Thursday 10 April 2014

ನಾನು ಕಂಡ ಉಳಿದವರು ಕಂಡಂತೆ..

ಒಂದು ಸಿನಿಮಾ ಕೂಡಾ ಹಾಗಿರಬೇಕು.. ಎಷ್ಟೋ ಸಾರಿ ಹೀಗಂದುಕೊಂಡಿದ್ದಿದೆ ನಾನು..

ನಾಟುವ ನಾಟಕದಂತೆ, ಕಾಡಿಸುವ ಕಾದಂಬರಿಯಂತೆ, ಕನವರಿಸಿಕೊಳ್ಳುವಂತೆ ಮಾಡಬಲ್ಲ  ಕಥಾ ಪುಸ್ತಕದಂತೆ ಒಂದು ಸಿನಿಮಾ ನಮ್ಮನ್ನು ಆವರಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಕಥೆ ಕಾದಂಬರಿ ಅಥವಾ ನಾಟಕಗಳಲ್ಲಿ ಸಿಗುವ ಒಂದು ಅನುಭೂತಿ ಸಿನಿಮಾ ನೋಡುವಾಗ ನಮಗೆ ದಕ್ಕುವುದೇ ಇಲ್ಲ. ಸಿನಿಮಾ ನಮ್ಮನ್ನು ಕಾಡಿಸದೇ ಇರುವುದಕ್ಕೆ ನೈಜ ಕಾರಣವೇ ಅದರಲ್ಲಿನ ನೈಜತೆಯ ಅನುಪಸ್ತಿತಿ. ಹೌದು ಎಷ್ಟೋ ಸಾರಿ ಸಿನಿಮಾ ಸತ್ಯದಿಂದ ದೂರ ಅನ್ನಿಸಿ ಬಿಟ್ಟಿರುತ್ತದೆ. ಈಗಿನ ಸಿನಿಮಾಗಳು ಸಾಮಾನ್ಯ ಮನುಷ್ಯನೊಳಗೆ ಕಾಣಸಿಗದ ಅಸಾಧಾರಣ ಶಕ್ತಿಯನ್ನ, ಅಸಾಮಾನ್ಯತೆಗಳನ್ನ, ಅಸಹಜ ಮುಟ್ಟಾಳ ತನವನ್ನ, ಮನುಷ್ಯ ಸಾಮಾನ್ಯನಾಗಿ ಜೀವಿಸಲು ಕೂಡಾ ಬಲು ಕಷ್ಟ ಪಡುವಂತಹ ಚಿತ್ರಣವನ್ನ ಮಾತ್ರ ಕಟ್ಟಿ ಕೊಡುತ್ತಿರುವ ಅಸಹಜ ದೃಶ್ಯಾವಳಿಗಳ ಮಾಧ್ಯಮದಂತೆ ಈಗಿನ  ಹಲವು ಸಿನಿಮಾಗಳು ಅನ್ನಿಸುತ್ತವೆ. ಸಿನಿಮಾ ಎಂದರೆ ಕೇವಲ ನಾಯಕನ ವಿಜ್ರುoಭಣೆ..  ನಾಯಕಿಯ ಅಂದ ಚೆಂದದ ಪ್ರದರ್ಶನ, ಖಳನ ಅಬ್ಬರ ಬೊಬ್ಬಿರಿತಗಳ ನಡುವಿನ ಕಾಲ ಹರಣ ಅನ್ನುವಷ್ಟು ಸಾಧಾರಣ ಚಿಂತನೆಯನ್ನ ಮೂಡಿಸುವಷ್ಟು ಮಟ್ಟಿಗೆ ಸಿನಿಮಾ ಇಂದಿಗೆ ಪ್ರಚಲಿತ.

ಈಗಿನ ಸಿನಿಮಾ ವಸ್ತುಗಳಾದರೂ ಅಂತಹದ್ದೇ.. ಪ್ರೀತಿ ಪ್ರೇಮದ ಸುತ್ತ ಸುತ್ತುತ್ತಾ ಅದಕ್ಕೆ ಪೂರಕವಾದ ಕತೆ ಹೆಣೆದು, ಪ್ರೀತಿ ಗೆದ್ದಾಗ ಅದರ ಶ್ರೇಷ್ಟತೆಯನ್ನ ಸಾರುವಂಥ, ಸೋತಾಗ ಅದನ್ನ ಜರಿದು ಬಾಳುವಂಥ ಸಂದೇಶಗಳನ್ನ ಭಿತ್ತರಿಸುತ್ತಾ ಮನುಷ್ಯನನ್ನು ಭಾವನಾತ್ಮಕವಾಗಿ ಹಿಡಿದಿಡುವ, ಮಚ್ಚು ಕೊಚ್ಚು, ಬಾಂಬು ಬಂದೂಕು ಗಳ ಭರಾಟೆಯಲ್ಲಿ ಮನುಷ್ಯತ್ವವನ್ನು ಮರೆತು ಕೇವಲ ಸೇಡಿಗೆ ತನ್ನಿಡೀ ಜೀವನವನ್ನ ಬದಲಾಯಿಸಿಕೊಂಡು ಕ್ರೌರ್ಯವನ್ನ ಕೈಂಕರಿಸೀಕೊಂಡ ಕಥಾವಸ್ತು ಹಿಂಸಾತ್ಮಕವಾಗಿ ಆಕರ್ಶಿಸಲ್ಪಡುವ, ಯಾವತ್ತು ನೆನೆಸಿಕೊಂಡರೂ ಹೇಕರಿಕೆ ತರಿಸುವಂತೆ ರಾಜಕೀಯದ ಅರಾಜಕತೆಗಳನ್ನ, ವ್ಯವಸ್ಥೆಯಲ್ಲಿನ ನ್ಯೂನತೆಗಳ ಸಾವಿರ ಪಟ್ಟು ವೈಭವೀಕರಣದ ಪ್ರಯೋಗದಂತೆ ಕಾಣುವ, ಸಮಾಜ ವಿರೋಧಿ ಕಥಾನಕಗಳನ್ನ ಕೇಂದ್ರವಾಗಿರಿಸಿಕೊಂಡು ವಿಲಕ್ಷಣ ಮನಸ್ಥಿತಿಯಲ್ಲಿ ಪ್ರೇಕ್ಷಕ ಅದನ್ನ ಆನಂದಿಸುವಂತೆ ಮಾಡುವ ಪ್ರಯತ್ನ ಮಾಡಿ ವೀಕ್ಷಕರುಗಳನ್ನ ಚಿತ್ರಮಂದಿರದ ಕಡೆ ಎಳೆದು  ತರುವಂತಹ ಪ್ರಯತ್ನಗಳೇ ಭಾರತದ ಯಾವುದೇ ಭಾಷೆಯ ಚಲನಚಿತ್ರಗಳಲ್ಲಿ ಬಹುಭಾಗ ಆವರಿಸಿಕೊಂಡಿರುವಂಥದ್ದು. ಇದಕ್ಕೆ ಅಪವಾದ ಎನ್ನುವಂತೆ ಬದುಕಿತ ನೈಜತೆಯನ್ನ, ವ್ಯಕ್ತಿ ಚಿತ್ರಣಗಳನ್ನ ಬಿಂಬಿಸುವಂತಹ ಕಲಾತ್ಮಕ ಚಿತ್ರಗಳು ಕೂಡಾ ವರಸೆಯಲ್ಲಿ ಬಂದು ನಿಲ್ಲುತ್ತವಾದರೂ ಅವುಗಳ ಸಂಖ್ಯೆ ಇಂಥಹ ಕಮರ್ಷಿಯಲ್ ಸಿನಿಮಾಗಳ ಮುಂದೆ ತೀರಾ ಕಮ್ಮಿ. ಅಂಥಹ ಚಿತ್ರಗಳು ಬಂದರೂ ಗೊತ್ತಾಗುವುದಿಲ್ಲ.. ಅಥವಾ ಸಾಮಾನ್ಯ ಜನರು ಅಂತಹ ಚಿತ್ರಗಳನ್ನು ನೋಡುವುದಿಲ್ಲ.. ಸಾಮಾನ್ಯ ಜನರಿಗೆ ಅದನ್ನ ನೋಡಿಸುವ ಪ್ರಯತ್ನ ಆಗುವುದೂ ಇಲ್ಲ. ಕೇವಲ ಪ್ರಶಸ್ತಿ ಪುರಸ್ಕಾರಗಳಿಗೆ ಮಾತ್ರ ಅಂಥಹ ಸಿನಿಮಾಗಳನ್ನ ಮಾಡುತ್ತಾರೆನೋ ಅನ್ನುವಂತಹ ತೀರ್ಮಾನಕ್ಕೆ ಎಂಥಹ ಶ್ರೀ ಸಾಮಾನ್ಯನೂ ಸಾಧಾರಣವಾಗಿ ಯೋಚಿಸಿ ಬಿಡಬಲ್ಲ ಸ್ಥಿತಿ ಅದರದ್ದು. ಇವತ್ತಿನ ಸಿನಿಮಾ ಕೇವಲ ಮನರಂಜನೆಯ ಮಾಧ್ಯಮ ಅಷ್ಟೇ. ಟಾಮ್ ಅಂಡ್ ಜೆರ್ರಿ ನೋಡಿದಷ್ಟೇ ನಿರಾಳ ಮನಸ್ಸಿಂದ ಒಂದು ಸಿನಿಮಾವನ್ನ ನೋಡಿ ಸಮಯ ಕಳೆದು ಬಿಡಬಲ್ಲ ಒಂದು ಸಾಧಾರಣಕಾರ್ಯಕ್ರಮ ಇಂದಿನ ಸಿನಿಮಾ. ಈಗಿನ ಸಿನಿಮಾಗಳ ಮೂಲ ಆಶಯವೂ ಉದ್ದೇಶವೂ ಅದಕ್ಕೆ ಪೂರಕವಾಗಿರೋದು ಕೂಡಾ ಈ ಎಲ್ಲಾ ಪರಿಸ್ಥಿತಿಗೆ ಕಾರಣವೆಂದರೆ ತಪ್ಪಲ್ಲ. ಇವತ್ತಿನ ಸಿನಿಮಾಗಳು ಮನರಂಜನಾ ಉಧ್ಯಮದ ಬಿಕರಿ ವಸ್ತುಗಳಷ್ಟೇ.. ಕಲೆಯ ಮಾಧ್ಯಮವಲ್ಲ.

ಕನ್ನಡವಾಗಲಿ ಅಥವಾ ಯಾವುದೇ ಇನ್ನಿತರ ಭಾರತೀಯ ಭಾಷೆಗಳ ಚಿತ್ರವಾಗಲಿ ನಮ್ಮಲ್ಲಿ ಸಿನಿಮಾ ಮಾಡಲಿಕ್ಕೊಂದು ಅಘೋಷಿತ ಸಿದ್ಧ ಸೂತ್ರವಿದೆ. ಒಂದು ಸಿನಿಮಾ ಎಂದರೆ ಐದು ಹಾಡು, ಅದರಲ್ಲೆರಡು ಡುಯೆಟ್ಟು, ಒಂದು ಶೋಕಗೀತೆ, ಒಂದು ಐಟಂ ಹಾಡು, ಇನ್ನೊಂದು ಎದ್ದು ಕುಣಿವಂತೆ ಉದ್ದೀಪಿಸುವ ಟಪ್ಪಾಂಗುಚ್ಚಿ ಹಾಡು. ನಾಲ್ಕೈದು ಫೈಟು (ಅಗತ್ಯವಿಲ್ಲದ ಕಾರಣಗಳಿಗೂ), ಸಿನಿಮಾ ಕಥೆಗೆ ಸಂಭಂಧವೇ ಪಡದ ಹಾಸ್ಯ ಸನ್ನಿವೇಶಗಳು (ಹೇರಿಕೆ), ನಾಯಕ ನಾಯಕಿ.. ಅದರಲ್ಲೋಬ್ಬರಿಗೆ ಬಡತನ ಅಥವಾ ರೌಡಿಸಂ ನ ಹಿನ್ನಲೆ.. ಅವರಿಬ್ಬರ ನಡುವೆ ಪ್ರೇಮಾಂಕುರ.. ಅವರಿಬ್ಬರ ಕುಟುಂಬಗಳ ನಡುವಿನ ಕಲಹ.. ಕೊನೆಗೆ ವೀರಾವೇಶದಿಂದ ಹೋರಾಡಿ ವಿಲನ್ ನನ್ನು ಸೆದೆಬಡೆದು ಜಯಿಸುವ ಹೀರೋ.. ಇಂಥ ಕಥೆ, ಇದಿಷ್ಟೇ ಸಿದ್ಧ ಸೂತ್ರಗಳನ್ನ ಇಟ್ಟುಕೊಂಡು ಅದೆಷ್ಟು ಸಿನಿಮಾಗಳು ಬಂದಿಲ್ಲ..?? ದೃಶ್ಯಾವಳಿಗಳು ಬೇರೆ ಬೇರೆಯಷ್ಟೇ. ಇಂಥಾ ಸಿನಿಮಾಗಳಿಗೆ ಅದೆಷ್ಟು ಒಗ್ಗಿ ಹೋಗಿಹೆವೆಂದರೆ ಈ ಸಿದ್ಧ ಸೂತ್ರಗಾಳಾಚೆಗಿನ ಪ್ರಯೋಗ ಶೀಲ ಸಿನಿಮಾಗಳನ್ನು ಸುಲಭವಾಗಿ ದಕ್ಕಿಸಿಕೊಳ್ಳಲಾಗದಷ್ಟು. 

ನಮ್ಮಲ್ಲಿ ಇನ್ನೂ ಒಂದು ಪದ್ದತಿಯಿದೆ.. ಹೋಲಿಸುವಿಕೆ.  ಸಿನಿಮಾ ಸಿನಿಮಾಗಳ ನಡುವೆ ತುಲನೆ ಮಾಡುವುದು. ರೀಮೇಕ್ ಸಿನಿಮಾಗಳನ್ನ ಹೊರತುಪಡಿಸಿದ ವಿಚಾರ ಇದು. ಒಂದು ಭಾಷೆಯ ಸಿನಿಮಾದಲ್ಲಿ ಕಾಣಸಿಗುವ ಒಂದು ಸಾಮಾನ್ಯ ವಿಚಾರ ಮತ್ತೊಂದು ಭಾಷೆಯ ಸಿನಿಮಾದಲ್ಲಿ ಕಾಣಸಿಕ್ಕಾಗ ಅವೆರಡನ್ನೂ ಸಮೀಕರಿಸಿ ಮಾತಾಡೋದು. ಅದು ಒಂದಷ್ಟು ದೃಶ್ಯಗಳ ಕುರಿತಾಗಿ ಇರಬಹುದು ಅಥವಾ ಮೇಕಿಂಗ್ ವಿಧಾನದಲ್ಲಿ ಇರಬಹುದು.. ನಿರೂಪಣಾ ವಿಧಾನಕ್ಕಿರಬಹುದು.. ಅಥವಾ ನೇರ ಕಥೆಗೆ ಸಂಭಂಧಪಟ್ಟದ್ದಾಗಿರಬಹುದು. ಅಂಥಹ ಬಹಳಷ್ಟು ಉದಾಹರಣೆಗಳನ್ನ ನಾನು ಕೇಳಿದ್ದೇನೆ ನೋಡಿದ್ದೇನೆ ಕೂಡಾ. ತಮಿಳಿನ ಸೂಪರ್ ಹಿಟ್ ರೋಬೋಟ್ ಸಿನಿಮಾ ಬಂದಾಗ ಕನ್ನಡದ ಹಾಲಿವುಡ್ ಚಿತ್ರದೊಂದಿಗೆ ಕಥಾವಿಚಾರದಲ್ಲಿ ಚರ್ಚೆಗೆ ಬಿದ್ದಿತ್ತು. ಕಮಲ ಹಾಸನ್ ರ ದಶಾವತಾರ ಚಿತ್ರದ ಕಲ್ಪನೆ ತನ್ನದು ಎಂದು ಅದ್ಯಾರೋ ಕೋರ್ಟ್ ಮೆಟ್ಟಿಲೇರಿದ್ದು.. ತೀರಾ ಇತ್ತೀಚಿಗೆ ಬಂದು ತಮಿಳಿನಲ್ಲಿ ಫ್ಯಾಮಿಲಿ ಎಂಟರ್ ಟೈನರ್ ಎಂದು ಹಿಟ್ ಆದ ರಾಜ ರಾಣಿ ಕನ್ನಡದ ಮಿಲನ ಚಿತ್ರದಿಂದ ಪ್ರೇರಿತವಾದುದೆಂದು.. ತಮಿಳಿನ ಘಜಿನಿ ಮತ್ತು ಎಂಗೇಯುಮ್ ಎಪ್ಪೋದುಂ ಚಿತ್ರಗಳು ಬೇರೆ ಬೇರೆ ಇಂಗ್ಲಿಷ್ ಚಿತ್ರವೊಂದರ ಪ್ರೇರಣೆ ಎಂದು.. ಕಳೆದ ವರ್ಷದ ಬಹು ಚರ್ಚಿತ ಹಿಟ್ ಕನ್ನಡ ಚಿತ್ರ ಲೂಸಿಯಾ ಇನ್ಸೆಪ್ಶನ್ ಎನ್ನುವ ಇಂಗ್ಲಿಶ್  ಸಿನಿಮಾದ ನಿರೂಪಣೆಯ ಶೈಲಿಗೆ ಪ್ರೆರಿತವಾಗಿದೆಯೆಂದೂ.. ಇತ್ತೀಚಿನ ಸಲ್ಮಾನ್ ಖಾನ್ ನ ಜೈ ಹೊ ಚಿತ್ರ ತೆಲುಗಿನ ಸ್ಟಾಲಿನ್ ಚಿತ್ರದ ಪ್ರೇರಿತವೆಂದೂ ಹೀಗೆ ಬಹಳಷ್ಟು ಸಿನಿಮಾಗಳ ವಿಚಾರಗಳು, ವಿಡಂಬನೆಗಳನ್ನ ಕಂಡಿದ್ದುಂಟು. ಇವುಗಳೆಲ್ಲದರ ಕುರಿತಾಗಿ ಪೂರ್ಣ ವಿವರಗಳು ಗೊತ್ತಿಲ್ಲವಾದರೂ ಹೀಗೆ ಸಿನಿಮಾಗಳನ್ನ ತುಲನೆ ಮಾಡಿ ವಿಮರ್ಶೆ ಮಾಡಲ್ಪಟ್ಟ ಹಲವಾರು ಭಾಷೆಯ ಹಲವು ಚಿತ್ರಗಳು ಉದಾಹರಣೆಯಾಗಿ ಕಣ್ಣೆದುರಿಗೆ ನಿಲ್ಲುತ್ತವೆ. 

ಉಳಿದವರು ಕಂಡಂತೆ  ಕೂಡಾ ಇಂಥಾ ವಿವಾದಕ್ಕೆ ಹೊರತಾದ ಚಿತ್ರವೇನಲ್ಲ. ಈ ಚಿತ್ರದ ನಿರೂಪಣಾ ಅಂಶಗಳನ್ನ ತಮಿಳಿನ ಕಮಲಾ ಹಾಸನ್ ಅಭಿನಯದ ವೀರುಮಾಂಡಿ ಮತ್ತು ಹಿಂದಿಯ ಯುವ ಚಿತ್ರದ ಜೊತೆಗೆ ತುಲನೆ ಮಾಡಿ ಮಾತಾಡಿದ ಉದಾಹರಣೆಗಳನ್ನ ಈಚೆಗೆ ಫೇಸ್ಬುಕ್ ನಲ್ಲಿ ನೋಡಿದ್ದೇನೆ. ಹಾಗೆ ನೋಡಿದರೆ ಒಂದು ಸಿನಿಮಾ ನಿರ್ದೇಶಕನ ಕಲ್ಪನೆಯಲ್ಲಿ ತಯಾರಾಗುವುದೇ ಹಾಗೆ. ಯಾವುದೋ ಒಂದು ಕಥೆಯ ಅಥವಾ ಸಿನಿಮಾದ ಅಂಶದ ಒಂದು ಹೊಳಹಿನಿಂದ. ಒಂದು ಸಿನಿಮಾ ಮತ್ತೊಂದು ಸಿನಿಮಾಗೆ ಪೂರಕವಲ್ಲದೆ ಜಗತ್ತಿನಲ್ಲಿ ಇಷ್ಟೊಂದು ಸಿನಿಮಾ ಕೃಷಿ ಸಾಧ್ಯವೇ ಆಗುತ್ತಿರಲಿಲ್ಲ. ಇರಬಹುದು.. ಈ ಅಂಶಗಳನ್ನ ಒಳಗೊಂಡಂತ ಸಿನಿಮಾ ಇದಾಗಿರಬಹುದು. ಆದರೆ ಕನ್ನಡದ ಮಟ್ಟಿಗೆ ಒಂದು ಅಪೂರ್ವವಾದ, ಅದ್ಭುತವಾದ ಪ್ರಯತ್ನ ಈ ಸಿನಿಮಾ. ಕನ್ನಡ ಸಿನಿಮಾಗಳಿಂದ ಪ್ರೇರಿತರಾಗಿ ಇತರ ಸಿನಿಮಾಗಳು ತಯಾರಾದ ವಿಷಯ ಅಷ್ಟು ಪ್ರಚಲಿತಕ್ಕೆ ಬಾರದೆ ಹೋದರು, ಬೇರೆ ಭಾಷೆಯ ಸಿನಿಮಾದ ಸಾಮ್ಯತೆಗಳನ್ನ ಒಳಗೊಂಡ ನಮ್ಮ ಸಿನಿಮಾಗಳ ಯಶಸ್ಸಿನ ಕುರಿತಾಗಿ ಭಯಂಕರ ಚರ್ಚೆಯಾಗುವುದು ಕಂಡಾಗ ಬೇಸರ ಅನ್ನಿಸುತ್ತದೆ. 

ಕಳೆದೊಂದು ವರ್ಷದಿಂದ ನಾನು ನೋಡಿರುವ ಹಲವು ಭಾಷೆಯ ಹಲವಾರು ಚಿತ್ರಗಳಲ್ಲಿ ನನಗೆ ಅತಿ ಮೆಚ್ಚಿಗೆಯಾದದ್ದು ನಮ್ಮ ಕನ್ನಡ ಸಿನಿಮಾ ಉಳಿದವರು ಕಂಡಂತೆ. ಈ ಸಿನಿಮಾದಲ್ಲಿ ಅಂಥದ್ದೇನಿದೆ ಅನ್ನುವುದನ್ನ ನಾಲ್ಕು ಸಾಲಿನ ವಿಮರ್ಶೆಯಲ್ಲಿ ನಾವು ತೂಗಿ ಬರೆದುಬಿಡಬಹುದಾದರೂ.. ಸಿನಿಮಾ ನೋಡುವಾಗ ನಮಗೆ ದಕ್ಕುವ ಅನುಭೂತಿ.. ಮನಸೊಳಗೆ ಒಡಮೂಡುವ ಚಿತ್ರಣಗಳು.. ಪಾತ್ರಗಳ ಕುರಿತಾಗಿ ಮೂಡುವ ಭಾವುಕತೆಗಳನ್ನು ಮಾತ್ರ ಎಂಥಾ ನುರಿತ ಕಲೆಗಾರನಿಗೂ ಕಲೆ ಹಾಕುವುದು ಕಷ್ಟ ಸಾಧ್ಯ. ಈ ಸಿನಿಮಾದ ಕುರಿತಾಗಿ ನಾ ಕೇಳಲ್ಪಟ್ಟ ಬಹುದೊಡ್ಡ ಹಿನ್ನಡೆಯ ಅಂಶವೆಂದರೆ ಈ ಸಿನಿಮಾದಲ್ಲಿ ಗಟ್ಟಿ ಕಥೆಯಿಲ್ಲ. ಹೌದು ನಾನಿದನ್ನ ಒಪ್ಪುತ್ತೇನೆ. ಈ ಸಿನಿಮಾದಲ್ಲಿ ಈ ತನಕ ನಾವೆಲ್ಲರೂ ನೋಡಿಕೊಂಡು ಬಂದಂಥ ಇತರೆ ಸಿನಿಮಾಗಳ ಶೈಲಿಯ ಕಥೆಯಿಲ್ಲ. ಈ ಸಿನಿಮಾದ ಪಾತ್ರಗಳಲ್ಲಿ ಸಾಮಾನ್ಯ ಮನುಷ್ಯನ ದೈನಿಕ ಜೀವನದೊಳಗಿರಬಹುದಾದಂಥ ಹಲವಾರು ಚಿತ್ರಣಗಳ ಜ್ವಲಂತ ಕಥೆಗಳಿವೆ. ಮತ್ತು ಆ ಕಥೆ ಸಿನಿಮಾ ಕಥೆಯಾಗಿರದೇ ನಿಜವಾಗಿದ್ದು ವಾಸ್ತವಕ್ಕೆ ಹತ್ತಿರವಾಗುವಂತಿದೆ. ಒಂದು ಸಿನಿಮಾ ಕಥೆಯಾಗುವಲ್ಲಿ ಈ ಸಿನಿಮಾದ ಕಥೆ ವಿಫಲವಾಗಿಹುದೇನೋ ಅಂದುಕೊಂಡರೂ ಅದೇ ಕಾರಣಕ್ಕೆ ಸಿನಿಮಾ ಮತ್ತೆ ಮತ್ತೆ ಆಪ್ತವೆನಿಸುತ್ತದೆ. 

ಈ ಸಿನಿಮಾ ವಿಭಿನ್ನ ಮತ್ತು ವಿಶಿಷ್ಟ ಯಾಕಂದ್ರೆ.. ಈ ಸಿನಿಮಾದ ಕಥೆ ಒಂದು ಮರ ಇದ್ದಂತೆ. ಸಿನಿಮಾದ ಎಲ್ಲಾ ಪಾತ್ರಗಳೂ ಆ ಮರದಿಂದ ಚದುರಿದ ಕಾಂಡಗಳೇ. ಎಲ್ಲಾ ಪಾತ್ರವರ್ಗವೂ ಕಥೆಗೆ ನೇರ ಮತ್ತು ಎಲ್ಲಾ ಪಾತ್ರಗಳಷ್ಟೇ ಶಕ್ತ ಸಂಭಂಧಿತ. ರಿವರ್ಸ್ ಸೀಕ್ವೆಲ್ ತಂತ್ರವನ್ನ ಬಳಸಿ ಸಿನಿಮಾದ ಕಥೆಯನ್ನ ಐದು ಹಂತಗಳಲ್ಲಿ ಬಿಡಿಸಿ ಬಿಡಿಸಿ ಹೇಳುವಂಥ ಪ್ರಯತ್ನ ಇದರಲ್ಲಿ ಆಗಿದೆಯಾದರೂ, ಆ ಐದೂ ಆಯಾಮಗಳನ್ನ ಒಂದಕ್ಕೊಂದು ಪೂರಕವೆಂಬಂತೆ ಬೆಸೆದಂಥ ಪರಿ ಅದ್ಭುತ. ಪ್ರತಿಯೊಂದು ಪಾತ್ರವೂ ಕಥೆಗೆ ಪೂರಕವೂ ಹೌದು, ಪೋಷಕವೂ ಹೌದು. ಇಲ್ಲಿ ಕೇವಲ ನಾಯಕ ಮೆರೆದಾಡುವುದಿಲ್ಲ.. ನಾಯಕನ ಪಾತ್ರದಷ್ಟೇ ಶಕ್ತವಾಗಿ ಇತರ ಪಾತ್ರಗಳೂ ಮೆರೆದಾಡುತ್ತವೆ. ಯಾವ ಪಾತ್ರವೂ ಕಥೆಯ ಹೊರತಾಗಿರದೆ ಯಾವೊಂದು ಅಂಶವೂ ಕಥೆಗೆ ಅಪಭ್ರಂಶ ಅನ್ನಿಸದೆ ಇರೋದು ಸಿನಿಮಾದ ಶುದ್ಧತೆ ಮತ್ತು ಹೆಗ್ಗಳಿಕೆಯ ಅಂಶ. ಎಲ್ಲರ ಬದುಕಿಗೂ ಕೊಂಡಿಯಂತಹ ಒಂದು ಘಟನೆಯನ್ನ & ಆ ಘಟನೆಗೆ ತಳುಕು ಹಾಕಿ ಕೊಂಡಂತೆ ಸಂಭವಿಸುವ ಮೂರು ಸಾವುಗಳನ್ನ ಹೇಗೆ ಉಳಿದ ಪಾತ್ರಗಳು ಸಾಕ್ಷೀಕರಿಸಿದೆ ಅನ್ನೋದು ಈ ಚಿತ್ರದ ಒನ್ ಲೈನ್  ಕಥೆ.

ಈ ಸಿನಿಮಾದಲ್ಲಿ ಅಬ್ಬರಿಸುವ ಹೊಡೆದಾಟಗಳಿಲ್ಲ. ರಿಚಿ ಪಾತ್ರ ಅಬ್ಬರಿಸುತ್ತದಾದರೂ ಅದು ಕಥೆಯ ಒಂದು ಶಕ್ತಿಶಾಲಿ ಭಾಗವೆನಿಸಿ ಸಹ್ಯ ಅನಿಸಿಕೊಳ್ಳುತ್ತದೆ. ಗಂಟಲು ಹರಿವಂತೆ ಬೊಬ್ಬಿರಿಯುವ ಅಥವಾ ಉದಾಸೀನತೆಯ ಪರಮಾವಧಿಯಂತೆ ತೋಚಿದ್ದನ್ನೆಲ್ಲಾ ತತ್ವವಾಗಿ ಹೇಳುವ ನಿರರ್ಥಕ ಸಂಭಾಷಣೆಗಳಿಲ್ಲ. ಮಲ್ಪೆಯ ಸುತ್ತ ಮುತ್ತಲಿನ ಪ್ರಾದೇಶಿಕ ತುಳು, ದಕ್ಷಿಣ ಕನ್ನಡ ಜಿಲ್ಲೆಯ ಕನ್ನಡ, ಅಲ್ಲಲ್ಲಿ ಸಹಜ ಕನ್ನಡ ಮತ್ತೂ ಕೆಲವೊಂದು ಕಡೆ ಕುಂದಾಪುರ ಕನ್ನಡದಲ್ಲಿ ಕೇಳಲ್ಪಡುವ ಸಂಭಾಷಣೆಗಳು ತೀರಾ ಸಹಜವಾಗಿರುವ ಕಾರಣಕ್ಕೆ ಅಷ್ಟು ಆಪ್ತವೆನಿಸುತ್ತವೆ. ಚಿತ್ರದ ಸಂಗೀತ ಕನ್ನಡ ಚಿತ್ರರಂಗದ ಮಟ್ಟಿಗೆ ಒಂದು ಅಪರೂಪದ ಪ್ರಯತ್ನ. ಈ ಚಿತ್ರದ ಹಾಡುಗಳು ಕೂಡಾ ಇತರೆ ಚಿತ್ರಗಳ ಹಾಡುಗಳ ಸಿದ್ಧಸೂತ್ರದ ಪರಿಧಿಯನ್ನ ದಾಟಿ ಯಶಸ್ವಿಯಾದದ್ದು ಮೆಚ್ಚುವ ಅಂಶಗಳಲ್ಲೊಂದು. ಹಾಡುಗಳೂ ಕೂಡಾ ಚಿತ್ರದ ಹೊರತಾಗಿ ಎಲ್ಲೂ ಹೊರ ನಿಂತಂತೆ ಕಾಣುವುದಿಲ್ಲ. ಸಾಹಿತ್ಯ ಕಥೆಗೆ ಪೂರಕವಾಗಿದ್ದು ಎಲ್ಲರಿಗೂ ಮೆಚ್ಚಿಗೆಯಾಗುವ ಅಂಶಗಳಲ್ಲೊಂದು. ಚಿತ್ರದ ಹಾಡುಗಳ ಅಥವಾ ಇತರೆ ದೃಶ್ಯಗಳ ಚಿತ್ರೀಕರಣಕ್ಕೆ ಯಾವುದೇ ಹೊರಾಂಗಣ ಅಥವಾ ವಿದೇಶ ಅಥವಾ ಇತರೆ ಪ್ರವಾಸೀ ತಾಣಗಳನ್ನ ಆಯ್ಕೆ ಮಾಡಿಕೊಳ್ಳದೆ.. ಮಲ್ಪೆಯಸುತ್ತ ಮುತ್ತಣ ಪರಿಸರ ಮತ್ತು ಸಾಗರ ತೀರದ ಜಾಗಗಳನ್ನು ಬಳಸಿರುವುದರಿಂದ ಸಿನಿಮಾಗೆ ಒಂದು ಪ್ರಾದೇಶಿಕ ಸೊಗಡು ಬಲವಾಗಿ ದೊರಕುತ್ತದೆ. ಇಲ್ಲಿ ಖಳರು ಅಸಲಿಗೆ ಕಾಣಿಸುವುದೇ ಇಲ್ಲ. ಇನ್ನು ಅಬ್ಬರಿಸುವುದೆಲ್ಲಿ..?? ರಿಚ್ಚಿ ಅಬ್ಬರಿಸುತ್ತಾನದರೂ.. ಇನ್ನೊಬ್ಬರ ಮೂಗು ಜಜ್ಜುವ ದುರುಳನಾದರೂ ಅವ ದುರುಳ ಅನಿಸುವುದೇ ಇಲ್ಲ. ಅಂಥದ್ದೊಂದು ಮ್ಯಾನರಿಸಂನಿಂದಲೇ ರಿಚಿ ಎಲ್ಲರ ಕಣ್ಮಣಿಯಾಗುತ್ತಾನೆ.

ಈ ಚಿತ್ರದಲ್ಲಿ ಮೆಚ್ಚಿಕೊಳ್ಳುವಂಥ ಸಣ್ಣ ಸಣ್ಣದೆ ಅನ್ನಿಸುವ ವಿಚಾರಗಳು ಬಹಳಷ್ಟಿವೆ. ಚಿತ್ರದಲ್ಲಿ ನಗುವುದಕ್ಕೆ ಬಹಳಷ್ಟು ಅವಕಾಶಗಳಿವೆ. ಆದರೆ ಎಲ್ಲೂ ಹಾಸ್ಯ ನಟರ ಬಳಕೆಯಾಗಿಲ್ಲ. ನಗಿಸುವ ಜವಾಬ್ದಾರಿಯನ್ನ ರಿಚಿ ಮತ್ತು ಡೆಮಾಕ್ರೆಸಿ ಪಾತ್ರಗಳು ಸಮರ್ಥವಾಗಿ ನಿಭಾಯಿಸಿವೆ. ಡೆಮಾಕ್ರೆಸಿ ಎಂಬ ಎಂಟು ಹತ್ತು ವರ್ಷ ವಯಸ್ಸಿನ ಹುಡುಗನ ತುಂಟತನ, ಮುಗ್ಧತೆ, ನೈಜ ಅನ್ನಿಸುವ ಅವನ ಅಭಿನಯ ಎಲ್ಲರ ಮನಸೂರೆಗೊಂಡು ಅವನು ಎಲ್ಲರ ಮುದ್ದಿನ ಕಣ್ಮಣಿ ಆಗಿಬಿಡುವಂತೆ ಮಾಡಿದೆ. ಯಕ್ಷಗಾನ ಹುಲಿವೇಶದ ಕುಣಿತದ ದೃಶ್ಯಗಳು ಸಿನಿಮಾ ಎಂಬ ಚೌಕಟ್ಟಿನಿಂದ ಹೊರಗಿನದ್ದು ಎನ್ನುವಂತೆ ಭಾಸವಾಗಿ ಜೀವಂತಿಕೆ ಮೆರೆಯುತ್ತವೆ. ನಾವೇ ಎದ್ದು ಕುಣಿಯ ಬೇಕೆನಿಸುವಷ್ಟು ಉದ್ದೀಪಿಸುತ್ತದೆ ಹುಲಿ ವೇಷದ ಕುಣಿತ. ಚಿತ್ರದಲ್ಲಿ ಪ್ರದರ್ಶಿಸದ, ಪ್ರಕಟಿಸದ ಆಯಾಮಗಳ ಎರಡು ಅಮೂರ್ತ ಪ್ರೇಮಕಥೆಯಿದೆ. ಬೋಟ್ ರಿಪೇರಿ ಮಾಡುವ ಮುನ್ನ ಮತ್ತು ಮೀನು ಮಾರುವ ಶಾರದ ನಡುವಿನ ಅವ್ಯಕ್ತ, ಮೂಕ ಭಾವಗಳ ಮಧುರ ಪ್ರೇಮ ನಮ್ಮನ್ನು ಕಾಡಿಸುತ್ತದೆ. ಅವರು ಕೈ ಹಿಡಿದು ಮರ ಸುತ್ತುವುದಿಲ್ಲ.. ಅಪ್ಪಿ ಮುದ್ದಾಡುವುದಿಲ್ಲ.. ಡಾನ್ಸ್ ಮಾಡುವುದಿಲ್ಲ. ಇದೆಲ್ಲದರ ಹೊರತಾಗಿಯೂ ಅವರಿಬ್ಬರ ಪ್ರೇಮದ ಮಧುರ ಭಾವನೆಗಳು ಎಲ್ಲರ ಎದೆಯೊಳಗಿಳಿದು ಒಂದು ಮಧುರ ಅನುಭೂತಿಯನ್ನು ಅನುಭವಿಸುವಂತೆ ಮಾಡುತ್ತವೆ. ಉರಿವ ರಿಚಿ ಮತ್ತು ಸಹನಶೀಲ ಪತ್ರಕರ್ತೆ ರೆಜಿನ ನಡುವಿನ ಕಾಲೆಳೆದಾಟದ ಪ್ರಸಂಗಗಳು ಮುದ ನೀಡುವಂಥವು. ಅವನ ಚಿಕ್ಕಂದಿನ ಫೋಟೊವನ್ನ ಇವನಿಗೆ ಕೊಡದೆ ಸತಾಯಿಸುವ ಅವಳು.. ಅದಕ್ಕಾಗಿ ಅವಳ ಬೆನ್ನು ಬಿದ್ದು ಸತಾಯಿಸುವ ಇವನು.. ಇಬ್ಬರ ಕೋಳಿ ಜಗಳದಲ್ಲಿ ಎಂದೂ ಪ್ರಕಟವಾಗದ ಒಂದು ಅದೃಶ್ಯ ಪ್ರೇಮದ ಮೊಳಕೆ ಕುಡಿಯೊಡೆವ ಮೊದಲೇ ಒಂದು ಅಂತ್ಯಕ್ಕೆ ಬಂದು ಬಿಡುವ ಪ್ರಸಂಗ ನೋವು ತರಿಸುತ್ತದೆ. ಚಿಕ್ಕಂದಿನಿಂದಲ್ಲೇ ಮನಸಲ್ಲಿ ನೆಲೆ ನಿಂತ ನೋವೊಂದು ಅದೆಷ್ಟು ಕಾಲವಾದರು ಮಾಯದೆ ಕಡೆಗೆ ನಡು ಪ್ರಾಯದ ವಯಸ್ಸಿನಲ್ಲಿ ಅದರ ಕುರಿತಾಗಿ ಸೇಡು ತೀರಿಸಿಕೊಂಡು ಸಮಾಧಾನ ಪಟ್ಟುಕೊಳ್ಳುವ ಮನುಷ್ಯನ ತಣ್ಣಗಿನ ರಕ್ತದೊಳಗಿನ ಕ್ರೌರ್ಯ ನಮ್ಮನ್ನ ಆಶ್ಚರ್ಯ ಪಡುವಂತೆ ಮಾಡಿ ಎಚ್ಚರಿಸುತ್ತದೆ.

ಅಭಿನಯದ ವಿಚಾರಕ್ಕೆ ಬಂದರೆ ಯಾರಿಗೂ ಕೊರೆ ಹೇಳುವ ಹಾಗೆ ಇಲ್ಲ. ರಿಚಿಯಾಗಿ ರಕ್ಷಿತ್ ಶೆಟ್ಟಿ ನಿಜಕ್ಕೂ ವಿಸ್ಮಯ. ಅವನು ಒರಟನಾದರೂ ಒರಟನಲ್ಲ, ದುರುಳನಾದರೂ ದುರುಳನಲ್ಲ. ಕ್ಯೂಬನ್ ಕಿಡ್ ಮತ್ತು ಮಾಂಡ್ವ ಹುಡುಗನ ಕಥೆ ಹೇಳುವಾಗಿನ ಅವರ ಮ್ಯಾನರಿಸಂ ನಿಜಕ್ಕೂ ಆ ಕಥೆಯಂತೆಯೇ ಬಹಳ ಕಾಲ ನೆನಪಿನಲ್ಲಿ ಉಳಿಯುವಂಥದ್ದು. ಮಂಡ್ಯ ಹೈದನಾಗಿ, ಶಾರದೆಯ ಒಂದು ಮುದ್ದು ನಗುವಿಗೆ ಮಾರು ಹೋಗಿ ಮೈ ಮರೆಯುವ, ಅಣ್ಣನಿಗೊದಗಿದ ಪರಿಸ್ಥಿತಿಯ ಕಂಡು ದುಃಖಿಸುವ ಅವಳ ನೋವಿಗೆ ಪರಿಹಾರವೆಂಬಂತೆ ಅದಕ್ಕೆ ಕಾರಣನಾದವನನ್ನು ಕೊಲ್ಲುವಷ್ಟು ಪ್ರೀತಿಸುವ ಮುಗ್ಧನಾಗಿ ಕಿಶೋರ್ ಅಭಿನಯ ಸೂಪರ್. ಟೀವಿ ೯ ರ ವಾರ್ತಾ ನಿರೂಪಕಿಯಾಗಿದ್ದ ಕಾಲದಿಂದಲೂ ನಾನು ಶೀತಲ್ ಅಭಿಮಾನಿ. ಇಲ್ಲವರ ಸಹಜ ಅಭಿನಯಕ್ಕೆ ಸಲ್ಯೂಟ್. ಅಷ್ಟು ಕ್ಯೂಟ್ ಕ್ಯೂಟ್ ಶೀತಲ್ ಒಂದೆರಡು ದೃಶ್ಯಗಳ ಹೊರತಾಗಿ ಇಡೀ ಚಿತ್ರದಲ್ಲಿ ಮತ್ತೆಲ್ಲೂ ನಗದೆ ಇರಲಾಗದಿದ್ದುದಕೆ ಖಂಡಿತ ಬೇಸರವಿದೆ. ಸಿಕ್ಕ ಸಣ್ಣ ಪಾತ್ರದಲ್ಲೇ ಯಜ್ಞಾ ಶೆಟ್ಟಿ ಆವರಿಸಿಕೊಳ್ಳುತ್ತಾರೆ . ರಘು ಪಾತ್ರಧಾರಿ ರಿಶಬ್ ಶೆಟ್ಟಿ ಯ ಅಭಿನಯ ಕೂಡಾ ಮೆಚ್ಚುವಂಥದ್ದು. ಆತಂಕದ ಕ್ಷಣಗಳ ಮುಖಭಾವಗಳಲ್ಲಿ ಅವರ ಅಭಿನಯ ಸಹಜವೆಂಬಂತೆ ತೋರುತ್ತದೆ. ಅಚ್ಯತರಾವ್ ಈ ಚಿತ್ರದ ಮತ್ತೊಂದು ಅದ್ಭುತ. ಸಾಗರದಾಳದಲ್ಲಿ ಸಿಕ್ಕ ವಸ್ತುವಿನ ಮೇಲೆ ಕುತೂಹಲ ತೋರುವ  & ಕಾಗೆಯ ಕಾಟಕ್ಕೆ ಬೇಸತ್ತ ನಟನೆಯಲ್ಲಿ ಅಚ್ಯುತರಾವ್ ನಿಜವಾಗಿಯೂ ಬೆರಗು ಮೂಡಿಸುತ್ತಾರೆ. ಈಗ ಚಿತ್ರದಲ್ಲಿ ಸುದೀಪ್ ನೊಣದ ಕುರಿತಾಗಿ ಮೂಡಿಸಿದಷ್ಟೇ ಬೆರಗು ಇಲ್ಲಿ ಅವರದು ಕೂಡಾ. ತಾಯಿಯಾಗಿ ತಾರಾ ಅವರ ನಟನೆ ನಿಜಕ್ಕೂ ಮಿನುಗುವಂಥ ತಾರೆಯ ಹೊಳಪಿನಂಥಹದ್ದು. ಬಹಳ ವರ್ಷಗಳ ನಂತರ ಮಗನನ್ನು ಕಂಡ ಸಂತಸವನ್ನ ವ್ಯಕ್ತಪಡಿಸುವ ಅವರ ಭಾವಗಳು ಮಾತ್ರ ಎಂಥವರ ಕಣ್ಣoಚಲ್ಲೂ ಸಣ್ಣ ಪಸೆಯನ್ನು ಮೂಡಿಸುವಷ್ಟು ಮಂತ್ರಮುಗ್ಧರನ್ನಾಗಿಸುತ್ತದೆ. ಕಚಗುಳಿ ಇಡುವಂತೆ ನಟಿಸಿರುವ ಡೆಮಾಕ್ರೆಸಿ ಒಂದು ಅದ್ಭುತ ಶೋಧ. ಪೇಪರ್ ಪೇಪರ್ ಮೆಣಸಿನ ಪೇಪರ್ ಹಾಡಿನಷ್ಟೇ ಆಕರ್ಷಕ ಆ ಪುಟ್ಟ ಮಕ್ಕಳ ಅಭಿನಯ ಆ ಹಾಡಿನಲ್ಲಿ. ಅವನನ್ನು ಮೆಚ್ಚದೆ ಇರಲು ಸಾಧ್ಯವೇ ಇಲ್ಲ. 

ತಾಂತಿಕ ವರ್ಗದವರ ಎಲ್ಲರ ಶ್ರಮ ಅಭಿನಂದನೀಯ. ನೆರಳು ಬೆಳಕು, ಬಿಸಿಲು ಮಳೆ, ಎಲ್ಲ ದೃಶ್ಯಗಳಲ್ಲೂ ಸಿನಿಮಾ ಪರ್ಫೆಕ್ಟ್. ನಿರ್ದೇಶಕನಾಗಿ ರಕ್ಷಿತ್ ಮತ್ತೊಂದು ವಿಸ್ಮಯ. ಕೇವಲ ಎರಡು ಸಿನಿಮಾ ಮಾಡಿದ ಹುಡುಗನಲ್ಲಿ ಇಂಥದ್ದೊಂದು ಪರಿಕಲ್ಪನೆ ಮೂಡಲು ಸಾಧ್ಯವ..?? ಆ ಪರಿಕಲ್ಪನೆಯನ್ನು ಇಷ್ಟು ಶಕ್ತವಾಗಿ, ಅದ್ಭುತವಾಗಿ ತೆರೆಯ ಮೇಲೆ ತರಲು ಆ ನವ ನಟನಿಗೆ, ನಿರ್ದೇಶಕನಿಗೆ ಸಾಧ್ಯವಾ..? ಈ ಪ್ರಶ್ನೆಗಳಿಗೆ ನೇರ ಉತ್ತರ ರಕ್ಷಿತ್. ಕನ್ನಡ ಚಿತ್ರ ರಂಗದ ಒಬ್ಬ ಅಪರೂಪದ ಕಲಾವಿದ, ತಂತ್ರಜ್ಞ, ಮತ್ತು ನಿರ್ದೇಶಕನಾಗುವ ಛಾಪು ಅವರಲ್ಲಿ ಕಾಣಲು ಸಾಧ್ಯ. ಹೀ ಇಸ್ ಜಸ್ಟ್ ಬ್ರಿಲಿಯಂಟ್. ಈ ಸಿನಿಮಾದ ಮೂಲಕ ರಕ್ಷಿತ್ ತಮ್ಮ ಹೆಗಲ ಮೇಲೆ ಅಪಾರ ಭರವಸೆಗಳ ದೊಡ್ಡ ನೊಗವಿರಿಸಿಕೊಂಡದ್ದು ನಿಜ. ಸಂಗೀತ ಮತ್ತೆ ಮತ್ತೆ ಮೆಲುಕು ಹಾಕುವಷ್ಟು ಮಧುರ. ಪ್ರತೀ ಸಾರಿ ಕೇಳಿದಾಗಲೂ ಹಾಯೆನಿಸುವಷ್ಟು ಆಹ್ಲಾದಕರ. ಮಲ್ಪೆಯೆಂಬ ಚಿಕ್ಕ ಪ್ರದೇಶದ ಸುತ್ತುವರಿದು ಅದ್ಭುತ ಬ್ರಹ್ಮಾಂಡವನ್ನೇ ತೆರೆದಿಟ್ಟ ಛಾಯಾಗ್ರಹಣ ಮನೋಹರ. ಹಿನ್ನಲೆ ಸಂಗೀತದ ಅಬ್ಬರಕೆ ಅಲ್ಲಲ್ಲಿ ಸಂಭಾಷಣೆಗಳು ಕೇಳಿಸದಿದ್ದರೂ ಹಿನ್ನಲೆ ಸಂಗೀತ ಪರಿಣಾಮಕಾರಿ ಎನಿಸಿ ಕಥೆಗೆ ಪೂರಕ ಅನಿಸಿಕೊಳ್ಳುತ್ತದೆ. ಧ್ವನಿಗ್ರಹಣದಲ್ಲಿ ಒಂಚೂರು ಕೆಲಸ ಮಾಡಿದ್ದರೆ ಒಳ್ಳೆಯದಿತ್ತೇನೋ. 

