲಿ ಕಾಣುತ್ತಿದ್ದ ಚಿತ್ರದ ಒಂದೊಂದು ಪ್ರತಿಯನ್ನು ಕೈಗಿತ್ತು ಎರಡೂ ಚಿತ್ರಗಳಲ್ಲಿನ ಸಾಮ್ಯತೆ & ವೆತ್ಯಾಸವನ್ನ ಆ ಪ್ರತಿಯಲ್ಲಿ ಗುರುತಿಸಿ ಕೊಡಬೇಕೆಂದು ಆ ಸ್ಪರ್ಧೆಗೆ ನಿಯಮಗಳನ್ನು ಹೇಳಲು ಶುರುವಿಟ್ಟರು.

ಆ ಸ್ಪರ್ಧೆಯಲ್ಲಿನ ನಿಯಮಗಳು ಹೀಗಿದ್ವು.. 

* ಯಾವ ಗುಂಪೂ ಮತ್ತೊಂದು ಗುಂಪಿನ ಜೊತೆ ಮಾತನಾಡುವಂತಿಲ್ಲ. 
* ಸ್ಪರ್ಧೆಗೆ ಕಾಲಾವಕಾಶ ಹತ್ತು ನಿಮಿಷ. 
* ಹತ್ತು ನಿಮಿಷದ ಒಳಗೆ ಅವೆರಡು ಚಿತ್ರಗಳಲ್ಲಿನ ಎಲ್ಲಾ ಸಾಮ್ಯತೆಗಳನ್ನು ಮೊದಲು ಕಂಡು ಹಿಡಿವ ತಂಡ ವಿಜಯೀ..
* ಹನ್ನೆರಡಕ್ಕೆ ಹನ್ನೆರಡೂ ಸಾಮ್ಯತೆಗಳನ್ನ ಕಂಡು ಹಿಡಿದ ತಂದ ಮಾತ್ರವೇ ವಿಜಯಿ. 
* ಒಂದು ವೇಳೆ ವಿಜಯೀ ತಂಡ ಕಂಡು ಹಿಡಿದ ಸಾಮ್ಯತೆಗಳಲ್ಲಿ ಯಾವುದಾದರೂ ತಪ್ಪುಗಳು ಗೋಚರಿಸಿದಲ್ಲಿ ಆ ತಂಡಕ್ಕೆ ಪ್ರತೀ ತಪ್ಪಿಗೆ ಒಂದೊಂದು ನೆಗೆಟಿವ್ ಮಾರ್ಕ್ ನೀಡಲಾಗುವುದು. 
* ಅತಿ ಹೆಚ್ಚು ನೆಗೆಟಿವ್ ಮಾರ್ಕ್ ಪಡೆದ ತಂಡ ಸೋತಂತೆ ಲೆಕ್ಖ.

ಸ್ಪರ್ಧೆ ಆರಂಭವಾಯಿತು. ಆರು ಜನರ ಪ್ರತೀ ತಂಡವೂ ತಮ್ಮ ತಮ್ಮಲ್ಲೇ ಚರ್ಚಿಸುತ್ತಾ ಚಿತ್ರಗಳಲ್ಲಿನ ಸಾಮ್ಯತೆಗಳನ್ನ ಗುರುತಿಸುತ್ತಾ.. ಅವುಗಳನ್ನ ಪೆನ್ ಅಥವಾ ಪೆನ್ಸಿಲ್ ಗಳಿಂದ ಮಾರ್ಕ್ ಮಾಡುತ್ತಾ ಹೋದರು. ಪ್ರತೀ ಪ್ರತೀ ಸಾಮ್ಯತೆ ಸಿಕ್ಕಾಗಲೂ ಪ್ರತಿಯೊಬ್ಬರ ಮುಖದಲ್ಲಿ ಸಂತಸ ಪುಟಿದೇಳುತ್ತಿತ್ತು. ಮುಂದಿನ ಸಾಮ್ಯತೆ ಕಂಡು ಹಿಡಿಯುವುದರೆಡೆಗೆ ಅತೀ ಉತ್ಸಾಹಿತರಾಗಿ ಮುಂದುವರೆಯುತ್ತಿದ್ದರು. ನಾನು ಕೂಡಾ ಸ್ಕ್ರೀನಿನಲ್ಲಿ ಕಾಣುತ್ತಿದ್ದ ಚಿತ್ರವನ್ನೇ ದಿಟ್ಟಿಸುತ್ತ ಅವೆರಡೂ ಚಿತ್ರಗಳೊಳಗಣ ವೆತ್ಯಾಸಗಳನ್ನ ಗುರುತಿಸಲು ಶುರು ಮಾಡಿದ್ದೆ. ಕೋಳಿಯೊಂದು ತನ್ನ ಮರಿಗಳೊಂದಿಗೆ ತಿಪ್ಪೆಯೊಂದರಲ್ಲಿ ಆಹಾರ ಕೆದಕುತ್ತಿದ್ದ ಚಿತ್ರ. ಕೂಲಂಕುಶವಾಗಿ ಗುರುತಿಸಿದರೆ ಸಣ್ಣ ಸಣ್ಣ ವೆತ್ಯಾಸಗಳು ಗೋಚರಿಸುತ್ತಿದ್ದವು. ಐದು ನಿಮಿಷದ ಕಾಲಾವಧಿಯ ಒಳಗೆ ಬಹುಪಾಲು ಎಲ್ಲರೂ ಅವೆರಡು ಚಿತ್ರಗಳಲ್ಲಿನ ಗರಿಷ್ಠ ಸಾಮ್ಯತೆಗಳನ್ನು ಕಂಡು ಹಿಡಿದು ಮುಗಿಸಿದ್ದರು. ಬಹುಪಾಲು ಎಲ್ಲರೂ ಒಂಭತ್ತು ಹತ್ತು ಹನ್ನೊಂದು ಸಾಮ್ಯತೆಗಳ ಆಸುಪಾಸಿನಲ್ಲಿ ಸಿಕ್ಕು ತಮ್ಮ ತಮ್ಮಲ್ಲೇ ಮುಂದಿನ ಸಾಮ್ಯತೆಯ ಕುರಿತಾಗಿ ಚರ್ಚೆಗಿಳಿದಿದ್ದರು. ನಾನ್ನ ಕೈಲಿ ಯಾವುದೇ ಪ್ರತಿ ಇಲ್ಲವಾದರೂ.. ನಾನೂ ಸುಮ್ಮನಿರದೆ ಸ್ಕ್ರೀನಿನಲ್ಲಿ ಕಾಣುತ್ತಿದ್ದ ಚಿತ್ರವನ್ನೇ ದಿಟ್ಟಿಸಿ ಸಾಮ್ಯತೆಗಳನ್ನ ಗುರುತಿಸಲು ತೊಡಗಿದ್ದೆ. ಸ್ಪರ್ಧಾಳುಗಳ ಗಿಜಿಗುಡುವ ಚರ್ಚೆಗೆ ವಿಚಲಿತನಾಗುತ್ತಿದ್ದ ನನಗೆ, ಸ್ಕ್ರೀನಿನಲ್ಲಿ ಕಾಣುತ್ತಿದ್ದ ಚಿತ್ರಗಳ ಸೂಕ್ಷ್ಮ ಸಾಮ್ಯತೆಗಳು ತತ್ತಕ್ಷಣಕ್ಕೆ ಮಾಯವಾಗಿ ಗೊಂದಲ ಉಂಟುಮಾಡುತ್ತಿದ್ದವು. ನಾನು ಮತ್ತೆ ಮನಸಲ್ಲೇ ಗೊಣಗುತ್ತಲೇ ಮತ್ತೆ ಅದರಲ್ಲಿನ ಸಾಮ್ಯತೆಗಳನ್ನ ಕಂಡು ಹಿಡಿಯುವಲ್ಲಿ ಪ್ರಯತ್ನ ಹಾಕುತ್ತಿದ್ದೆ. ಎಷ್ಟು ಪ್ರಯತ್ನ ಹಾಕುತ್ತಿದ್ದರೂ ಹನ್ನೊಂದರ ಗಡಿ ದಾಟಿದ ನಮ್ಮ್ಯಾರಿಗೂ ಹನ್ನೆರಡನೆ ಸಾಮ್ಯತೆ ಗೋಚರಿಸುತ್ತಲೇ ಇಲ್ಲ. ಹನ್ನೆರಡೂ ಸಾಮ್ಯತೆಗಳನ್ನು ಪತ್ತೆ ಹಚ್ಚದ ಹೊರತು ಯಾರೂ ಸ್ಪರ್ಧೆ ಮುಗಿಸುವಂತಿಲ್ಲ. ಹತ್ತು ನಿಮಿಷವಾಯಿತು ಯಾವ ತಂಡವೂ ತಮ್ಮದು ಪೂರ್ತಿಯಾಯಿತು ಎಂದು ಮುಂದೆ ಬರಲಿಲ್ಲ. ನನ್ನ ಪರಿವಿಕ್ಷಣೆಯಲ್ಲಿಯೂ ಹನ್ನೆರಡು ಸಾಮ್ಯತೆಗಳು ಪೂರ್ತಿ ಸಿಕ್ಕಿರಲಿಲ್ಲ. ಕ್ಸೇವಿಯರ್ ಸಾರ್ ಇನ್ನೂ ಎರಡು ನಿಮಿಷಗಳ ಹೆಚುವರಿ ಕಾಲಾವಕಾಶ ಕೊಟ್ಟರೂ ಯಾರಲ್ಲಿಯೂ ಕಂಡು ಹಿಡಿಯಲಾಗಲಿಲ್ಲ. 

ಆ ನಾಲ್ಕೂ ತಂಡಗಳ ಶೋಧನೆಯ ಅನುಸಾರ ಕ್ಸೇವಿಯರ್ ಸಾರ್ ಆ ಎರಡೂ ಚಿತ್ರಗಳಲ್ಲಿನ  ವೆತ್ಯಾಸಗಳನ್ನು ಪವರ್ ಪಾಯಿಂಟ್ ನ ಸ್ಲೈಡ್ ನಲ್ಲಿ ಮಾರ್ಕ್ ಮಾಡುತ್ತಾ ದಾಖಲಿಸುತ್ತಾ ಹೋದರು. ಎಲ್ಲಾ ತಂಡಗಳ ಒಪ್ಪಿಗೆಯಂತೆ ಚಿತ್ರಗಳಲ್ಲಿನ ಹನ್ನೊಂದು ಸಾಮ್ಯತೆಗಳು ಪತ್ತೆಯಾದವು. ಯಾವ ತಂಡಕ್ಕೂ ಹನ್ನೆರಡನೆಯದು ನಿಲುಕಿರಲಿಲ್ಲ. ಕ್ಸೇವಿಯರ್ ಸಾರ್ ಮೂಲೆಯಲ್ಲಿ ನಿಂತಿದ್ದ ನನ್ನತ್ತ ತಿರುಗಿ.. ನಿನಗೆ ಬೇರೆ ಯಾವುದಾದರೂ ವೆತ್ಯಾಸ ಕಾಣಿಸುತ್ತೇನೆಪ್ಪ ಅಂದ್ರು. ನಾನು ಅದೆಷ್ಟು ಪ್ರಯತ್ನ ಪಟ್ಟರೂ ಹನ್ನೆರಡನೆಯ ಸಾಮ್ಯತೆ ಕಾಣಿಸಲೇ ಇಲ್ಲದರ ಸಲುವಾಗಿ ನಾನು ಕೂಡ ನನ್ನ ಸೋಲನ್ನು ಒಪ್ಪಿಕೊಳ್ಳಲೇ ಬೇಕಾಯ್ತು. ಕಡೆಗೆ ಕ್ಸೇವಿಯರ್ ಸಾರ್ ಎಲ್ಲರನ್ನೂ ಅವರವರ ಸ್ಥಳಗಳಲ್ಲಿ ಕೂರುವಂತೆ ಸೂಚಿಸಿದರು . ತದನಂತರ ಆ ಚಿತ್ರದ ಕುರಿತಾಗಿ ಮಾತನಾಡಲು ಶುರುವಿಟ್ಟರು.. 