ಕನ್ನಡ ಚಿತ್ರರಂಗದ ಇತ್ತೀಚಿನ ಕೆಲ ಚಿತ್ರಗಳು ಇಡೀ ಭಾರತವನ್ನೇ ನಮ್ಮತ್ತ ತಿರುಗಿ ನೋಡುವಂತೆ ಮಾಡಿದ್ದು ನಿಜ. ಒಲವೆ ಮಂದಾರ, ಟೋನಿ, ದ್ಯಾವ್ರೆ, ಲೂಸಿಯಾ, ಎದೆಗಾರಿಕೆ, ವಿಕ್ಟರಿ, ಉಗ್ರಂ ನಂಥ ಚಿತ್ರಗಳು ತಾಂತ್ರಿಕವಾಗಿ ಉತ್ತಮವಾಗಿದ್ದು ಕನ್ನಡಕ್ಕೊಂದು ಮೆರುಗು ತಂದುಕೊಟ್ಟದ್ದು ಸುಳ್ಳಲ್ಲ. ಕನ್ನಡ ಸಿನಿಮಾಗಳ ಗುಣಮಟ್ಟಕ್ಕೆ ಯಶಸ್ವಿ ಉದಾಹರಣೆಗಳಾಗಿ ಈ ಚಿತ್ರಗಳು ನಿಲ್ಲುತ್ತವೆ. ಆ ಸಾಲಿಗೆ ಉಳಿದವರು ಕಂಡಂತೆ ಕೂಡಾ ಸೇರ್ಪಡೆಯಾಗುತ್ತದೆ. ಇಡೀ ಭಾರತ ಈ ಒಂದು ಕನ್ನಡ ಸಿನಿಮಾದೆಡೆಗೆ ತಿರುಗಿ ನೋಡುವಂತೆ ಮಾಡಿದ ಛಾತಿಯುಳ್ಳ ಈ ಸಿನಿಮಾವನ್ನ ಕನ್ನಡಿಗರೆಲ್ಲರೂ ಸಾಕ್ಷೀಕರಿಸಬೇಕ್ಕಾದ್ದು ನಮ್ಮ ಕರ್ತವ್ಯವೂ ಹೌದು. ಈ ಹಿಂದೆ ಕನ್ನಡ ಚಿತ್ರಗಳ ಕುರಿತಾಗಿ ನನ್ನ ಇತರ ಭಾಷೆಯ ಸ್ನೇಹಿತರ ವಲಯದಲ್ಲಿ ಅಪಹಾಸ್ಯಕ್ಕೆ ಈಡಾಗಿದ್ದ ನಾ.. ಈಗ ಈ ಕೆಲ ಚಿತ್ರಗಳ ಕುರಿತಾಗಿ ಎದೆ ನಿಮಿರಿ ಮಾತನಾಡಬಲ್ಲೆ. ಇತರೆ ನೆಲೆಗಳಲ್ಲಿ ಕನ್ನಡ ಚಿತ್ರಗಳ ಕುರಿತಾಗಿ ಅಲ್ಲಲ್ಲಿ ಅಭಿನಂದನೀಯ ಮಾತುಗಳನ್ನು ಕೇಳುವಾಗ ನಿಜಕ್ಕೂ ಅದೆಷ್ಟು ಖುಷಿ ಅನ್ನಿಸುತ್ತದೆ. 

Tuesday 25 March 2014

ಸಖಾರಾಮ್ ಬೈಂಡರ್..

ನಮ್ಮೂರು ಭದ್ರಾವತಿ ಮಲೆನಾಡಿನ ಭಾಗವಾದರೂ ಪೂರ್ತಿ ಮಲೆನಾಡು ಅನಿಸಿ ಕೊಳ್ಳೋದೇ ಇಲ್ಲ. ನಮ್ಮೂರಿನ ಸುತ್ತ ಕಾಡಿದೆ, ಮೇಡಿದೆ, ಬೆಟ್ಟ ಗುಡ್ಡ ಗಳಿದೆ.. ಆರು ತಿಂಗಳು ಮೈತುಂಬಿ.. ಇನ್ನಾರು ತಿಂಗಳು ಸ್ವಲ್ಪ ಬಡಕಲಾದರೂ ಸಾವಕಾಶವಾಗಿ ಹರಿವ ಭದ್ರಾ ನದಿ ಇದೆ.. ಕಣ್ಣು ತಂಪಾಗಿಸಿ ಹಾಯ್ ಅನಿಸುವಷ್ಟು ಅಳತೆಗೆ ತೆಂಗು & ಅಡಿಕೆ ತೋಟಗಳಿವೆ. ಬೇಕಾದಷ್ಟು ಭತ್ತ ಕಬ್ಬು ರಾಗಿ.. ಸ್ವಲ್ಪ ಮಟ್ಟಿಗೆ ಜೋಳ ಎಲ್ಲವೂ ಬೆಳೆಯಲ್ಪಡ್ತವೆ. ರಾಷ್ಟ್ರೀಯ ಮಟ್ಟಕ್ಕೆ ಹೆಸರು ಮಾಡಿರೋ, ವಿಶ್ವೆಶ್ವರಾಯರ ಹೆಸರನ್ನ ಎದೆ ನಿಮಿರಿಸಿ ಹೇಳೋ ಎರಡು ದೊಡ್ಡ ಕಾರ್ಖಾನೆಗಳಿವೆ. ಶಿವಮೊಗ್ಗ ಭಧ್ರಾವತಿಗೆ ನಡುವೆ ಒಂದಿಷ್ಟು ಪ್ರಮಾಣದ ಕೈಗಾರಿಕಾ ಕ್ರಾಂತಿಯೂ ಆಗ್ತಾ ಇದೆ. ಇಂತಿಪ್ಪ ನಮ್ಮ ಊರಿಗೆ ಸುತ್ತ ಮುತ್ತಲ ಜಿಲ್ಲೆಗೆ ಹೋಲಿಸಿದರೆ ಸ್ವಲ್ಪ ವಲಸಿಗರು ಜಾಸ್ತಿಯೇ.

ಭದ್ರಾವತಿಯಿಂದ ಎರಡು ಕಿಲೋ ಮೀಟರ್ ಗೆ ನನ್ನ ಹುಟ್ಟೂರು ಗೌರಾಪುರ. ಬ್ರಾಹ್ಮಣ, ಲಿಂಗಾಯತ, ದೇವಾಂಗ, ಗೌಡ, ಗಾಣಿಗ, ಮೇಧ, ಶೆಟ್ಟಿ, ಮಾದಿಗ, ಲಂಬಾಣಿ, ಮುಸ್ಲಿಂ, ಕ್ರಿಶ್ಚಿಯನ್, ಜೈನ, ನಾ ಹುಟ್ಟುವ ಮೊದಲಿಂದ ಇದ್ದರೂ ಇನ್ನೂ ಕನ್ನಡ ಕಲಿಯದಂಥ ತಮಿಳರು.. ಕನ್ನಡ ಬಲ್ಲ ಮಲಯಾಳಿ.. ಉರ್ದು ಇದಿಷ್ಟೂ ವಿವಿಧತೆಯಲ್ಲಿ ಏಕತೆಯನ್ನ ನೂರೈವತ್ತು ಮನೆಗಳ ನನ್ನ ಹುಟ್ಟೂರಿನಲ್ಲಿ ಕಾಣಲಿಕ್ಕೆ ಸಾಧ್ಯ.

ಭದ್ರಾವತಿ ತಾಲೂಕು ಕಬ್ಬಿಣದಂತೆಯೇ ಕಬ್ಬಿಗೂ ಸ್ವಲ್ಪ ಹೆಸರು ಹೊಂದಿರುವಂಥದ್ದು. ಸಕ್ಕರೆಯನ್ನ ತಯಾರಿಸುವ ಒಂದು ದೊಡ್ಡ ಕಂಪನಿ ಮತ್ತು ಹದವಾದ ಬೆಲ್ಲ ತಯಾರಿಸುವ ಸಾಕಷ್ಟು ಆಲೆಮನೆಗಳು ಭದ್ರಾವತಿಯಲ್ಲಿ ಕಾಣಸಿಗುತ್ತವೆ. ಈ ಕಬ್ಬು ಕಡಿಯಲು, ಆಲೆಮನೆಯ ಕೆಲಸ ಮಾಡಲು ಮತ್ತು ಇತರ ಕೈಗಾರಿಕೆ ಕೆಲಸಕ್ಕಾಗಿ ನಮ್ಮೂರುಗಳ ಕಡೆ ಸುತ್ತ ಮುತ್ತಲ ಜಿಲ್ಲೆಯ ವಲಸಿಗರು ಜಾಸ್ತಿ. ಬಂದ ವಲಸಿಗರೆಲ್ಲ ಮನೆ ಮಟ ಮಾಡಿಕೊಂಡು ಸಂಸಾರ ಸಮೇತ ಬೇರು ಬಿಟ್ಟು ಶಾಶ್ವತವಾಗಿ ಸ್ಥಾಪಿತರಾಗಿದ್ದೂ ಇದೆ. 

ಹೀಗೆ ಬಂದ ವಲಸಿಗರಲ್ಲಿ ಹೆಚ್ಚಿನವರು ಚೆನ್ನಗಿರಿ, ದಾವಣಗೆರೆ, ಹರಪ್ಪನಹಳ್ಳಿ ಮತ್ತು ರಾಣಿ ಬೆನ್ನೂರಿನ ಕಡೆಯವರು. ಊರಿನ ಜನಸಂಖ್ಯೆಯ ಅರ್ಧ ಪಾಲಿಗಿನ್ಥಲೂ ಹೆಚ್ಚಿನ ಜನ ಈಗ ಇವರುಗಳ ಲೆಕ್ಖವೆ. ಹೀಗೆ ವಲಸೆ ಬಂದವರ ಜೊತೆ ಅವರ ಭಾಷೆಯೂ ವಲಸೆ ಬಂದಿದ್ದು ಸಹಜ. ನಾವೂ ಅದನ್ನ ಕೇಳಿ ಕಲಿತು ಬೆಳೆದದ್ದು ಸಹಜ. ಗಂಡಸರು ಕುಡಿದು ಬೈದಾಡಿ ಕೊಳುವಾಗ.. ಮನೆಗೆ ಬಂದು ಹೆಂಡತಿಯನ್ನ ಹೊಡೆಯುವಾಗ.. ಅಕ್ಕ ಪಕ್ಕದ ಮನೆಯವರುಗಳ ಜೊತೆ ಜಗಳ ಆಡುವಾಗ, ನೀರಿಗೆ, ಸೀಮೆ ಎಣ್ಣೆಗೆ, ನ್ಯಾಯಬೆಲೆ ಅಂಗಡಿಗೆ ಸಾಲುಗಟ್ಟಿ ನಿಂತ ಹೆಂಗಸರು ಸಣ್ಣ ಸಣ್ಣ ಜಗಳಗಳಲ್ಲೂ ಬರುವ ಬೈಗುಳಗಳನ್ನ ಸಹಜವೆಂಬಂತೆ ಕೇಳಿ ಸಹಿಸಿಕೊಂಡಿದ್ದೇವೆ. 

ಮೊನ್ನೆ ಸಖಾರಾಮ್ ನಾಟಕ ನೋಡುವಾಗ ಹಾಗೆ ಬೈದು ಜಗಳಾಡಿ ಕೊಳ್ಳುವ ಅಷ್ಟೂ ಜನ ಕಣ್ಮುಂದೆ ಸುಳಿದು ಹೋದರು. ಒಂದು ಭಾಷೆಯ ಸೊಗಡಿಗೆ ಇರೋ ಶಕ್ತಿ ಅಂಥದ್ದು. ನಾವು ಅವಾಚ್ಯ, ಅಸಹ್ಯ ಅಂತ ಕರಿಯಲ್ಪಡೋ ಎಷ್ಟೋ ಬೈಗುಳ ಪದಗಳು ಊರಿನ ಜನರ ಅಥವಾ ಒಂದು ಸೀಮೆಯ ಜನರ ನಾಲಿಗೆಗಳಲ್ಲಿ ಸಾಮಾನ್ಯ ಭಾಷೆಯಷ್ಟೇ. ಕೆಟ್ಟದ್ದು ನಾವು ಕೇಳಿ ಕಂಡುಕೊಳ್ಳೋದರಲ್ಲಿ ಇರತ್ತೆ. ಕೋಪದಲ್ಲಿ ಹೇಳಿ ಬಿಡೋ ಅವರಿಗೆ ಇದ್ಯಾವುದೂ ಅವರಿಗೆ ನೆನಪಾಗುವುದೇ ಇಲ್ಲ.  ಸಂಧರ್ಭ ಸೂಚಕವಾಗಿ ಬಳಕೆಯಾಗುವ ಆ ಪದಗಳು ಎಜುಕೇಟೆಡ್ ವರ್ಗಕ್ಕೋ.. ಸಾಹಿತ್ಯ ಪ್ರೀತಿಯನ್ನ ಹೊಂದಿರುವಂಥವರಿಗೋ ಅಥವಾ ಭಾಷೆಯ ಪ್ರತೀ ಹುಳುಕುಗಳನ್ನ ಇಡಿಯಾಗಿ ಅವಲೋಕಿಸೋ ವಿದ್ವಾಂಸರಿಗಷ್ಟೇ ಅಪ್ರಿಯ. ಇನ್ನು ಜಗತ್ತಿನ ಮುಂದೆ ಶುದ್ಧ ಭಾಷಿಕನಾಗಿ, ತನ್ನ ವೈಯುಕ್ತಿಕ ವಲಯದಲ್ಲಿ ಹೀಗೆ ಅವಾಚ್ಯ ಭಾಷೆಯನ್ನ ಬಳಸಲ್ಪಡೋ, ಅದರಿಂದ ವಿಕೃತ ಸಂತೋಷವನ್ನು ಹೊಂದುವ ಅದೆಷ್ಟು ವ್ಯಕ್ತಿತ್ವಗಳನ್ನ ಕೂಡಾ ನಾನು ಖುದ್ದು ನೋಡಿಲ್ಲ. ಸಖಾರಾಮ್ ಬೈಂಡರ್ ನಾಟಕದ ಸಖಾರಾಮ್, ಲಕ್ಷ್ಮಿ ಮತ್ತು ಚಂಪಾ ಪಾತ್ರಗಳು ಕೂಡಾ ಹೀಗೆ ಒಂದು ಪ್ರಾದೇಶಿಕ ಸೀಮೆಯ ದೈನಿಕ ಭಾಷೆಯನಾಡುವ ಪ್ರತಿನಿಧಿಗಳಂತೆ ಕಂಡರೆ ಹೊರತು ನಾಟಕದಲ್ಲಿ ಭಾಷೆಯನ್ನ ತಮ್ಮಿಚ್ಚೆಗೆ ಬಳಸಿಕೊಂಡಂತೆ ತೋರಲಿಲ್ಲ. 

ಸಖಾರಾಮ್ ನಾಟಕದ ವಿವಾದ ಶುರುವಾಗಿ ಅದು ಬಹಿಷ್ಕರಿಸಲ್ಪಟ್ಟದ್ದು 1974 ರಲ್ಲಿ. ಮರಾಠಿಯ ವಿಜಯ್ ತೆಂಡೂಲ್ಕರ್ ರವರ ಈ ನಾಟಕ ಕೃತಿಯನ್ನ ರಂಗ ರೂಪಕ್ಕೆ ತಂದವರು ಕಮಲಾಕರ್ ಸಾರಂಗ್. 1972 ರಲ್ಲಿ ಈ ನಾಟಕ ರಚಿಸಲ್ಪಟ್ಟಿದೆ. ಈ ನಾಟಕದ ವಿವಾದಾತ್ಮಕ ಅಂಶ ಬಹುಶಃ ಕಥೆಯಲ್ಲಲ್ಲದೆ ರಂಗದ ಮೇಲೆ ತಂದ ರೂಪಕದಲ್ಲಿ ಕಾಣಿಸಿರಬಹುದು. ಹೆಣ್ಣಿಗೆ ಕೊಡುವ ಹಿಂಸೆ, ಅವಳ ಮೇಲೆ ಬಳಸಲ್ಪಡುವ ಭಾಷೆ, ಅವಳ ಮೇಲೆಸಗುವ ದೌರ್ಜನ್ಯ ಇವೆಲ್ಲದರ ಎಲ್ಲೇ ಮೀರಿ ನಿಂತದ್ದರಿಂದ ಅಂಥಹ ಒಂದು ಬಹಿಷ್ಕಾರವನ್ನ ವಿಧಿಸಲಾಗಿದ್ದು ನ್ಯಾಯವೇ ಅನಿಸಬಹುದು. ಕಥೆಯನ್ನ ನಾಟಕಕ್ಕೆ ಯಥಾವತ್ ಬಳಸಿಕೊಂಡಿರೋದರಿಂದ ಕಥೆಗೆ ಪೂರಕವಾಗಿ ಭಾಷೆಯನ್ನ ಮತ್ತು ಸಂಭಾಷಣೆಯನ್ನ ಹೆಣೆಯಲ್ಪಟ್ಟಿದೆ. ಅದೇ ಕಥೆ ಒರಟು ಭಾಷೆ, ಒರಟು ಪಾತ್ರಗಳ ಮೂಲಕವೇ ಮರಾಠಿ, ಹಿಂದಿ ಯಲ್ಲಿ ಹಲವಾರು ಯಶಸ್ವಿ ಪ್ರದರ್ಶನಗಳನ್ನ ಕಂಡಿರೋ ಈ ನಾಟಕ ಕನ್ನಡಕ್ಕೂ ಅದೇ ವರ್ಚಸ್ಸಿನೊಂದಿಗೆ ಬಂದದ್ದು ಸ್ವಾಗತಾರ್ಹ ಮತ್ತು ಅಭಿನಂದನೀಯ. ಈಗಿನ ಹಲವು ಧಾರಾವಾಹಿಗಳಲ್ಲಿ ಕಾಣುವಂಥ ಸಾಹಿತ್ಯಿಕ ಅನಿಸುವಂತ ಕನ್ನಡ ಅಥವಾ ಸಾಧಾರಣ ಕನ್ನಡ ಭಾಷೆಯ ಬಳಕೆ ಆಗಿದ್ದಿದ್ದರೆ.. ಬಹುಶಃ ಈ ರೀತಿಯ ಭಾಷಾ ಬಳಕೆ ಇರದಿದ್ದರೆ ನಾಟಕ ಅಷ್ಟು ಪರಿಣಾಮಕಾರಿಯಾಗಿ ಕಾಣಿಸುತ್ತಿರಲಿಲ್ಲವೋ ಏನೋ..??

ಕಥಾ ನಾಯಕ ಸಖಾರಾಮ್, ಬೈಂಡರ್ ಕೆಲಸ ಮಾಡುವ ಒಬ್ಬ ಸಾಮಾನ್ಯ ಪ್ರಜೆ. ಸಖಾರಾಮ್ ನ ವಿಚಾರಧಾರೆಗಳನ್ನ ಕಂಡಾಗ ಆತ ಉಪೇಂದ್ರ ಸಿನಿಮಾದ ಉಪೇಂದ್ರನ ಪಾತ್ರಧಾರಿಯಂತೆ ಭಾಸವಾಗುತ್ತಾನೆ.  ಸಮಾಜದ ಕಟ್ಟುಪಾಡುಗಳನ್ನ ಪಾಲಿಸದೆ ತನ್ನಿಷ್ಟದಂತೆ ತನಗೆ ಬೇಕಾಂದಂತೆ ಬದುಕುವ ಸ್ವತಂತ್ರ ಜೀವಿ. ಲೋಕದ ಯಾವ ಕೊಂಕು ನುಡಿಗಳೂ ಅವನನ್ನು ಬಾಧಿಸಲಾರವು ಅವನ ಬದುಕು ಅವನ ಪಾಲಿಗಷ್ಟೇ.. ಅವನು ಬದುಕುವ ಬದುಕು ಅವನದಷ್ಟೇ. ಅವನ ಬದುಕಿನೊಳಗೆ ಅವನದೇ ಒಂದಿಷ್ಟು ರೀತಿ ರಿವಾಜು.. ಅವನದೇ ಒಂದು ಜೀವನ ಶೈಲಿ. ಮದುವೆಯಾಗದ ಮಾತ್ರಕ್ಕೆ ಸಖಾರಾಮ್ ಸಾಂಸಾರಿಕ ಜಗತ್ತಿನ ಯಾವ ಲೌಕಿಕ ಸುಖದಿಂದಲೂ ವಂಚಿತನಲ್ಲ. ಅವನ ಬದುಕಿನಲ್ಲಿ ಬಂದು ಹೋದದ್ದು ಏಳು ಜನ ಹೆಂಗಸರು. ಎಲ್ಲರೂ ಅಬಲೆಯರು.. ಗಂಡ ಬಿಟ್ಟವರು, ಗಂಡ ಸತ್ತವರು, ಗಂಡನಿಂದ ಒತ್ತೆ ಇಡಲ್ಪಟ್ಟವರು, ಮಾರಲ್ಪಟ್ಟವರು ಇಂಥವರುಗಳೇ ಸಖಾರಾಮ್ ಬದುಕಿನಲ್ಲಿ ಬಂದ ಆ ಏಳು ಜನ ಹೆಣ್ಣುಗಳು. 

ನಾಟಕದ ಕಥಾವಸ್ತು ಸಖಾರಾಮ್ ಮತ್ತು ಅವನು ಕರೆದು ಕೊಂಡು ಬರುವ ಕಡೆಯ ಎರಡು ಹೆಂಗಸರ ನಡುವಿನ ಘಟನೆಗಳದ್ದು. ಗಂಡನಿಂದ ತ್ಯಜಿಸಲ್ಪಡೋ ಲಕ್ಷ್ಮಿಯನ್ನ ತನ್ನ ಮನೆಗೆ ಕರೆದು ಕೊಂಡು ಬರುವ ಸಖಾರಾಮ್ ಲಕ್ಷ್ಮಿಗೆ ಆಸರೆಯಾಗಿ ನಿಲ್ಲುತ್ತಾನೆ. ಆ ಅಸರೆಯೊಳಗೆ  ಇರಬೇಕಾದಲ್ಲಿ ಅವಳು ಸಹಿಸಿ ಕೊಳ್ಳ ಬೇಕಾದ ಕಷ್ಟ ಕೋಟಲೆಗಳನ್ನ ವಿವರವಾಗಿ ಹೇಳುತ್ತಾನೆ. ತನ್ನಿಚ್ಚೆಯಂತೆ ಅವಳು ನಡೆದು ಕೊಳ್ಳುವುದಿದ್ದರೆ ಮಾತ್ರ ಅವಳು ಆ ಮನೆಯಲ್ಲಿ ಉಳಿಯಬಹುದು ಎನ್ನುವ ಕರಾರು ಮಾಡುತ್ತಾನೆ. ಆ ಕರಾರಿಗೆ ಅವಳಿಗೆ ಒಪ್ಪಿಗೆ ಇರದಿದ್ದಲಿ ಆ ಕೂಡಲೇ ಅವಳು ಆ ಮನೆಯನ್ನು ಬಿಟ್ಟು ಹೊರಡ ಬಹುದಾಗಿಯೂ, ತಾನೇ ಅದಕ್ಕೆ ಅನುವು ಮಾಡಿಕೊಟ್ಟು ಅವಳಿಗೆ ಎರಡು ಸೀರೆಯೂ ಮತ್ತು ಐವತ್ತು ರೂಪಾಯಿಗಳಷ್ಟು ಹಣವನ್ನ ನೀಡಿ ಕಳುಹಿಸಿ ಕೊಡುವುದಾಗಿಯೂ ತಿಳಿಸುತ್ತಾನೆ. ಅವನ ಎಲ್ಲಾ ಕರಾರಿಗೆ ಒಪ್ಪಿಕೊಳ್ಳುವ ಲಕ್ಷ್ಮಿ ಅವನೊಂದಿಗೆ ಇರಲು ಒಪ್ಪಿ ಉಳಿದುಕೊಳ್ಳುತ್ತಾಳೆ.

ಲಕ್ಷ್ಮಿ ಮೂಲತಹ ಸಾಧ್ವಿಯಂತಹ ಹೆಣ್ಣುಮಗಳು. ಗಂಡ ತನ್ನನು ತ್ಯಜಿಸಿ ಕಳುಹಿಸಿದರು ಗಂಡನ ಶ್ರೆಯೋಭಿಲಾಷೆಗೆ ಹಾರೈಸುವವಳು. ಆ ಹೆಂಗಸರನ್ನ ಮಾತಾಡಿಸುವಾಗ ಹೋಗ್ರಿ ಬನ್ರಿ ಎಂದು ಮರ್ಯಾದೆ ಕೊಟ್ಟು ಮಾತಾಡಿಸುವ ಮರ್ಯಾದಾ ಪುರುಷ ಸಖಾರಾಮ್.. ಅವರನ್ನ ನಡೆಸಿಕೊಳ್ಳುವ ಪದ್ಧತಿ ಮಾತ್ರ ಘೋರ. ಎಷ್ಟು ತುಚ್ಛ ಮಾತುಗಳಿಂದ ಬೈಯುತ್ತಾನೆ.. ಮೃಗ ಕ್ಕಿಂತಲೂ ಕೀಳಾಗಿ ಹೊಡೆದು ಬಡಿದು ಹಿಂಸಿಸುತ್ತಾನೆ. ಎಲ್ಲವನ್ನೂ ಸಹಿಸಿಕೊಳ್ಳುವ ಲಕ್ಷಿ ಆಶ್ರಯ ಕೊಟ್ಟ ಸಖಾರಾಮ್ ನಲ್ಲಿ ದೇವರನ್ನು ಕಾಣುತ್ತಾಳೆ.. ಮತ್ತು ದೇವರಂತೆಯೇ ಪೂಜಿಸುತ್ತಾಳೆ. ಸಖಾರಾಮನ ಹೆಸರಲ್ಲಿ ತಾನೇ ತಾಳಿ ಕಟ್ಟಿಕೊಳ್ಳುತ್ತಾಳೆ. ಯಾವ ಹೆಣ್ಣನ್ನೂ ತನ್ನ ಬದುಕು ಪೂರ್ತಿ ಇರಿಸಿಕೊಳ್ಳದ ಸಖಾರಾಮ್ ಒಂದು ದಿನ ಲಕ್ಷ್ಮಿಯನ್ನೂ ಮನೆಯಿಂದ ಹೊರಗೆ ಹಾಕುತ್ತಾನೆ. ಲಕ್ಷ್ಮಿಯ ಜಾಗಕ್ಕೆ ಚಂಪಾಳನ್ನು ಕರೆದು ತರುತ್ತಾನೆ. 

ಲಕ್ಷ್ಮಿಗೆ ತದ್ವಿರುದ್ಧ ಗುಣದ ಚಂಪಾ ಬಜಾರಿಯಂಥಾ ಹೆಣ್ಣು. ಗಂಡಸನ್ನು ಯಕಶ್ಚಿತ್ ಎಂದು ತಿಳಿದು ಅವನಿಗೆ ಯಾವ ರೀತಿಯಿಂದಲೂ ಸೊಪ್ಪು ಹಾಕದ ದಿಟ್ಟ ತನದ ಮಹಿಳೆ. ಅವಳನ್ನು ಮನೆಗೆ ಕರೆದುಕೊಂಡು ಬರುವ ಸಖಾರಾಮ್ ತನ್ನ ರೀತಿ ರಿವಾಜುಗಳನ್ನೆಲ್ಲ ತಿಳಿಸುತ್ತಾನೆ. ಅದೆಲ್ಲವನ್ನು ಕೇಳಿಯೂ ಕೇಳದಂತೆ ಇದ್ದುಬಿಡುವ ಚಂಪಾ ಸಖಾರಾಮ್ ನನ್ನು ತನ್ನ ಇಶಾರೆಗೆ ಕುಣಿಯ ಬಲ್ಲವನಂತೆ ಮಾಡಿಕೊಳ್ಳುತ್ತಾಳೆ. ಮೂಲತಹ ಸೂಕ್ಷ್ಮ ಮನಿಸ್ಸಿನ ಮುಗ್ಧ ಹುಡುಗಿಯಾಗಿದ್ದ ಚಂಪಾ ಗಂಡನ ಕಿರುಕುಳ.. ಮಾನಸಿಕ ಹಿಂಸೆ ಮತ್ತು ಲೈಂಗಿಕ ಹಿಂಸೆಗಳಿಂದ ಒರಟಾಗಿ ಬದಲಾಗಿರುತ್ತಾಳೆ. ರಾಕ್ಷಸ ಗುಣದವರಿಗೆ ರಾಕ್ಷಸ ಗುಣದವರೇ ಆಪ್ತ ಅನ್ನುವಂತೆ ಚಂಪಾ ಸಖಾರಾಮನಿಗೆ ಮೆಚ್ಚಿಗೆಯಾಗುತ್ತಾಳೆ. ಚಂಪಾಳ ಒರಟುತನ ಒರಟ ಸಖಾರಾಮನಿಗೆ ಮೆಚ್ಚಿಗೆಯಾಗುತ್ತದೆ.

ಚಂಪಾಳ ಗಂಡ ವೃತ್ತಿಯಿಂದ ಪೋಲೀಸ್ ಆದರೂ ಮನುಷ್ಯನಲ್ಲದ ವ್ಯಕ್ತಿತ್ವ. ಪುರುಷತ್ವವಿಲ್ಲದ ಚಂಪಾಳ ಗಂಡ ಚಂಪಾಳನ್ನ ದೈಹಿಕವಾಗಿ ಬಹಳ ಹಿಂಸಿಸಿರುತ್ತಾನೆ. ಅವನ ಈ ಮನೋವೈಕಲ್ಯದಿಂದಾಗಿ ಒಂದು ದಿನ ಅವನು ಕೆಲಸ ಕಳೆದು ಕೊಂಡು ಅರೆ ಹುಚ್ಚನಾಗಿ ಬೀದಿ ಬೀದಿ ಅಲೆದು ಮಡದಿ ಚಂಪಾಳ ಆಸರೆಗಾಲಿ ಹಾತೊರೆಯುತ್ತಾನೆ. ಗಂಡನ ಮೇಲೆ ಲವಲೇಶವೂ ಕರುಣೆ ಪ್ರೀತಿ ಇರದ ಚಂಪಾ ಅವನು ಅವಳ ಹತ್ತಿರಕ್ಕೆ ಬಂದಷ್ಟೂ ಅವನನ್ನು ಬೈದು ಹೊಡೆದು ದೂರ ತಳ್ಳುತಾಳೆ.

ಹೊರ ಜಗತ್ತಿನಲ್ಲಿ ಇನ್ನ್ಯಾವ ಆಸರೆಯೂ ಸಿಗದ ಲಕ್ಷ್ಮಿ ಆಸರೆಗಾಗಿ ಮತ್ತೆ ಸಖಾರಾಮನನ್ನು ಅರಸಿ ಬರುತ್ತಾಳೆ. ಸಖಾರಮನ ವಿರೋಧದ ಹೊರತಾಗಿಯೂ ಚಂಪಾಳ ದಯೆಯಿಂದಾಗಿ ಲಕ್ಷ್ಮಿ ಸಖಾರಾಮನ ಮನೆಯಲ್ಲಿ ಆಸರೆ ಪಡೆಯುತ್ತಾಳೆ. ಚಂಪಾ ಸಖಾರಮನ ಸಖಿಯಾಗಿ ಲಕ್ಷ್ಮಿ ಮನೆ ಕೆಲಸದ ಸಾಧ್ವಿಯಾಗಿ ಮೂವರೂ ಒಟ್ಟಿಗೆ ಒಂದೇ ಸೂರಿನಡಿ ಬದುಕುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ.

ಅದೊಂದು ದಿನ ಲಕ್ಷ್ಮಿ ನೋಡಬಾರದ ಒಂದು ಸನ್ನಿವೇಶವನ್ನ ನೋಡಿ ಬಿಡುತ್ತಾಳೆ. ಸಖಾರಾಮನ ಸ್ನೇಹಿತ ದಾವೂದ್ ನೊಂದಿಗೆ ಚಂಪಾಳ ಅನೈತಿಕ ಸಂಬಂಧವನ್ನ. ಅಲ್ಲಿ ಯಾರೂ ಯಾರಿಗೂ ಗಂಡ ಹೆಂಡಿರಲ್ಲದಿದ್ದರೂ.. ಅಸಲು ಅವರುಗಳ ಸಂಬಂಧಗಳೇ ಅನೈತಿಕತೆಯ ತಳಹದಿಯ ಮೇಲೆ ನಿಂತಿದ್ದರೂ ಲಕ್ಷ್ಮಿ ಸಖಾರಾಮನ ಆಸರೆ ದೊರೆತಂದಿನಿಂದಲೇ ಸಖಾರಾಮನಿಗೆ ನಿಷ್ಠಳಾಗಿರುತ್ತಾಳೆ. ಮತ್ತು ಆ ನಿಷ್ಠೆಯನ್ನ ಚಂಪಾಳಿಂದಲೂ ಎದುರು ನೋಡಿರುತ್ತಾಳೆ. ಸಖಾರಾಮನನ್ನು ವಂಚಿಸಿ ದಾವೂದ್ ನೊಂದಿಗೆ ಅನೈತಿಕತೆಯಲ್ಲಿ ತೊಡಗುವ ಚಂಪಾಳ ಗುಣ ಹಿಡಿಸಿದ ಲಕ್ಷ್ಮಿ ಸಖರಾಮನಿಗೆ ಆಗುತ್ತಿರುವ ಮೋಸವನ್ನ ತಾಳಲಾರದೆ ಸಖರಾಮನಿಗೆ ವಿಷಯ ತಿಳಿಸಿ ಬಿಡುತ್ತಾಳೆ. ಕ್ರುದ್ಧನಾಗುವ ಸಖಾರಾಮ್ ಅವಸರದಲ್ಲಿ ಚಂಪಾಳನ್ನು ಕೊಂದು ಬಿಡುತ್ತಾನೆ. ಚಂಪಾಳನ್ನ ಕೊಂದ ಆಘಾತದಲ್ಲಿ ಸಖಾರಾಮ್ ಭ್ರಾಂತಿಗೆ ಬಿದ್ದು ನಿಶ್ಚಳನಾಗುವ ಸಖಾರಾಮ್ ಗೆ ಒತ್ತಾಸೆಯಾಗಿ ನಿಲ್ಲುವ ಲಕ್ಷ್ಮಿ ತಾನೇ ಚಂಪಾಳ ಹೆಣವನ್ನ ಸಖಾರಾಮನ ಮನೆಯಲ್ಲಿ ಹೂಳಲು ಪ್ರಯತ್ನಿಸುವ ಘಟನೆಯೊಂದಿಗೆ ನಾಟಕ ಮುಕ್ತಾಯವಾಗುತ್ತದೆ.