ಸರಿಯಾಗಿ ನೋಡ್ತಾ, ಇಲ್ಲಿ ನೀವು ಸ್ವಲ್ಪ ನಿಮ್ಮತನವನ್ನ ಉಪಯೋಗಿಸಿದ್ದಿದ್ರೆ ಹನ್ನೊಂದನೇ ತಪ್ಪನ್ನ ಕಂಡು ಹಿಡಿದ ಮರುಕ್ಷಣವೇ ನೀವು ಗೆದ್ದಿರುತ್ತಿದ್ದಿರಿ. ಆ ಹನ್ನೆರಡನೆ ತಪ್ಪು ಬೇರೆಲ್ಲೂ ಇಲ್ಲ.. ನಿಮ್ಮೊಳಗಿದೆ..!! ನಿಮಗೆ ನಿಮ್ಮೊಳಗಿಲ್ಲದ ನಂಬಿಕೆಯಲ್ಲಿದೆ..!! ನಿಜ ಅಂದ್ರೆ ಆ ಚಿತ್ರದೊಳಗೆ ಹನ್ನೆರಡನೇ ತಪ್ಪೇ ಇಲ್ಲ. its a tricky game.. ನಾನಿಲ್ಲಿ ಸೇರಿಸಿದ ಹನ್ನೆರಡು ಅನ್ನುವ ಪದವೇ twist. ನಾನು ಕೇವಲ ಚಿತ್ರವನ್ನ ಕೊಟ್ಟು ಇದರಲ್ಲಿರುವ ಸಾಮ್ಯತೆಗಳನ್ನ ಕಂಡು ಹಿಡೀರಿ ಅಂತ ಕೊಟ್ಟಿದ್ದಿದ್ರೆ ಖಂಡಿತ ನೀವೆಲ್ಲರೂ ಐದು ನಿಮಿಷಗಳ ಒಳಗೆ ಕಂಡು ಹಿಡಿದು ಕೊಟ್ಟಿರುತ್ತಿದ್ದಿರಿ.. ಯಾಕಂದ್ರೆ ಆಗ ಅದು ಕೇವಲ ನಿಮ್ಮ ಪಾಲಿಗೊಂದು ಆಟವಾಗಿರುತ್ತಿತ್ತು.. ಆದರೆ ನಾನೊಂದು ಸಂಖ್ಯೆಯನ್ನ ಕೊಟ್ಟು ನಿಮ್ಮೊಳಗೆ ನಾಲ್ಕು ತಂಡವನ್ನಾಗಿ ಆಡಲು ಬಿಟ್ಟದ್ದೇ ಅದು ಪಂದ್ಯವಾಯ್ತು.. ಪಂದ್ಯ ಅಂದರೆ ಅಲ್ಲಿ ಗುರಿ. ಆಟಕ್ಕೂ ಪಂದ್ಯಕ್ಕೂ ನಡುವೆ ಬಹಳ ವೆತ್ಯಾಸವಿದೆ..!! ನಿಮಗೆ ನಾನು ಕೊಟ್ಟ ಗುರಿಯನ್ನ ಪೂರ್ತಿಯಾಗಿ ಮುಗಿಸೋ ಕೆಲಸವೇ ಹೊರತು ಯಾರಿಗೂ ಅನುಭವಿಸಿ ಅದನ್ನಾಡುವ ಮನಸ್ಸಿಲ್ಲ. ಎಲ್ಲರಿಗೂ ಗೆಲ್ಲಬೇಕೆನ್ನುವ ಛಲ.. ಹಠ.. ಒಬ್ಬೊಬ್ಬರ ನಡುವೆಯೂ ಸ್ಪರ್ಧೆ..!! ನಿಜವಾಗಿಯೂ ಅಲ್ಲಿ ನಾವಾಗ ಕಳೆದು ಕೊಳ್ಳೋದು ಅಂದ್ರೆ ನಮ್ಮತನವನ್ನ ಮಾತ್ರವಲ್ಲ, ಆ ಕ್ಷಣಕ್ಕೆ ನಮ್ಮೊಳಗಿರಬೇಕಾದ ಸಾಮಾನ್ಯ ಜ್ಞಾನವನ್ನ ಕೂಡಾ. ಆ ನಮ್ಮತನ, ನಮ್ಮ ಸಾಮಾನ್ಯ ಜ್ಞಾನ ನಮ್ಮೊಳಗೇ ಇಲ್ಲದೇ ಹೋಗೋದೇ ನಮ್ಮ ಸೋಲಿಗೆ ಕಾರಣ. ನಿಜ ಜಗತ್ತಿನೊಳಗೆ ಈಗ ಇಂಥವೇ ಸ್ಪರ್ಧೆಗಳು.. ಅದನ್ನ ಆಟವಾಗಿ ಆಡುವ ವ್ಯವಧಾನವಾಗಲಿ, ಸಂಯಮವಾಗಲಿ ಯಾರಲ್ಲೂ ಇಲ್ಲ. ಒಂದೊಂದು ಗುಂಪಲ್ಲೂ ನಾಲ್ಕು ಜನರಿದ್ದೂ ನಾಲ್ಕು ಜನರ ಬುದ್ಧಿಶಕ್ತಿಗೆ ಬಲವಿಲ್ಲ.. ಗೆಲುವಿಲ್ಲ. ಅದರ ಪರಿಣಾಮವೇ ನಾಲ್ಕು ಜನ ಬುದ್ಧಿವಂತರಿದ್ದೂ ಸಮಸ್ಯೆ ಬಗೆ ಹರಿಯಲಿಲ್ಲ..!! ಇಷ್ಟೆಲ್ಲಾ ಬುದ್ಧಿವಂಥರಿದ್ದೂ, ನಾಲ್ಕು ತಂಡಗಳಿದ್ದೂ ಯಾರಿಂದಲೂ ಗೆಲ್ಲಲಾಗಲಿಲ್ಲ. ಜಗತ್ತಿನಲ್ಲಿ ಇಂಥಾ ಸಮಸ್ಯೆಗಳಿಗೆ ನಾವೆಲ್ಲಾ ಆತುರ ಪಟ್ಟು ಸ್ಪಂದಿಸೋದೆ ಹೀಗೆ..!! ಸಮಸ್ಯೆ ನೋಡಿದ್ರೆ ಹೀಗೆ ತುಂಬಾ ಸಿಲ್ಲಿ..!! ಆದರೆ ಫಲಿತಾಂಶ ಸೊನ್ನೆ..!! ದೊಡ್ಡ ದೊಡ್ಡ ಬೀಗ ಯಾವತ್ತೂ ತೊರೆದು ಕೊಳ್ಳೋದು ಸಣ್ಣ ಸಣ್ಣ ಕೀಲಿಗಲಿಂದಲೇ..!!

ಇದೆಲ್ಲ ಹೇಳಿದ ನಂತರ ಕ್ಸೇವಿಯರ್ ಸಾರ್ ನಮಗೆಲ್ಲ ಒಂದು ವೀಡಿಯೋ ತೋರಿಸಲು ಶುರು ಮಾಡಿದರು..!! ತ್ರೀ ಈಡಿಯಟ್ಸ್ ಚಿತ್ರದ ಆ ದೃಶ್ಯವನ್ನ ಖಂಡಿತ ನಾವ್ಯಾರು ಮರೆಯೋ ಹಾಗಿಲ್ಲವಲ್ಲ..!! ಅದೇ FARHANITRATE.. PRERAJULISATION ಪ್ರಸಂಗ..!! 