ನಾಟಕದಲ್ಲಿ ಈ ಕೆಲವೊಂದು ಸನ್ನಿವೇಶಗಳು ಬಹಳ ಕಾಲ ನೆನಪಿನಲ್ಲುಳಿದು ಕಾಡಿಸುವಂಥವು.

* ಲಕ್ಷ್ಮಿ ಮನೆಗೆ ಬಂದೊಡನೆ ಸಖಾರಾಮನಲ್ಲಿ ಕೆಲವೊಂದು ಬದಲಾವಣೆಗಳು ಉಂಟಾಗುತ್ತವೆ. ಯಾವತ್ತಿಗೂ ದೇವರನ್ನು ಪೂಜಿಸದ ಸಖಾರಾಮ್ ದೇವರನ್ನ ಪೂಜಿಸಲು ಇಷ್ಟಪಡುತ್ತಾನೆ. ಲಕ್ಷ್ಮಿಗಾಗಿ ತನ್ನ ಹಲವು ಚಟಗಳನ್ನ ನಿಯಂತ್ರಿಸಿಕೊಂಡು ಅವುಗಳ ಬಳಕೆಯನ್ನ ಕಮ್ಮಿಮಾಡಿಕೊಂಡು ಬರುತ್ತಾನೆ. ಒಂದು ಒಡನಾಟದ ಶಕ್ತಿ.. ಪ್ರೀತಿಯ ಅನುಭೂತಿ ಮಾತ್ರ ಹಾಗೆ ಎಂಥಾ ಮನುಷ್ಯನನ್ನೂ ಬದಲಾಯಿಸಲು ಸಾಧ್ಯ.

* ಮನುಷ್ಯನಿಗೆ ಸುಖ ಎನ್ನುವುದು ಯಾವ ಯಾವ ಕ್ರಿಯೆಗಳಿಂದ ಕ್ರಿಯಾ ಮೂಲಗಳಿಂದ ಸಿಗುತ್ತದೆ ಅನ್ನುವುದೇ ಆಶ್ಚರ್ಯ. ಲಕ್ಷ್ಮಿಯ ಒಂದು ಮೋಹಕ ನಗುವೆಂದರೆ ಸಖಾರಾಮನಿಗೆ ಅಂಥದ್ದೊಂದು ಸುಖ. ದೈಹಿಕವಾಗಿ ಅವಳನ್ನು ಯಾವತ್ತೂ ಹೊಂದದ ಸಖಾರಾಮ್ ಅವಳ ಆ ನಗುವಿಗೆ ಮಾತ್ರ ಭಿಕ್ಷುಕನಂತೆ ಹಂಬಲಿಸುತ್ತಾನೆ. ಮತ್ತು ಆ ನಗುವಿಗಾಗಿ ಅವಳನ್ನು ಇನ್ನಿಲ್ಲದಂತೆ ಹಿಂಸಿಸುತ್ತಾನೆ. ಲಕ್ಷ್ಮಿಯ ನಗುವಿನಂತೆಯೇ ಚಂಪಾಳ ಒರಟುತನವೂ ಸಖಾರಮನಿಗೆ ಸುಖವನೀಯುವ ಕ್ರಿಯೆ.

* ಲಕ್ಷ್ಮಿಯ ಭಾವುಕತೆ.. ಇರುವೆಯೊಂದಿಗಿನ ಅವಳ ಸರಸ, ಕಾಗೆಯೊಂದಿಗಿನ ನಂಟು.. ಭೂಮಿಯಂತ ಸಹನೆ, ತಾಯಿಯಂಥ ಮಮತೆ.. ಅವಳ ಅದ್ಭುತ ನಗೆ.. ಸಖಾರಾಮನನ್ನು ಮಾತ್ರವಲ್ಲ ವೀಕ್ಷಕರನ್ನೂ ಕಾಡುತ್ತದೆ.

* ಚಂಪಾಳ ಹಿನ್ನಲೆ ಮತ್ತು ಅವಳ ಕಥೆ ಎಂಥವರ ಹೃದಯವನ್ನೂ ಆರ್ದ್ರವಾಗಿಸುತ್ತದೆ ಹೂವಿನಂಥವಳು ಮುಳ್ಳಾದ ಅವಳ ಕಥೆ ನಿಜಕ್ಕೂ ಘೋರವೆನಿಸುತ್ತದೆ. ಚಂಪಾಳ ಒರಟುತನ, ಬಜಾರಿತನ ಆಶ್ಚರ್ಯ ಹುಟ್ಟಿಸಿಯೂ ಕಾಡುತ್ತದೆ.

* ಚಂಪಾಳ ಪುರುಷನ ಪಾತ್ರ ಈ ಕಾಲದ ಅನೇಕ ಹೀನ ಮನಸ್ಸಿನ ಗಂಡಸರ ಪ್ರತಿನಿಧಿಯಂಥದ್ದು. ಅವನ ಪಾಪಕ್ಕೆ ಅವನಿಗೆ ಶಾಸ್ತಿಯಾಗುತ್ತದೆ. ವ್ಯಗ್ರನಾಗಿದ್ದವನು ಮಗುವಂತೆ ಚಂಪಾಳ ಕಾಲ ಸುತ್ತಿಕೊಳ್ಳಲು ಹಂಬಲಿಸುವ ಪರಿ ಒಂದು ಸಂದೇಶದಂತೆ ತೋರುತ್ತದೆ.

* ಸಖಾರಾಮನ ಸ್ನೇಹಿತನ ಪಾತ್ರಧಾರಿ ದಾವೂದ್. ಒಂದಷ್ಟು ದೃಶ್ಯಗಳಲ್ಲಿ ನಗು ತರಿಸುತ್ತದೆ. " ಗಜಂದು ಮುಖದ ಗಣದು ಪತಿಯೇ ನಿನಗೆ ವಂದನೆ" ಅವನ ಈ ಹಾಡು ಈಗಲೂ ನಗು ತರಿಸುತ್ತದೆ. 

* ಕಡೆಯ ದೃಶ್ಯಗಳಲ್ಲಿ ಸಖಾರಾಮನ ಭಯ ದುಗುಡ ಭ್ರಾಂತಿ ನಿಷ್ಕ್ರಿಯತೆ.. ಆ ಸಮಯಕ್ಕೆ ಲಕ್ಷ್ಮಿಯ ದಿಟ್ಟತನ.. ಸಖಾರಾಮನನ್ನ ಕಾಪಾಡಿಕೊಳ್ಳುವ ಹಂಬಲವೂ ಕಾಡಿಸುತ್ತದೆ.

ಈ ನಾಟಕದಿಂದ ಯಾವ ಸಂದೇಶವೂ ದೊರಕುವುದಿಲ್ಲ ನಿಜ. ಆದರೆ ಮನುಷ್ಯನ ಅಸಹಾಯಕತೆ, ಹಿಂಸೆ, ವಿಕೃತಿ ಮತ್ತು ಅನೈತಿಕತೆಯ ವರ್ತನೆಗಳ ಹಲವು ಮುಖಗಳು ಗೋಚರಿಸುತ್ತವೆ. ಒಂದು ಮನರಂಜನಾ ಮಾಧ್ಯಮವಾಗಿ ನಾಟಕ ಮನಸ್ಸನ್ನ ಆವರಿಸಿಕೊಳ್ಳುವುದು ನಿಜ. 

ಈ ನಾಟಕದಲ್ಲಿ ಭಾಷೆಯ ಬಳಕೆ ಮತ್ತು ಹೆಂಗಸರನ್ನು ಹೊಡೆದು ಹಿಂಸಿಸುವ ವಿಚಾರದಲ್ಲಿ, ದೈಹಿಕ  ಕಾಮನೆಗಳ ರೂಪಕಗಳನ್ನ ರಂಗದ ಮೇಲೆ ಮುಕ್ತವಾಗಿ ಸಾದರ ಪಡಿಸುವ ವಿಚಾರದಲ್ಲಿ ಕಾಣಸಿಗುವ ರಿಯಲಿಸ್ಟಿಕ್ ಸನ್ನಿವೇಶಗಳು ನಿಜಕ್ಕೂ ಖಂಡನೀಯ. ಪ್ರಯತ್ನಿಸಿದರೆ ಅವುಗಳನ್ನ ನಿಯಂತ್ರಿಸಿಯೂ ನಾಟಕವನ್ನ ಇಷ್ಟು ಪಾರಿಣಾಮಕಾರಿಯಾಗಿ ಇರಿಸಿಕೊಳ್ಳಲು ಖಂಡಿತ ಸಾಧ್ಯ.

ನಾಟಕದ ಅಂತ್ಯ ಅನಿರೀಕ್ಷಿತ ಹಂತದಲ್ಲಿ ಬಂದು ಬಿಡುತ್ತದೆ. ಯಾರೂ ಊಹಿಸದ ರೀತಿ ನಾಟಕ ಮುಗಿದು ಬಿಡುತ್ತದೆ. ಇನ್ನೇನೋ ಇದೆ.. ಮುಂದೇನೋ ಆಗುತ್ತದೆ ಅನ್ನುವ ಕಾತುರ ಹಿಡಿದು ಕೂತಂತೆಯೇ ನಾಟಕ ಮುಗಿದು ಬಿಡುತ್ತದೆ. ಅಂತ್ಯವನ್ನ ಸ್ವಲ್ಪ ಪರಿಷ್ಕರಿಸಿದರೆ ಒಳ್ಳೆಯದು.

ನಾಟಕದ ಕಥಾವಸ್ತು 1972 ಕಾಲದ ವ್ಯಾಪ್ತಿಗೆ ಒಳಪಟ್ಟಿರೋದರಿಂದ ಅದನ್ನ ಈಗಿನ ಸಾಮಾಜಿಕ ಸ್ಥಿತಿ ಗತಿಗೆ ಹೋಲಿಸಿ ನೋಡಿ ಅಳೆದರೆ ತಪ್ಪಾಗುತ್ತದೆ. ನಾಟಕವನ್ನ ಈಗಿನ ಸಾಮಾಜಿಕ ಸ್ಥಿತಿಗತಿಗೆ ಅನುಗುಣವಾಗಿ ಪರಿವರ್ತಿಸಿ ರಂಗದ ಮೇಲೆ ತರುವ ಪ್ರಯತ್ನ ನಡೆದರೂ ಅದು ಶ್ಲಾಘಿಸುವ ಕಾರ್ಯವಾಗಬಹುದು.

ಸಖಾರಾಮ್ ಬೈಂಡರ್ ನನ್ನ ಮಟ್ಟಿಗೆ ನಿಜಕ್ಕೂ ಖುಷಿ ಕೊಟ್ಟ ನಾಟಕ. ಒಂದು ಸಾಮಾಜಿಕ ಸಮಸ್ಯೆಯ ಕಥಾ ಹಂದರ.. ಪ್ರದೀಪ್ ಕುಮಾರ್, ರಾಜೇಶ್ವರಿ ತಳವಾರ್, ಪ್ರಜ್ಞಾ ಬ್ರಹ್ಮಾವರ್, ದರ್ಶನ್ ತುಮಕೂರು, ಮತ್ತು ಸತೀಶ್ ಎಂ ವೀ ಅವರುಗಳ ಮನ ಮುಟ್ಟುವ ಮನೋಜ್ಞ ಅಭಿನಯ. ಸನ್ನಿವೇಶಕ್ಕೆ ಪೂರಕ ಸಂಗೀತ ಮತ್ತು ಬೆಳಕು. ಇಡೀ ನಾಟಕ ಸಖಾರಾಮ್ ಮನೆಯ ಎರಡು ಕೋಣೆಯ ಮಧ್ಯೆ ನಡೆಯುವ ಒಂದು ನಿಯಂತ್ರಿತ ಕಥಾ ಹಂದರದ ವಿಶೇಷತೆಗೆ. ಕನ್ನಡಕ್ಕೆ ಇದನ್ನ ತಂದುಕೊಟ್ಟ ಗೀತಾ ತಕ್ಕವಾರಿ.. ರಂಗದ ಮೇಲೆ ಇದನ್ನು ಸಾದರಿ ಪಡಿಸಲು ಕಾರಣರಾದ ಸರ್ವಸ್ವ ತಂದ ಮತ್ತು ಅದರ ರೂವಾರಿ ನಾಗರಾಜ ಸೋಮಯಾಜಿ.. ಈ ನಾಟಕದ ನಿರ್ವಹಣೆ ಹೊತ್ತ ಗೆಳೆಯ ಮಹೇಶ್ ಪಲ್ಲಕ್ಕಿಯವರ ಕಾರ್ಯ ನಿಜಕ್ಕೂ ಶ್ಲಾಘನೀಯ.

ಮುಂದೇನಾದರು ಈ ನಾಟಕದ ಮರು ಪ್ರದರ್ಶನ ಇದ್ದಲ್ಲಿ ಖಂಡಿತ ಮಿಸ್ ಮಾಡ್ಕೋಬೇಡಿ ಅನ್ನೋದು ನನ್ನ ಕರೆಯಷ್ಟೇ.

Friday 28 February 2014

ಜನುಮ ದಿನವೂ.. ಅದರ ಸಂತೋಷವೂ..

ಎಸ್ ಕೆ ಚನ್ನೇಗೌಡ್ರು  ಅಂತ ನಮ್ಮೂರ ಸೀಮೆಗೆ ದೊಡ್ಡ ಶ್ರೀಮಂತರ ಪೈಕಿ ಅನ್ನಿಸಿ ಕೊಳ್ಳೋರು. ಅವರ ಮನೆ ಇಂದ ಒಂದು ಹುಡುಗಿ ನಮ್ ಸ್ಕೂಲಿಗೆ ಬರೋಳು ಬಿಂದು ಅಂತ, ನನ್ನ ಕ್ಲಾಸ್ ಮೇಟ್. ಒಂದಿನ ಕ್ಲಾಸ್ ನಲ್ಲಿ ಎಲ್ಲರಿಗೂ ಫಾರಿನ್ ಚಾಕೊಲೆಟ್ ನ ಕೊಡ್ತಾ ಇದ್ಲು ಯಾಕೆ ಅಂತ ಕೇಳ್ದಾಗ ಅವತ್ತು ಅವಳ ಹುಟ್ಟಿದ ದಿನ ಅಂತ ಹೇಳಿದ್ಳು. ಬಿಸಿಲಿಗೆ ಫಳ ಫಳ ಹೊಳೆಯೋ ಮಿಂಚಿನ ತುಣುಕುಗಳನ್ನ ಹೊತ್ತ ನೀಲಿ ಕಲರ್ ಹೊಸಾ ಚೂಡಿದಾರದಲ್ಲಿ ಮಿಂಚ್ತಾ ಇದ್ರೆ ಎಲ್ಲರಿಗೂ ಆಶ್ಚರ್ಯ. ಆ ಹುಡುಗಿ ಮೊದಲೇ ನೋಡೋಕೆ ಅಷ್ಟು ಚೆಂದ ಇನ್ನು ಈ ತರಹ ಬಟ್ಟೆ ಹಾಕಿದ್ರೆ ಎಂಥವರಾದ್ರು ಒಂದು ಕ್ಷಣ ಕವಿ ಆಗ್ಬೇಕು ಅನ್ನಿಸಬೇಕು. ನಮಗೆಲ್ಲ ಯುಗಾದಿಗೋ, ದೀಪಾವಳಿಗೋ ಒಂದು ಹೊಸ ಬಟ್ಟೆ ಸಿಗ್ತಿತ್ತು ಅಷ್ಟೇ. ಹುಟ್ಟಿದ ದಿನ ಎಲ್ಲ ಒಂದು ಹಬ್ಬ ಅಂತ ಗೊತ್ತೇ ಇರ್ಲಿಲ್ಲ. ಅಸಲು ಹುಟ್ಟಿದ ದಿನವೇ ಗೊತ್ತಿರಲಿಲ್ಲ. ಅವಳು ಕೊಟ್ಟ ಚಾಕೊಲೆಟ್ ತಿಂದು ಅವಳಿಗೆ ಶುಭಾಷಯ ಹೇಳಿದೆವು. ನಮಗೂ ಹೀಗೆ ಬರ್ತ್ ಡೇ ಎಲ್ಲ ಇದ್ದಿದ್ರೆ ಎಷ್ಟ್ ಚೆಂದ ಇರೋದು ಅನ್ಸಿ ಅಟೆಂಡರ್ ನಾಗಮ್ಮನನ್ನ ಪುಸಲಾಯಿಸಿ ಶಾಲಾ ದಾಖಲಾತಿಯಲ್ಲಿ ದಾಖಾಲಾಗಿದ್ದ ನಮ್ಮ ಹುಟ್ಟಿದ ದಿನಾಂಕ ವನ್ನ ತಿಳಿದುಕೊಂಡ್ವು. ಅದ್ಕೂ ಮುನ್ನ ಏಳನೇ ಕ್ಲಾಸ್ ಮಾರ್ಕ್ಸ್ ಕಾರ್ಡ್ ಮತ್ತೆ ಟೀ ಸೀ ಲಿ ನಮ್ಮ ಹುಟ್ಟಿದ ದಿನಾಂಕ ನೋಡಿದ್ದಿತ್ತಾದ್ರು ಜ್ಞಾಪಕ ಇಟ್ಕೊಳೋ ಜರೂರತ್ತು ಇದೆ ಅಂತ ಯಾವತ್ತೂ ಅನ್ನಿಸೇ ಇರ್ಲಿಲ್ಲ. 