ಪ್ರಿನ್ಸಿಪಾಲ್ ನಾಯಕನನ್ನ ಎಳಕೊಂಡು ಹೋಗಿ ಬೋರ್ಡ್ ಮುಂದೆ ನಿಲ್ಲಿಸಿ, ಇವತ್ತು ನೀನು ನಮಗೆಲ್ಲ ಕಲಿಸು ಅಂತ ಬಿಟ್ಟಾಗ ಅಮೀರಖಾನ್ ಬೋರ್ಡ್ ಮೇಲೆ ಈ ಪದಗಳನ್ನ ಬರೆದು ಮೂವತ್ತು ಸೆಕೆಂಡ್ ಗಳ ಒಳಗೆ ಅದನ್ನ ಕಂಡು ಹಿಡಿಯುವ ಕೆಲಸ ಕೊಟ್ಟಾಗ ಎಲ್ಲರು ರೇಸಿಗಿಳಿಯುವ ಪ್ರಸಂಗ..!! ನಿಜಕ್ಕೂ ಆ ದೃಶ್ಯ ಎಷ್ಟು ತಾತ್ವಿಕವಾದದ್ದು ಅಲ್ವಾ..?? ಅಲ್ಲಿನ ಪ್ರಿನ್ಸಿಪಾಲ್ ಮತ್ತು ವಿದ್ಯಾರ್ಥಿಗಳಂತೆ ನಮಗ್ಯಾರಿಗೂ ನಮ್ಮ ಸಮಸ್ಯೆಗಳನ್ನು ಕೂಲಂಕುಶವಾಗಿ ಪರಿಶೀಲಿಸೋ ತಾಳ್ಮೆ ಕೂಡ ಇಲ್ಲ.. ಎಲ್ಲರ ಗಮನವೂ ಅದನ್ನ ಬಗೆಹರಿಸೋದಕ್ಕೆ.. ಗೆಲ್ಲೋದಕ್ಕೆ. ಅಲ್ಲಿನ ತಪ್ಪುಗಳನ್ನ ಕಂಡು ಹಿಡಿಯೋಕೆ ಯಾರೂ ಇಂಜಿನಿಯರಿಂಗ್ ಮಾಡಿರ ಬೇಕಿರಲಿಲ್ಲ ಬುದ್ದಿವುಳ್ಳ ಯಾವ ಸಾಮಾನ್ಯ ಮನುಷ್ಯನಿಗೂ ಸಾಕು. ಆದರೆ ಯಾರೂ ತಮ್ಮ ಬುದ್ಧಿಯನ್ನ ಸರಿಯಾಗಿ ಉಪಯೋಗಿಸಿ ಕೊಳ್ಳೋದಿಲ್ಲ. ಇಂಜಿನಿಯರಿಂಗ್ ಓದ್ತಾ ಇದಿವಿ.. ಎಕ್ಸಾಮ್ ಬರೆದು ಪಾಸಾಗಿ ಒಂದು ಕೆಲಸ ಹಿಡೀಬೇಕು.. ಕೆಲಸ ಸಿಕ್ತು.. ಸಂಬಳ ತಗೊಂಡು ನಮ್ಮ ಜೀವನವನ್ನ ಅಷ್ಟರಲ್ಲೇ ಸಾಗಿಸೋದನ್ನ ಕಲೀಬೇಕು.. ಅಷ್ಟೇ ಆಗೋಯ್ತು ನಮ್ಮ ಜೀವನ. ನಮ್ಮ ಜೀವನದ ಸುತ್ತ ಒಂದು ಬೇಲಿಯನ್ನ ನಾವು ಕಟ್ಟಿಕೊಂಡಂತೆ ಜಗತ್ತು ತನ್ನ ಸುತ್ತ ಕಟ್ಟಿಕೊಂಡಿರೋದಿಲ್ಲ.. ಇಲ್ಲಿ ಸೋತವನಿಗೆ ಸುಂಕವಿಲ್ಲ.. ಎಷ್ಟೇ ಬುದ್ಧಿವಂತನಾದರೂ, ಬಲವುಳ್ಳವನಾದರೂ ಅವನು ಯಾರಿಗೂ ಬೇಡ..!! ಜಗತ್ತಿಗೆ ಬೇಕಾಗಿರೋದು ಗೆಲುವು.. ಗೆಲುವು ಕಾಣಲು ಬೇಕಿರೋದು ಗೆಲುವು ದಕ್ಕಿಸಿ ಕೊಡೋನು.. ಗೆಲುವು ದಕ್ಕಿಸಿ ಕೊಡುವವನಿಗೆ ಬೇಕಿರೋದು ಇವೆಲ್ಲ ಬೇಲಿಯನ್ನ ಮೀರಿದ ಬುದ್ಧಿಮತ್ತೆ.. ಅವನತನ.. ಅವನ ಜ್ಞಾನ..!! ಎಂಥಾ ಒತ್ತಡದಲ್ಲೂ ಅವನನ್ನು ಅವ ಸಂಭಾಳಿಸಿಕೊಳ್ಳುವಂಥ ಪ್ರಬುದ್ಧತೆ. 