ಹುಟ್ಟಿದ ದಿನಾಂಕ ತಿಳ್ಕೊಂಡ ಮೇಲೆ ನಮಗಾದ ಪುಳಕ ಅಷ್ಟಿಷ್ಟಲ್ಲ. ಶಾಲೇಲಿ ಬರ್ತ್ ಡೇ ನೆಪದಲ್ಲಿ ವಾರಕ್ಕೆ ಒಬ್ಬರಾದರೂ ಚಾಕೊಲೆಟ್ ಕೊಡ್ತಾರೇನೋ ಅಂತ ಆಸೆ. ಸರ್ಕಾರಿ ಶಾಲೆಗೇ ಬರ್ತಿದ್ದವರಲ್ಲಿ ಬಹಳಷ್ಟು ಜನ ಬಡವರೇ ಆಗಿದ್ರಿಂದ ಯಾರು ಅಂತ ಆಚರಣೆಗಳ ಕಡೆ ಆಸಕ್ತಿ ಇರ್ಲಿಲ್ಲ. ಒಂದಿನ ನನ್ನ ಹುಟ್ಟಿದ ದಿನ ಬಂತಾದರೂ ಕೈಲಿ ದುಡ್ಡಿಲ್ಲದೆ.. ಮನೇಲಿ ಕೇಳಿದರೆ ಅದೆಲ್ಲ ದುಡ್ಡಿರೋರಿಗೆ ನಮ್ಮಂತೋರಿಗಲ್ಲ ಅಂತ ಸಬೂಬು ಹೇಳಿ ಅಪ್ಪ ಆವತ್ತಿನ ಕಾಲಕ್ಕೆ ಅವತ್ತು ಒಂದು ರುಪಾಯಿ ಕೊಟ್ಟಿದ್ದರು. ಒಂದು ರುಪಾಯಿ ಇಡೀ ತರಗತಿಗೆ ಮಿಟಾಯಿ ಎಲ್ಲಿ ಕೊಡಿಸೋಕ್ಕಾಗ್ತಿತ್ತು..?? ಬೇಕಿದ್ದ ಹತ್ತು ಹದಿನೈದು ಹುಡುಗರಿಗೆ ನಿಂಬೆ ಹುಳಿ ಮಿಟಾಯಿ ಅಷ್ಟೇ ಕೊಡಿಸಿದ್ದೆ ಅವತ್ತು. ಆನಂತರ ಕಾಲೇಜಾಗಲೀ ITI ಆಗಲಿ ನನ್ನ ಹುಟ್ಟಿದ ದಿನವನ್ನ ಒಂದು ಸಂಭ್ರಮದ ದಿನ ಆಗಿಸುವಲ್ಲಿ ವೇದಿಕೆ ಆಗ್ಲೇ ಇಲ್ಲ. ಗೊತ್ತಿದ್ದ ನಾಲ್ಕಾರು ಹುಡುಗರು ಶುಭಾಷಯ ಹೇಳ್ತಿದ್ರು ಬಿಟ್ರೆ ಅವತ್ತಿನ ದಿನವೂ ನಮ್ಮ ಪಾಲಿಗೆ ಅಂಥಾ ವೆತ್ಯಾಸದ ದಿನವೇನೂ ಆಗಿರ್ತಿರ್ಲಿಲ್ಲ. 


ITI ಮುಗಿಸಿ ಟ್ರೈನಿಂಗ್ ಗೆ ಅಂತ ಬೆಂಗಳೂರಿಗೆ ಬಂದಿದ್ದಾಯ್ತು. ಫ್ರೆಂಡ್ಸ್ ಜೊತೆ ಬೇರೆ ಮನೇಲಿ ಉಳಿದುಕೊಂಡರೆ ಕೆಟ್ಟು ಹೋಗ್ತೀನಿ ಅಂತ ಅಮ್ಮ ತನ್ನ ತಮ್ಮ ಅಂದ್ರೆ ನನ್ನ ಸೋದರ ಮಾವನ ಮನೇಲಿ  ಇರೋ ಹಾಗೆ ಮಾಡಿದ್ರು. ಆ ಟೈಮಿಗೆ ಮಾಮಿಗೆ ಎರಡನೇ ಮಗುವಿನ ಸಮಯ ಫೆಬ್ರವರಿಯ ಕೊನೆ ವಾರದಲ್ಲಿ ಡೆಲಿವೆರಿ ಗೆ ಅಂತ ಎಲ್ಲ ಊರಿಗೆ ಹೊರಟ್ರು. ನಾನ್ ಮಾತ್ರ ಒಬ್ನೇ ಉಳಿದುಕೊಂಡೆ ಮಾಮನ ಮನೇಲಿ  ಟ್ರೈನಿಂಗ್ ನಿಮಿತ್ತ. ಮಾಮನ ಮನೆ ಗಾರ್ವೆ ಬಾವಿ ಪಾಳ್ಯದ ಒಳಗೆ ಬೇಗೂರು ರಸ್ತೆಯ ಶ್ರೀರಾಮ ನಗರದಲ್ಲಿ. ಎರಡು ಅಂತಸ್ತು, ಆರು ಸಣ್ಣ ಸಣ್ಣ ಮನೆಗಳಿದ್ದಂಥ ಕಟ್ಟಡ ಅದು. ಮಾಮನ ಮನೆ ಮೊದಲ ಅಂತಸ್ತಿನಲ್ಲಿ. ಮೇಲಂತಸ್ತಿನ ಸಾಲಿನ ಕೊನೆಯ ಮನೆಯಲ್ಲಿ ಬಾಡಿಗೆ ಇದ್ದವರು ಒಬ್ಬ ತೆಲುಗು ಕುಟುಂಬ. ಅದರಲ್ಲಿ ಪ್ರೀತಿ ಅನ್ನುವ ಪೀಯೂಸಿ ಓದುವ ಹುಡುಗಿ. ಮುದ್ದಾಗಿದ್ಳು. ಫೆಬ್ರವರಿ ಇಪ್ಪತ್ನಾಲ್ಕು ಅವಳ ಹುಟ್ಟಿದ ದಿನ. ಅವತ್ತು ಸಂಜೆ ಕೆಲಸ ಮುಗಿಸಿ ಮನೆಗೆ ಬಂದದ್ದೇ ಆ ಮನೆಯ ಆಂಟಿ ಬಂದು ತಮ್ಮ ಮಗಳ ಹುಟ್ಟಿದ ಹಬ್ಬದ ಸೆಲೆಬ್ರೇಶನ್ ಗೆ ಕರೆದು ಹೋದ್ರು. ಬರ್ತ್ ಡೇ ಪಾರ್ಟಿ ಅಂದ್ರೆ ಸುಮ್ನೆ ಹೊಗೊಕಾದೀತೇ ಏನಾದ್ರೂ ತಗೊಂಡು ಹೋಗಬೇಕಲ್ವೆ ಗಿಫ್ಟ್ ಅಂತ ಅಂದುಕೊಂಡೆ . ಆಗ ಸ್ಟೈಪೆಂಡ್ ಅಂತ ಬರ್ತಿದ್ದ ಎರಡು ಸಾವಿರದಲ್ಲಿ ಒಂದು ಸಾವಿರವನ್ನ ಮನೆಗೂ, ಎಂಟು ನೂರು ರುಪಾಯಿಯನ್ನ ಮಾಮನಿಗೂ, ನನ್ನ ಅತಿ ಅಗತ್ಯದ ಖರ್ಚುಗಳಿಗೆ ಅಂತ ಇನ್ನೂರು ರುಪಾಯಿಗಳನ್ನೂ ಇಟ್ಕೋತಾ ಇದ್ದೆ. ಅದು ತಿಂಗಳ ಕೊನೆ. ನನ್ ಕೈಲಿ ಇದ್ದದ್ದು ಕೇವಲ ಮೂವತ್ತು ರುಪಾಯಿ. ಪೀಯೂಸಿ ಓದೋ ಹುಡುಗೀಗೆ ಮೂವತ್ತು ರುಪಾಯಿಗೆ ಏನು ಗಿಫ್ಟ್ ಕೊಡಿಸೋಕಾದೀತು ಅಂತ ಒಂದು ಡೈರಿ ಮಿಲ್ಕ್ ಚಾಕೊಲೆಟನ್ನ ತಗೊಂಡು ಹೋದೆ ಅಷ್ಟೇ. 


ನಮ್ಮ ಬಿಲ್ಡಿಂಗ್ ನಲ್ಲಿ  ಆರು ಮನೆಗಳಲ್ಲಿ ಒಟ್ಟು ಎಂಟು ಜನ ಮಕ್ಕಳಿದ್ರು ಅದರಲ್ಲಿ ಪೀಯೂಸಿ ಓದೋರು ಇಬ್ರು, ಇನ್ನು ಎಂಟರಿಂದ ಹತ್ತರವರೆಗೆ ನಾಲ್ಕು.. ಐದರಿಂದ ಏಳನೇ ತರಗತಿ ವರೆಗೆ ಎರಡು ಮಕ್ಳು. ದಿನಾ ಸಂಜೆ ಎಲ್ಲರ ಜೊತೆ ಬೀದೀಲಿ ಶಟಲ್, ಮಹಡಿಯಲಿ ಕೇರಂ, ಹಾವು ಏಣಿ ಆಟ, ಭಾನುವಾರದಂದು ಕ್ರಿಕೆಟ್ ಆಡ್ತಿದ್ದ ನಾನು ಎಲ್ಲ ಹುಡುಗರಿಗೂ ಆಪ್ತನಾಗಿದ್ದೆ. ನಾನು ಪ್ರೀತಿಯ ಬರ್ತ್ ಡೇ ಪಾರ್ಟಿ ಗೆ ಹೋಗಿದ್ದು ನೋಡಿ ಅವಳು ತುಂಬಾ ಖುಷಿಯಾದಳು. ಕೇಕ್ ಕಟ್ ಮಾಡಿದ್ದಾಯ್ತು. ಎಲ್ಲರಿಗೂ ಕೇಕ್ ಹಂಚುತ್ತಾ ಬಂದಳು. ನಂಗೆ ಕೇಕ್ ಕೊಟ್ಳು ನಾನು ಅವಳಿಗೆ ಚಾಕಲೇಟ್ ಕೊಟ್ಟೆ. ನಿಮ್ ಬರ್ತ್ ಡೇ ಯಾವಾಗ ಅಣ್ಣ ಅಂತ ಕೇಳಿದ್ಳು ಮುಜುಗರದಿಂದ ನಾಳೆನೇ ಕಣಮ್ಮ ಅಂದಿದ್ದೆ. ಮೊದ್ಲೇ ಹೇಳಿದ್ರೆ ಇಬ್ರು ಒಟ್ಟಿಗೆ ಕೇಕ್ ಕಟ್ ಮಾಡ್ಬೋದಿತ್ತಾ, ಈಗ ನೋಡಿ ನಿಮ್ಮನೇಲಿ ಯಾರು ಇಲ್ಲ, ಪರವಾಗಿಲ್ಲ ಇದನ್ನೇ ನಿಮ್ ಬರ್ತ್ ಡೇ ಸೆಲೆಬ್ರೇಶನ್ ಅಂದ್ಕೊಳಿ ಅಂತು ಆ ಹುಡುಗಿ. ಬಹಳ ಸಂತೋಷ ವಾಗಿತ್ತು ನಂಗೆ.. ನನ್ನ ಬರ್ತ್ ಡೇ ಮಾಡಿಕೊಂಡಷ್ಟೇ ಖುಷಿ ಇಂದಿದ್ದೆ ಅಂದು. ಅವತ್ತು ರಾತ್ರಿ ಅವರ ಮನೆಲಿಯೇ ಊಟ ಮಾಡಿಯಾದ ನಾನು ತುಂಬಾ ಭಾವುಕನಾಗಿದ್ದೆ. ಮಾರನೆ ದಿನ ನನ್ನ ಹುಟ್ಟಿದ ದಿನ, ಸ್ನೇಹಿತನ ಬಳಿ ನೂರು ರುಪಾಯಿ ಸಾಲ ತಗೊಂಡು ಅದರಲ್ಲಿ ಬೇಕಿದ್ದ ಕೆಲವು ಸ್ನೇಹಿತರಿಗೆ ಬೇಕರಿಯಲ್ಲಿ ಕೇಕ್ ಕೊಡಿಸಿ, ಮಿಕ್ಕ ಹಣದಲ್ಲಿ ಮನೆ ಸುತ್ತಣ ಮಕ್ಕಳಿಗೆಲ್ಲ ಚಾಕೊಲೆಟ್ ತಂದು ಹಂಚಿ ಸಂಭ್ರಮಿಸಿದ್ದೆ. 

ಇನ್ನು ಟ್ರೈನಿಂಗ್ ಮುಗೀತು ಟ್ರೈನಿಂಗ್ ಮುಗಿದು ವಾಪಾಸು ಊರಿಗೆ ಹೋದೆ. ಮಧ್ಯೆ ಎರಡ್ಮೂರು ಕಂಪನಿಗಳಿಗೆ ಎಕ್ಸಾಮು ಬರೆದಿದ್ದೆ. ಊರಲಿದ್ದ ಒಂದಷ್ಟು ದಿನಗಳ ನಂತರ ನನಗೆ ಕೆಲಸವೂ ಸಿಕ್ತು ಈ ಕಂಪನಿಯಲ್ಲಿ. ಕೆಲಸ ಸಿಕ್ಕದ್ದೇ ತಮಿಳುನಾಡಿನ ತಿರುಚಿರಾಪಳ್ಳಿಗೆ ಹೋಗ ಬೇಕಾಯ್ತು ಟ್ರೈನಿಂಗ್ ನಿಮಿತ್ತ. ಹೊಸ ಜಾಗ, ಹೊಸ ಜನ ಹೊಸ ಥರದ ಅನುಭವ ಆರು ಕರ್ನಾಟಕ, ನಾಲ್ಕು ತಮಿಳುನಾಡು, ಏಳು ಮಲಯಾಳಿ ಹುಡುಗರು ನಮ್ಮ ಬ್ಯಾಚ್ ನೊಳಗಿದ್ದದ್ದು. ಮೊದಲ ಮೂರು ತಿಂಗಳ ನಂತರ ತಲಾ ಇಬ್ಬಿಬ್ಬರನ್ನಾಗಿ ಕರ್ನಾಟಕ ಕೇರಳ ತಮಿಳುನಾಡಿನ ಹಲವು ಕಡೆ ನಮ್ಮನ್ನ ಟ್ರೈನಿಂಗ್ ನಿಮಿತ್ತ ಕಳಿಸಲಾಯ್ತು. ನನಗೆ ತಿರುಚಿಯಲ್ಲಿಯೇ ಇರಬೇಕಾಯ್ತು. ಆಗ ನನ್ನ ಜೊತೆ ಇದ್ದವನು ಮಂಗಳೂರಿನ ಹುಡುಗ ಪ್ರಶಾಂತ್. ೨೦೧೦ ರ ನನ್ನ ಜನ್ಮ ದಿನವನ್ನ ನಾನು ಅವನು ಇಬ್ಬರೇ ಆಚರಿಸಿದ್ವು ಒಂದು ಸಣ್ಣ ಕೇಕ್ ಕಟ್ ಮಾಡಿ. ಈ ಮಧ್ಯೆ ಅಲ್ಪ ಸ್ವಲ್ಪ ಕಂಪ್ಯೂಟರ್ ಕಲಿತಿದ್ದ ನಾನು ಆರ್ಕುಟ್ ಸೇರಿದ್ದೇ ಅಲ್ಲಿ ಸ್ನೇಹಲೋಕ ಅನ್ನುವ ಒಂದು ಗುಂಪಿನ ಸ್ನೇಹಿತರ ಪರಿಚಯವಾಗಿತ್ತು. ಟ್ರೈನಿಂಗ್ ಮುಗಿದು ೨೦೧೧ ರಲ್ಲಿ ನನ್ನ ಪೋಸ್ಟಿಂಗ್ ಹೊಸೂರ್ ನಲ್ಲಾಯ್ತು. ಆ ವರ್ಷದ ಫೆಬ್ರುವರಿ ಕೊನೆಯ ವಾರ ನಾನು ಕೆಲಸದ ನಿಮಿತ್ತ ಪ್ರವಾಸದಲ್ಲಿ ಇದ್ದದ್ರಿಂದ ಆಚರಣೆ ಏನು ಸಾಧ್ಯವಾಗಿರಲಿಲ್ಲ. ಆದ್ರೆ ಆರ್ಕುಟ್ ನಲ್ಲಿ ನನ್ನ ಜನ್ಮದಿನಾಂಕ ಗೊತ್ತು ಮಾಡ್ಕೊಂಡು ನನಗೆ ಫೋನ್ ಮಾಡಿ ಹಲವಾರು ಜನ ಸ್ನೇಹಿತರು ವಿಶ್ ಮಾಡಿದ್ದು ನೋಡಿ ಖುಷಿಯಾಗಿದ್ದೆ. 