ನೀವೆಲ್ಲ ಈ ಕಂಪನಿಯಲ್ಲಿ ಒಂದು ಒಳ್ಳೆಯ ಹುದ್ದೆಯಲ್ಲಿರುವವರು.. ನಿಮಗೂ ಮೇಲೆ ನಿಮ್ಮ ಬಾಸ್ ಇರ್ತಾರೆ.. ನಿಮ್ಮ ಕೆಳಗಿನವರಿಗೆ ನೀವೇ ಬಾಸ್ ಆಗಿರ್ತೀರಿ. ಇಂಥಾ ಕಂಪನಿಯೊಳಗೆ ನೀವು ನಿಮ್ಮಷ್ಟಕ್ಕೆ ಕೆಲಸ ಮಾಡೋದು ಯಾವತ್ತು ಅಷ್ಟು ಸುಲಭ ಅಲ್ಲ. ನಿಮ್ಮ ಮೇಲಿನ ಬಾಸ್ ಅನ್ನು ನೀವು ಮೆಚ್ಚಿಸಬೇಕು.. ನಿಮ್ಮನ್ನ ಮೆಚ್ಚಿಸುವಂತೆ ನಿಮ್ಮ ಕೆಳಗಿನವರನ್ನ ತಯಾರಿ ಮಾಡಬೇಕು.. ಇವೆರಡೂ ದಿಕ್ಕಿಂದಲೂ ಸಹಯೋಗವಿದ್ದರೆ ಮಾತ್ರ ನಿಮ್ಮ ಕೆಲಸ ಸರಾಗ. ನಿಮ್ಮ ಕಂಪನಿಯ ಸುಯೋಗ. ಸಮಸ್ಯೆ ಅದೇನಿದ್ರೂ ಧ್ರುತಿಗೆಡಬಾರದು, ಸಮಸ್ಯೆಯ ರೂಪಕ್ಕೆ ಹೆದರಬಾರದು, ಆಕಾರಕ್ಕೆ ಅಂಜಬಾರದು, ಸಮಸ್ಯೆಯ ಮೂಲ ಯಾವತ್ತೂ ಸಣ್ಣದರಿಂದಲೇ ಶುರುವಾಗುತ್ತದೆ. ಅದನ್ನ ಸಣ್ಣದಿರುವಾಗಲೇ ಬಗೆಹರಿಸುವಂತಾಗಬೇಕು. ಅದಕೆ ನಿಮ್ಮೊಳಗೆ ಕ್ಷಮತೆ ಬುದ್ಧಿಮತ್ತೆ, ಜ್ಞಾನ ಎಲ್ಲವೂ ಬೇಕು. ನೆನಪಿಡಿ ದೊಡ್ಡ ದೊಡ್ಡ ಬಂಡೆಗಳಿಂದ ಮನುಷ್ಯ ಯಾವತ್ತೂ ಎಡವುವುದಿಲ್ಲ.. ಎಡವುವುದೆನಿದ್ದರೂ ಚಿಕ್ಕ ಚಿಕ್ಕ ಕಲ್ಲುಗಲಿಂದಲೇ..!!

ಕ್ಸೇವಿಯರ್ ಸಾರ್ ಇನ್ನೂ ಆಸಕ್ತಿ ಎನ್ನಿಸೋ ಅದೆಷ್ಟು ಮೌಲ್ಯಗಳುಳ್ಳ ವಿಚಾರಗಳನ್ನ ತಿಳಿಸಿ ಕೊಡ್ತಾ ಇದ್ರು. ನನ್ನೂ ಸೇರಿ ಅಲ್ಲಿದ್ದವರಿಗೆಲ್ಲ ಅದೆಂಥ ಆಸಕ್ತಿ.. ಬದುಕಿನಲ್ಲಿ ನಾವು ಮಾಡಬಹುದಾದ ಸಣ್ಣ ಸಣ್ಣ ತಪ್ಪುಗಳು ಹೇಗೆಲ್ಲ ಸಮಸ್ಯೆಗಳಾಗುತ್ತವೆ ಅನ್ನೋ ಅಂದಾಜು ಮನವರಿಕೆಯಾಗುವಂತೆ ತೋರುತ್ತದೆ. ಇಂತಹುದ್ದೆನ್ನೆಲ್ಲ ಕೇಳ್ತಾ ಇದ್ರೆ ಯಾರಿಗೆ ತಾನೇ ಆಸಕ್ತಿ ಬರಲ್ಲ..?? ಕ್ಲಾಸ್ ರೂಮಿನ ಬಾಗಿಲು ತೆರೆದುಕೊಳ್ಳುತ್ತದೆ.. ಅದೇ ವೆಂಕಟೇಶ.. ಅದೇ ನಗು ಮೊಗದೊಂದಿಗೆ..!! ನನ್ನ ಕುರಿತಾಗಿ, ಸಾರ್ ಸಾರ್ ಕರಿತಾ ಇದಾರೆ.. ನಾನು ಕ್ಲಾಸ್ ರೂಮಿಂದ ಹೊರ ಬಂದು ಯಾವ ಸಾರ್ ಎಂದು ಕೇಳುತ್ತೇನೆ.. ಡೀ ಜೀ ಎಮ್ ಸಾರ್ ಎನ್ನುತ್ತಾನೆ. ನಾನು ಬಾಸ್ ಕ್ಯಾಬಿನಿನ್ನ ಕಡೆ ಓಡುತ್ತೇನೆ. ಹೋಗಿ ಕೇಳಿದರೆ, ಆ ಆಯಿಲ್ ರಿಪೋರ್ಟ್ ಗಳನ್ನ ತಕ್ಷಣ ಕಳಿಸಬೇಕಿದೆ ಅನ್ನುತ್ತಾರೆ. ಕಳಿಸೋ ಹೊಣೆ ನನ್ನ ಮೇಲೆ ಹೊರಿಸುತ್ತಾರೆ. ಸಮಯ ಆಗಲೇ ಐದು ಮೈಮರೆತು ಕ್ಸೇವಿಯರ್ ಸಾರ್ ಉಪನ್ಯಾಸ ಕೇಳಿದ್ದರಿಂದ ನನಗೆ ಮೂರು ಗಂಟೆ ಲಾಭ ಮತ್ತು ನಷ್ಟ..!! ನನ್ನ ಕೆಲಸದಲ್ಲಿ ಮಗ್ನನಾಗಿ ಕೂರುತ್ತೇನೆ ಒಂದು ಕಡೆ ಕ್ಲಾಸ್ ರೂಮಿನ ಉಪನ್ಯಾಸದ ಕಡೆ ಸೆಳೆತ.. ಒಂದು ಕಡೆ ಕೆಲಸದ ಹೊರೆ.. ಹೊರೆಯ ಭಾರವೇ ಜಾಸ್ತಿಯಾಗಿ ಅಲ್ಲಿಯೇ ಮನಸ್ಸಿಲ್ಲದೆ ಕೂರುತ್ತೇನೆ. ಕ್ಲಾಸ್ ಮುಗಿದು ಕ್ಸೇವಿಯರ್ ಸಾರ್ ಐದೂಕಾಲಿಗೆಲ್ಲ ಹೊರಟು ಬಿಡುತ್ತಾರೆ.. ಅವರನ್ನ ಮೀಟ್ ಮಾಡುವ ಹಂಬಲವಿತ್ತು, ಕ್ಲಾಸ್ ನಲ್ಲಿ ಅವರ ಉಪನ್ಯಾಸ ನನ್ನ ಮೇಲೆ ಮಾಡಿದ ಪ್ರಭಾವದ ಕುರಿತಾಗಿ ಅವರನ್ನಮಾತಾಡಿಸಿ ಖುಷಿಯಾಗಬೇಕು ಅಂದುಕೊಳ್ಳುತ್ತೇನೆ..  ಅದೂ ಆಗಲಿಲ್ಲವಿಲ್ಲವೆಂಬ ಪಶ್ಚಾತಾಪದಿಂದ ಮುಂದಿನ ಅವರ ಆಗಮನದ ನಿರೀಕ್ಷೆಯಲ್ಲಿಯೇ ಹಾಗೆ ಕೆಲಸದಲ್ಲಿ ಮಗ್ನನಾಗುತ್ತೇನೆ.