೨೦೧೨ ರ ನನ್ನ ಜನ್ಮ ದಿನವನ್ನ ಎರಡು ಬಾರಿ ಆಚರಿಸಿ ಸಂಭ್ರಮಿಸಿದ್ದೆ. ನನ್ನ ಜೊತೆಗೆ ಹೊಸೂರಿಗೆ ಪೋಸ್ಟಿಂಗ್ ಆದಂಥ ಮತ್ತೊಬ್ಬ ಹುಡುಗ ಪ್ರಶಾಂತ್. ಮಡಿಕೇರಿಯವನು. ಅವನ ಜನ್ಮದಿನ ನನ್ನದರ ಮರುದಿನಕ್ಕೆ ಅಂದರೆ ಫೆಬ್ರವರಿ ಇಪ್ಪತ್ತಾರಕ್ಕೆ. ನಮ್ಮ ಕಂಪನಿಯ ಕ್ಯಾಂಟೀನ್ ಕಾಂಟ್ರಾಕ್ಟ್ ಮ್ಯಾನೇಜರ್ ಅನೀಶ್ ಕೂಡ ನಮ್ಮ ಗೆಳೆಯನಾಗಿದ್ದ. ಅವನ ಬರ್ತ್ ಡೇ ಫೆಬ್ರವರಿ ಇಪ್ಪತ್ತೆಂಟಕ್ಕೆ. ನಾವು ಮೂರು ಜನ ಸೇರಿ ನಮ್ಮ ಜನ್ಮದಿನವನ್ನ ಒಟ್ಟಿಗೆ ಇಪ್ಪತ್ತಾರರ ರಾತ್ರಿ ಕ್ಯಾಂಟೀನ್ ಹುಡುಗರ ಜೊತೆ ಸೇರಿ ಸಂಭ್ರಮದಿಂದ ಆಚರಿಸಿದ್ವಿ. ಅದಾದ ಕೆಲವು ದಿನಗಳ ನಂತರ ಸ್ನೇಹಲೋಕ ತಂಡದ ಜೊತೆ ಲಾಲ್ ಬಾಗಿನಲ್ಲಿ ಆಚರಿಸಿದ್ದು ನನ್ನ ಇನ್ನೂ ಒಂದು ಮರೆಯಲಾಗದ ಸವಿ ನೆನಪು. ಅವತ್ತು ನನ್ನ ಜೊತೆಗೆ ಇನ್ನೂ ಇಬ್ಬರು ತಮ್ಮ ಬರ್ತ್ ಡೇ ಆಚರಣೆ ಮಾಡಿ ಕೊಂಡಿದ್ರು. ಒಂದು ಮುಕ್ತ ಸಂಭ್ರಮಾಚರಣೆ. ಅದೇ ಮೊದಲು ಜೀವನದಲ್ಲಿ ಅಷ್ಟು ಜನ ನನ್ನ ಜನ್ಮ ದಿನದ ಸಂತೋಷವನ್ನ ನನ್ನ ಜೊತೆ ಸಂಭ್ರಮಿಸಿದ್ದು. ಇನ್ನು ೨೦೧೩ ರ ಜನುಮ ದಿನವನ್ನ ನಾನು ಅನೀಶ್ ಮತ್ತು ಪ್ರಶಾಂತ್ ಮೂರೂ ಜನ ನಮ್ಮಿಡೀ ಕಚೇರಿ ಸಿಬ್ಬಂಧಿಯೊಂದಿಗೆ ಆಚರಿಸಿ ಕೊಂಡಿದ್ವು. ರಾಜಿನಾಮೆ ಕೊಟ್ಟು ಹೋಗಲಿದ್ದ ಸಹವರ್ತಿ ಲಾವಣ್ಯ, ಟ್ರಾನ್ಸ್ಫೆರ್ ಆಗಿ ಹೋಗಲಿದ್ದ ಬಾಸ್ ಅಜಯಕುಮಾರ್ ಮತ್ತು ಸಂಧ್ಯಾ ಮೇಡಂ ಅವರುಗಳ ಜೊತೆ, ನಮ್ಮಿಡೀ ಕಾರ್ಮಿಕ ಪರಿವಾರದ ಸಮಕ್ಷಮದಲ್ಲಿ ಎಲ್ಲರೊಂದಿಗೆ ಸೇರಿ ಸಂಭ್ರಮಿಸಿದ್ದ ಹುಟ್ಟು ಹಬ್ಬದ ಸಂತೋಷ ಚಿರಕಾಲ ನೆನಪಿನಲ್ಲುಳಿಯುವಂಥದ್ದು. 

ಬಹುಮುಖ್ಯವಾದ ಪ್ರಾಜೆಕ್ಟ್ ಒಂದರ ತುರಾತುರಿಯಲ್ಲಿದ್ದ ನಾವೆಲ್ಲಾ ಈ ವರ್ಷ ನಮ್ಮ ಜನ್ಮ ದಿನದ  ಯೋಚಿಸುವಷ್ಟು ತಾಳ್ಮೆ ಕೂಡಾ ಇರಲಿಲ್ಲ. ಮುನ್ನೂರ ಹದಿನೈದು ಮೆಗಾ ವ್ಯಾಟ್ ಶಕ್ತಿಯ ಬಹು ದೊಡ್ಡ ಟ್ರಾನ್ಸ್ ಫಾರ್ಮರ್ ನ ಮೂರನೇ ಘಟಕವನ್ನ ಕೇವಲ ಹತ್ತು ದಿನಗಳೊಳಗಾಗಿ ಮುಗಿಸಬೇಕ್ಕಾದ್ದರಿಂದ ಎಲ್ಲರಿಗೂ ಗುರುತರ ಜವಾಬ್ದಾರಿಗಳಿದ್ವು. ಟೆಸ್ಟಿಂಗ್ ಉಸ್ತುವಾರಿಯನ್ನ ನನಗೆ ವಹಿಸಲಾಗಿತ್ತು. ಫೆಬ್ರವರಿಯ ಕೊನೆಯ ಹತ್ತು ದಿನ ನಾವು ಪೂರ್ತಿ ಇದರಲ್ಲೇ ಮುಳುಗಿ ಹೋಗಿದ್ವು. ಬೆಳಿಗ್ಗೆ ಎಂಟು ಗಂಟೆಗೆ ಕಾರ್ಯ ಸ್ಥಳ ತಲುಪಿದರೆ ವಾಪಾಸು ಮನೆ ಬಂದು ಸೇರುವುದು ರಾತ್ರಿ ಹನ್ನೊಂದಾದರೂ ಆಗುತ್ತಿತ್ತು. ಬಹಳ ಒತ್ತಡದ ಕೆಲಸವಾದ್ದರಿಂದ ಯಾವ ಕರ್ಮಚಾರಿಗೂ ರಜೆ ಸಿಕ್ಕಿರಲಿಲ್ಲ. ಅಂತಹ ಬಿಗಿ ಒತ್ತಡದಲ್ಲೇ ಜನುಮ ದಿನದಂದೂ ಕೂಡಾ ಬೆಳಿಗ್ಗೆ ಎಂಟರಿಂದ ಸಂಜೆ ಏಳರ ತನಕ ಕೆಲಸ ಮಾಡಿದ್ದ ನನಗೆ ಒಂಚೂರು ಬೇಸರವಾಗದಂತೆ ಮಾಡಿದ್ದು ಸ್ನೇಹಿತರ ಶುಭ ಹಾರೈಕೆಗಳು. ಇಪ್ಪತ್ತೈದರ ಮಧ್ಯರಾತ್ರಿಯಿಂದ ಇಪ್ಪತ್ತೇಳರ ಮಧ್ಯಾನದ ತನಕ ಬರುತ್ತಲೇ ಇದ್ದ ಫೋನ್ ಗಳಿಂದ ಉಬ್ಬಿ ಹೋಗಿದ್ದೆ ನಾನು. 

ನನಗೆ ಇಪ್ಪತ್ತು ತುಂಬುವ ತನಕ ಹುಟ್ಟಿದ ದಿನ ಕೂಡಾ ಸಾಮಾನ್ಯ ದಿನವಂಥದ್ದೆ ಆಗಿದ್ದ ನನಗೆ, ಕಳೆದ ನಾಲ್ಕು ವರ್ಷಗಳಿಂದ ನನ್ನ ಜನುಮ ದಿನ ನನಗೆ ಕೊಡುತ್ತಿರುವ ಸಂತೋಷಕ್ಕೆ ಎಣೆ ಇಲ್ಲ. ಒಮ್ಮೆ ಬೆಂಗಳೂರಿಂದ ಬಂದಿದ್ದ ನಮ್ಮ ಮನೆ ಪಕ್ಕದ ನಾಗೇಂದ್ರಣ್ಣನ ತಂಗಿ ಮಗನಿಗೆ ಹುಟ್ಟಿದ ದಿನ. ನಾಲ್ಕು ವರ್ಷದ ಆ ಮಗು ನಮ್ಮ ಬೀದಿಯ ಎಲ್ಲರಿಗೂ ಚಾಕಲೇಟ್ ಕೊಡುತ್ತಾ ಬರ್ತಾ ಇದ್ರೆ ಅದರ ಬಳಿ ಚಾಕಲೇಟ್ ತಗೊಂಡು ಅದಕ್ಕೊಂದು ಮುದ್ದು ಕೊಟ್ಟು ಶುಭ ಹಾರೈಸಿ ಆಶಿರ್ವಧಿಸುತಿದ್ರು ಬೀದಿಯ ಎಲ್ಲರೂ. ನನಗೂ ಅಂಥದ್ದೇ ಸಂತೋಷ ಮೊನ್ನೆ ದಿನ. ನನ್ನನ್ನ ಹಾರೈಸಿ ಹರಸಿದ್ದು ಅದೆಷ್ಟು ಜನ.. ಅದೆಷ್ಟು ಫೋನ್ ಕಾಲ್ ಗಳು.. ಅದೆಷ್ಟು ಮೆಸೇಜುಗಳು, ವಾಟ್ಸ್ ಅಪ್ ನಲ್ಲಿ ಅಲ್ಲಿ ತನಕ ಮಾತಾಡಿಸದ ಅದೆಷ್ಟು ಜನರ ಹಾರೈಕೆಗಳು.. ಫೆಸ್ಬುಕ್ಕಿನ ಗೋಡೆಯ ಮೇಲೆ ಮುನ್ನೂರಕ್ಕೂ ಹೆಚ್ಚು ಜನರ ಶುಭಾಕಾಂಕ್ಷೆಗಳು.. ತುಂಬಿ ಹೋದ ಫೇಸ್ಬುಕ್ ಇನ್ ಬಾಕ್ಸ್. ಹೈಕು, ವೀ ಚಾಟು, ಲೈನ್, ವೈಬರ್ ಹೀಗೆ ಎಲ್ಲೆಲ್ಲಿ ಅಂದ್ರೆ ಅಲ್ಲಲ್ಲಿ ರೇಜಿಗೆ ಹುಟ್ಟಿಸುವಷ್ಟು ಶುಭಕಾಮನೆಗಳು ಅಂದು. ಇಷ್ಟು ವರ್ಷಗಳಲ್ಲೇ ಅಧಿಕ ಅನ್ನಿಸುವಷ್ಟು. ಅಷ್ಟು ಜನರ ಆಶೀರ್ವಾದ ಸುಮ್ಮ ಸುಮ್ಮನೆ ಸಿಗಬೇಕೆಂದರೆ ಹುಡುಗಾಟವಲ್ಲ. ನಾ ಯಾರಿಗೂ ಏನೂ ಅಲ್ಲದೆಯೂ, ಯಾರಿಗಾಗಿ ಏನೂ ಮಾಡದೆಯೂ ನಾನು ಅಷ್ಟು ಜನರಿಗೆ ಪ್ರೀತಿ ಪಾತ್ರ ಅಂತಾದ್ರೆ ಅದು ನನ್ನ ನಿಜ ಸಾಧನೆಯೇ ಹೌದು. 

ಮೊನ್ನೆ ಜನುಮದಿನದ ಶುಭಾಶಾಗಳ ಮಹಾ ಪೂರವನ್ನೇ ಗಮನಿಸಿದ ನಂತರ ಒಂದು ಸಾರ್ಥಕತೆ ಮಾತ್ರ ಮನಸು ತುಂಬಿ ಕೊಂಡಿದ್ದು ನಿಜ. ಜೀವನದಲ್ಲಿ ಈವರೆಗೆ ಅದೇನನ್ನೂ ಸಾಧಿಸದೆ ಹೋದ್ರೂ ನನ್ನನ್ನ ಪ್ರೀತಿಸುವ, ಆದರಿಸುವ, ಹಾರೈಸುವ ನೂರಾರು ಜನರನ್ನ ಸಂಪಾದಿಸಿ ಕೊಂಡಿದ್ದೇನೆ ಅನ್ನುವ ಸಂತೋಷ ಅದು. ಜನರ ಒಡನಾಟ ಮನಸ್ಸಿಗೆ ಕೊಡುವ ತೃಪ್ತಿಯೇ ಅಂತಹದ್ದೊಂದು ವಿಶಿಷ್ಟ ರೀತಿಯದ್ದು. ನಾನು ಅಭಿಮಾನಿಸುವ ಅದೆಷ್ಟು ಹಿರಿಯ, ಹೆಮ್ಮೆವೆತ್ತ ವ್ಯಕ್ತಿತ್ವಗಳಿಂದ ಹಿಡಿದು ನಾನು ಬಲು ಪ್ರೀತಿಸುವ ನನ್ನ ಬಹಳಷ್ಟು ಜನ ಎಲ್ಲರೂ ನನಗಾಗಿ ಹಾರೈಸಿದ್ದು ಆ ದಿನವನ್ನ ನನ್ನದೇ ದಿನವನ್ನಾಗಿ ಮಾಡಿತ್ತು. ಇಲ್ಲಿಯ ತನಕ ಕೇವಲ ನನ್ನ ಕೆಲವು ಗೀಚುವಿಕೆಗಷ್ಟೇ ವೇದಿಕೆಯಾಗಿದ್ದ ನನ್ನ ಫೇಸ್ಬುಕ್ ಗೋಡೆಯಂಗಳ ಸಾರ್ವತ್ರಿಕ ದಾಖಲೆ ಎಂಬಂತೆ ಅಷ್ಟು ಜನರ ಶುಭ ಹಾರೈಕೆಗಳಿಂದ ತುಂಬಿ ಹೋಗಿತ್ತು. ಸಣ್ಣ ಸಣ್ಣ ಸಂತೋಷವನ್ನೂ ಬಹಳ ಸಡಗರದಿಂದ ಆನಂದಿಸುವ ನನಗೆ ನನ್ನ ಕಾಲು ನೆಲದ ಮೇಲೆ ಇರದೇ ಇರಲು ಇಷ್ಟು ಸಾಕಿತ್ತು. 

ಟ್ರಾನ್ಸ್ ಫಾರ್ಮರ್ ಕೆಲಸ ನಿನ್ನೆಯಷ್ಟೇ ಯಶಸ್ವಿಯಾಗಿ ಮುಗೀತು. ನಾಲ್ಕೈದು ದಿನದ ನಂತರ ನಿನ್ನೆಯಷ್ಟೇ ಫೇಸ್ಬುಕ್ ತೆರೆದು ನೋಡಿದ್ದ ನಾನು ನಿಜಕ್ಕೂ ಮೂಕನಾಗಿದ್ದೆ ಹಾರೈಕೆಗಳನ್ನ ಕಂಡು. ಧನ್ಯವಾದಗಳನ್ನ ಹೇಳೋದು ಅದಕ್ಕೊಂದು ಕೃತಜ್ಞತೆ ಸಲ್ಲಿಸುವ ವಿಧಾನ ಅಲ್ಲವೇ ಅಲ್ಲ ಅನ್ನೋದು ನನ್ನ ಅಭಿಮತ. ಈ ಪ್ರೀತಿಯ ಋಣ ಅಷ್ಟು ಸುಲಭಕ್ಕೆ ತೀರಬಾರದಂಥದ್ದು ಕೂಡಾ. ನಿಮ್ಮೆಲ್ಲರ ಪ್ರೀತಿಯ ಋಣ ನನ್ನ ಮೇಲೆ ಯಾವತ್ತಿಗೂ ಹೀಗೆ ಇರಲಿ. ನಾನು ನಿಮ್ಮನ್ನ ಯಾವತ್ತಿಗೂ ಪ್ರೀತಿಸುವಂತೆ ಆ ಋಣ ನನ್ನನ್ನ ಆವರಿಸಿ ಕೊಳ್ಳಲಿ.